ಡಾ.ಪಂಡಿತಾರಾಧ್ಯ ಸ್ವಾಮಿಗೆ 'ಧ್ವನಿ ಶ್ರೀರಂಗ' ಪ್ರಶಸ್ತಿ

ಖ್ಯಾತ ಕನ್ನಡ ನಾಟಕಗಾರ ಶ್ರೀರಂಗ(ಆದ್ಯ ರಂಗಾಚಾರ್ಯ)ರ ನೆನಪಿನಲ್ಲಿ ರಂಗಕರ್ಮಿಗಳಿಗೆ 'ಧ್ವನಿ ಶ್ರೀರಂಗ' ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ರೂ. 25,000/- ನಗದು, ಸ್ಮರಣಿಕೆ ಹಾಗೂ ದುಬೈಯ ಪ್ರಯಾಣ ಹಾಗೂ ವಸತಿಯ ವೆಚ್ಚವನ್ನು ಒಳಗೊಂಡಿರುವುದು.
ಸಾಣೇಹಳ್ಳಿಯಂಥ ಕುಗ್ರಾಮ ನಾಡಿನ ಎಲ್ಲ ಬುದ್ಧಿವಂತರ ಗಮನ ಸೆಳೆಯಲು ಶ್ರೀಗಳ ರಂಗ ಚಟುವಟಿಕೆಗಳೇ ಕಾರಣ. ಸಾಣೇಹಳ್ಳಿಯಲ್ಲಿ "ಶ್ರೀ ಶಿವಕುಮಾರ ಕಲಾ ಸಂಘ", "ಶಿವ ಸಂಚಾರ" ರಂಗತಿರುಗಾಟದ ತಂಡವನ್ನು ಕಟ್ಟಿ ತಮ್ಮನ್ನು ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಪಂಡಿತಾರಾಧ್ಯ ಅವರು. ಸಾಣೇಹಳ್ಳಿಯಲ್ಲಿ ಇರುವ ಗ್ರೀಕ್ ಮಾದರಿಯ ಸುಮಾರು ನಾಲ್ಕು ಸಾವಿರ ಜನರು ಕೂರುವ ರಂಗಮಂದಿರ ಇವರ ಕನಸಿನ ಕೂಸು.
ಮಾರ್ಚ್ 22 ಶುಕ್ರವಾರ ಸಂಜೆ 5.30ಕ್ಕೆ ಎಮಿರೇಟ್ಸ್ ಥಿಯೇಟರ್ , ದುಬೈಯಲ್ಲಿ ಧ್ವನಿ ಪ್ರತಿಷ್ಠಾನದ 28ನೇ ವಾರ್ಷಿಕೋತ್ಸವ 'ಧ್ವನಿ ರಂಗ ಸಿರಿ-2013'ರಲ್ಲಿ ಪ್ರಶಸ್ತಿ ಪ್ರದಾನ ನೆರವೇರಿಸಲಾಗುವುದು. ಸಮಾರಂಭದ ಅಂಗವಾಗಿ ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡರ ಅಂತಾರಾಷ್ಟ್ರೀಯ ಖ್ಯಾತಿಯ 'ಬಲಿ' ಕನ್ನಡ ನಾಟಕವನ್ನು ಪ್ರದರ್ಶಿಸಲಾಗುವುದು. ನಾಟಕಕ್ಕೆ ಪ್ರವೇಶ ಉಚಿತವಾಗಿದ್ದು ಸಮಸ್ತ ಕನ್ನಡಿಗರಿಗೆ ಆಡಳಿತ ಮಂಡಳಿಯಿಂದ ಸ್ವಾಗತ ಕೋರಲಾಗಿದೆ.











Click it and Unblock the Notifications