ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಸ

By Staff
|
Google Oneindia Kannada News

ಸಾಹಸ
K.Srinivas Bhat
  • ಕುಂಭಾಸಿ ಶ್ರೀನಿವಾಸ ಭಟ್‌, ಟ್ರಾಯ್‌, ಮಿಶಿಗನ್‌.
    [email protected]
(ಇಪ್ಪತ್ತೈದು ವರುಷಗಳ ಅಮೆರಿಕದ ಜೀವನದ ಸಿಹಿ ಕಹಿಗಳನ್ನು ನೆನಪಿಸಿಕೊಂಡು ಬರೆದ ನನ್ನ ಅನಿಸಿಕೆ)

ಬಲುದೂರ ಬಂದಿಹೆವು, ಬಹುಕಾಲ ಕಳೆದಿಹೆವು,
ಬಯಕೆಗಳ ಸಾಧನೆಯ ಹೊಂಗನಸ ಕಂಡಿಹೆವು
ಬರಿಗೈಲಿ ಬಂದಿಹೆವು, ಮನೆಮಠಗಳನು ತೊರೆದು
ತರಲಿಲ್ಲ ಏನನ್ನು ವಿದ್ಯೆ, ಬುದ್ಧಿಯ ಹೊರತು

ಅರಿವಿಲ್ಲದೀ ಹೊಸತು ಅತಿಭಿನ್ನ ಪರಿಸರದಿ
ಬೆರೆತು ಜತೆ ಒಂದಾಗಿ, ಕರಗಿ ಸೇರುವ ಮನದಿ
ಹಲವು ವಿದ್ಯೆಯ ಕಲಿತು, ವಿವಿಧ ವೃತ್ತಿಯನರಿತು
ಹೊಸನಾಡ ಪರಿಸರಕೆ ಅಳವಡಿಸಿ ಕೊಂಡಿಹೆವು

ನಾವೇನು ಓದಿಲ್ಲ ವೇದ ಶಾಸ್ತ್ರದ ಕಂತೆ
ತಿಳಿದಿಲ್ಲ ನಮಗೇನು ತತ್ತ್ವ ಮಿಥ್ಯದ ಚಿಂತೆ
ನಾವು ಅರಿತಿಹುದಿಷ್ಟೆ, ನಮ್ಮ ಜೀವನಕಷ್ಟೆ
ದುಡಿತ, ಸಂತಸ, ದುಖ, ನೆಮ್ಮದಿಯು ಇಷ್ಟೆ

ಬದುಕು ನಶ್ವರವೆಂಬ ಹೇಡಿತನ ನಮಗಿಲ್ಲ
ಮುಕ್ತಿ ಬೇಕಿಂತೆಂಬ ಅತಿ ಆಸೆ ನಮಗಿಲ್ಲ
ಹುಟ್ಟಿದೆವು, ಬೆಳೆದಿಹೆವು, ಒಟ್ಟಾಗಿ ಬದುಕಿದೆವು
ಕಷ್ಟಸುಖ, ನೋವುನಲಿವುಗಳ ಸಿಹಿಬೇವು

ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಮರೆಯಾಗಿ
ನಮ್ಮ ಭಾಷೆಯು, ಧರ್ಮ ನಂಬಿಕೆಯು ಬದಲಾಗಿ
ಎಳೆ ಪೀಳಿಗೆಯ, ನವ್ಯ ಚಿಂತನೆಯ ಫಲವಾಗಿ
ಹಳೆ ಹೊಸತ ಬೆರೆಸಿ ವಿಶ್ವ ಪ್ರಜೆಗಳೇ ನಾವಾಗಿ

ಬರುವ ಮೊದಲಿನ ನಿರೀಕ್ಷೆಗಳೇನೊ ಬೇರೆ
ಬಂದಮೇಲಾಗಿರುವ ಅನುಭವವೆ ಬೇರೆ
ಇದಕೆ ಬೇಸರವಿಲ್ಲ, ನಿರಾಸೆ ಮೊದಲೇ ಇಲ್ಲ
ಬದುಕೆ ಸಾಹಸ ಎಂಬ ತತ್ವ ನಮದೆಲ್ಲ


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X