ಉಡುಪಿ ಯಕ್ಷಗಾನ ಕಲಾವಿದರ ತಿರುಗಾಟ
- ದಟ್ಸ್ಕನ್ನಡ ಟೀಂ, ಒರ್ಲಾಂಡೊ
ಪ್ರೊ. ಉದ್ಯಾವರ ಮಾಧವ ಆಚಾರ್ಯ ಅವರ ನೇತೃತ್ವದಲ್ಲಿ ತಂಡದ ಕಲಾವಿದರಾದ ನೀಲಾವರ ಮಹಾಬಲ ಶೆಟ್ಟಿ, ಕೆ. ಮುರಳಿ, ಕೆ ಜೆ ಗಣೇಶ್, ಕೆ.ಜೆ.ಕೃಷ್ಣ ಹಾಗೂ ಸ್ಥಳೀಯ ಕಲಾವಿದರಾದ ಡಾ.ರಾಜೇಂದ್ರ ಕೆದಿಲಾಯ, ಶ್ರೀಮತಿ ಭ್ರಮರಿ ಶಿವಪ್ರಕಾಶ್, ರಮೇಶ್ ಕೇಕುಡ ‘ರಾವಣ ವಧೆ’ ಎಂಬ ಕಥಾನಕವನ್ನು ಸಂಕ್ಷಿಪ್ತ ರೂಪದಲ್ಲಿ ಆಡಿತೋರಿಸಲಿದ್ದಾರೆ.
ಅಂತರರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ ಡಾ ವಸುಂಧರಾ ದೊರೆಸ್ವಾಮಿ ಅವರು ಯಕ್ಷ ಭರತ ಸಂಗಮ ಎಂಬ ಪರಿಕಲ್ಪನೆಯ ಪ್ರೊ. ಉದ್ಯಾವರ ಮಾಧವ ಆಚಾರ್ಯ ರಚಿಸಿ ನಿರ್ದೇಶಿಸಿದ ‘ಪಾಂಚಾಲಿ’ ಎಂಬ ವಿಶಿಷ್ಟ ಏಕವ್ಯಕ್ತಿ ರೂಪಕವನ್ನು ಇದೇ ಸಂದರ್ಭದಲ್ಲಿ ಪ್ರಸ್ತುತ ಪಡಿಸಲಿದ್ದಾರೆ.
ವಿಶ್ವಕನ್ನಡ ಸಮ್ಮೇಳನದ ನಂತರ ಇದೇ ತಂಡ ಅಮೇರಿಕಾ ಸಂಸ್ಥಾನದ ವಿವಿಧೆಡೆಗಳಲ್ಲಿ ಜಾಂಬವತಿ ಕಲ್ಯಾಣ, ಶೂರ್ಪನಖಾ ವಿವಾಹ, ಪಂಚವಟಿ, ಗದಾಯುದ್ಧ, ಲಂಕಾ ದಹನ, ಶಬರಿ, ಅಗ್ನಿಕನ್ಯೆ ಮುಂತಾದ ಕಥಾನಕಗಳನ್ನು ಪ್ರದರ್ಶಿಸಲಿದೆ. ಅಗಸ್ಟ, ಹ್ಯೂಸ್ಟನ್, ಡೆಟ್ರಾಯಿಟ್, ಸ್ಕಾೃಂಟನ್, ನ್ಯೂ ಜೆರ್ಸಿ, ಸಾನ್ ಹೋಸೆ, ಲಾಸ್ ಎಂಜಲಿಸ್ ಮುಂತಾದೆಡೆಗಳಲ್ಲಿನ ರಂಗಾಸಕ್ತರ ಸಮ್ಮುಖದಲ್ಲಿ ಮೇಲಿನ ಪ್ರದರ್ಶನಗಳು ನಡೆಯಲಿವೆ. ಅಲ್ಲದೆ ಹ್ಯೂಸ್ಟನ್ ಮತ್ತು ಡೆಟ್ರಾಯಿಟ್ಗಳಲ್ಲಿ ತಂಡದ ಸದಸ್ಯರು ಸ್ಥಳೀಯ ಆಸಕ್ತರೊಡನೆ ಭಾರತೀಯ ಸಾಹಿತ್ಯ ಮತ್ತು ರಂಗ ಚಟುವಟಿಕೆಗಳ ಬಗೆಗೆ ವಿಚಾರ ವಿನಿಮಯ ನಡೆಸಲಿದ್ದಾರೆ.
ಅಮೇರಿಕಾದ ಯಕ್ಷಾಭಿಮಾನಿ ಸುರತ್ಕಲ್ ವಾಸುದೇವ ಐತಾಳ್ ಹಾಗೂ ಸಮೂಹದ ಕ್ರಿಯಾಶೀಲ ಸದಸ್ಯೆ ಭ್ರಮರಿ ಶಿವಪ್ರಕಾಶ್ ಈ ಯಕ್ಷ ತಿರುಗಾಟವನ್ನು ಸಂಯೋಜಿಸಿದ್ದಾರೆ.