ವಿದ್ಯಾರಣ್ಯ ಕನ್ನಡ ಕೂಟದಲ್ಲಿ 'ಸುಗ್ಗಿಯ ಸಂಭ್ರಮ'
ಅಮೆರಿಕದ ಚಿಕಾಗೋ ವಲಯದ ಕನ್ನಡ ಸಂಘ, "ವಿದ್ಯಾರಣ್ಯ ಕನ್ನಡ ಕೂಟ"ದವರು ಇದೇ ಫೆಬ್ರವರಿ 10 ಭಾನುವಾರದಂದು ಸಂಕ್ರಾಂತಿ ಹಬ್ಬವನ್ನು "ಸುಗ್ಗಿಯ ಸಂಭ್ರಮ"ವನ್ನಾಗಿ ಆಚರಿಸಿದರು. ಲೆಮೊಂಟಿನ ರಾಮ ದೇವಾಲಯದಲ್ಲಿ ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆಯಿತು. ಕೊರೆಯುವ ಚಳಿ, ಬಹಳಷ್ಟು ಹಿಮಪಾತವಾಗಿದ್ದರೂ ಅಧಿಕ ಸಂಖ್ಯೆಯಲ್ಲಿ ಕೂಟದ ಕನ್ನಡಿಗರು ನೆರೆದಿದ್ದರು.
ಪೂಜೆ, ಪ್ರಸಾದ ವಿನಿಯೋಗದ ನಂತರ ಗಣ್ಯ ಅತಿಥಿಗಳು, ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಗಾಟಿಸಿದರು. ದೇವತಾ ಪ್ರಾರ್ಥನೆಯ ನಂತರ, ಅಮೆರಿಕ ಹಾಗೂ ಭಾರತದ ರಾಷ್ಟೀಯ ಗೀತೆಗಳನ್ನು ಸಿರಿಗನ್ನಡ ಶಾಲೆಯ ಮಕ್ಕಳು ಹಾಡಿದರು. ನಾಡಗೀತೆ ಗಾಯನದ ನಂತರ ವಿದ್ಯಾರಣ್ಯ ಕನ್ನಡ ಕೂಟದ ಈ ವರ್ಷದ ಅಧ್ಯಕ್ಷರಾದ ಶ್ರೀಶ ಜಯಸೀತಾರಾಮ್ ಅವರು ಸ್ವಾಗತ ಭಾಷಣ ಮಾಡಿದರು.

ದಿನದ ವಿಶೇಷ ಮನರಂಜನಾ ಕಾರ್ಯಕ್ರಮ "ನಿರೀಕ್ಷಾ", ಸೈಂಟ್ ಲೂಯಿಸ್ ನಿಂದ ಅತಿಥಿ ಕಲಾವಿದರಾಗಿ ಬಂದಿದ್ದ 'ಸೂರ್ಯ ಕಲಾ ವೃಂದ' ದವರಿಂದ. 'ನಾಟ್ಯ ವಿದ್ವಾನ್' ಪ್ರಸನ್ನ ಕಸ್ತೂರಿ ಮತ್ತು 'ಅಕ್ಕ ಐಡಲ್' ಸೀಮಾ ಕಸ್ತೂರಿ ಅವರ ನೇತೃತ್ವದ ತಂಡ, ನೂತನ ಭಾವಗೀತೆಗಳ ಗಾಯನ ಮತ್ತು ನರ್ತನವನ್ನು ಭರತನಾಟ್ಯ ಹಾಗೂ ಕಥಕ್ ನೃತ್ಯ ಶೈಲಿಗಳಲ್ಲಿ ವಿನೂತನ ರೀತಿಯಲ್ಲಿ ಪ್ರಸ್ತುತಪಡಿಸಿ ಸದಸ್ಯರನ್ನು ರಂಜಿಸಿದರು.
ಇದಲ್ಲದೆ ಕೂಟದ ಸದಸ್ಯರ ಹಿರಿಯರ ನಗೆನುಡಿ, ಕಿರಿಯರ ಸವಿನುಡಿ, ಕಿರಿಯರ ಛದ್ಮವೇಷ ಕಾರ್ಯಕ್ರಮಗಳು ಚೆನ್ನಾಗಿ ಮೂಡಿ ಬಂದವು. 'ಬಂತು ಬಂತು ಸುಗ್ಗಿ' ವೃಂದಗಾನ, 'ಸುಗ್ಗಿ ಕಾಲ ಹಿಗ್ಗಿ ಬಂದಿತು' ಸಮೂಹ ನೃತ್ಯ, ಲೈವ್ ಆರ್ಕೇಸ್ಟ್ರಾದೊಂದಿಗೆ ಹಾಡು, 'ಮಲ್ಲಾರಿ' ನಾಟ್ಯ ಸಭಿಕರ ಮನ ಗೆದ್ದವು.

ಇತ್ತೀಚೆಗಷ್ಟೇ ನಿಧನರಾದ ಖ್ಯಾತ ಕವಿ ಜಿ.ಎಸ್.ಶಿವರುದ್ರಪ್ಪನವರ ನೆನಪಿನಲ್ಲಿ 'ಕಾವ್ಯ ನಮನ' ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಕ್ರಾಂತಿ ಅಂಗವಾಗಿ ಮಕ್ಕಳಿಗೆ ಗಾಳಿಪಟದ ಅಲಂಕಾರ ಸ್ಪರ್ಧೆಯನ್ನೂ ಕೂಡ ಏರ್ಪಡಿಸಲಾಗಿತ್ತು. ಎಳ್ಳು-ಬೆಲ್ಲ, ಕೊಸುಂಬರಿ, ಸಿಹಿ ಪೊಂಗಲ್, ಖಾರ ಪೊಂಗಲ್, ಕೂಡಿದ ಸಂಕ್ರಾಂತಿ ಹಬ್ಬದ ವಿಶೇಷ ಊಟದೊಂದಿಗೆ ಕಾರ್ಯಕ್ರಮದ ಮುಕ್ತಾಯವಾಯಿತು.











Click it and Unblock the Notifications