ಮಾಧ್ಯಮಗಳಿಗೆ ಮಾಧ್ವ ಬ್ರಾಹ್ಮಣನ ಪ್ರಶ್ನೆಗಳು, ಉತ್ತರಿಸಿ...
ಮಾಧ್ಯಮದವರೆಲ್ಲರಿಗೂ ನಮಸ್ಕಾರ. ಉಡುಪಿಯ ಅಷ್ಟ ಮಠಗಳ ಪೈಕಿ ಒಂದಾದ ಶಿರೂರು ಮಠದ ಪೀಠಾಧ್ಯಕ್ಷರಾದ ಲಕ್ಷ್ಮೀವರ ತೀರ್ಥರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಕ್ಲಿಪ್ಪಿಂಗ್ ಒಂದನ್ನು ಮಾಧ್ಯಮದಲ್ಲಿ ತೋರಿಸುತ್ತಾ, ಅಷ್ಟ ಮಠದ ಬಗ್ಗೆ ಸ್ವಾಮೀಜಿ ಹೀಗೆ ಮಾತನಾಡಿದ್ದಾರೆ. ಇದಕ್ಕೆ ಏನು ಮಾಡ್ತೀರಿ ಎಂದು ಗಂಟೆಗಟ್ಟಲೆ ಕಾರ್ಯಕ್ರಮ ಪ್ರಸಾರ ಆಗಿದೆ. ಆಗುತ್ತಲೇ ಇದೆ.
ನಾನೊಬ್ಬ ಮಾಧ್ವ ಬ್ರಾಹ್ಮಣ. ಈ ಬಗ್ಗೆ ಪ್ರಸಾರ ಆಗುವ ಅಷ್ಟೂ ಸಮಯ ಬಹಳ ಕಿರಿಕಿರಿ ಆಗುತ್ತಲೇ ಇರುತ್ತದೆ. ಜತೆಗೆ ಮಾಧ್ಯಮಗಳ ಬಗ್ಗೆ ಕೆಲವು ಪ್ರಶ್ನೆಗಳು ಮನದಲ್ಲಿ ಸುಳಿದಾಡುತ್ತಲೇ ಇರುತ್ತವೆ. ನನ್ನ ಸೀಮಿತ ತಿಳಿವಳಿಕೆಗೆ ಹೊಳೆದ ಕೆಲವು ಪ್ರಶ್ನೆಗಳನ್ನು ಇಲ್ಲಿ ಇಡುತ್ತಿದ್ದೇನೆ.
ಇದನ್ನು ಸಿಟ್ಟು, ಕೋಪ, ಜಾತಿ ಪ್ರೇಮ ಹೀಗೆ ಏನಾದರೂ ಕರೆದುಕೊಳ್ಳಲಿ. ಆ ಬಗ್ಗೆ ನನಗೆ ಬೇಸರವಿಲ್ಲ. ಆದರೆ ನನ್ನ ಧ್ವನಿಗೊಂದು ವೇದಿಕೆ ಹಾಗೂ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ಸಾಕು. ಟಿವಿಯಲ್ಲಿ ಚರ್ಚೆಗೆ ಎಂದು ಒಂದಿಬ್ಬರನ್ನು ಕರೆಸಿ, ಅವರು ಇಡೀ ಸಮಾಜದ ಪ್ರತಿನಿಧಿಗಳು ಎಂದು ಬಿಂಬಿಸಿ, ಒಂದು ಸಮುದಾಯದ ಉಪಪಂಗಡವನ್ನು ಭಾವನಾತ್ಮಕವಾಗಿ ಹಿಂಸಿಸಿದ ಮಾಧ್ಯಮಕ್ಕೆ ಈ ಪ್ರಶ್ನೆಗಳು
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ವಿಡಿಯೋದ ಸಾಚಾತನ ಪರಿಶೀಲಿಸಿದ್ದೀರಾ?
ವಾಹಿನಿಯಲ್ಲಿ ತೋರಿಸುತ್ತಿರುವ ವಿಡಿಯೋದ ಸಾಚಾತನವನ್ನು ಪರಿಶೀಲಿಸಲಾಗಿದೆಯಾ? ಧ್ವನಿ ಹಾಗೂ ಶಿರೂರು ಶ್ರೀಗಳು ಎನ್ನಲಾದ ವ್ಯಕ್ತಿಯ ಚಿತ್ರ ಮಾರ್ಫ್ ಮಾಡಲಾಗಿದೆಯಾ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಿದ ನಂತರವೇ ಪ್ರಸಾರ ಮಾಡಲಾಗುತ್ತಿದೆಯಾ?

