PM cares Fund: ಭಾರತ ಸರ್ಕಾರದ ನಿಧಿ ಅಲ್ವಂತೆ, ಹಾಗಾದ್ರೆ ಮತ್ಯಾರದ್ದು.!?
ನವದೆಹಲಿ, ಸೆಪ್ಟೆಂಬರ್ 24: ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಆರಂಭವಾದ ಪಿಎಂ ಕೇರ್ಸ್ ನಿಧಿಯು ಭಾರತ ಸರ್ಕಾರದ ನಿಧಿ ಅಲ್ಲಾ ಎಂದು ಹೇಳುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈಗ ಪೇಚಿಗೆ ಸಿಲುಕಿದ್ದು ಮಾತ್ರವಲ್ಲದೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಕಳೆದ ವರ್ಷ ಮಾರ್ಚ್ 27 ರಂದು ಸ್ಥಾಪನೆ ಮಾಡಲಾದ ಈ ಪಿಎಂ ಕೇರ್ಸ್ ಫಂಡ್ನ ಪ್ರಚಾರವನ್ನು ಕೇಂದ್ರ ಸರ್ಕಾರವೇ ಮಾಡಿರುವಾಗ ಈಗ ಕೇಂದ್ರ ಸರ್ಕಾರವೇ ಇದು ತನ್ನ ಅಧೀನದಲ್ಲಿ ಬರುವ ನಿಧಿ ಅಲ್ಲ, ಆದ್ದರಿಂದ ಲೆಕ್ಕ ನೀಡಲಾಗದು ಎಂದು ಹೇಳಿರುವುದು ಸರ್ಕಾರದ ವಿರುದ್ದ ವಿರೋಧ ಪಕ್ಷಗಳು ಅಸ್ತ್ರ ಪ್ರಹಾರ ಮಾಡಲು ಬತ್ತಳಿಕೆಯನ್ನು ಕೇಂದ್ರ ಸರ್ಕಾರವೇ ನೀಡಿದ್ದಂತಿದೆ.
ಪಿಎಂ ಕೇರ್ಸ್ ಫಂಡ್ ನಿಧಿಯ ಬಗ್ಗೆ ಮಾಹಿತಿ ಕೋರಿ ಕಳೆದ ವರ್ಷದಿಂದ ಹಲವಾರು ಮಂದಿ ಬೇಡಿಕೆ ಮುಂದಿಟ್ಟಿದ್ದಾರೆ. ಇದರಂತೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿಯೂ ಪಿಎಂ ಕೇರ್ಸ್ ಬಗ್ಗೆ ಮಾಹಿತಿ ನೀಡುವಂತೆ ಆರ್ಟಿಐ ಅರ್ಜಿಗಳು ಸಲ್ಲಿಕೆಯಾಗಿದೆ. ಆದರೆ ಸರ್ಕಾರ ಮಾತ್ರ "ಇದು ಸರ್ಕಾರದ ಹಣವಲ್ಲ. ಆದ್ದರಿಂದ ಈ ಪಿಎಂ ಕೇರ್ಸ್ ಫಂಡ್ ಬಗ್ಗೆ ಸರ್ಕಾರ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ," ಎಂದು ಹೇಳಿದೆ.
ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್ ನೆರವು
ಈ ಬಗ್ಗೆ ದೆಹಲಿ ಹೈಕೋರ್ಟ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿ ಕಾರ್ಯಾಲಯದ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀವಾಸ್ತವ, "ಭಾರತದ ಕಾನೂನಿನಡಿಯಲ್ಲಿ ಚ್ಯಾರಿಟೇಬಲ್ ಟ್ರಸ್ಟ್ ಆಗಿರುವ ಪಿಎಂ ಕೇರ್ಸ್ ಫಂಡ್ ಭಾರತ ಸರ್ಕಾರದ ಅಧೀನದಲ್ಲಿ ಬರುವ ಸಂಸ್ಥೆಯಲ್ಲ. ಈ ಫಂಡ್ಗೆ ಬರುವ ಹಣವು ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾಗೆ ಸೇರುವುದಿಲ್ಲ," ಎಂದು ಹೇಳಿಕೊಂಡಿದ್ದಾರೆ.
ಏನಿದು PM cares Fund, ಯಾವಾಗ ಸ್ಥಾಪನೆ?
ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ಕೊರೊನಾ ನಿರ್ವಹಣೆಯನ್ನು ಮುಖ್ಯ ಉದ್ದೇಶವನ್ನಾಗಿಸಿಕೊಂಡು ಸ್ಥಾಪನೆಯಾದ ನಿಧಿ ಪಿಎಂ ಕೇರ್ಸ್ ನಿಧಿ ಆಗಿದೆ. 2020 ರಲ್ಲಿ ಮಾರ್ಚ್ 27 ರಂದು ಈ ಪ್ರಧಾನ ಮಂತ್ರಿ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪರಿಹಾರ ನಿಧಿಯನ್ನು (PM cares Fund) ಕೇಂದ್ರ ಸರ್ಕಾರದಿಂದ ಸ್ಥಾಪನೆ ಮಾಡಲಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆ ಈ ನಿಧಿಯನ್ನು ಭಾರತದಲ್ಲಿ ಸ್ಥಾಪನೆ ಮಾಡಲಾಗಿದೆ. ಕೊರೊನಾ ವೈರಸ್ ಸಂದರ್ಭದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗುವ ನಿಟ್ಟಿನಲ್ಲಿ ಈ ನಿಧಿ ಸ್ಥಾಪನೆ ಮಾಡಲಾಗಿದೆ. ಇದರ ಪ್ರಧಾನ ಕಚೇರಿಯು ಪ್ರಧಾನ ಮಂತ್ರಿ ಕಚೇರಿ ಆಗಿದೆ. ಹಾಗೆಯೇ ಇದರ ಅಧ್ಯಕ್ಷತೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಹಿಸಿಕೊಂಡಿದ್ದಾರೆ. ಈ ನಿಧಿಯ ಸದಸ್ಯ ಸ್ಥಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಇದ್ದಾರೆ ಎಂದು PM cares Fund ಮಾಹಿತಿ ತಿಳಿಸಿದೆ. ಇನ್ನು ಈ ನಿಧಿಗೆ ಕೋಟ್ಯಾಂತರ ಹಣವು ಹರಿದು ಬಂದಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಈ ಹಣದ ಬಳಕೆ ಎಲ್ಲಿ ಆಗಿದೆ, ಎಷ್ಟು ನಿಧಿ ಇದೆ ಎಂಬ ಮಾಹಿತಿಯನ್ನು ಈವರೆಗೂ ನೀಡಿಲ್ಲ.
"ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿ" ಎಂದು ಮನವಿ ಮಾಡಿದ್ದ ಮೋದಿ
ಈ ಪಿಎಂ ಕೇರ್ಸ್ ನಿಧಿ ಹೆಚ್ಚು ಪ್ರಚಲಿತವಾಗಲು ಕಾರಣವೂ ಕೂಡಾ ಇದೆ. ಇದಕ್ಕೆ ದೇಣಿಗೆ ನೀಡಿ ಎಂದು ಹೇಳಿದ್ದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಕಳೆದ ವರ್ಷ ಈ ನಿಧಿ ಆರಂಭವಾದ ಸಂದರ್ಭದಲ್ಲಿ ಜನತೆಯೊಂದಿಗೆ ಕೋವಿಡ್ ವಿಚಾರದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಕೊರೊನಾದ ವಿರುದ್ದ ಹೋರಾಟ ನಡೆಸಲು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿ," ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಸಿನಿಮಾ ಸೆಲೆಬ್ರೆಟಿಗಳು, ಕ್ರೀಡಾಪಟುಗಳು, ಕ್ರಿಕೆಟ್ ಆಟಗಾರರು, ಉದ್ಯಮಿಗಳು, ಸಂಸ್ಥೆಗಳು, ಟಾಟಾ ಸನ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಅದಾನಿ ಗ್ರೂಪ್ನಂತಹ ಕಾಪೋರೇಟ್ ಸಂಸ್ತೆಗಳು ಸಹ ಕೋಟ್ಯಾಂತರ ರೂಪಾಯಿಯನ್ನು ದೇಣಿಗೆಯಾಗಿ ನೀಡಿದೆ. ಮೂರು ದಿನದಲ್ಲೇ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ. ಟಾಟಾ ಗ್ರೂಪ್ 1,500 ಕೋಟಿ ರೂ., ರಿಲಯನ್ಸ್ ಇಂಡಸ್ಟ್ರೀಸ್ 500 ಕೋಟಿ ರೂ., ಒಎನ್ಜಿಸಿ 300 ಕೋಟಿ ರೂ., ಸರ್ಕಾರಿ ಸಂಸ್ಥೆಗಳಾದ ಭಾರತೀಯ ರೈಲ್ವೆ 151 ಕೋಟಿ ರೂ. ಮತ್ತು ಲಾರ್ಸೆನ್ ಮತ್ತು ಟೂಬ್ರೊ 150 ಕೋಟಿ ರೂ. ದೇಣಿಗೆ ನೀಡಿದೆ.
