ಕೆಎಸ್ಆರ್ ಟಿಸಿ ಯಮಕಿಂಕರ ಡ್ರೈವರ್ ಗಳಿಂದ ಕಾಪಾಡಿ
ಆದರೆ,ಪುಟ್ಟ ತಾಲೂಕಾ ಕೇಂದ್ರವೊಂದರಲ್ಲಿ ಅದೇ ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಮಟ ಮಟ ಮಧ್ಯಾಹ್ನದಲ್ಲಿ ಕಂಠಮಟ್ಟ ಸಾರಾಯಿ ಸುರಿದುಕೊಂಡು 50 ಜನ ಪ್ರಯಾಣಿಕರ ಜೀವದ ಹೊಣೆ ಹೊತ್ತು ಬಸ್ ಓಡಿಸುತ್ತಿದ್ದರೆ ಅದು ಯಾರ ಗಮನಕ್ಕೂ ಬರುವದಿಲ್ಲ. ಹೀಗ್ಯಾಕಪ್ಪಾ ಎಂದು ಕೇಳುವವರಿಲ್ಲ. ಹೇಳುವವರಂತೂ ಮೊದಲೇ ಇಲ್ಲ.ಇದೊಂಥರಾ ಕೆಟ್ಟಾಕೊಳಕು ಹಂದಿಗಳ ಅಡ್ಡೆಯಂತಾಗಿದೆ.ಕತ್ತು ಕಡಿಯಲು ಬಂದರೂ 'ಸ್ವಲ್ಪ ತಾಳ್ಮೆ ಮರಾಯಾ" ಎಂಬ ಮನಸ್ಥಿತಿಯ ಅಮಾಯಕ ಜನ.ಇದನ್ನೇ ದುರುಪಯೋಗಪಡಿಸಿಕೊಳ್ಳುವ ಸಾರ್ವಜನಿಕರ ಸೇವಕರು. ದೇವರೇ ಗತಿ.
ಈಗ ಹೇಳ ಹೊರಟಿರುವದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೆ.ಎಸ್.ಆರ್.ಟಿ.ಸಿ ಘಟಕದ ಬಗ್ಗೆ.ಇಲ್ಲಿಯ ಡ್ರೈವರ್ ಹಾಗೂ ಕಂಡೆಕ್ಟರ್ಗಳು ಅದ್ಯಾವ ಪರಿ ಹೆಚ್ಚಿಕೊಂಡಿದ್ದಾರೆಂದರೆ, ಮೂಗುದಾರವಿಲ್ಲದ ಹೋರಿಯಂತಾಗಿದ್ದಾರೆ.ಇಂದು(ಜೂ.25) ತಾಲೂಕಿನ ಗ್ರಾಮೀಣ ಸಾರಿಗೆಯೊಂದರಲ್ಲಿ ಪ್ರಯಾಣಿಸುತ್ತಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಸ್ವಲ್ಪದರಲ್ಲಿ ಜೀವ ಉಳಿಸಿಕೊಂಡಿದ್ದಾರೆ. 9.30ಕ್ಕೆ ಯಲ್ಲಾಪುರದಿಂದ 15 ಕಿ.ಮೀ ದೂರದ ಮಾಗೋಡಿಗೆ ಹೊರಟ ಬಸ್ನ ಡ್ರೈವರ್ ಸೀಟಿಗೆ ಅತ್ತಿತ್ತ ತೂರಾಡುತ್ತ ಬಂದು ಕುಳಿತಿದ್ದು ಈರಪ್ಪ ಎಂಬ ಡ್ರೈವರ್.
ಬೆಳ್ಳಂಬೆಳಗ್ಗೆಯೇ ಆಸಾಮಿ ಸಾರಾಯಿ ಸುರಿದುಕೊಂಡೇ ಬಂದಿದ್ದಾನೆ.ಪ್ರಯಾಣಿಕರ ಎದೆಯಲ್ಲಿ ಢವ ಢವ.ಹಾಗಿದ್ದರೂ ಯಲ್ಲಾಪುರದಿಂದ ಹೊರಟು ಮಾಗೋಡು ತಲುಪಿ ಹಿಂದಿರುಗಿ ಯಲ್ಲಾಪುರ ಬರುವಾಗ ಕಿಕ್ ಏರಿತೋ ಗೊತ್ತಿಲ್ಲ.ಕವಡಿಕೆರೆ ಎಂಬಲ್ಲಿಯ ಬಳಿ ಸ್ಥಿಮಿತ ಕಳೆದುಕೊಂಡು ರಸ್ತೆಯ ತುಂಬ ಬಸ್ ಓಡಿಸುತ್ತ ಬಂದ.ಯಲ್ಲಾಪುರ ತಲುಪುವದರೊಳಗಾಗಿ ಹೀಗೆಯೇ ನಾಲ್ಕಾರು ಬಾರಿ ನರಕ ದರ್ಶನ ಮಾಡಿಸಿದ್ದಾನೆ.ಅಷ್ಟರಲ್ಲಿ ಸ್ವಲ್ಪ ಎಚ್ಚೆತ್ತ ಪ್ರಯಾಣಿಕರು ಈರಪ್ಪ ಮಹಾಸ್ವಾಮಿಗಳನ್ನು ರಾಂಗ್ ಆಗಿ,ತರಾಟೆಗೆ ತೆಗೆದುಕೊಂಡು ಥಳಿಸಿದ್ದಾರೆ.ಅಂತೂ ನಗರ ತಲುಪುವಷ್ಟರಲ್ಲಿ ಪ್ರಯಾಣಿಕರ ಸ್ಥಿತಿ ಅಯೋಮಯ.ಬಸ್ಸ್ಟಾಂಡಿನಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರಿಗೆ ಅವಾಚ್ಯವಾಗಿ ಬೈಯ್ಯುತ್ತ ಮತ್ತೆ ತಲುಪಿದ್ದು ಸಾರಾಯಿ ಅಂಗಡಿಗೇ!
