ಗಣಿಗಾರಿಕೆ ರಾಷ್ಟ್ರೀಕರಣ, ಅಣ್ಣಾ ಚಳವಳಿ ಅಗತ್ಯ
ಭ್ರಷ್ಟಾಚಾರದ ವಿರುದ್ದ ನಡೆಯುತ್ತಿರುವ ಹೋರಾಟದಂತೆ ಗಣಿ ಸಂಪತ್ತಿನ ಸಂಪೂರ್ಣ ರಾಷ್ಟ್ರೀಕರಣದ ಬಗ್ಗೆಯೂ ರಾಷ್ಟ್ರದಲ್ಲಿ ಜಾಗೃತಿ ಆಗಬೇಕಾಗಿದೆ. ರಾಷ್ಟ್ರದ ಗಣಿ ಸಂಪತ್ತಿನ ಹಗಲುದರೋಡೆ ತಡೆಯಬೇಕಿದೆ. ಅಣ್ಣಾ ಹಜಾರೆ ಚಳವಳಿ ಮಾದರಿ ಪ್ರತಿಭಟನೆ ಅಕ್ರಮ ಗಣಿಗಾರಿಕೆ ಪೀಡಿತ ಕರ್ನಾಟಕದಲ್ಲಿ ತುರ್ತಾಗಿ ಆಗಬೇಕಿದೆ. ಗಣಿಗಾರಿಕೆ ಲೈಸನ್ಸ್ ರದ್ದು ನಾಟಕ ನಿಲ್ಲಿಸಬೇಕಿದೆ.
ಅಲ್ಪ ಮೊತ್ತದ ತೆರಿಗೆ ಪಡೆದುಕೊಂಡು ಗಣಿ ಸಂಪತ್ತ ಲೂಟಿ ಹೊಡೆಯಲು ಕಾನೂನು ರೂಪಿಸಿದ ನಮ್ಮ ಸಂಸತ್ತು ಮಾಡಿರುವುದು ದೇಶದ್ರೋಹದ ಕೆಲಸವಲ್ಲವೇ? ಈ ಬಗ್ಗೆ ಯಾಕೆ ಯಾವುದೇ ರಾಷ್ಟ್ರಪ್ರೇಮಿ ಸಂಘಟನೆಗಳು ಧ್ವನಿ ಎತ್ತುತ್ತಿಲ್ಲ ? ಗಣಿ ಸಂಪತ್ತಿನ ರಾಷ್ಟ್ರೀಕರಣ ತುರ್ತಾಗಿ ಆಗಬೇಕಾದ ಅನಿವಾರ್ಯತೆ ಇದೆ. ಗಣಿ ಸಂಪತ್ತಿನಿಂದ ಬರುವ ಲಕ್ಷಾಂತರ ಕೋಟಿ ಆದಾಯವನ್ನು ರಾಷ್ಟ್ರದ ಅಭಿವೃದಿಗೆ ಬಳಸಬೇಕಾದ ಅಗತ್ಯವಿದೆ.
ಆದರೆ ಈಗ ಆಗುತ್ತಿರುವುದೇನು ? ಕೆಲವೇ ಕೆಲವು ಖಾಸಗಿ ಉದ್ಯಮಿಗಳ ತಿಜೋರಿ ಸೇರುತ್ತಿರುವ ಗಣಿ ಸಂಪತ್ತಿನಿಂದ ಜನಸಾಮಾನ್ಯರಿಗೆ ಏನು ಪ್ರಯೋಜನ ? ರಾಷ್ಟ್ರದ ಸಂಪತ್ತು ಈ ರೀತಿ ಕೆಲವೇ ಕೆಲವು ಖಾಸಗಿ ವ್ಯಕ್ತಿ ಗಳ ತಿಜೋರಿ ಸೇರುತ್ತಿರುವುದನ್ನು ನೋಡಿಕೊಂಡು ನಾವು ತೆಪ್ಪಗಿರುವುದರಿಂದಲೇ ಅಲ್ಲವೆ ?
ದೇಶಕ್ಕೆ ಇಂದು ವಿದ್ಯುತ್ ಉತ್ಪಾದನೆಯ ಹೆಚ್ಚಳ ಅನಿವಾರ್ಯ. ಗಣಿ ಸಂಪತ್ತನ್ನು ರಾಷ್ಟ್ರೀಕರಣಗೊಳಿಸಿ ಅದರಿಂದ ಬರುವ ಹಣವನ್ನು ಬಳಸಿ ಪರಿಸರಕ್ಕೆ ಹೆಚ್ಚು ಹಾನಿ ಮಾಡದ ಸೌರ ವಿದ್ಯುತ್, ಗಾಳಿ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಸಾಧ್ಯವಿದೆ. ಈ ಬಗ್ಗೆ ನಾಗರಿಕ ಸಮುದಾಯ ತನ್ನ ಧ್ವನಿಯನ್ನು ಎತ್ತಬೇಕಾಗಿದೆ. ಈಗ ಸೌರ ವಿದ್ಯುತ್ ಹಾಗೂ ಗಾಳಿ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಅಡ್ಡಿಯಾಗಿರುವುದು ಪ್ರತಿ ಯುನಿಟ್ ವಿದ್ಯುತ್ ಉತ್ಪಾದನೆಗೆ ತಗಲುವ ಹೆಚ್ಚಿನ ವೆಚ್ಚ. ಗಣಿ ಸಂಪತ್ತಿನ ರಾಷ್ಟ್ರೀಕರಣವಾದರೆ ಆ ಹಣದಿಂದ ಸೌರ ಹಾಗೂ ಗಾಳಿ ವಿದ್ಯುತ್ ಉತ್ಪಾದನೆಗೆ ಸಬ್ಸಿಡಿ ನೀಡಲು ಸಾಧ್ಯ. ಇದರಿಂದ ನಮ್ಮ ವಿದ್ಯುತ್ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲು ಸಾಧ್ಯ .
ಗಣಿ ಸಂಪತ್ತಿನ ಹಗಲುದರೋಡೆಗೆ ಅವಕಾಶ ಕೊಟ್ಟದ್ದು ನಮ್ಮ ಸಂಸತ್ತು. ಹಾಗಾಗಿ ಕೋರ್ಟುಗಳು ಈ ವಿಷಯದಲ್ಲಿ ಅಸಹಾಯಕವಾಗಿವೆ. ಸಂಸತ್ತು ಮಾತ್ರ ಈ ವಿಷಯದಲ್ಲಿ ಏನಾದರೂ ಮಾಡಲು ಸಾಧ್ಯ. ಅದಕ್ಕಾಗಿ ಅಣ್ಣ ಹಜಾರೆಯವರ ಮಾದರಿಯಲ್ಲಿ ಇನ್ನೊಂದು ಹೋರಾಟದ ಅಗತ್ಯವಿದೆ.