ಆ ಬೆಟ್ಟ ಈ ಬೆಟ್ಟ ಎನ್ನುವ ಬದಲು ಕರಿಘಟ್ಟ ಹತ್ತಿ

ಇಷ್ಟವಗುತ್ತೆ ಈ ಜಾಗ ನಿನಗೆ ಎನ್ನುತ್ತಾ ಶ್ರೀರಂಗಪಟ್ಟಣದ ಆಚೆ ಇದ್ದಕ್ಕಿದ್ದಂತೆ ಕಾರು ಕರಿಘಟ್ಟ ಕ್ರಾಸಿನತ್ತ ತಿರುಗಿಸಿದ ನನ್ನಣ್ಣ. ವಾಹ್, ತುಂಬಾ ಆಸೆ ಇತ್ತು ನಂಗೆ ಇದರ ಬಗ್ಗೆ ಕೇಳಿದ್ದೆ. ಇವತ್ತು ನೋಡಿದ ಹಾಗಾಯಿತು ಎನ್ನುತ್ತಾ ಬೆಟ್ಟ ಕಪ್ಪಗೂ ಇಲ್ಲ, ಆನೆ ಗುಡ್ಡವೂ ಅಲ್ಲ, ಮತ್ಯಾಕೆ ಕರಿಘಟ್ಟ ಅಂತಾರೆ ಎಂದು ಯೋಚಿಸುತ್ತಾ ಸುತ್ತಲೂ ಕಣ್ಣು ಹಾಯಿಸಿದೆ.
ಹಾದಿ ಬದಿಯಲಿ ಬಾಳೆ ತೋಟ, ಪುಟ್ಟ ಪುಟ್ಟ ಮನೆಗಳು, ಹಸು-ಕರುಗಳು, ಕೊಟ್ಟಿಗೆ, ಕೆಳಗೆ ಚಿಕ್ಕದಾಗಿ ಹರಿಯುವ ಲೋಕಪಾವನಿ ನದಿ, ಎದುರಲಿ ಕಂಡೆ ಸಣ್ಣಗುಡ್ಡಕ್ಕೆ ನೀಟಾದ ಮೆಟ್ಟಲುಗಳು, ಪಕ್ಕದಲಿ ಕಿರಿದಾದ ಟಾರು ರಸ್ತೆ, ಅಣತಿ ದೂರ ಕಿರಿದಾದ ರಸ್ತೆಯಲಿ ಕಾರು ಬೆಟ್ಟದ ಮೇಲೆ ತೆರಳಿದಂತೆ ಹಿಂದೆ ಕಣ್ಣಾಡಿಸಿದಾಗ ಹಸಿರೇ ಹಸಿರು ಕಣ್ಣು ತುಂಬಿದವು. ಹಾದಿ ಉದ್ದಕ್ಕೂ ನೆಲ್ಲಿ ಗಿಡ, ಹುಣಿಸೆ ಮರ.
ಕುರುಚಲು ಗಿಡಕ್ಕೆ ಬಾಯಿ ಹಾಕಿದ ಮೇಕೆ ಮರಿಗಳು, ಎದುರಿಗೆ ಕಂಡ ಕುರುಬನೋರ್ವ ದೇವಸ್ಥಾನ ತೆಗೆದೈತೆ, ಇಲ್ಲೇ ಕುಂತಿವ್ನಿ, ದರ್ಸನ ಮಾಡಿ ಪ್ರಸಾದ ಕೊಟ್ಟು ಹೋಗಿ ಎಂದು ಕೂಗಿದ. ನಗರದಲಿ ಪರಿಚಿತರೂ ಅಪರಿಚಿತರು- ಭಾರತದ ಸಣ್ಣ ಸಣ್ಣ ಊರು, ಹಳ್ಳಿಗಳಲ್ಲಿ ಅಪರಿಚಿತರೂ ಪರಿಚಿತರು, ಹೌದು ತಾನೇ.