ಹಾಗೆ,ಈ ಡ್ರೈವರ್ ಬಗ್ಗೆ ಹೇಳಬೇಕೆಂದರೆ,ಬಿಸಿರಕ್ತದ ಯುವಕನೇನಲ್ಲ.ಸೇವಾ ಅವಧಿ ಇನ್ನು 3 ತಿಂಗಳು ಇದ್ದೀತು.20ಕ್ಕೂ ಹೆಚ್ಚು ವರ್ಷಗಳ ಚಾಲನಾ ಅನುಭವವಿದೆ.ಈ ಹಿಂದೆಯೂ ನಾಲ್ಕಾರು ಬಾರಿ ಒಂದಿಲ್ಲೊಂದು ಲಫಡಾ ಮಾಡಿಕೊಂಡು ಮನೆಗೆ ಹೋಗಿದ್ದಾನೆ.ಹಾಗಿದ್ದರೂ ಅದ್ಯಾವ ಅಧಿಕಾರಿಯ ಕಾಲು ಹಿಡಿದು ಮತ್ತೆ ಸೇವೆಗೆ ಹಾಜರಾಗಿದ್ದಾನೋ ಗೊತ್ತಿಲ್ಲ.ಸರ್ಕಾರಿ ಕೆಲಸದಲ್ಲಿದ್ದುಕೊಂಡು ಸಾರ್ವಜನಿಕರ ಜೀವದ ಜವಾಬ್ದಾರಿ ಹೊತ್ತು ಹೀಗೆ ಅಮಾಯಕ ಪ್ರಯಾಣಿಕರ ಪ್ರಾಣದೊಂದಿಗೆ ಆಟವಾಡುವ ನೌಕರರ ಬಗ್ಗೆ ಅಧಿಕಾರಿಗಳ ಲಕ್ಷ್ಯವಿಲ್ಲವಾ?
ಅಥವಾ,ಹೋದರೆ ಹೋಗಲಿ ಒಂದಿಷ್ಟು ಪ್ರಾಣ,ಭೂಮಿಯ ಭಾರವಾದರೂ ಕಡಿಮೆಯಾದೀತು ಎಂಬ ಭಾವನೆಯಾ? ಅವರೇ ಉತ್ತರಿಸಬೇಕು.
ಸಂಬಂಧಪಟ್ಟವರ ಗಮನಕ್ಕೆ : ಇಂಥಹ ಘಟನೆಗಳು ಯಲ್ಲಾಪುರ ಸಾರಿಗೆ ಘಟಕದಲ್ಲಿ ಸಾಮಾನ್ಯವಾಗಿಬಿಟ್ಟಿದೆ.ಇದೇ ರೀತಿ ಇನ್ನೂ ಇಬ್ಬರು ಚಾಲಕರು ಪಾನಮತ್ತರಾಗಿಯೇ ಬಸ್ ಓಡಿಸುತ್ತಾರೆ.ಪ್ರಯಾಣಿಕರೇ ಪ್ರತ್ಯಕ್ಷ ಸಾಕ್ಷಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ,ಸಾಕ್ಷ್ಯಗಳೊಂದಿಗೆ ವರದಿ ನೀಡುತ್ತೇನೆ.ಯಾವುದೇ ಪೂರ್ವಾಗ್ರಹವಿಲ್ಲ.ವಯಕ್ತಿಕ ಹಿತಾಸಕ್ತಿಗಳಿಲ್ಲ.ಇಂಥವರ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದೇ ನಮ್ಮ ಉದ್ದೇಶ.












Click it and Unblock the Notifications