ರಾಜಕಾರಣಿಗಳೇ, ಉತ್ತರ ಕರ್ನಾಟಕ ಬಾಯಾರಿದೆ!

ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಬವಣೆ ಹೇಳತೀರದು. ಇಲ್ಲಿಯ ಜನರಿಗೆ 15 ದಿನಗಳಿಗೊಮ್ಮೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ದಶಕಗಳ ಹಿಂದೆಯೇ ಈ ಜಿಲ್ಲೆಗಳ ನೀರಿನ ಕೊರತೆಯನ್ನು ನೀಗಿಸಲು ಮಹದಾಯಿ ನದಿಯಿಂದ 7.56 ಟಿ.ಎಂ.ಸಿ.ಯಷ್ಟು ನೀರನ್ನು ಕಳಸ ಬಂಡೂರ ನಾಲಾ ಯೋಜನೆಯ ಮೂಲಕ ಬಳಸಿಕೊಳ್ಳುವ ಯೋಜನೆ ರೂಪಿಸಲಾಗಿತ್ತು. ಇದಕ್ಕೆ ಕೇಂದ್ರ ಸರಕಾರದ ಅನುಮತಿ ಕೂಡ ಪಡೆಯಲಾಗಿತ್ತು. ಎಲ್ಲವು ಸರಿಯಿದೆ ಅನ್ನುವಾಗ ಗೋವಾ ಸರಕಾರವು ಈ ಯೋಜನೆಯಿಂದ ತಮಗೆ ಅನ್ಯಾಯವಾಗುತ್ತದೆ ಎಂದು ಕ್ಯಾತೆ ಆರಂಭಿಸಿತು.
ಮಹಾದಾಯಿ ನದಿಯಲ್ಲಿ ನಮಗೆ ಸಿಗುವ 45 ಟಿ.ಎಂ.ಸಿ ನೀರಿನಿಂದ 7.56 ಟಿ.ಎಂ.ಸಿ ನೀರನ್ನು ಬಳಸಲು ಸಹ ಗೋವಾ ಸರಕಾರ ತಕರಾರು ಮಾಡುತ್ತಿದ್ದು, ಇದಕ್ಕೆ ಕೇಂದ್ರ ಸರಕಾರದ ಕುಮ್ಮಕ್ಕೂ ಇದೆ. ವಿವಾದಿತ ಹೊಗೇನಕಲ್ ಪ್ರದೇಶದಲ್ಲಿ ತಮಿಳುನಾಡು ಸರಕಾರ ಕುಡಿಯುವ ನೀರಿನ ಯೋಜನೆ ಆರಂಭಿಸಿದಾಗ, ರಾಜ್ಯಕ್ಕೆ ಸುಮ್ಮನಿರುವಂತೆ ಹೇಳಿದ ಕೇಂದ್ರ ಸರಕಾರ, ಕರ್ನಾಟಕದ ಕುಡಿಯುವ ನೀರಿನ ಯೋಜನೆಗೆ ತಡೆ ನೀಡಿ, ಮಹದಾಯಿ ನದಿಯ ವಿಷಯದಲ್ಲಿ ಅನ್ಯವಶ್ಯಕವಾಗಿ ನ್ಯಾಯಾಧಿಕರಣ ರಚನೆಗೆ ಮುಂದಾಗಿರುವುದು ಕೇಂದ್ರ ಸರಕಾರದ ಮಲತಾಯಿ ಧೋರಣೆಯೆ ಸರಿ ಎಂದು ಹೇಳಬಹುದು. ಈ ವಿಚಾರವು ಉಚ್ಚ ನ್ಯಾಯಾಲಯದಲ್ಲಿರುವಾಗ ನ್ಯಾಯಾಧಿಕರಣ ರಚಿಸುವುದು ಸಮಂಜಸವಲ್ಲ. ಗಮನಿಸಬೇಕಾದ ಸಂಗತಿಯೆಂದರೆ ಇದುವರೆಗೂ ನಮ್ಮ ರಾಜ್ಯಕ್ಕೆ ಯಾವುದೇ ನ್ಯಾಯಾಧಿಕರಣಗಳಿಂದ ನ್ಯಾಯ ದೊರಕಿಲ್ಲ.
ಇಷ್ಟೆಲ್ಲ ಬೆಳವಣಿಗೆಗಳು ಆಗುತ್ತಿದ್ದರೂ ಸಹ ನಮ್ಮ ರಾಜ್ಯ ಸರಕಾರವಾಗಲಿ, ವಿರೋಧ ಪಕ್ಷಗಳಾಗಲಿ ಅಥವಾ ಉತ್ತರ ಕರ್ನಾಟಕದ ಜನ ಪ್ರತಿನಿಧಿಗಳಾಗಲಿ ಇದುವರೆಗೂ ಮಾತನಾಡದಿರುವುದು ನಮ್ಮ ಜನಪ್ರತಿನಿಧಿಗಳ ಹಾಗೂ ಸರಕಾರದ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿತೋರಿಸುತ್ತದೆ. ಈ ಕೂಡಲೇ ರಾಜ್ಯ ಸರಕಾರವು ಆದ್ಯತೆಯ ಮೇಲೆ ಈ ವಿಷಯವನ್ನ ಕೈಗೆತ್ತಿಕೊಂಡು, ಕೇಂದ್ರದಿಂದ ಯೋಜನೆಗೆ ಹಸಿರು ನಿಶಾನೆ ಪಡೆದು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೀರೊದಗಿಸುವ ಕೆಲಸ ಮಾಡಬೇಕು.
ಇಂತಿ,
ಚೇತನ್ ಜೀರಾಳ, ಕೊಪ್ಪಳ












Click it and Unblock the Notifications