ಕೊರೊನಾ ವಿರುದ್ಧ ಹೋರಾಟಕ್ಕೆ ಬಲ ತುಂಬಲು ಪಿಎಂ ನಿಧಿಗೆ ದಲೈ ಲಾಮಾ ದೇಣಿಗೆ
ಪಿಎಂ ಕೇರ್ಸ್ ಮಾಹಿತಿ ವಿಚಾರದಲ್ಲಿ ಕೇಂದ್ರ ಸರ್ಕಾರ, ವಿಪಕ್ಷಗಳ ನಡುವೆ ವಾಗ್ವಾದ
ಈ ರೀತಿಯಾಗಿ ಭಾರೀ ಪ್ರಮಾಣದಲ್ಲಿ ಈ PM cares Fund ಗೆ ನಿಧಿಯು ಹರಿದು ಬರುತ್ತಿರುವಾಗ ವಿರೋಧ ಪಕ್ಷಗಳಲ್ಲಿ ಈ ನಿಧಿಯ ಪಾರದರ್ಶಕತೆಯ ಬಗ್ಗೆ ಸಹಜವಾಗಿ ಪ್ರಶ್ನೆ ಎದ್ದಿದೆ. ಹಲವಾರು ವಿರೋಧ ಪಕ್ಷದ ನಾಯಕರುಗಳು, ಸಾಮಾಜಿಕ ಹೋರಾಟಗಾರರು, ಆರ್ಟಿಐ ಕಾರ್ಯಕರ್ತರು ಪಿಎಂ ಕೇರ್ಸ್ ಮಾಹಿತಿ ಎಲ್ಲಿದೆ ಎಂದು ಪ್ರಶ್ನೆ ಮಾಡಲು ಆರಂಭ ಮಾಡಿದರು. ಆದರೆ ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದೆ. ಈ ಹಿನ್ನೆಲೆ ಪಿಎಂ ಕೇರ್ಸ್ ನಿಧಿಯ ಮಾಹಿತಿಯನ್ನು ಬಹಿರಂಗಪಡಿಸಲು ಕೋರಿ ಸುಪ್ರೀಂ ಕೋರ್ಟ್, ಹೈಕೋರ್ಟ್ಗಳಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದೆ. ಆರ್ಟಿಐ ಕಾರ್ಯಕರ್ತರು ಮಾಹಿತಿಯನ್ನು ಕೋರಿ ಅರ್ಜಿ ಸಲ್ಲಿಸಿದೆ. ಆದರೆ ಸರ್ಕಾರ ಯಾವುದಕ್ಕೂ ಜಗ್ಗಿಲ್ಲ. ಮಾಹಿತಿ ನೀಡಲಾಗದು ಎಂದಷ್ಟೇ ಹೇಳಿಕೊಂಡಿದೆ. ಈ ನಡುವೆ ದೆಹಲಿ ಹೈಕೋರ್ಟ್ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರ ಸರ್ಕಾರ, "ಪಿಎಂ ಕೇರ್ಸ್ ಭಾರತ ಸರ್ಕಾರದ ನಿಧಿಯಲ್ಲ. ಹಾಗಾಗಿ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ತರಲು ಸಾಧ್ಯವಿಲ್ಲ," ಎಂದು ಹೇಳಿ ಜನರಿಗೆ ಆಶ್ಚರ್ಯವನ್ನು ಉಂಟು ಮಾಡಿದೆ. ಈ ನಡುವೆ ವಿರೋಧ ಪಕ್ಷಗಳು, "ಕೇಂದ್ರ ಸರ್ಕಾರವೇ ಸ್ಥಾಪನೆ ಮಾಡಿದ, ಪ್ರಧಾನಿ ಮೋದಿಯೇ ಪ್ರಚಾರ ಮಾಡಿದ ಈ PM cares Fund ಭಾರತ ಸರ್ಕಾರದ ಅಧೀನದಲ್ಲಿ ಹೇಗೆ ಬರುವುದಿಲ್ಲ," ಎಂದು ಪ್ರಶ್ನೆ ಮಾಡಿದ್ದಾರೆ.
ಪಿಎಂ ಕೇರ್ಸ್ ನಿಧಿಗೆ ಪ್ರಧಾನಿ ಮೋದಿ ನೀಡಿದ ದೇಣಿಗೆ ಎಷ್ಟು?
ಪಿಎಂ ಕೇರ್ಸ್ಗೆ ಪ್ರಧಾನಿ ಮೋದಿ ಕೊಟ್ಟಿದ್ದೆಷ್ಟು?, ಮಾಹಿತಿಯೇ ಇಲ್ಲ
ಈ ಹಿಂದೆ ಕಾನೂನು ವಿದ್ಯಾರ್ಥಿ ಅನಿಕೇತ್ ಗೌರವ್ ಎಂಬುವವರು ಆರ್ಟಿಐ ಅರ್ಜಿಯ ಮೂಲಕ ಪಿಎಂ ಕೇರ್ಸ್ ನಿಧಿಗೆ ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ್ದರು. ನಿಖರವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಿಎಂ ಕೇರ್ಸ್ ನಿಧಿಗೆ ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಎಂದು ಆರ್ಟಿಐ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ ಕಚೇರಿಯು ಮಾಹಿತಿಯನ್ನು ಒದಗಿಸಿದೆ. ಆದರೆ ಪ್ರಧಾನಿಯವರು ನೀಡಿದ ದೇಣಿಗೆಯ ಬಗ್ಗೆ ಯಾವುದೇ ದಾಖಲೆಗಳು ಇಲ್ಲ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಐದು ಲಕ್ಷ ನೀಡಿದ್ದಾರೆ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನಾಲ್ಕು ಲಕ್ಷ ನೀಡಿದ್ದಾರೆ ಎಂದು ಆಯಾ ಕಚೇರಿಗಳು ಹೇಳಿದೆ.
(ಒನ್ ಇಂಡಿಯಾ ಸುದ್ದಿ)