ಸಿಂಗಪುರದಲ್ಲಿ ವಿಶ್ವ ಕನ್ನಡ ಸಮ್ಮೆಳನ ಉದ್ಘಾಟನೆ
7ನೆಯ ವಿಶ್ವಕನ್ನಡ ಸಮ್ಮೇಳನ ಕನ್ನಡಸಂಘ ಸಿಂಗಪುರ ಹಾಗೂ ಹೃದಯವಾಹಿನಿ ಪತ್ರಿಕೆ, ಮಂಗಳೂರು ವತಿಯಿಂದ 27 ಶನಿವಾರ ಮಧ್ಯಾನ್ಹ 2 ಗಂಟೆಗೆ ಸಿಂಗಪುರದ ಸಿಂಗಪುರ ಪಾಲಿಟೆಕ್ನಿಕ್, ಕನ್ವೆಷನ್ ಸೆಂಟರಿನಲ್ಲಿ ಮೊದಲನೆ ದಿನದ ಕಾರ್ಯಕ್ರಮ ಪ್ರಾರಂಭಗೊಂಡಿತು. "ನಮ್ಮದು ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟ್ರ. ಹಲವು ಭಾಷೆಗಳು, ಹಲವು ಸಂಸ್ಕೃತಿಗಳು ಮೇಳೈಸುತ್ತಿವೆ. ಇವುಗಳೆಲ್ಲವನ್ನು ಪ್ರೀತಿಸುವ ಮತ್ತು ಗೌರವಿಸುವ ಔದಾರ್ಯ
ಕನ್ನಡ ಭಾವಗೀತೆಗಳನ್ನು ಮನೆ-ಮನಗಳಲ್ಲಿ ಹರಡಿದ ಶ್ರೇಷ್ಠ ಗಾಯಕ ಪಿ.ಕಾಳಿಂಗರಾವ್ ಜೊತೆಗೂಡಿ ಹಾಡಿದ ಟಿ.ವಿ.ರಾಜು ಅವರಿಂದ ಕುವೆಂಪು ವಿರಚಿತ "ತೃಣಮಪಿ ನಚಲತಿ ತೇನವಿನಾ" ಕವನದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.
ನಂತರ ಹೆಸರಾಂತ ಸಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರಿಂದ ನಮ್ಮಮ್ಮಶಾರದೆ, ಜಗದೋದ್ಧಾರನ, ಉಳ್ಳವರು ಶಿವಾಲಯವ ಮಾಡುವರು, ಜಾನಪದ ಗೀತೆ ಬಹಳ ಸೊಗಸಾಗಿ ಮೂಡಿ ಬಂದಿತು. ಕದ್ರಿ ಅವರು ನುಡಿಸಿದ ಜೈ ಭಾರತ ಜನನಿಯ ತನುಜಾತೆಗೆ ಸಾವಿರ ಸಂಖ್ಯೆಯಲ್ಲಿ ತುಂಬಿದ್ದ ಸಭಿಕರು ಎದ್ದು ನಿಂತು ಗೌರವ ಸಲ್ಲಿಸಿದರು.
ಕನ್ನಡ ಸಂಘ ಸಿಂಗಪುರದ ಅಧ್ಯಕ್ಷರಾದ ಡಾ.ವಿಜಯ್ಕುಮಾರ್ ಅವರು ಆಹ್ವಾನಿತ ಅತಿಥಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವರು ಗೋವಿಂದ ಕಾರಜೋಳ, ಅಶೋಕ್ ಮಾನ್ಯ ಸಚಿವರು ಗೃಹ ಮತ್ತು ಸಾರಿಗೆ ಇಲಾಖೆ, ನಾಗೂರು, ಡಾ.ಬರಗೂರು ರಾಮಚಂದ್ರಪ್ಪ, ಮುಖ್ಯಮಂತ್ರಿ ಚಂದ್ರು ಅವರನ್ನು ಸ್ವಾಗತಿಸಿದರು.