ಕಾರು ನಿಲ್ಲಿಸಿದಂತೆ ಎದುರಿಗೆ ಕಂಡೆ ಬೆಟ್ಟದ ತುದಿಯಲಿ ದೇಗುಲ. ಹೂ ಬೇಕಾ, ಹಣ್ಣು ತಗೋಳ್ಳಿ ಅವ್ವಾ, ಇಲ್ಲಿ ಚಪ್ಪಲಿ ಬಿಡಿ ಎಂಬ ಸದ್ದು-ಗದ್ದಲವಿಲ್ಲದೆ ಮೌನದಲಿ ನಿಂದು ಕೈಮುಗಿದು ಒಳಗೆ ಬಾ ಎಂದಂತೆನಿಸಿತು. ಅವಿಗಳಿಗೆ, ಪ್ರಕೃತಿ ಪ್ರಿಯರಿಗೆ ಸುಂದರ ತಾಣ. ಸುತ್ತಲ್ಲೊ ಕಣ್ಣಾಡಿಸಿದಾಗ ನಾ ಕಂಡ ದೃಶ್ಯ ಮನೋಹರವಾಗಿತ್ತು. ಹಸಿರು ಗದ್ದೆಗಳು, ಮರಗಳು ಮೈದುಂಬಿ ದೂರದಲಿ ಹರಿಯುವ ಕಾವೇರಿ, ಅಣತಿ ದೂರದಲಿ ಕಂಡ ನಿಮಿಷಾಂಬ ದೇಗುಲದ ಗೋಪುರ, ಕರಿಘಟ್ಟದಿಂದಲೇ ಅಲ್ಲಿಗೆ ತಲುಪಲು ಕಂಡ ಕಿರಿದಾದ ರಸ್ತೆ, ಸೇತುವೆ. ಕ್ರಾಪ್ ಕಮ್ ಜುಟ್ಟು ಬಿಟ್ಟಿದ್ದ ಅರ್ಚಕರು ನಮ್ಮನ್ನು ಕಂಡೊಡನೆ ಬನ್ನಿ ಎನ್ನುತ್ತಾ ಒಳನಡೆದರು.
ಶ್ರೀನಿವಾಸನ ಸೌಂದರ್ಯದ ಬೆರಗು: ಯಾವುದೊಂದೇ ಆಡಂಬರವೂ ಇಲ್ಲದ ದೇಗುಲ. ಗರ್ಭಗುಡಿಯಲಿ ನಿಂದ ಆರು ಅಡಿಯ ಶ್ರೀನಿವಾಸನ ಸೌಂದರ್ಯಕ್ಕೆ ಮಾರುಹೋದೆ. ಮೈಮೇಲೆ ಏನೊಂದೂ ಆಭರಣವಿರದ, ಶ್ವೇತ ಮಗುಟ, ಸೇವಂತಿ ಮಾಲೆ ತೊಟ್ಟ ಸ್ನಿಗ್ದ ಸುಂದರ ಕರಿಗಿರಿವಾಸ. ನಿರಾಭರಣನ ಚೆಲುವ. ವೈಭವೋಪೇರಿತ ತಿರುಪತಿ ತಿಮ್ಮಪ್ಪನಿಗೂ ಈ ಕರಿಗಿರಿಯ ನಿರಾಭರಣನಿಗೂ ಅಜ-ಗಜ ವೆತ್ಯಾಸ ಎಂದುಕೊಂಡಂತೆಯೇ ಅರ್ಚಕರು ಈ ದೇವರು 12ನೆಯ ಶತಮಾನದ್ದು, ಈ ವೆಂಕಟರಮಣನಿಗೆ "ಬೈರಾಗಿ ವೆಂಕಟರಮಣ" ಎನ್ನುತ್ತಾರೆ ಎಂದರು.
ಪಕ್ಕದಲ್ಲಿ ಪದ್ಮಾವತಿ ಇದ್ದೂ, ಸಾತ್ವಿಕತೆಯೇ ಮೂರ್ತಿವೆತ್ತಿದ್ದಾನೆ ಈ ಶ್ರೀನಿವಾಸ. ಆ ಸಾತ್ವಿಕತೆ ಕಂಡೇ ಇವನಿಗೆ ಬೈರಾಗಿ ಎಂದು ಹೆಸರು ಬಂದಿತೇನೋ. ಅಕ್ಕಪಕ್ಕದ ಮಂಟಪಗಳಲ್ಲಿ ಭೋಗಾ ಮತ್ತು ಯೋಗಾ ಶ್ರೀನಿವಾಸ. ಮಗದೊಂದೆಡೆ ಪದ್ಮಾವತಿ. ದೇಗುಲದ ಹಿಂದೆ ವಿಷ್ಣುಪಾದವಿದೆ ಹಾಗೂ ಪ್ರಾಕಾರದಲಿ ಮದುವೆ ಮಂಟಪ ಇದೆ.
ಕ್ಷೇತ್ರ ಪುರಾಣ: ಬೆಟ್ಟಕ್ಕೆ 450 ಮೆಟ್ಟಲು ಇದೆ, ಇಲ್ಲಿ ದರ್ಬೆ ಹುಲ್ಲು ಸಿಗುತ್ತೆ ಬೇಕಾದ್ರೆ ಕೊಂಡು ಹೋಗಿ ಎಂದರು ಅರ್ಚಕರು. ಫೆಬ್ರವರಿಯಲಿ ತೇರು ನಡೆಯುತ್ತೆ ನಿಮಗೆ ದಾನ ಕೊಡಬೇಕು ಎನಿಸಿದರೆ ಕೊಡಿ ಎನ್ನುತ್ತಾ ಕ್ಷೇತ್ರ ಪುರಾಣವನ್ನು ಹೇಳಿದರು. ಶ್ರೀರಂಗಪಟ್ಟಣ ಯುದ್ದದಲ್ಲಿ ಬ್ರಿಟಿಷರು ಇಲ್ಲಿ ಸಿಡಿ ಗುಂಡುಗಳನ್ನು ಇಟ್ಟಿದ್ದರಂತೆ. ದೇಗುಲದ ಪುರಾಣ ಎಂದುಲಿದ ನನಗೆ ವರಾಹ ಅವತಾರದಲ್ಲಿ ವಿಷ್ಣು ಇಲ್ಲಿಗೆ ಬಂದು ಮೈ ಆಡಿಸಿದನಂತೆ, ಆ ಕೂದಲು ಅದಕ್ಕೆ ಮೊನಚಾಗಿ ದರ್ಬೆ ಹುಲ್ಲು ಹಾಗೊ ಬೆಟ್ಟಕ್ಕೆ ಕರಿಘಟ್ಟ ಎಂದು ಹೆಸರು ಬಂದಿತು ಎನ್ನುತ್ತಾರೆ ಎಂದರು. ಅಂತೂ-ಇಂತೂ ಬಂತು ಪುರಾಣ. ಇಷ್ಟರಲ್ಲಿ ಶಂಖವನೂದೂತ್ತ ದಾಸಯ್ಯನೋರ್ವ ಬಂದ.
ಕೆಳಗೆ ಇಳಿಯುತ್ತಿದ್ದಂತೆಯೇ ಕುರಿ-ಕಾಯುವವ ಓಡಿ ಬಂದ-ನಾವೇ ತಂದಿದ್ದ ಬೆಣ್ಣೆ ಬಿಸ್ಕತ್ತು, ಮದ್ದೂರು ವಡೆ ಜೊತೆಗೆ ಕೈಯಲ್ಲಿ 50 ರು. ನೀಡಿದಾಗ ಆತನ ಸಂತೋಷ ನೋಡಬೇಕಿತ್ತು. ಒಂದಿನಿತೂ ಮುಜುಗರವಿಲ್ಲದೆ ಕೆಳಗಿನ್ ತನ್ಕಾ ಬುಟ್ಪಿಡಿ ಬುದ್ದಿ ಎಂದಾಗ ನಗು ಬಂತು. ನಗರೀಕರು ನಾವು ಎಲ್ಲಕ್ಕೂ ಹಿಂಜರಿಯುತ್ತೇವೇ, ಇನ್ನೂ ಹಳ್ಳಿಗಳಲ್ಲಿ ಮನುಜರಲ್ಲಿ ಎಳ್ಳಷ್ಟಾದರೂ ನಂಬಿಕೆಯ ಬೇರು ನಿಂತಿದೆ.
ಸುಂದರ ಪರಿಸರ, ನಿರ್ಮಲ ವಾತಾವರಣ. ಕಂಡರಿಯದ ಶಿಲ್ಪಿಗೆ, ದೇಗುಲ ಕಟ್ಟಲು ಧನಸಹಾಯ ನೀಡಿದ ವ್ಯಕ್ತಿಗಳಿಗೆ ನಮೋನ್ನಮಃ. ಇಂತಹ ಚಿಕ್ಕ-ಪುಟ್ಟ ಸ್ಥಳಗಳು ಬಹಳಷ್ಟು ಇವೆ. ಇದರ ಬಗ್ಗೆ ಪ್ರವಾಸೋದ್ಯಮ ಇಲಾಖೆ ಸೂಕ್ತ ಪ್ರಚಾರ ನೀಡಿ, ಸಮರ್ಪಕ ಸಾರಿಗೆ ವ್ಯವಸ್ಥೆ ಒದಗಿಸಿ, ಉತ್ತಮ ಸೌಲಭ್ಯ ಕಲ್ಪಿಸಬೇಕು. ನಮ್ಮ ಸುತ್ತಲ ಪ್ರಕೃತಿವೈಭವವನ್ನು ನಾವು ಸವಿಯದಿದ್ದರೆ ಮತ್ತು ನಮ್ಮ ಸುತ್ತಲಿರುವ ಪುರಾಣೇತಿಹಾಸ ಪ್ರಸಿದ್ಧ ಸ್ಥಳಗಳನ್ನು ಆನಂದಿಸಿ, ನಾಲ್ಕಾರು ಜನರಿಗೆ ತಿಳಿಸಿ. ಹಾಗೆಯೇ ಅದು ಬೆಟ್ಟ ಇದು ಬೆಟ್ಟ ಎನ್ನುತ್ತಾ ಕರಿಘಟ್ಟವನ್ನೂ ನೋಡಿ ಬನ್ನಿ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications