ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಾರಂಭ ಜ.1 ರಂದು ಸಾರ್ವತ್ರಿಕ ರಜೆ ನೀಡಿ

By * ಐ. ಪ್ರಭಾಕರ ಅಮ್ಮನ್ನ, ಉಡುಪಿ
|
Google Oneindia Kannada News

New Year day as Public holiday
ಕರ್ನಾಟಕ ಸರ್ಕಾರ ಪ್ರತಿ ವರ್ಷವೂ ಅಧಿಸೂಚನೆ ಮೂಲಕ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸುತ್ತಿದೆ. ಯಾವುದೇ ಒಂದು ಜನಾಂಗ ತಾವು ಆಚರಿಸುತ್ತಿರುವ ಹಬ್ಬಕ್ಕೆ ಸರ್ಕಾರ ಈ ಮೊದಲೇ ಪ್ರಕಟಿಸಿರುವ ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲದಿದ್ದ ಪಕ್ಷದಲ್ಲಿ ಪ್ರತ್ಯೇಕವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದಾಗ ಸರ್ಕಾರ ಅದನ್ನು ಪರಿಶೀಲಿಸಿ ದಿನಾಂಕ 15-06-1957ರ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿರುವ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಕಾಯ್ದೆ, 1881ರ 25 ಸೆಕ್ಷನ್ ಅಡಿ ಸದರಿ ಹಬ್ಬಕ್ಕಾಗಿ ಸಾರ್ವತ್ರಿಕ ರಜಾದಿನವೆಂದು ಘೋಷಿಸುತ್ತದೆ.

ಇದಕ್ಕೆ ಪೂರಕವಾಗಿ ಕಳೆದ ವರ್ಷ ಕನಕದಾಸ ಜಯಂತಿಗೆ ಮತ್ತು ಇತ್ತೀಚಿಗೆ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಅಸುಇ 07 ಎಚ್‌ಎಡಿಎಲ್ 2009 (ಭಾಗ) ಕರ್ನಾಟಕ ಸರ್ಕಾರ ದಿನಾಂಕ 13.10.2010ರ ಆದೇಶದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಗೆ ಸಾರ್ವತ್ರಿಕ ರಜಾದಿನವೆಂದು ಘೋಷಿಸಲಾಗಿದೆ.

ಕೆಲವು ವರ್ಷಗಳ ಮೊದಲು ನೂತನ ವರ್ಷಾರಂಭದ ದಿನ ಸಹ ಸಾರ್ವತ್ರಿಕ ರಜಾದಿನವೆಂದು ಅಧಿಸೂಚನೆಯಲ್ಲೇ ಸೇರ್ಪಡೆಗೊಂಡಿತ್ತು. ಸುಮಾರು ಎರಡು ದಶಕಗಳ ಹಿಂದೆ ರಾಜ್ಯ ಸರ್ಕಾರ ನವೆಂಬರ್ 1ರಂದು ರಾಜ್ಯೋತ್ಸವ ದಿನವನ್ನು ಸಾರ್ವತ್ರಿಕ ರಜಾದಿನವೆಂದು ಘೋಷಿಸಿ ಇದರ ಬದಲಾಗಿ ನೂತನ ವರ್ಷಾರಂಭದ ಸಾರ್ವತ್ರಿಕ ರಜೆಯನ್ನು ರದ್ದುಪಡಿಸಿದೆ. ಆದರೆ, ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯ ಸೇರಿದಂತೆ ಬಹುತೇಕ ಜನರು ವರ್ಷಾರಂಭದ ದಿನವನ್ನು ವಿಶೇಷ ಹಬ್ಬವನ್ನಾಗಿ ಆಚರಿಸುತ್ತಾರೆ.

ಪ್ರತಿ ಡಿಸೆಂಬರ್ 31ನೇ ದಿನವನ್ನು ಹಳೆ ವರ್ಷದ ಕೊನೆ ದಿನ ಹಾಗೂ ನೂತನ ವರ್ಷಾರಂಭದ ಜನವರಿ 1ನೇ ದಿನವನ್ನು ಪ್ರಾರ್ಥನಾ ಪೂರ್ವಕವಾಗಿ ಹೊಸ ವರ್ಷವನ್ನು ಆಹ್ವಾನಿಸಲಾಗುತ್ತದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಜನತೆಗೆ ಚಾಂದ್ರಮಾನ ಯುಗಾದಿಯಿಂದ ಹಾಗೂ ಉತ್ತರ ಭಾರತೀಯರಿಗೆ ದೀಪಾವಳಿಯಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ಈ ಎರಡೂ ಹಬ್ಬಗಳು ಹೊಸ ವರ್ಷದ ಫಲವಾಗಿ ಸಾರ್ವತ್ರಿಕ ರಜೆಯನ್ನು ಸರ್ಕಾರ ನೀಡಿರುತ್ತದೆ.

ಅದರಂತೆ ಸಮಸ್ತ ಭಾರತೀಯ ಕ್ರೈಸ್ತ ಬಾಂಧವರು ಡಿಸೆಂಬರ್ 25ರಂದು ಕ್ರಿಸ್ ಮಸ್ ಹಬ್ಬವನ್ನು ಆಚರಿಸುತ್ತಾರೆ. ಅಲ್ಲಿಂದ ಪ್ರಾರಂಭವಾದ ಈ ಹಬ್ಬವು ಜನವರಿ ತಿಂಗಳ ಮೊದಲನೆ ದಿನದಂದು ಕ್ರೈಸ್ತ ವರ್ಷಾರಂಭವಾಗಿರುತ್ತದೆ. ಆದ್ದರಿಂದ ಈ ಹಿಂದೆ ಸರ್ಕಾರ ನೀಡಿದ್ದ ಜನವರಿ 1ನೇ ತಾರೀಖನ್ನು ಕ್ರೈಸ್ತರ ವರ್ಷಾರಂಭದ ದಿನವೆಂದು ಪರಿಗಣಿಸಿ ಸಾರ್ವತ್ರಿಕ ರಜೆ ನೀಡಿರುತ್ತದೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಸಾರ್ವತ್ರಿಕ ರಜೆಯನ್ನು ರದ್ದು ಪಡಿಸಿ ಪರಿಮಿತ ರಜೆಯನ್ನಾಗಿ ಘೋಷಿಸಿರುತ್ತದೆ. ಇದೇ ರೀತಿ ಉಳಿದ (ವಾಲ್ಮೀಕಿ ಜಯಂತಿ, ಕನಕ ಜಯಂತಿ, ಮಹಾಶಿವರಾತ್ರಿ, ಮೊಹರಂ ಕಡೆ ದಿನ, ಅಂಬೇಡ್ಕರ್ ಜಯಂತಿ, ಮಹಾಲಯ ಅಮಾವಾಸ್ಯೆ ಇತ್ಯಾದಿ ಸುಮಾರು ಹತ್ತು) ಸಾರ್ವತ್ರಿಕ ರಜಾ ದಿನಗಳನ್ನೂ ರದ್ದುಪಡಿಸಿ, ಪರಿಮಿತ ರಜೆಯನ್ನಾಗಿ ಘೋಷಿಸಬೇಕಾಗಿ ನಮ್ಮ ಕಳಕಳಿಯ ವಿನಂತಿ.

ಇದರ ಪರಿಹಾರಾತ್ಮಕವಾಗಿ ಪ್ರತಿ ನೌಕರನ ಸಾಂದರ್ಭಿಕ ರಜೆ (ಸಿ.ಎಲ್.)ಗಳನ್ನು ಪ್ರಸಕ್ತ 15ರಿಂದ ಇನ್ನೂ ಹೆಚ್ಚಳ ಮಾಡಲು ಪರಿಶೀಲಿಸಬಹುದು. ಈ ರೀತಿ ಮಾಡುವುದರಿಂದ ಸರ್ಕಾರಿ ಕಚೇರಿಗಳಲ್ಲಿ ಕೆಲಸವೂ ಸಾಗುತ್ತದೆ. ಮತ್ತು ಸಂಬಂಧಿತ ವ್ಯಕ್ತಿಗಳು ಹಬ್ಬವನ್ನೂ ಆಚರಿಸಲು ಸಾಧ್ಯವಾಗುವುದು. ಅದು ಸಾಧ್ಯವಿಲ್ಲದೇ ಇದ್ದಲ್ಲಿ ದಯವಿಟ್ಟು ಕ್ರೈಸ್ತ ಮತಬಾಂಧವರು ಘನ ಸರ್ಕಾರದಲ್ಲಿ ಭಿನ್ನವಿಸಿಕೊಳ್ಳುವುದೇನೆಂದರೆ ಜನವರಿ 1ನೇ ತಾರೀಖಿನಂದು ಹೊಸ ವರ್ಷವನ್ನು ಸಂತೋಷದಿಂದ ಆಚರಿಸಲು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಲು ವಿನಂತಿಸಿಕೊಳ್ಳುತ್ತೇವೆ.

English summary
Christian community in Mangalore and Udupi is demanding Karnataka Govt to declare New Year 2011day as Public Holiday. Earlier state govt had declared Rajyotsava day(Nov.1) as public holiday and canceled New Year day from Govt holiday list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X