ಉದ್ಘಾಟನ ಭಾಷಣ ಮಾಡಿದ ಸಚಿವ ಗೋವಿಂದ ಕಾರಜೋಳ ಅವರು, "ವಿಶ್ವದಲ್ಲಿ ಬೇರೆ, ಬೇರೆ ದೇಶಗಳಲ್ಲಿ ಕನ್ನಡ ಸಂಸ್ಕೃತಿ ಬೆಳೆಯುತ್ತಿರುವುದನ್ನು ನೀವು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ. ನಾವುಗಳು ಮನಸ್ಸು ಕಟ್ಟುವ ಬಗ್ಗೆ ಹೇಗೆ ಎಂದು ಚರ್ಚೆ, ಸಮಾವೇಶ ನಡೆಯಬೇಕಾಗಿದ" ಎಂದರು.
ಮುಖ್ಯಮಂತ್ರಿ ಚಂದ್ರು ಅವರು, "ವಿಶ್ವ-ಇದೆ-ಕನ್ನಡ ಇದೆ ಅದಕ್ಕೆ ಈ ವಿಶ್ವಕನ್ನಡ ಸಮ್ಮೇಳನ ನಡೀತಾ ಇದೆ. ಭಾಷೆ ಜನಾಂಗ ಉಳಿಸಿ. ಬರವಣಿಗೆಯ ಭಾಷೆ ಸಾಯುತ್ತಿದೆ, ಮಾತು ಬೆಳೆಯುತ್ತಿದೆ ಇದರ ಬಗ್ಗೆ ಯೋಚಿಸಿ. ಕನ್ನಡ ಕಲಿಸಿ, ನಾವು ಸರಕಾರದ ವತಿಯಿಂದ ಸಹಾಯ ಮಾಡುತ್ತೇವೆ, ಭಾಷೆ ಉಳಿಸಿ" ಅಂದರು.
ಸಾಹಿತಿ ಬರಗೂರು ಸಭಿಕರನ್ನುದ್ದೇಶಿಸಿ, "350 ಜನ ಕಲಾವಿದರು ಕರ್ನಾಟಕದಿಂದ ಸಿಂಗಪುರಕ್ಕೆ ಬಂದಿರುವುದು ಅಭಿನಂದನಾರ್ಹ. ವಿದೇಶದಲ್ಲಿ ನಡೆಸುವ ಈ ತರಹದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಮ್ಮ ಸರಕಾರ ಒಂದು ನಿರ್ಧಿಷ್ಟ ನಿಯಮ ಪಾಲಿಸಿ, ಅನುದಾನವನ್ನು ಕೊಡಬೇಕು ಎಂದರು. ಸಿಂಗಪುರದ ಭೂಗೋಳದಲ್ಲಿ ನೀವುಗಳು ಆಂತರಿಕವಾಗಿ ಇನ್ನೊಂದು ಚರಿತ್ರೆಯೊಂದಿಗೆ ನಮ್ಮ ಚರಿತ್ರೆಯನ್ನು ದಕ್ಕಿಸಿಕೊಳ್ಳುವ ನಿಮಗೆ ನಮ್ಮ ನಮಸ್ಕಾರ" ಎಂದರು. ನಿಜವಾದ ಸಂಸ್ಕೃತಿ ಮಾನವೀಯತೆ, ಸಾಮಾನ್ಯ ಜನರಲ್ಲಿ ಚಾರಿತ್ರಿಕ ಪ್ರಜ್ಞೆ ಮೂಡಬೇಕು, ಸಂಸ್ಕೃತಿಗೆ ಬೇಕಾಗಿರುವುದು ಶಬರಿಯ ತಾಯ್ತನ, ಭರತನ ತ್ಯಾಗ ಎಂದು ನುಡಿದರು. ಕಟ್ಟುವ ದೋಣಿಗೆ ಹುಟ್ಟು ಹಾಕುವ ಜನರಿಂದ ಎಚ್ಚರವಾಗಿರಿ ಎಂಬ ಸಂದೇಶಕ್ಕೆ ಸಭಿಕರಿಂದ ಕರತಾಡನ.
