ರಾಮದೇವ್ ವಿರುದ್ಧ ದಿಗ್ವಿಜಯ್ ಕುಹಕ ಸರಿಯೇ?

"ಉಪವಾಸ ಸತ್ಯಾಗ್ರಹಗಳಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಿಲ್ಲ. ಕಾನೂನಿನಿಂದ ಮಾತ್ರ ಇದು ಸಾಧ್ಯ" ಎಂದು ಉಪವಾಸ ಸತ್ಯಾಗ್ರದ ಪಿತಾಮಹ ಎಂದೇ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಮಹಾತ್ಮಾ ಗಾಂಧೀಜಿಯವರಿದ್ದ ಕಾಂಗ್ರೆಸ್ ಪಕ್ಷದ ಮುಖಂಡ ದಿಗ್ವಿಜಯ್ ಸಿಂಗ್ ಕುಹಕವಾಡಿದ್ದಾರೆ.
ನಾವೇನಾದರೂ ಬಾಬಾ ಅವರಿಗೆ ಹೆದರಿದ್ದಿದ್ದರೆ, ಪಕ್ಷವು ಅವರನ್ನೇ ಜೈಲಿಗೆ ತಳ್ಳಿ ಬಿಡುತ್ತಿತ್ತು. ಬಾಬಾ ಈಗ ಉದ್ಯಮಿಯೇ ಆಗಿದ್ದು, ಬಾಬಾ ರಾಮದೇವ್ ಅವರು ಯೋಗ ಶಿಬಿರವೊಂದಕ್ಕೆ 50 ಸಾವಿರ ರೂಪಾಯಿ ಶುಲ್ಕ ವಿಧಿಸುತ್ತಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಅಲ್ಲಾ ಸ್ವಾಮಿ, ದಿಗ್ವಿಜಯ್ ಸಿಂಗ್ಅವರೇ, ಉದ್ಯಮಿಗಳೇನಾದರೂ ಕಪ್ಪು ಹಣವನ್ನು ವಾಪಾಸು ತರಿಸಲು ಸರಕಾರದ ಮೇಲೆ ಒತ್ತಡ ಹಾಕಬಾರದೇ? ಅವರಿಗೆ ಉಪವಾಸ ಸತ್ಯಾಗ್ರಹ ಮಾಡುವ ಹಕ್ಕಿಲ್ಲವೇ? ಬಾಬಾ ರಾಮದೇವ್ ಸನ್ಯಾಸಿಯೇ ಅಲ್ಲಾ ಉದ್ಯಮಿ ಎಂದು ಕರೆಯುವ ನೀವು ಅಂದರೆ ರಾಜಕಾರಣಿಗಳೂ ಈಗ ಉದ್ಯಮಿಗಳಾಗಿಲ್ಲವೇ? ನೀವು ಜನ ಸೇವಕರೇ?
ನನಗನಿಸುವ ಮಟ್ಟಿಗೆ ಬಾಬಾ ರಾಮದೇವ್ ಒಬ್ಬ ಭಾರತೀಯ ಸಂಸ್ಕೃತಿಯ ಪಾಲಕ ಹಾಗೂ ನಿಜವಾದ ಪ್ರತಿಪಾದಕರಂತೆ ಕಾಣುತ್ತಾರೆ. ಹಾಗಂತ ಬಾ ಬಾ ಅವರು ಒಬ್ಬ ಮಹಾತ್ಮ, ಎಲ್ಲಾ ಆರೋಪಗಳಿಂದ ಮುಕ್ತ, ಇತ್ಯಾದಿ-ಇತ್ಯಾದಿ ಎಂದು ನಾನು ಹೇಳಬಯಸುವುದಿಲ್ಲ. ಆದರೆ ಅವರೊಬ್ಬ ನಿಜವಾದ ಯೋಗ ಗುರು, ಮತ್ತು ಸಮಾಜದ ಬಗ್ಗೆ ಕಿಂಚಿತ್ ಕಳಕಳಿ ಇರುವ ವ್ಯಕ್ತಿ.
