ಗೋಪುರ ಕಟ್ಟುವ ಬದಲು ನಗರ ಅಭಿವೃದ್ಧಿ ಮಾಡಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ 10 ಕಡೆ ಸುಮಾರು ಹತ್ತು ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಗೋಪುರ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಬೆಂಗಳೂರಿನ ಜನತೆ ಖಂಡಿಸಿದ್ದಾರೆ. 10 ಕೋಟಿ ಖರ್ಚು ಮಾಡಿ ಗೋಪುರ ನಿರ್ಮಿಸುವುದಕ್ಕಿಂತ ನಗರದ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು ಎಂದು ಜನರು ಬಿಬಿಎಂಪಿಗೆ ಸಲಹೆ ನೀಡಿದ್ದಾರೆ.
ಬಿಬಿಎಂಪಿ ಪ್ರಸ್ತಾವನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಚಾಮರಾಜಪೇಟೆ ನಿವಾಸಿ ಲಿಂಗದೇವರು ಕೊತ್ತಲುಮನೆ, ಕೆಂಪೇಗೌಡರ ಗೋಪುರವನ್ನು 10 ಕಡೆ ನಿರ್ಮಿಸುವ ಪ್ರಸ್ತಾವನೆ ಹಿಂದೆ ಬಿಬಿಎಂಪಿಯ ಮತ್ತು ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. [10 ಕೆಂಪೇಗೌಡ ಗೋಪುರ ನಿರ್ಮಾಣ]

ಬೆಂಗಳೂರು ನಗರದ ಬೆಳವಣಿಗೆಗೆ ಲಂಗು ಲಗಾಮು ಯಾವುದೂ ಇಲ್ಲ ಮತ್ತು ಕೆಂಪೇಗೌಡರು ನಗರ ಕಟ್ಟಿದ ರೀತಿ ಅದನ್ನು ಪೋಷಿಸಿದ ರೀತಿಗಳನ್ನು ಬಿಬಿಎಂಪಿಯ ಸದಸ್ಯರು ಅರಿತಂತೆಯೂ ಇಲ್ಲ. ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟದಲ್ಲಿರುವಾಗ 10 ಕೋಟಿ ಹಣವನ್ನು ಗೋಪುರ ನಿರ್ಮಾಣಕ್ಕೆ ಬಳಸುವುದು ಸೂಕ್ತವಲ್ಲ.
ದಾರ್ಶನಿಕರು ಮತ್ತು ಆಡಳಿತಗಾರರು ಹಿಂದಿನ ಕಾಲದಲ್ಲಿ ಒಂದು ಸದುದ್ದೇಶದಿಂದ ನಗರ ಮತ್ತು ಸ್ಮಾರಕಗಳನ್ನು ನಿರ್ಮಿಸುತ್ತಿದ್ದರು. ಇಂತಹ ವ್ಯಕ್ತಿಗಳಿಗೆ ಗೌರವ ಸಲ್ಲಿಸಲು ಸ್ಮಾರಕ ನಿರ್ಮಿಸುವ ಬದಲು, ಅವರ ಆದರ್ಶಗಳು ಮತ್ತು ಚಿಂತನೆಗಳನ್ನು ಮುಂದಿನ ಪೀಳಿಗೆ ಕೊಂಡೊಯ್ಯುವ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಪಾಲಿಕೆಗೆ ಸಲಹೆ ನೀಡಿದ್ದಾರೆ.
ಕಸದ ಸಮಸ್ಯೆ ಬಗೆಹರಿಸಿ : ಬೆಂಗಳೂರಿನ ಕಸದ ಸಮಸ್ಯೆ ಬಗ್ಗೆ ಎಲ್ಲರಿಗೂ ತಿಳಿಸಿದೆ. ನಗರದ ಕಸ ವಿಲೇವಾರಿ ದೊಡ್ಡ ಸವಾಲು. ನಗರದ ಸೌಂದರ್ಯ ಕಾಪಾಡಲು ಕೆಂಪೇಗೌಡರ ಹೆಸರಲ್ಲಿಯೇ ಹಲವು ಯೋಜನೆಗಳನ್ನು ರೂಪಿಸಿ ನಗರದ ನೈರ್ಮಲ್ಯ ಮತ್ತು ಸೌಂದರ್ಯ ಕಾಪಾಡಲು ಪಾಲಿಕೆ ಪ್ರಯತ್ನಿಸಬಹುದು.
ಬೆಂಗಳೂರು ನಗರಕ್ಕೆ ಉತ್ತಮ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಮೆಟ್ರೋ ನಗರವಾಗುತ್ತಿರುವ ಬೆಂಗಳೂರನ್ನು ಸುರಕ್ಷತೆಯಲ್ಲಿ, ಮತ್ತು ಮೂಲಭೂತ ಸೌಕರ್ಯಗಳಲ್ಲಿ ಇತರೆ ನಗರಗಳಿಗಿಂತ ಉತ್ತಮ ನಗರವಾಗಿ ಪರಿವರ್ತಿಸಬೇಕು. ಪ್ಲಾಸ್ಟಿಕ್, ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸದಂತೆ ಮಾಡಿ ನಗರವನ್ನು ಸ್ವಚ್ಛಗೊಳಿಸಿ, ಹಸಿರಿನ ವಾತಾವರಣ ನಿರ್ಮಾಣ ಮಾಡಬೇಕು.
ಬೆಂಗಳೂರಿನ ಸಾಮಾನ್ಯ ನಾಗರೀಕನಾದ ನನಗೆ ಇಂತಹ ಸರಳ ಯೋಜನೆಗಳು ಹೊಳೆದಿವೆ. ಇನ್ನೂ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಇನ್ನಷ್ಟು ಉತ್ತಮ ಯೋಜನೆಗಳನ್ನು ಆರಂಭಿಸಲು ಸಾಧ್ಯವಿದೆ. ಆದ್ದರಿಂದ, 10 ಕೋಟಿ ವ್ಯಯಿಸಿ ಗೋಪುರ ನಿರ್ಮಿಸುವ ನಗರದ ಅಭಿವೃದ್ಧಿಗೆ ಹಣ ಉಪಯೋಗಿಸಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications