ಹೆಮ್ಮೆಯ ವೀರ ಪುತ್ರರಿಗೆ ಕಟ್ಟೆ ಬಾಯ್ಸ್ ಅಳಿಲು ಸೇವೆ
ಕೋಟಿ ಕೋಟಿ ಜನರ ಹಿತಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು, ರುದ್ರಭೀಕರ ಸಿಯಾಚಿನ್ ಹಿಮಪ್ರದೇಶದಲ್ಲಿ ಹಗಲಿರುಳೆನ್ನದೆ ತಾಯ್ನಾಡನ್ನು ಕಾಯುತ್ತಿದ್ದ ಕನ್ನಡ ನಾಡಿನ ಹೆಮ್ಮಯ ವೀರಪುತ್ರ, ಯೋಧ, ಸಮರಸಿಂಹಗಳಾದ ಧಾರವಾಡ ಜಿಲ್ಲೆಯ ಹನುಮಂತಪ್ಪ ಕೊಪ್ಪದ, ಹಾಸನ ಜಿಲ್ಲೆಯ ನಾಗೇಶ್ ಮತ್ತು ಎಚ್ ಡಿ ಕೋಟೆಯ ಮಹೇಶ್ ಹಿಮಪಾತದಲ್ಲಿ ವೀರಮರಣವನ್ನಪ್ಪಿ ನಮ್ಮನ್ನಗಲಿರುವುದು ಅಕ್ಷರಗಳಲ್ಲಿ ಹೇಳಲಾಗದ ನೋವು ಮತ್ತು ನಮ್ಮ ದುರ್ದೈವ, ನಿಜಕ್ಕೂ ಭರಿಸಲಾರದ ನಷ್ಟ.
ಸ್ವಾರ್ಥವೇ ತುಂಬಿರುವ ಸಮಾಜದಲ್ಲಿ, ನಿಸ್ವಾರ್ಥ ಸೇವೆಯಿಂದ ತಮ್ಮ ಮಡದಿ, ಪುಟ್ಟ ಪುಟ್ಟ ಮಕ್ಕಳನ್ನು ಬಿಟ್ಟು ದೂರದ ಗಡಿಯಲ್ಲಿ ಪ್ರತಿದಿನ ಶತ್ರುಗಳೊಂದಿಗೆ ಹೋರಾಡುತ್ತ, ಸಾವಿನೊಂದಿಗೆ ಸೆಣಸುತ್ತ ನಮ್ಮನ್ನು ಕಾಯುವ ಅವರ ದೇಶ ಭಕ್ತಿಗೆ ಮತ್ತೇನೂ ಸರಿಸಮವಿಲ್ಲ. [ಚಿತ್ರಗಳು : ತವರಿನಲ್ಲಿ ವೀರಯೋಧನಿಗೆ ಅಂತಿಮ ನಮನ]

ನಮಗೋಸ್ಕರ ತಮ್ಮ ಜೀವ ತೆತ್ತ ಈ ಯೋಧರಿಗೆ ನಮ್ಮ ಜನ್ಮದಲ್ಲಿಯೇ ಋಣ ತೀರುಸುವುದು ಅಸಾಧ್ಯದ ಮಾತೆಂದು ತಿಳಿಸಿದ ನ್ಯೂ ಜೆರ್ಸಿಯ ಕಟ್ಟೆ ಹುಡುಗರು, ಕೇವಲ ಅಳಿಲು ಸೇವೆಯಾಗಿ ಅವರ ಕಿರುಕಾಣಿಕೆಯಾಗಿ ರು 1 ಲಕ್ಷ ರು.ಯನ್ನು ವಿನಮ್ರತೆಯಿಂದ ಯೋಧರ ಕುಟುಂಬಕ್ಕೆ ತಲುಪಿಸಿದರು. ಯೋಧರ ಅಗಲಿಕೆ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಕೊಡಲೆಂದು ದೇವರಲ್ಲಿ ಪ್ರಾರ್ಥಿಸಿದರು.
ಕಟ್ಟೆ ಬಾಯ್ಸ್
ನ್ಯೂ ಜೆರ್ಸಿ, ಡೆಟಾನ್ ಸಮ್ಮರ್ ಫೀಲ್ಡ್ ನಲ್ಲಿ ಪ್ರತಿ ಶನಿವಾರ ಬೆಳಿಗ್ಗೆ ಸೇರಿ ಕ್ರಿಕೆಟ್, ವಾಲಿಬಾಲ್ ಆಟವಾಡಿ, ಕಟ್ಟೆ ಮೇಲೆ ಕೂತು ಮನಸಾರೆ ಹರಟೆ ಹೊಡೆಯುವ, ಕರ್ನಾಟಕದೊಂದಿಗೆ ನಿರಂತರ ಸಂಪರ್ಕ ಹೊಂದಿರುವ, ಕನ್ನಡ ಆಗು ಹೋಗುಗಳಿಗೆ ಸ್ಪಂದಿಸುವ, ಅಪಾರ ಕನ್ನಡ ಅಭಿಮಾನದ, ಸಮಾನ ಮನಸ್ಕರ, ಅಚ್ಚ ಕನ್ನಡಿಗರ ಯುವ ಗುಂಪು.
ಕಟ್ಟೆ ಬಾಯ್ಸ್ ಮೊದಲಿನಿಂದಲೂ ಎಲೆ ಮರೆಯ ಕಾಯಿಯಂತೆ ತನ್ನ ಕೈಲಾದಷ್ಟು ಸಮಾಜಸೇವೆ ಮಾಡುತ್ತಾ ಬಂದಿದೆ. ಸೂರು ಇಲ್ಲದವರಿಗೆ (Homeless), ಆರ್ಥಿಕವಾಗಿ, ಮಾನಸಿಕವಾಗಿ ನೊಂದವರಿಗೆ, ನೇಪಾಳ ಭೂಕಂಪ ಸಂತ್ರಸ್ತರಿಗೆ, ಇದಕ್ಕೆ ಸೇರ್ಪಡೆಯಾಗಿ ಇತ್ತೀಚಿಗೆ ನಮ್ಮನ್ನಗಲಿದ ಯೋಧರ ಕುಟುಂಬಕ್ಕೆ ತನ್ನ ಸಹಾಯ ಹಸ್ತ ಚಾಚಿದೆ. [ಭಾರತ ಮಾತೆಯ ಮಡಿಲು ಸೇರಿದ ಯೋಧ ಮಹೇಶ್]












Click it and Unblock the Notifications