ಕರ್ನಾಟಕದ ಪ್ರಸ್ತುತ ರಾಜಕೀಯ ವಿದ್ಯಮಾನ : ಓದುಗರ ವಿಶ್ಲೇಷಣೆ
ಈ ಸಾರಿ ಕರ್ನಾಟಕದ ಚುನಾವಣೆ ಮತ್ತು ಅದರ ಪರಿಣಾಮ ನಾವು ಸರಿಯಾದ ರೀತಿಯಲ್ಲಿ ವಿಶ್ಲೇಷಿಸಬೇಕಿದೆ.
1. ಜೆಡಿಎಸ್ 10 ವರ್ಷಗಳಿಂದ ಅಧಿಕಾರದಲ್ಲಿರಲಿಲ್ಲ, ಅದಕ್ಕೆ ಅತೀವ ಸಂಪನ್ಮೂಲಗಳ ಕೊರತೆಯಲ್ಲಿತ್ತು. ಕುಮಾರಸ್ವಾಮಿಗೆ ಕಾಂಗ್ರೆಸ್ ಪಕ್ಷದ ಜೊತೆ ಹೊಂದಾಣಿಕೆಗೆ ಮನಸ್ಸಿರಲಿಲ್ಲ.
2. ಬಿಜೆಪಿ ಮತ ಎಣಿಕೆಯ ಸಮಯದಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಬರುತ್ತದೆ ಎನ್ನುವ ಅತಿಯಾದ ಆತ್ಮವಿಶ್ವಾಸ ಹೊಂದಿತ್ತು.
ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾದ ಯಡಿಯೂರಪ್ಪ ಎಡವಿದ್ದು ಎಲ್ಲಿ?
3. ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಬಿಜೆಪಿಗೆ ಯಾವುದೇ ಕಾರಣಕ್ಕೂ ಬಾರದಂಗೆ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷ ತ್ಯಾಗ ಮಾಡಲಿಕ್ಕೂ ತಯಾರಿತ್ತು.
4. ಯಡಿಯೂರಪ್ಪನವರು ಜೆಡಿಎಸ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸುತರಾಂ ತಯಾರಿರಲಿಲ್ಲ. ಅವರು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರದ ಕಹಿ ನೆನಪುಗಳನ್ನು ಇನ್ನು ಮೆಲಕು ಹಾಕುತ್ತಿದ್ದರು.
5. ಯಡಿಯೂರಪ್ಪನವರಿಗೆ ಬಿಜೆಪಿಗೆ ಅಧಿಕಾರ ದಕ್ಕದೆ ಹೋದರೂ ಪರವಾಗಿಲ್ಲ, ಕಾಂಗ್ರೆಸ್ ಗೆ ಅಧಿಕಾರ ಬಂದರೂ ಪರವಾಗಿಲ್ಲ, ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರ ಪಡೆಯಬರೆದೆನ್ನುವ ಛಲ. ಈ ವಿಷಯ ಯಡಿಯೂರಪ್ಪನವರು ವಿಧಾನಸೌದದಲ್ಲೇ ಹೇಳಿದ್ದಾರೆ. ನಮ್ಮ ಹೋರಾಟ ಏನಿದ್ದರೂ ಜೆಡಿಎಸ್ ಮೇಲೆ, ಕಾಂಗ್ರೆಸ್ ಮೇಲಲ್ಲ ಎಂದಿದ್ದಾರೆ.
6. ಕೇಂದ್ರದಲ್ಲಿರುವ ಬಿಜೆಪಿಗೆ ಮೇಲಿನ ವಿಷಯಗಳ ಅವಗಾಹನೆ ಇರಲಿಲ್ಲ. ಅದರ ಒಂದೇ ಗುರಿ ಎಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರ ಪಡೆಯಬಾರದೆನ್ನುವುದು.
ಈ ಮೇಲಿನ ವಿಷಯಗಳು ನಿಜವಾದ ಸಂಗತಿಗಳು. ಯಡಿಯೂರಪ್ಪನವರು ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರ ಪಡೆಯಬಾರದೆನ್ನುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ಲಿಂಗಾಯಿತ ಶಾಸಕರು ಅಥವಾ ಕುಮಾರಸ್ವಾಮಿಗೆ ವಿರುದ್ಧವಾಗಿರುವ ಕಾಂಗ್ರೆಸ್ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಾರೆ ಎನ್ನುವ ಸುಳ್ಳು ಭರವಸೆಗಳನ್ನು ಕೇಂದ್ರದ ನಾಯಕರಿಗೆ ಕೊಡುತ್ತ ಬಂದರು.
ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಸುಮಾರು, ಕಾರಣಗಳು ಆರು
ಇದಕ್ಕೆ ಉದಾಹರಣೆ, ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿಯವರು ಅವಮಾನ ಮಾಡಿದ್ದಾರೆ. ಆದುದರಿಂದ ಕುರುಬ ಶಾಸಕರು ಮತ್ತು ಡಿಕೆ ಶಿವಕುಮಾರ್, ಕುಮಾರಸ್ವಾಮಿಗೆ ಆಗುವುದಿಲ್ಲ. ಆದುದರಿಂದ ನಮಗೆ ಇವರಿಂದ ಸಹಾಯ ಸಿಗುತ್ತದೆ ಎನ್ನುವ ಹುಸಿ ಆಶ್ವಾಶನೆಗಳಿಂದ ಕೇಂದ್ರ ನಾಯಕತ್ವವನ್ನು ಕತ್ತಲೆಯಲ್ಲಿಟ್ಟರು.
ಚುನಾವಣೆ ಎಣಿಕೆ ದಿನದಿಂದ ಯಡಿಯೂರಪ್ಪನವರು ವಿಶ್ವಾಸ ಮತ ಪಡೆಯುವ ಹಿಂದಿನ ದಿನದವರೆಗೂ ನಡೆದ ಸತ್ಯ ಸಂಗತಿಗಳನ್ನು ಯಡಿಯೂರಪ್ಪನವರ ಗುಂಪನ್ನು ಬಿಟ್ಟು ಬೇರೆ ಶಾಸಕರಿಂದ ಸತ್ಯವನ್ನು ತಿಳಿಯದೆ ಕೇಂದ್ರ ನಾಯಕತ್ವ ತಪ್ಪು ಮಾಡಿತು. ಒಟ್ಟಾರೆಯಾಗಿ ಯಡಿಯೂರಪ್ಪನವರು ರಾಜಕೀಯ ಚತುರತೆ ತೋರದೆ, ಭಾವೋದ್ವೇಗದ ನಿರ್ಣಯಗಳಿಂದ ಬಿಜೆಪಿ ತನ್ನ ಅವಕಾಶ ಕಳೆದುಕೊಂಡಿತು.
ಕರ್ನಾಟಕದ ಜನತೆಗೆ ಬಿಜೆಪಿ ವಿಶೇಷವಾಗಿ ನರೇಂದ್ರ ಮೋದಿಯ ಬಗ್ಗೆ ಒಲವಿದೆ. ಇನ್ನು ಮುಂದಾದರೂ ಇಂತಹ ತಪ್ಪುಗಳನ್ನು ಸರಿಪಡಿಸಿಕೊಂಡರೆ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರ ಪಡೆಯುವುದರಲ್ಲಿ ಸಂಶಯವಿಲ್ಲ.