ಪುದುಚೇರಿಯಲ್ಲಿ ಮೋದಿಯಿಂದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ
ಕಾರೈಕಲ್ ಜಿಲ್ಲೆಯನ್ನು ಒಳಗೊಂಡ ರಾಷ್ಟ್ರೀಯ ಹೆದ್ದಾರಿ 45-ಎ ಯ 4 ಪಥಗಳ ಕಾಮಗಾರಿ ಮತ್ತು ಕಾರೈಕಲ್ ಜೆಐಪಿಎಂಇಆರ್ನ ಮೊದಲ ಹಂತದ ನೂತನ ಕ್ಯಾಂಪಸ್ನ ವೈದ್ಯಕೀಯ ಕಾಲೇಜು ಕಟ್ಟಡಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಸಾಗರಮಾಲ ಯೋಜನೆಯಡಿಯಲ್ಲಿ ಪುದುಚೇರಿಯಲ್ಲಿ ಸಣ್ಣ ಬಂದರು ಅಭಿವೃದ್ಧಿ ಮತ್ತು ಪುದುಚೇರಿಯ ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ಗಳಿಗೂ ಅವರು ಶಿಲಾನ್ಯಾಸ ನೆರವೇರಿಸಿದರು.
ಪುದುಚೇರಿಯ ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಜೆಐಪಿಎಂಇಆರ್)ಯಲ್ಲಿ ರಕ್ತ ಕೇಂದ್ರ ಮತ್ತು ಮಹಿಳಾ ಕ್ರೀಡಾಪಟುಗಳಿಗಾಗಿ ಪುದುಚೇರಿಯ ಲಾಸ್ಪೆಟ್ನಲ್ಲಿ ನಿರ್ಮಿಸಲಾಗಿರುವ 100 ಹಾಸುಗೆಯ ಬಾಲಕಿಯರ ಹಾಸ್ಟೆಲ್ ಹಾಗು ಪುನರ್ ನಿರ್ಮಾಣಗೊಂಡ ಪಾರಂಪರಿಕ ಮೇರಿ ಕಟ್ಟಡವನ್ನೂ ಪ್ರಧಾನಿಯವರು ಉದ್ಘಾಟಿಸಿದರು.
ಪುದುಚೇರಿಯ ಈ ನೆಲವು ಋಷಿಮುನಿಗಳು, ವಿದ್ವಾಂಸರು, ಕವಿಗಳು ಮತ್ತು ಮಹಾಕವಿ ಸುಬ್ರಮಣ್ಯ ಭಾರತಿ ಮತ್ತು ಶ್ರೀ ಅರಬಿಂದೋ ಅವರಂತಹ ಕ್ರಾಂತಿಕಾರಿಗಳ ನೆಲೆಯಾಗಿದೆ ಎಂದು ಪ್ರಧಾನಿ ಹೇಳಿದರು. ಪುದುಚೇರಿಯನ್ನು ವೈವಿಧ್ಯದ ಸಂಕೇತವೆಂದು ಬಣ್ಣಿಸಿದ ಪ್ರಧಾನಿಯವರು, ಇಲ್ಲಿ ಜನರು ವಿಭಿನ್ನ ಭಾಷೆಗಳನ್ನು ಮಾತನಾಡುತ್ತಾರೆ, ವಿಭಿನ್ನ ನಂಬಿಕೆಗಳನ್ನು ಆಚರಿಸುತ್ತಾರೆ. ಆದರೆ ಎಲ್ಲರೂ ಒಟ್ಟಾಗಿ ಬಾಳುತ್ತಾರೆ ಎಂದು ಹೇಳಿದರು.
ಪುನರ್ ನಿರ್ಮಿಸಲಾದ ಮೇರಿ ಕಟ್ಟಡವನ್ನು ಉದ್ಘಾಟಿಸಿದ ಪ್ರಧಾನಿ, ಈ ಕಟ್ಟಡವು ಕಡಲತೀರದ ವಿಹಾರದ ಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಹೇಳಿದರು.
