ಹಾಲಿವುಡ್ ಬೆಟ್ಟದ ಕೆಳಗೆ ಕನ್ನಡ ಕಲರವ

ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಿದ್ದರು. ಈ ಬಾರಿಯ ವಿಶೇಷವೆಂದರೆ ಪೂರ್ಣ ಕಾರ್ಯಕ್ರಮ ಮಕ್ಕಳಿಂದ ಪೂರ್ಣ ಕನ್ನಡದಲ್ಲಿ ನಡೆದಿದ್ದು ಹಾಗೂ 125ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು. ಅಲ್ಲದೇ ಕಾರ್ಯಕ್ರಮ “ಕರ್ನಾಟಕ ಚಾರಿತ್ರಿಕ, ಸಾಂಸ್ಕೃತಿಕ ಹಾಗೂ ಸ್ವಾಭಾವಿಕ ಮೈಲಿಗಲ್ಲು" ಎಂಬ ವಿಷಯದ ಆಧಾರದ ಮೇಲೆ ನಡೆಯಿತು.
ಮಕ್ಕಳು ತಲಕಾಡು, ಮೈಸೂರು, ಮಲೆನಾಡು, ಕೊಡಗು, ಚಿತ್ರದುರ್ಗ, ಹಾಸನ, ಕರಾವಳಿ ಪ್ರಾಂತಗಳ ಬಗ್ಗೆ ಕಾರ್ಯಕ್ರಮ ನಡೆಸಿಕೊಟ್ಟರಲ್ಲದೇ, ಜಾನಪದ ಹಾಡುಗಳಿಂದ ಜಾನಪದ ಲೋಕಕ್ಕೆ ಕರೆದುಕೊಂಡು ಹೋಗಿದ್ದರು. ಹೊಯ್ಸಳ ಸಾಮ್ರಾಜ್ಯದ ಪೂರ್ಣ ಇತಿಹಾಸವನ್ನೇ ಮಕ್ಕಳಿಂದ ಮಾಡಿಸಿ ಸೈ ಎನಿಸಿಕೊಂಡವರು ಶ್ರೀಧರ್ ರಾಜಣ್ಣನವರು. ವಾಣಿ ಶಿರೂರ್ ಅವರು ನೃತ್ಯ ಸಂಯೋಜಿಸಿ ಮಕ್ಕಳಿಂದ ನೃತ್ಯ ಮಾಡಿಸಿದ ಕರಾವಳಿ ಪ್ರಾಂತ್ಯದ ಕಾರ್ಯಕ್ರಮ ಜನರ ಮೆಚ್ಚುಗೆಗೆ ಪಾತ್ರವಾದರು. ತಲಕಾಡಿನ ಕಥೆಯನ್ನು ನಾಟಕದ ಮೂಲಕ ಹೇಳುವುದರಲ್ಲಿ ಯಶಸ್ವಿ ಆದವರು ಅನು ಮೇಲುಕೋಟೆ ಅವರು. ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನನ್ನು ರಂಗದ ಮೇಲೆ ತಂದವರು ವ್ಯಾಲಿ ಮಕ್ಕಳು.
ರಾಜ್ಯೋತ್ಸವದ ಈ ಸಂದರ್ಭದಲ್ಲಿ ಮಕ್ಕಳಿಗೋಸ್ಕರ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪ್ರಬಂಧ, ಕಲೆ ಹಾಗೂ ಕವಿತಾ ಸ್ಪರ್ಧೆಗಳಲ್ಲಿ ಮಕ್ಕಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಹಲವಾರು ಕಲಾಕೃತಿಗಳು ಸದಸ್ಯರ ಮೆಚ್ಚುಗೆ ಪಡೆಯಿತು. ವಲ್ಲೀಶ ಶಾಸ್ತ್ರಿ ಹಾಗೂ ಪ್ರತಿಭಾ ಲಕ್ಷ್ಮಣ್ ಕಾರ್ಯಕ್ರಮದ ಋವಾರಿ ವಹಿಸಿ ನಡೆಸಿದ ಯಶಸ್ವಿ ಕಾರ್ಯಕ್ರಮದ ನಿರೂಪಣ ಕಾರ್ಯ ಮಕ್ಕಳಿಂದ ಕನ್ನಡದಲ್ಲೇ ನಡೆಯಿತು.












Click it and Unblock the Notifications