ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಲ:ವಸಂತ ಕುಲಕರ್ಣಿ ಅವರ ಕವನ

By Staff
|
Google Oneindia Kannada News

*ವಸಂತ ಕುಲಕರ್ಣಿ, ಸಿಂಗಪುರ

ಎದೆಯೊಡ್ಡಿ ನಿಂತಿಹೆನು ಚಕ್ರವಾತದ ಸುಳಿಗೆ
ಬರಲಿ ಎದುರಿಸುವೆ ಕ್ಲೇಶದತಿವೃಷ್ಟಿಯ
ಮಿಂಚು ಮಳೆಯನು ಮೆಟ್ಟಿ ಸಿಡಿಲುಗಳ ನಾ ಕಟ್ಟಿ
ಹಾರಿಸುವೆ ನಾನನ್ನ ಸಾಧನೆಯ ಹಕ್ಕಿಯ

ಕಗ್ಗತ್ತಲಲಿ ಕಪ್ಪು ಕುದುರೆಯನು ತಾ ಏರಿ
ಬರುತಿರುವ ಕಾಲನಿಗೆ ನಾ ಹೆದರಲಾರೆ
ಕಾರ್ಮೋಡಗಳ ದಂಡು ದಂಡೆತ್ತಿ ಬರುತಿರಲಿ
ಚಂಡ ಛಲ ಹಿಡಿದಿಹೆನು ಚೆದುರಲಾರೆ

ದಾರಿಯದು ಕಠಿಣವದು ಕಲ್ಲು ಮುಳ್ಳಿನ ಹಾಸು
ಗುರಿಯ ನಾ ಮರೆಯದೆ ಮುನ್ನುಗ್ಗಲಿರುವೆ
ಲಕ್ಷ್ಯವೆನ್ನಯ ಗುರುವು ಸ್ಥೈರ್ಯವೆನ್ನಯ ಪಥವು
ಭಾವದರಿವಿನ ದೀಪ್ತಿಯೆತ್ತಿ ನಡೆವ

ಲೋಭ ಪ್ರಲೋಭನೆಗೆ ಸಿಗದಿರಲಿ ಎನ್ನ ಮನ
ದ್ರವ್ಯ ಧಾರೆಯನದು ತ್ಯಜಿಸುತಿರಲಿ
ಕ್ಷಣಿಕ ಸೌಖ್ಯವ ಬಯಸಿ ಹೊರೆಯಾಗದೆನ್ನ ತನು
ಸಾಧನದ ಮಾಧ್ಯಮವು ತಾನಾಗುತಿರಲಿ

ಏಳು ಬೀಳಿನ ಪಥವು ಶಿಖರ ಕಂದರ ನಡೆಯು
ಅಸ್ಪಷ್ಟದರಿವಿನಾ ತೊಳಲಾಟವು
ಕೋಲ್ಮಿಂಚ ಬೆಳಕಿನಲಿ ಗಳಿಗೆಯಲಿ ಗೋಚರಿಸೊ
ಕಾಲು ಹಾದಿಯು ನೀಡೊ ಖಚಿತ ಭರವಸೆಯು

ಧೈರ್ಯ ರಥವನು ಏರಿ ಜ್ಞಾನ ಜ್ಯೋತಿಯ ಕಡೆಗೆ
ಧಾವಿಸುವೆ ತವಕದಲಿ ದಕ್ಕಿಸಲು ಸಿದ್ಧಿಯ
ಸತ್ಯಸಂಕಲ್ಪವದು ಯಶೋಧಾರೆಯ ಹುಡುಕಿ
ಮರ್ತ್ಯ ನಾ ಪಡೆವೆ ದಿವ್ಯದಾ ಛವಿಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X