ಇದೇ ಸಂದರ್ಭದಲಿ 9ನೇ ಸಂಚಿಕೆ ಸಿಂಗಾರ ಪತ್ರಿಕೆ ಬಿಡುಗಡೆ ನಡೆಯಿತು. ಹಾಗೂ ಪ್ರೊ. ರಾಮಸ್ವಾಮಿ ಅವರಿಂದ ಕಡಲಾಚೆಯ ಕನ್ನಡಿಗರು ಪುಸ್ತಕವೂ ನಡೆಯಿತು. ಕರ್ನಾಟಕದಿಂದ ವಿವಿಧ ಕ್ಷೇತ್ರಗಳಲಿ ಶ್ರಮಿಸಿದ ಪ್ರತಿಭಾನ್ವಿತರಿಗೆ, ಸೇವೆ ಸಲ್ಲಿಸಿದ ಶ್ರೀಸಾಮಾನ್ಯರಿಗೆ ವಿಶ್ವಕನ್ನಡ ಮಾನ್ಯ ಪ್ರಶಸ್ತಿ ನೀಡಲಾಯಿತು. ಪದ್ಮಶ್ರೀ, ಡಾ. ಕದ್ರಿ ಗೋಪಾಲನಾಥ್ ಅವರಿಗೆ ವಿಶ್ವಮಾನ್ಯ ಸುವರ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಹಿತ್ಯ, ಸಂಗೀತ, ನೃತ್ಯ ಸಂಗಮ: ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಪುತ್ತೂರು ನರಸಿಂಹನಾಯಕ್ ಮತ್ತು ವೃಂದದವರ "ದಾಸ ಮಂಜರಿ" ಕಾರ್ಯಕ್ರಮ ಕನಕದಾಸರ ಸುಪ್ರಸಿದ್ದ ಗೀತೆ "ದಾಸನಾಗು ವಿಶೇಷನಾಗು" ಭಕ್ತಿಗೀತೆಯೊಂದಿಗೆ ಪ್ರಾರಂಭವಾಯಿತು. ನಂತರ "ಭಾಗ್ಯದಾ ಲಕ್ಷ್ಮೀ ಬಾರಮ್ಮಾ" ಹಾಡಿನ ಒಂದು ಪಲ್ಲವಿಯನ್ನು ವಿವಿಧ ರಾಗಗಳಲ್ಲಿ ಹಾಡಿ ತಮ್ಮ ಅಮೋಘ ಪ್ರಥಿಭೆಯನ್ನು ತೋರಿಸಿದರು. ಸಮಯಾಭಾವದಿಂದಾಗಿ ಎರಡೇ ಹಾಡುಗಳನ್ನು ಮಾತ್ರ ಹಾಡಲು ಸಾಧ್ಯವಾದದ್ದು ಸ್ವಲ್ಪ ನಿರಾಶೆ ಮೂಡಿಸಿದರೂ, ಈ ಎರಡು ಹಾಡುಗಳಲ್ಲೇ ಸುಶ್ರಾವ್ಯ ಸ್ವರ, ತಾನ, ಆರೋಹಣ, ಅವರೋಹಣಗಳಿಂದ ನಮ್ಮನ್ನೆಲ್ಲಾ ಭಕ್ತಿಸಾಗರದಲ್ಲಿ ತೇಲಿಸಿದರು. ಕ್ಯಾಸೆಟ್ಟುಗಳ ಮೂಲಕ ಮಾತ್ರ ಕೇಳಿದ್ದ ಇವರ ದಾಸ ಗೀತೆಗಳನ್ನು ಪ್ರತ್ಯಕ್ಷವಾಗಿ ನೋಡಿ ಕೇಳುವ ಅವಕಾಶ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯವೆಂದೇ ಹೇಳಬೇಕು.
ಸ್ಥಳೀಯ ಕಲಾವಿದರಿಂದ ನೃತ್ಯ, ಸಮೂಹ ಗಾನ, ಮಕ್ಕಳಿಂದ ಕೃಷ್ಣ ನೃತ್ಯ ರೂಪಕ-ನಿರ್ದೇಶನ ಸಾಧನಾ ರಾಜಾರಾಂ ಅವರಿಂದ ಪ್ರಸ್ತುತವಾಯಿತು. ಕವಿಗೋಷ್ಠಿಯು ರೋಹಿದಾಸ್ ನಾಯಕ್ ಕುಮುಟ ಅವರ ಅಧ್ಯಕತೆಯಲ್ಲಿ ಮತ್ತು ಜಿ.ವಿ.ರೇಣುಕ ಉಪಾಧ್ಯಕ್ಷತೆಯಲ್ಲಿ ಬಹು ಸುಂದರವಾಗಿ ಮೂಡಿಬಂದಿತು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಕವಿಯು ಅಡಗಿದ್ದಾನೆ ಮತ್ತು ವ್ಯಕ್ತಿತ್ವವಾಗಿ ಕವಿಯು ರಹಸ್ಯವ್ಯಕ್ತಿ. ಕಾವ್ಯವೆಂಬುದು ಕಲಾಸುಂದರಿ, ತೇಜಸ್ವಿನಿ ಮತ್ತು ಭಾಷಪ್ರಧಾನವಾದುದೆಂಬುದನ್ನು ರೋಹಿದಾಸ್ ನಾಯಕ್ ಕುಮುಟ ಬಹು ಸುಂದರವಾಗಿ ವಿಶ್ಲೇಷಿಸಿದರು. ಸ್ಥಳೀಯ ಮತ್ತು ಕರ್ನಾಟಕದಿಂದ ಬಂದಂತಹ ಕವಿಗಳು ತಮ್ಮ ಕವನವಾಚನ ಮಾಡಿದರು.
ಸಿಂಗಪುರದಲಿ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆಂದೇ ಸ್ಥಳೀಯ ಪ್ರತಿಭೆಗಳಾದ ಸುರೇಶ್ ಭಟ್ ಹಾಗೂ ವಸಂತ್ ಕುಲಕರ್ಣಿ ವಿರಚಿತ ಕವನ
ಸಾಹಿತ್ಯ
ಸಂಸ್ಕೃತಿಯ
ಹೆಮ್ಮರವು
ಬೆಳೆದು
ಬೇರುಗಳು
ಪಸರಿಸಲಿ
ದೂರ
ದೂರದಲಿ!!
ಈ ಕವನಕ್ಕೆ ಸಿಂಗಪುರದ ಸಂಗೀತ ವಿದುಷಿ ಭಾಗ್ಯಮೂರ್ತಿ ಹಾಗೂ ಶ್ರೀಕಿಶನ್ ಅವರಿಂದ ಸಂಗೀತ ಸಂಯೋಜನೆ.
ಪ್ರಯೋಗರಂಗ ಪ್ರಸ್ತುತ ಹಾಸ್ಯ ನಾಟಕ ನರಸಿಂಹಮೂರ್ತಿ ರಚನೆ ಸನ್ಮಾನ್ಯ ಸುಖ ನಾಟಕ ಹಾಗೂ ಆರ್ಯಭಟ ಪ್ರಶಸ್ತಿ ವಿಜೇತೆ ಕುಮಾರಿ ಕಾವ್ಯ ಬಿ. ಅವರಿಂದ ಹಚ್ಚೇವು ಕನ್ನಡದ ದೀಪ ಸೊಬಗಿನಿಂದ ಮೂಡಿ ಬಂದಿತು.
ಖ್ಯಾತ ಗಾಯಕ ಬದರಿ ಪ್ರಸಾದ್ ಮತ್ತು ಕುಮಾರಿ ಅನುರಾಧಭಟ್ ಅವರಿಂದ ಸಂಗೀತ ರಸಮಂಜರಿ "ನಾವಾಡುವ ನುಡಿಯೆ ಕನ್ನಡ ನುಡಿ, ಆಕಾಶದಿಂದ ಚಂದನದ ಗೊಂಬೆ, ಗಿಲಿ ಗಿಲಿ ಗಿಲಕ್, ಗಗನವು ಎಲ್ಲೋ, ಜೊತೆಯಲಿ ಜೊತೆ ಜೊತೆಯಲಿ, ನಗುವ ಗುಲಾಬಿ ಹೂವ" ಕಡೆಯದಾಗಿ "ಸಿಂಗಪುರವನ್ನು ಮರೆಯಲಾರೆ, ನಾನಿನ್ನ ಮರೆಯಲಾರೆ" ಹಾಡುಗಳು ಸಭಿಕರ ಮನ ರಂಜಿಸಿದವು. ಸೊಗಸಾದ ಭೋಜನ, ಸಾಹಿತ್ಯ, ಸಂಗೀತ, ನೃತ್ಯ, ಸಂದೇಶ ನೀಡಿದ ಮನರಂಜನೆ ಮನಕೆ ತಂಪು ನೀಡಿತು.
* ವಾಣಿ ರಾಮದಾಸ್, ವಸಂತ್ ಕುಲಕರ್ಣಿ, ಸುರೇಶ್, ವೆಂಕಟ್ ಮತ್ತು ಗಿರೀಶ್ ಜಮದಗ್ನಿ (ಸುದ್ದಿವಾಹಿನಿ ತಂಡ)