|
ರಾಷ್ಟ್ರೀಯ ಹೆದ್ದಾರಿ 45-ಎ ಯ ನಾಲ್ಕು ಪಥಗಳ ಕಾಮಗಾರಿ
ರಾಷ್ಟ್ರೀಯ ಹೆದ್ದಾರಿ 45-ಎ ಯ ನಾಲ್ಕು ಪಥಗಳ ಕಾಮಗಾರಿಯು ಕಾರೈಕಲ್ ಜಿಲ್ಲೆಯನ್ನು ಒಳಗೊಳ್ಳುತ್ತದೆ ಮತ್ತು ಪವಿತ್ರ ಶನೀಶ್ವರ ದೇವಾಲಯಕ್ಕೆ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಬೆಸಿಲಿಕಾ ಆಫ್ ಅವರ್ ಲೇಡಿ ಆಫ್ ಗುಡ್ ಹೆಲ್ತ್ ಮತ್ತು ನಾಗೋರ್ ದರ್ಗಾಕ್ಕೆ ಸುಗಮ ಅಂತರರಾಜ್ಯ ಸಂಪರ್ಕವನ್ನು ಕಲ್ಪಿಸುತ್ತದೆ ಎಂದು ಪ್ರಧಾನಿ ಹೇಳಿದರು. ಗ್ರಾಮೀಣ ಪ್ರದೇಶ ಮತ್ತು ಕರಾವಳಿ ಸಂಪರ್ಕವನ್ನು ಸುಧಾರಿಸಲು ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡಿದೆ ಮತ್ತು ಇದರಿಂದ ಕೃಷಿ ಕ್ಷೇತ್ರವು ಲಾಭ ಪಡೆಯಲಿದೆ ಎಂದು ಅವರು ಹೇಳಿದರು. ರೈತರ ಉತ್ಪನ್ನಗಳು ಸೂಕ್ತ ಸಮಯದಲ್ಲಿ ಉತ್ತಮ ಮಾರುಕಟ್ಟೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಮತ್ತು ಉತ್ತಮ ರಸ್ತೆಗಳು ಆ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು. ನಾಲ್ಕು ಪಥಗಳ ರಸ್ತೆಯು ಈ ಪ್ರದೇಶದ ಆರ್ಥಿಕ ಚಟುವಟಿಕೆಗಳಿಗೆ ವೇಗವನ್ನು ನೀಡುತ್ತದೆ ಮತ್ತು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
|
ಆರ್ಥಿಕ ಪ್ರಗತಿಯು ಉತ್ತಮ ಆರೋಗ್ಯದೊಂದಿಗೆ ನಿಕಟ ಸಂಬಂಧ
ಆರ್ಥಿಕ ಪ್ರಗತಿಯು ಉತ್ತಮ ಆರೋಗ್ಯದೊಂದಿಗೆ ನಿಕಟ ಸಂಬಂಧ ಹೊಂದಿರುವುದರಿಂದ ಕಳೆದ ಏಳು ವರ್ಷಗಳಲ್ಲಿ ಸದೃಢತೆ ಮತ್ತು ಸ್ವಾಸ್ಥ್ಯವನ್ನು ಸುಧಾರಿಸಲು ಅನೇಕ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು. ಈ ಹಿನ್ನೆಲೆಯಲ್ಲಿ ಅವರು ಖೇಲೋ ಇಂಡಿಯಾ ಯೋಜನೆಯ ಭಾಗವಾಗಿ ಕ್ರೀಡಾ ಸಂಕೀರ್ಣದಲ್ಲಿ 400 ಮೀಟರ್ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ಗೆ ಶಂಕುಸ್ಥಾಪನೆ ನೆರವೇರಿಸಿದರು. ಇದು ಭಾರತದ ಯುವಜನರ ಕ್ರೀಡಾ ಪ್ರತಿಭೆಯನ್ನು ಪೋಷಿಸಲಿದೆ. ಪುದುಚೇರಿಗೆ ಉತ್ತಮ ಕ್ರೀಡಾ ಸೌಲಭ್ಯಗಳು ಬರುತ್ತಿರುವುದರಿಂದ, ಈ ರಾಜ್ಯದ ಯುವಕರು ರಾಷ್ಟ್ರೀಯ ಮತ್ತು ಜಾಗತಿಕ ಕ್ರೀಡಾ ಕೂಟಗಳಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಪ್ರಧಾನಿ ಹೇಳಿದರು. ಇಂದು ಉದ್ಘಾಟನೆಯಾದ ಲಾಸ್ಪೆಟ್ನಲ್ಲಿ ನಿರ್ಮಿಸಲಾದ 100 ಹಾಸುಗೆಗಳ ಬಾಲಕಿಯರ ಹಾಸ್ಟೆಲ್ನಲ್ಲಿ ಹಾಕಿ, ವಾಲಿಬಾಲ್, ಭಾರ ಎತ್ತುವಿಕೆ, ಕಬಡ್ಡಿ ಮತ್ತು ಹ್ಯಾಂಡ್ಬಾಲ್ ಆಟಗಾರರಿಗೆ ಭಾರತ ಕ್ರೀಡಾ ಪ್ರಾಧಿಕಾರದ (ಎಸ್ಎಐ) ತರಬೇತುದಾರರಿಂದ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.
