ತುಂಬು ಪ್ರೀತಿಯಿಂದ ನಮ್ಮ ಉಪೇಂದ್ರರಿಗೊಂದು ಪತ್ರ...
ಪ್ರೀತಿಯ ಉಪೇಂದ್ರ ಅವರಿಗೆ ನಮಸ್ಕಾರ.
ರಾಜಕಾರಣ, ಪ್ರಜೆಗಳು, ದೇಶದ ಬಗ್ಗೆ ನೀವು ಮಾತನಾಡಿದ ಆಡಿಯೋ ಕ್ಲಿಪಿಂಗ್ ಕೇಳಿದೆ. ನೀವು ಅದ್ಭುತವಾದ ವಾಗ್ಮಿ. ಅದಕ್ಕೆ ಸಮನಾಗಿ ಒಳ್ಳೆ ಮೈಂಡ್ ರೀಡರ್. ಏನು ಹೇಳಿದರೆ ಮುಂದಿನ ಪ್ರಶ್ನೆ ಏನು ಬರುತ್ತದೆ ಎಂಬುದನ್ನು ಗುರುತಿಸುವಂಥ ಚೆಸ್ ಆಟಗಾರನ ಬುದ್ಧಿವಂತಿಕೆ ನಿಮ್ಮದು.
ಕೇಳಿದಷ್ಟೂ ನರ-ನಾಡಿಗಳಲ್ಲಿ ದೇಶ ಪ್ರೇಮ ಉಕ್ಕುವಂತೆ ಮಾತನಾಡಬಲ್ಲ ಕೆಲವರ ಮಾತುಗಳನ್ನು ಕೇಳಿದ್ದೇನೆ. ಆದರೆ ನೀವು ನಿಮ್ಮ ಆಲೋಚನೆಯನ್ನು ತೆರೆಯ ಮೇಲೆ ವಾಹ್ ಎನಿಸುವಂತೆ ತೋರಿಸಿದ್ದೀರಿ. ಸಿನಿಮಾಗಳ ಮೂಲಕವೇ ಬುದ್ಧಿವಂತ ಅನ್ನಿಸಿಕೊಂಡು ಬಿಟ್ಟಿದ್ದೀರಿ. ಆದರೆ ನಾಳೆ ಮುಹೂರ್ತ (ಶನಿವಾರ ಪತ್ರಿಕಾಗೋಷ್ಠಿ ಕರೆದಿದ್ದೀರಿ) ಬೇರೆ ಅಲ್ಲವಾ?
ಮೊದಲ ಮಾತು, ಮೊದಲು ಹೇಳಿಬಿಡ್ತೀನಿ. ನೀವು ಯಾವುದೋ ಸಿನಿಮಾ ಮಾಡಿದ್ರಿ, ಅದು ಹಿಡಿಸಲಿಲ್ಲ ಅಂದರೂ ಟಿಕೆಟ್ ಗೆ ಕೊಟ್ಟ ನೂರೈವತ್ತು ರುಪಾಯಿ ವಾಪಸ್ ಕೊಡಿ ಅಂತೇನೂ ನಿಮ್ಮ ಮನೆವರೆಗೆ ನಾವು ಬರೊಲ್ಲ. ಸಿನಿಮಾ ಅಡ್ಡಡ್ಡ ಮಲಗಿದ ಮೇಲೂ ಸುಳ್ಳುಸುಳ್ಳೇ ಸಕ್ಸಸ್ ಮೀಟ್ ಮಾಡಿ, ಇಂದ್ರ -ಚಂದ್ರ ಅಂತ ಹೊಗಳಿಕೊಂಡರೂ ನಾವೇನೂ ತಕರಾರು ಮಾಡಲ್ಲ.

ಅರವಿಂದ್ ಕೇಜ್ರಿವಾಲ್ ಅವರು ಗೊತ್ತೇ ಇರ್ತಾರೆ
ಆದರೆ, ಅದು ಬದಲಾಯಿಸ್ತೀನಿ- ಇದು ಬೇರೆ ಮಾಡ್ತೀನಿ ಅಂತ ಬಂದು ಆಮೇಲೆ ಹತ್ತರಲ್ಲಿ ಹನ್ನೊಂದಾದರೆ ಹುಡುಕಿಕೊಂಡು ಬಂದು ಬಯ್ದು ಹೋಗಬೇಕು ಅಂತ ಸಿಟ್ಟು ಬರುತ್ತೆ.
ನಿಮಗೆ ಅರವಿಂದ್ ಕೇಜ್ರಿವಾಲ್ ಅವರು ಗೊತ್ತೇ ಇರ್ತಾರೆ. ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಬಂದಿದೆ. ನಾವೇನು ಮಾಹಿತಿ ಹಕ್ಕು ಕಾಯ್ದೆ ಅಂತ ಹೆಮ್ಮೆಯಿಂದ ಹೇಳ್ತೀವಿ ಅದಕ್ಕಾಗಿ ಅವರು ಬಹಳ ಕೆಲಸ ಮಾಡಿದ್ದಾರಂತೆ.

ಈಗ ಆಪ್ ಹೇಗಿದೆ
ದೆಹಲಿಯಲ್ಲಿ ಅಂಥ ಬಿಜೆಪಿ, ಕಾಂಗ್ರೆಸ್ ನೇ ಲಾಗಾ ಹಾಕಿಸಿ, ಅಷ್ಟೊಂದು ಮಂದಿ ಆಪ್ ಶಾಸಕರನ್ನು ಜನರು ಗೆಲ್ಲಿಸಿದರು. ಮುಂದೆ ನಿಲ್ಲುವ ನಾಯಕ ಮಾತ್ರ ಅಲ್ಲ, ಆತನ ಹಿಂದೆ ಇರುವವರೂ ನೆಟ್ಟಗೆ ಇರಬೇಕು ಎಂಬುದಕ್ಕೆ ಒಂದೊಳ್ಳೆ ಉದಾಹರಣೆ ಸಿಕ್ಕಿತು.
ಈಗ ಆಪ್ ಹೇಗಿದೆ ಅನ್ನೋದನ್ನು ಷರಾ ಬರೆಯಲು ಆಗೋದಿಲ್ಲ. ಆದರೆ ಅದರ ಹೆಸರಂತೂ ಜನರ ಮಧ್ಯೆ ಹಾಳಾಗಿದೆ ಅನ್ನೋದು ಹೌದು.

ಗಾಂಧೀಜಿ ಇಡೀ ಭಾರತವನ್ನು ಸುತ್ತಾಡಿದ್ದರಂತೆ
ನೀವು ಬಹಳ ಚೆನ್ನಾಗಿ ಚಿತ್ರಕತೆ ಬರೆಯುತ್ತೀರಿ. ಅಷ್ಟೇ ಚೆನ್ನಾಗಿ ಹಾಡು- ಸಂಭಾಷಣೆ ಕೂಡ ಬರೆಯುತ್ತೀರಿ. ಒಂದು ದೃಶ್ಯವನ್ನು ಹೇಗೆ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಬೇಕು ಎಂಬುದನ್ನು ನಿಮಗೆ ಹೇಳಿಕೊಡುವುದು ಬೇಕಿಲ್ಲ. ಆದರೆ ಒಂದು ಮಾತು.
ದಕ್ಷಿಣ ಆಫ್ರಿಕಾದಿಂದ ವಾಪಸ್ ಬಂದ ಗಾಂಧೀಜಿ ರೈಲಿನ ಸಾಮಾನ್ಯ ಬೋಗಿಯಲ್ಲಿ ಇಡೀ ಭಾರತವನ್ನು ಸುತ್ತಾಡಿದ್ದರಂತೆ. ಅವರಿಗೆ ಈ ದೇಶದ ಜನರ ನಾಡಿ ತಿಳಿಯಬೇಕಿತ್ತು. ಈ ದೇಶವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಅದಕ್ಕೆ ಹಾಗೆ ಮಾಡಿದರು. ಅದು ಪ್ರಾಮಾಣಿಕ ಪ್ರಯತ್ನ ಅಂತನ್ನಿಸಲ್ಲವಾ?

ಹೆಗಲ ಮೇಲೆ ಹೊತ್ತು ಕುಣಿಸಲು ಒಬ್ಬರು ಬೇಕು
ನಮಗೆ ನಂಬಿ, ಹೆಗಲ ಮೇಲೆ ಹೊತ್ತು ಕುಣಿಸಲು ಒಬ್ಬರು ಬೇಕು. ಅದು ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲ್, ಅವರು-ನೀವು ಯಾರಾದರೂ ಸರಿ. ಆದರೆ ನಂಬಿದ ಮೇಲೆ ಸಣ್ಣ ಮೋಸ ಕಂಡುಬಂದರೂ ಹೆಗಲ ಮೇಲಿಂದ ಇಳಿಸಬೇಕು ಅಂತನಿಸಲ್ಲ, ನೆಲಕ್ಕೆ ಹಾಕಿ ಕೆಡವಬೇಕು ಅನ್ನಿಸುತ್ತೆ.
ನಿಮ್ಮ ಧ್ವನಿಯಲ್ಲಿ ಪ್ರಾಮಾಣಿಕತೆ ಇದೆ. ಉದ್ದೇಶ ಶುದ್ಧವಾಗಿದೆ ಅಂತ ನಂಬ್ತಿದ್ದೀವಿ. ಹೆಗಲ ಮೇಲೆ ಕೂರಿಸಿಕೊಳ್ತಿದೀವಿ. ಮುಂದಿನ ಜವಾಬ್ದಾರಿ ನಿಮ್ಮದೇ...












Click it and Unblock the Notifications