ದಿಗ್ವಿಜಯ್ ಹೇಳಿದ ಹಾಗೆ ಯೋಗ ಶಿಬಿರಗಳಿಗೆ ರಾಮದೇವ್ ಹಣ ಪಡೆಯುವ ವಿಚಾರ ನನಗೆ ಗೊತ್ತಿಲ್ಲ; ಏಕೆಂದರೆ, ನನ್ನ ಸುತ್ತ-ಮುತ್ತ ನಾನು ಅನೇಕ ಯೋಗ ತರಬೇತಿ ನೀಡುವವರನ್ನು ನೋಡಿದ್ದೇನೆ. ಅವರಲ್ಲಿ ಹೆಚ್ಚಿನ ಜನ ಬಾಬಾ ರಾಮದೇವ್ ಅವರ ಪತಂಜಲಿ ಯೋಗ ಆಶ್ರಮದಿಂದಲೇ ಕಲಿತು ಬಂದವರು. ಅವರಲ್ಲಿ ಕೆಲವರು ಉಚಿತವಾಗಿ ಯೋಗ ಕಲಿಸುತ್ತಾರೆ. ಇದನ್ನು ನೋಡಿದರೆ ದಿಗ್ವಿಜಯ್ ಮಾತನ್ನು ನಂಬಲು ಸಾದ್ಯವಿಲ್ಲ.
ಮತ್ತೊಂದು ಪ್ರಮುಖ ವಿಚಾರವೆಂದರೆ, ಉಪವಾಸ ಸತ್ಯಾಗ್ರಹಗಳು ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಯಾವುದೇ ಪಾತ್ರವಹಿಸುವುದಿಲ್ಲವೆಂದಾದರೆ, ಅವು ಒಂದು ದೇಶ ಸ್ವತಂತ್ರಪಡೆಯುವುದಕ್ಕೆ ಹೇಗೆ ನೆರವಾಗಬಲ್ಲವು? ಒಂದು ಕಾಲಕ್ಕೆ ಮಹಾತ್ಮಾ ಗಾಂಧಿಯವರು ಮುನ್ನಡೆಸಿದ ಕಾಂಗ್ರೆಸ್ ಪಕ್ಷದಲ್ಲಿ ಒಂದು ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಇಂಥ ಹೇಳಿಕೆ ನೀಡಲು ದಿಗ್ವಿಜಯ್ ಸಿಂಗ್ ಅವರಿಗೆ ನಾಚಿಕೆಯಾಗುವುದಿಲ್ಲವೇ?
ಈ ಉಪವಾಸ ಸತ್ಯಾಗ್ರಹ ಮಹಾತ್ಮಾ ಗಾಂಧಿಯವರ ಕೂಸಲ್ಲವೇ? ಇನ್ನು ಕಾಂಗ್ರೆಸ್ ಪಕ್ಷ ಬಾಬಾ ಅವರಿಗೆ ಹೆದರಿದ್ದರೆ ಅವರನ್ನೇ ಜೈಲಿಗೆ ಕಳಿಸುತ್ತಿದ್ದೆವು ಎಂಬ ದಿಗ್ವಿಜಯ್ ಮಾತು ದುರಹಂಕಾರದ ಪರಮಾವಧಿ ಅಲ್ಲವೇ? ಒಂದು ವೇಳಿ ಹಾಗೆ ಮಾಡಿದರೆ ಬ್ರಿಟೀಷ್ ಸರಕಾರಕ್ಕೂ ಭಾರತೀಯ ಕಾಂಗ್ರೆಸ್ ಸರಕಾರಕ್ಕೂ ನಡುವೆ ಏನು ವ್ಯತ್ಯಾಸ? ನೀವೇನಂತೀರಿ?












Click it and Unblock the Notifications