ಅಷ್ಟ ಮಠಗಳು ಅಂದರೆ ಎಂಟು ನ್ಯೂಸ್ ಚಾನೆಲ್ ಇದ್ದ ಹಾಗೆ
ಅಷ್ಟ ಮಠಗಳು ಎಂಬುದು ಎಂಟು ನ್ಯೂಸ್ ಚಾನಲ್ ಇದ್ದ ಹಾಗೆ. ಎಲ್ಲಕ್ಕೂ ಪ್ರತ್ಯೇಕ ಅಸ್ತಿತ್ವ ಇದೆ. ಅಂಥದ್ದರಲ್ಲಿ ಶಿರೂರು ಮಠದ ಸ್ವಾಮಿಗಳು ಎಂಬುದನ್ನು ಅಷ್ಟ ಮಠದ ಯತಿ ಅಂತ ಏಕೆ ಪ್ರಸಾರ ಮಾಡಲಾಗುತ್ತಿದೆ?

ಕನ್ನಡ ಪತ್ರಿಕೋದ್ಯಮವೇ ಬ್ರಹ್ಮಾಂಡ ಭ್ರಷ್ಟಾಚಾರದ ಕೂಪ ಅನ್ನಬಹುದಾ?
ಇನ್ನು ವಿಡಿಯೋದಲ್ಲಿ ಹೇಳಿದರು ಎನ್ನಲಾದ, "ಅಷ್ಟ ಮಠದ ಯತಿಗಳು ಎಲ್ಲ ಹೀಗೆ" ಎಂಬ ಮಾತಿಗೆ ಸಂಬಂಧಿಸಿದಂತೆ, ಯಾವುದೋ ಒಂದು ಚಾನೆಲ್ ಅಥವಾ ಪತ್ರಿಕೆಯ ಸಂಪಾದಕ, ಎಲ್ಲ ಚಾನೆಲ್- ಪತ್ರಿಕೆ ಹೀಗೆ ಭ್ರಷ್ಟಾಚಾರಿಗಳು ಅಂದರು ಅಂತ ಇಟ್ಟುಕೊಳ್ಳಿ, ಕನ್ನಡ ಪತ್ರಿಕೋದ್ಯಮವೇ ಬ್ರಹ್ಮಾಂಡ ಭ್ರಷ್ಟಾಚಾರದ ಕೂಪ ಎಂದು ಆಗ ಕರೆಯಬಹುದೇ, ಪ್ರಚಾರ ಮಾಡಬಹುದೇ?

ಪೇಜಾವರ ಸ್ವಾಮೀಜಿ ಅಭಿಪ್ರಾಯ ಏಕೆ ಬೇಕು?
ಶಿರೂರು ಮಠದ ಸ್ವಾಮಿಗಳ ಹೇಳಿಕೆಗೆ ಅಥವಾ ವಿಡಿಯೋಗೆ ಪೇಜಾವರ ಸ್ವಾಮೀಜಿ ಅಭಿಪ್ರಾಯ ಏಕೆ ಬೇಕು? ಅವರು ಅಷ್ಟ ಮಠಗಳಲ್ಲೇ ಹಿರಿಯರು ಎಂಬುದು ವಾದ. ಸರಿ, ಹಾಗಾದರೆ ಒಂದು ಚಾನೆಲ್ ನಲ್ಲಿ ಏನೋ ದೊಡ್ಡ ತಪ್ಪಾದರೆ, ಚಾನೆಲ್ ಗಳ ಪೈಕಿಯೇ ಹಳೆಯದಾದ ಚಾನೆಲ್ ನ ಮುಖ್ಯಸ್ಥರನ್ನು ಕರೆಸಿ, ಅವರ ಅಭಿಪ್ರಾಯ, ಅಪ್ಪಣೆ, ತೀರ್ಮಾನ ಕೇಳಿ ಮುಂದಿನ ಕ್ರಮ ಕೈಗೊಳ್ಳುತ್ತೀರಾ?

ಭ್ರಷ್ಟ ಪತ್ರಕರ್ತರ ಬಗ್ಗೆ ಸುದ್ದಿ ಮಾಡಿ, ಪೊಲೀಸ್ ಕಂಪ್ಲೇಂಟ್ ಕೊಟ್ಟ ಉದಾಹರಣೆ ಇದೆಯಾ?
ಈ ರೀತಿಯ ಘಟನೆಗಳು ಆದಾಗ ಸುದ್ದಿ ಪ್ರಸಾರ ಮಾಡುವುದು ಸಾಮಾಜಿಕ ಕರ್ತವ್ಯ ಎಂಬ ಮಾತು ಕೇಳಿದೆ. ಸರಿ, ಚಾನೆಲ್- ಪತ್ರಿಕೆಯೊಂದರ ವರದಿಗಾರರೊಬ್ಬರು ಈ ವರೆಗೆ ಯಾವುದೇ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡೇ ಇಲ್ಲವೆ? ಆಗ ಈತ ನಮ್ಮ ಚಾನೆಲ್ ಅಥವಾ ಪತ್ರಿಕೆಯಲ್ಲಿದ್ದ. ಭ್ರಷ್ಟಾಚಾರ ಮಾಡಿದ್ದಾನೆ. ಆತ ತಪ್ಪಾಗಿ ಮಾಡಿದ ವರದಿ, ಸುದ್ದಿ ಇವು. ಈತನ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದೇವೆ ಎಂದು ಸುದ್ದಿ ಪ್ರಸಾರ ಮಾಡಿದ ಉದಾಹರಣೆ ಇದೆಯಾ? ಇದ್ದರೆ ಯಾವುದು? ಇಲ್ಲದಿದ್ದರೆ ಯಾಕೆ ವರದಿ ಮಾಡಿಲ್ಲ?

ಚುನಾವಣೆಗೆ ನಿಲ್ತೀನಿ ಅಂದಾಗಲೇ ಆ ವಿಡಿಯೋ ಏಕೆ ಬಂತು?
ವಿಡಿಯೋದಲ್ಲಿ ಇರುವಂತೆಯೇ ತಪ್ಪು ಮಾಡಿದ್ದರೆ ಆ ಮಠದ (ಶಿರೂರು ಮಠ) ಪರಂಪರೆಯ ಪ್ರಕಾರ ತೀರ್ಮಾನ ಆಗಲಿ. ಅದರಾಚೆಗೆ ಸಂವಿಧಾನ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಆ ಬಗ್ಗೆ ದೂರು ದಾಖಲಾಗಲಿ. ಅದು ಬಿಟ್ಟು ಸ್ವಾಮೀಜಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಘೋಷಿಸಿದ ಹೊತ್ತಲ್ಲೇ ಈ ವಿಡಿಯೋ ಹೇಗೆ ಬಿಡುಗಡೆ ಆಯಿತು? ಆ ವಿಡಿಯೋ ಆಗಿರುವ ದಿನ ಯಾವುದು? ಹಳೆಯದಾಗಿದ್ದರೆ ಈ ವರೆಗೆ ಏಕೆ ಪ್ರಸಾರವಾಗಲಿಲ್ಲ?

ಉತ್ತರಿಸಿ ಅಥವಾ ಬ್ರಾಹ್ಮಣರ ಹೋರಾಟ ಎದುರಿಸಿ
ಪೇಜಾವರ, ಪಲಿಮಾರು, ಅದಮಾರು, ಪುತ್ತಿಗೆ, ಸೋದೆ, ಕಾಣಿಯೂರು, ಶಿರೂರು, ಕೃಷ್ಣಾಪುರ ಇವು ಅಷ್ಟ ಮಠಗಳು. ಪೇಜಾವರಕ್ಕೆ ವಿಶ್ವೇಶ ತೀರ್ಥರು, ಪಲಿಮಾರು ಮಠಕ್ಕೆ ವಿದ್ಯಾಧೀಶ ತೀರ್ಥರು, ಅದಮಾರು ವಿಶ್ವಪ್ರಿಯ ತೀರ್ಥ, ಪುತ್ತಿಗೆಗೆ ಸುಗುಣೇಂದ್ರ ತೀರ್ಥ, ಸೋದೆಗೆ ವಿಶ್ವವಲ್ಲಭ ತೀರ್ಥ, ಕಾಣಿಯೂರಿಗೆ ವಿದ್ಯಾವಲ್ಲಭ ತೀರ್ಥ, ಶಿರೂರು ಲಕ್ಷ್ಮೀವರ ತೀರ್ಥ, ಕೃಷ್ಣಾಪುರ ಮಠಕ್ಕೆ ವಿದ್ಯಾಸಾಗರ ತೀರ್ಥರು ಸ್ವಾಮಿಗಳಾಗಿದ್ದಾರೆ. ಆಯಾ ಮಠಕ್ಕೆ ನಡೆದುಕೊಳ್ಳುವ ಭಕ್ತರಿದ್ದಾರೆ. ಮೇಲಿನ ಪ್ರಶ್ನೆಗಳಿಗೆ ಉತ್ತರ ನೀಡ್ತೀರಾ? ಅಥವಾ ಇದೊಂದು ಅಭಿಯಾನದಂತೆ ಮಾಡುವ ಅನಿವಾರ್ಯಕ್ಕೆ ನೀವೇ ನಮ್ಮನ್ನು ಪ್ರೇರೇಪಿಸುತ್ತೀರಾ?












Click it and Unblock the Notifications