|
ಮುಂಬರುವ ವರ್ಷಗಳಲ್ಲಿ ಆರೋಗ್ಯ ಕ್ಷೇತ್ರವು ಪ್ರಮುಖ ಪಾತ್ರ
ಮುಂಬರುವ ವರ್ಷಗಳಲ್ಲಿ ಆರೋಗ್ಯ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಹೇಳಿದರು. ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ, ಜಿಪ್ಮರ್ನಲ್ಲಿ ರಕ್ತ ಕೇಂದ್ರವನ್ನು ಉದ್ಘಾಟಿಸಲಾಗುತ್ತಿದೆ. ಇದು ರಕ್ತ, ರಕ್ತದ ಉತ್ಪನ್ನಗಳು ಮತ್ತು ಸ್ಟೆಮ್ ಸೆಲ್ ಗಳನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಲು ಸುಧಾರಿತ ಸೌಲಭ್ಯಗಳನ್ನು ಒದಗಿಸುತ್ತದೆ ಎಂದರು. ಈ ಸೌಲಭ್ಯವು ರಕ್ತ ಪೂರಣದ ಸಂಶೋಧನಾ ಪ್ರಯೋಗಾಲಯವಾಗಿ ಮತ್ತು ಸಿಬ್ಬಂದಿ ತರಬೇತಿಯ ತರಬೇತಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಗುಣಮಟ್ಟದ ಆರೋಗ್ಯ ಸೇವೆಯನ್ನು ಉತ್ತೇಜಿಸಲು ನಮಗೆ ಗುಣಮಟ್ಟದ ಆರೋಗ್ಯ ವೃತ್ತಿಪರರು ಬೇಕು ಎಂದು ಪ್ರಧಾನಿ ಹೇಳಿದರು. ಕಾರೈಕಲ್ ನೂತನ ಕ್ಯಾಂಪಸ್ನಲ್ಲಿರುವ ಮೊದಲ ಹಂತದ ವೈದ್ಯಕೀಯ ಕಾಲೇಜು ಕಟ್ಟಡದ ಯೋಜನೆಯು ಪರಿಸರ ಸ್ನೇಹಿ ಸಂಕೀರ್ಣವಾಗಿದ್ದು, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕಲಿಸಲು ಅಗತ್ಯವಿರುವ ಎಲ್ಲಾ ಆಧುನಿಕ ಬೋಧನಾ ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ಪ್ರಧಾನಿ ಹೇಳಿದರು.

ಪುದುಚೇರಿ ಬಂದರು ಅಭಿವೃದ್ಧಿಗೆ ಶಿಲಾನ್ಯಾಸ
ಸಾಗರಮಾಲಾ ಯೋಜನೆಯಡಿ ಪುದುಚೇರಿ ಬಂದರು ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿಯವರು, ಈ ಬಂದರು ಪೂರ್ಣಗೊಂಡ ನಂತರ, ಮೀನುಗಾರಿಕೆಗಾಗಿ ಸಮುದ್ರಕ್ಕೆ ಹೋಗುವ ಮೀನುಗಾರರಿಗೆ ನೆರವಾಗಲಿದೆ ಎಂದು ಆಶಿಸಿದರು. ಇದು ಚೆನ್ನೈಗೆ ಹೆಚ್ಚು ಅಗತ್ಯವಿದ್ದ ಸಮುದ್ರ ಸಂಪರ್ಕವನ್ನು ಒದಗಿಸುತ್ತದೆ. ಪುದುಚೇರಿಯ ಕೈಗಾರಿಕೆಗಳಿಗೆ ಸರಕು ಸಾಗಣೆಗೆ ಅನುಕೂಲ ಕಲ್ಪಿಸುತ್ತದೆ ಮತ್ತು ಚೆನ್ನೈ ಬಂದರಿನ ಹೊರೆ ಕಡಿಮೆ ಮಾಡುತ್ತದೆ. ಇದು ಕರಾವಳಿ ನಗರಗಳಾದ್ಯಂತ ಪ್ರಯಾಣಿಕರ ಸಂಚಾರಕ್ಕೆ ಅವಕಾಶಗಳನ್ನು ತೆರೆಯುತ್ತದೆ ಎಂದರು.
ನೇರ ನಗದು ವರ್ಗಾವಣೆಯು ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಸಹಾಯ ಮಾಡಿದೆ ಎಂದು ಪ್ರಧಾನಿ ಹೇಳಿದರು. ಇದು ಜನರಿಗೆ ಆಯ್ಕೆಗಳ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು ಇರುವುದರಿಂದ ಪುದುಚೇರಿಗೆ ಶ್ರೀಮಂತ ಮಾನವ ಸಂಪನ್ಮೂಲ ಲಭ್ಯವಾಗಿದೆ ಎಂದು ಅವರು ಹೇಳಿದರು. ಪುದುಚೇರಿಯು ಸಾಕಷ್ಟು ಕೈಗಾರಿಕೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ಸಾಮರ್ಥ್ಯವನ್ನು ಹೊಂದಿದೆ. ಇವುಗಳಿಂದ ಸಾಕಷ್ಟು ಉದ್ಯೋಗ ಮತ್ತು ಅವಕಾಶಗಳು ಸೃಷ್ಟಿಯಾಗುತ್ತವೆ ಎಂದರು. "ಪುದುಚೇರಿಯ ಜನರು ಪ್ರತಿಭಾನ್ವಿತರು. ಈ ನೆಲ ಸುಂದರವಾದುದು. ಪುದುಚೇರಿಯ ಅಭಿವೃದ್ಧಿಗೆ ನನ್ನ ಸರ್ಕಾರದಿಂದ ಎಲ್ಲ ರೀತಿಯ ಬೆಂಬಲದ ಭರವಸೆ ನೀಡಲು ವೈಯಕ್ತಿಕವಾಗಿ ನಾನು ಇಲ್ಲಿಗೆ ಬಂದಿದ್ದೇನೆ." ಎಂದು ಪ್ರಧಾನಿ ತಿಳಿಸಿದರು.












Click it and Unblock the Notifications