ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲಂಬಸ್ ಕನ್ನಡ ರಾಜ್ಯೋತ್ಸವ - 2010

By * ರಾಮಚಂದ್ರ ಶ್ರೀಹರಿ, ಕೊಲಂಬಸ್
|
Google Oneindia Kannada News

Columbus Kannada Rajyotsava 2010
ಅಮೆರಿಕಾದ ಕೊಲಂಬಸ್ ನಗರದಲ್ಲಿ ನವೆಂಬರ್ 6ರಂದು ಕೊಲಂಬಸ್ ಕನ್ನಡಿಗರ ಬಳಗ 55ನೇ ಕನ್ನಡ ರಾಜ್ಯೋತ್ಸವನ್ನು ಆಯೋಜಿಸಿತ್ತು. ಫಾಲ್ಸ್ ಸೀಸನ್ನಲ್ಲಿ ಮರಗಳು ತಮ್ಮ ಹಳದಿ ಕೆಂಪು ಬಣ್ಣದ ಎಲೆಗಳಿಂದ ಸಾರುತ್ತವೆ ಇದು ಕನ್ನಡ ರಾಜ್ಯೋತ್ಸವದ ಸಮಯವೆಂದು. ಅಂದು ಆ ರಸಸಂಜೆಯಂದು ಚಳಿಗಾಲದ ಸಮಯ, ಕನ್ನಡ ಹಬ್ಬದ ಸಡಗರ, ಬಂದಿದ್ದರು ಕನ್ನಡಿಗರು ಹಚ್ಚಲು ಕನ್ನಡ ದೀಪವನು, ಸೂಸಲು ಕನ್ನಡ ಕಂಪನ್ನು, ಅವರಲ್ಲೇನೋ ಹಬ್ಬವನ್ನು ಆಚರಿಸುವ ಉತ್ಸಾಹ, ಛಲ ಹಾಗು ಸಂತಸ.

ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಅಂದಹಾಗೆ, ಸಭಾಂಗಣದಲ್ಲಿ ಭಾರತ ಹಾಗು ಕರ್ನಾಟಕ ಬಾವುಟ ಒಂದರ ಕೆಳಗೊಂದು ರಾರಾಜಿಸುತ್ತಿದ್ದವು. ಕನ್ನಡ ನಾಡು ನುಡಿಗೆ, ಕೊಡುಗೆ ನೀಡಿದ ಕವಿಗಳ, ನಟರ, ಗಾಯಕರ ಭಾವ ಚಿತ್ರಗಳು ಹೃದಯಕ್ಕೆ ಕಂಬನಿ ಮಿಡಿದಂತಿದ್ದವು.

ಕಾರ್ಯಕ್ರಮ ಅಂದಮೇಲೆ ತಿಂಡಿ ತಿನಿಸು ಇರದೆ ಇರುತ್ಯೇ? ಸ್ಟಾರ್ಟರಾಗಿ ಗರಿ ಗರಿಯಾದ ಸಮೋಸ ಹಾಗು ಪಕೋಡ ಎಲ್ಲರ ಬಾಯಿನೀರೂರಿಸಿದ್ದವು. ಸ್ವಲ್ಪ ಎನರ್ಜಿ ಬಂದಮೇಲೆ ಕಾರ್ಯಕ್ರಮ ಶುರು ಆಯಿತು ನೋಡಿ.

ಹುಯಿಲಗೋಳ ನಾರಾಯಣ ರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಎಂಬ ಗೀತೆಯನ್ನು ಗುನುಗುತ್ತ ಉದಯವಾಯಿತು ನಮ್ಮ ಕನ್ನಡ ರಾಜ್ಯೋತ್ಸವ. ವಿಘ್ನನಿವಾರಕ ವಿಘ್ನೇಶ್ವರನ ಸುಶ್ರಾವ್ಯ ಪ್ರಾರ್ಥನೆಯಿಂದ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಪುಟಾಣಿ ಮಕ್ಕಳಿಂದ ಫಾಶನ್ ಶೋನಲ್ಲಿ ಬಸವಣ್ಣ, ಸರ್ವಜ್ಞ, ಕೃಷ್ಣ, ಭುವನೇಶ್ವರಿ, ಸೂಪರ್ ಮ್ಯಾನ್, ಹುಲಿ ಪಾತ್ರಗಳು ಜೀವ ಪಡೆದಿದ್ದವು. ಮಕ್ಕಳ ಮುಗ್ಧತೆ, ನಾಚಿಕೆ, ವೇಷ ಭೂಷಣಗಳು, ಆಟೋಟಗಳು, ತೊದಲು ನುಡಿಗಳು ನಮಗೆ ಮುದನೀಡುತಿದ್ದವು.

"ಜಯ ಭಾರತ ಜನನಿಯ ತನುಜಾತೆ..." ಸಾಮೂಹಿಕ ನಾಡ ಗೀತೆಗೆ ನೆರೆದ ಎಲ್ಲಾ ಕನ್ನಡಿಗರು ಗೌರವ ಸೂಚ್ಯಕವಾಗಿ ಎದ್ದು ನಿಂತು ದನಿಗೂಡಿಸಿದ್ದು ಅಭಿನಂದನೀಯ. ಪುಟಾಣಿ ತನ್ವಿಯ ಹನಿ ಹನಿ ಇಬ್ಬನಿ ಹಾಡಿಗೆ ಪುಟ್ಟ ಪುಟ್ಟ ಹೆಜ್ಜೆ ಹಾಕಿ ಇಬ್ಬನಿಯೇ ಕರಗಿಂತಾಯಿತು, ಚಿಲಿಪಿಲಿ ಹಕ್ಕಿ ಹಾಡಿದಂತಾಯಿತು. ಕೃಷ್ಣವೇಣಿಯಾದ ಪುಣ್ಯಗೌರಿಯ ಬೆಣ್ಣೆ ಕದ್ದ ಕಳ್ಳ ಕೃಷ್ಣನ ಲೀಲೆಗಳ ನೃತ್ಯ ನಯನ ಮನೋಹರವಾಗಿತ್ತು.

ಕನ್ನಡ ನಾಡು, ಕವಿಗಳ ಬೀಡು ಬಣ್ಣಿಸುವ ಕಾವ್ಯಲಹರಿಯಿದ್ದರೆ ರಾಜ್ಯೋತ್ಸವಕ್ಕೊಂದು ಕಳೆ. ಸ್ನೇಹಿತ ಹೇಗಿರಬೇಕೆನ್ನುವ ಶ್ರೀಹರಿಯ ಕಾವ್ಯ ಚಿಕ್ಕದಾಗಿ ಚೊಕ್ಕದಾಗಿತ್ತು. ಕಾರ್ಗಿಲ್ ಗಣೇಶ ಕಾವ್ಯದ ಕಲ್ಪನೆ, ಯುದ್ದದ ಚಿತ್ರಣ, ವಾಸ್ತವ ಪ್ರಪಂಚದ ನೈಜತೆ ಅಮೋಘವಾಗಿತ್ತು. ಕನ್ನಡತಿ ಲಕ್ಷ್ಮೀರವರ "ಈ ಕನ್ನಡ ನಾಡನು ಮರಿಬೇಡ ಓ ಅಭಿಮಾನಿ ಈ ಕನ್ನಡ ಹೆಣ್ಣನು ಜರಿಬೇಡ ಓ ಅಭಿಮಾನಿ" ನೃತ್ಯ ಕನ್ನಡಿಗರ ಮನದಲ್ಲಿ ಕೆಚ್ಚೆದೆಯನ್ನು ಹೆಚ್ಚಿಸಿತು. ಲಂಗ ತೊಟ್ಟ ಲಲನಾಮಣಿಯರು ಕಾರ್ಮೋಡ ನೋಡಿ ಜಿಗಿದ ನವಿಲಿನ ಹಾಗೆ ವೈಯಾರದಿಂದ ತಮ್ಮ ಸೊಂಟವನ್ನು ಬಳಕುಸುತ್ತಾ ಪ್ರೇಕ್ಷಕರನ್ನು ರಂಜಿಸಿದರು.

ಆದರ್ಶ್ ತಂಡದ "ಜುಮ್ ಜುಮ್ ಸ್ಪ್ರೇ" ನಾಟಕ ಪ್ರೇಕ್ಷಕರನ್ನು ನಕ್ಕುನಲಿಸಿತು. ನಾಟಕದ ಪರಿಕಲ್ಪನೆ, ಸಂಭಾಷಣೆ, ಅಭಿನಯ, ಸಿನಿಮಾ ಹಾಡುಗಳ ಜೋಡಣೆ ಅಮೋಘವಾಗಿತ್ತು. ತ್ರೀ ರೋಸಸ್ ಟೀ, ಡಾ|| ರಾಜಕುಮಾರ್ ಅಪಹರಣ, ದ್ರೌಪು ಸನ್ನಿವೇಶಗಳು ಮರೆಯಲಾಗದು. ಸಂತೋಷ್ ದಂಪತಿಗಳ "ಗಂಡ ಹೆಂಡತಿ" ಚಿತ್ರದ "ಮಾತು ಮುರಿದೆ ಮಾತಾಡದೆ..." ಹಾಡಿನ ನೃತ್ಯ ಹಾಗು ಅದರ ಸಂಯೋಜನೆ ನಯನ ಮನೋಹರವಾಗಿತ್ತು. ಮನ್ಮಥ, ರತಿ ಧರೆಗಿಳಿದು ಗಂಡ ಹೆಂಡಿರ ಹಾಗೆ ನೃತ್ಯ ಮಾಡಿದಂತಿತ್ತು.

ಪ್ರಭು ತಂಡದವರ ಟ್ರಾನ್ಸ್ ಫಾರ್ಮರು(ಪರಿವರ್ತನೆ) ನಾಟಕ ಹೇಗೆ ಒಬ್ಬ ಉತ್ತರ ಕರ್ನಾಟಕದ ಹಳ್ಳಿ ಹೈದ ಹಳ್ಳಿಯಿಂದ ಬೆಂಗಳೂರಿನಂತಹ ಮಹಾನಗರಕ್ಕೆ ಬಂದಾಗ, ಹಾಗು ಮತ್ತೆ ಅವನು ಹಳ್ಳಿಗೆ ಹೋದಾಗ ಅವನಲ್ಲಿ ಹಾಗು ಸಮಾಜದಲ್ಲಾಗುವ ಪರಿವರ್ತನೆಗಳ ಹಾಸ್ಯ ರೂಪಕ ತುಂಬಾ ಚೆನ್ನಾಗಿತ್ತು. ಉತ್ತರ ಕರ್ನಾಟಕದ ಸೊಗಡಿನ ಸಂಭಾಷಣೆ ಅಮೋಘವಾಗಿತ್ತು. ಉಮೇಶ್ ತಂಡದವರ ಶರಣರ, ಜಂಗಮರ ಪದಗಳು, ಅದಕ್ಕೆ ತಕ್ಕಂತೆ ತಾಳಗಳು, ಕೊರಸ್ ಎಲ್ಲರನ್ನೂ ಮೋಡಿ ಮಾಡಿದವು.

ಕಳೆದ ವರ್ಷ ಅಗಲಿದ ನಾಯಕ ನಟ ಸಾಹಸಸಿಂಹ ಡಾ|| ವಿಷ್ಣುವರ್ಧನ್ ಆವರ ಸವಿ ನೆನಪಿಗಾಗಿ ಸಂತೋಷ್ ರವರು ವಿಷ್ಣುರವರ ಹಾಡಿಗೆ ಅವರಂತೆ ನರ್ತಿಸಿ ರಂಜಿಸಿದರು. ಆಣ್ಣಾವ್ರ ಪದ ಹೆಳ್ದೇ ಕನ್ನಡ ರಾಜ್ಯೋತ್ಸವ ಅಪೂರ್ಣ. ಬಬ್ರುವಾಹನ ಚಿತ್ರದ ಬಬ್ರುವಾಹನ-ಅರ್ಜುನನ ಸಂವಾದ ಅರವಿಂದ್ ಅವರ ಏಕಪಾತ್ರಾಭಿನಯದ ಮೂಲಕ ಜೀವ ತಳೆದಿತ್ತು. ಉಮೇಶ್ ರವರ ಮಿಮಿಕ್ರಿ ಊಟಕ್ಕೆ ಉಪ್ಪಿನಕಾಯಿಯಂತಿತ್ತು.

ಇಷ್ಟೆಲ್ಲ ಆದಮೇಲೆ ಊಟಕ್ಕೆ ಬುಲಾವ್ ಬುಲಾವ್ ಅನ್ನುವಷ್ಟರಲ್ಲೇ ಮಾಯವಾಯಿತು ಪಲಾವ್. ಪೂರಿ, ಸಾಗು, ಅನ್ನ ಸಾರು, ಜಿಲೇಬಿ-ಬಾದುಶಾಗಳು ಬಂದವರ ಹಸಿವನ್ನು ತಣಿಸಿದ್ದವು. ಅಮೇರಿಕಾದ ಬೇರೆ ನಗರದಿಂದ ಬಂದವಕು ಕಾರ್ಯಕ್ರಮದ ಬಗ್ಗೆ ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತೆ ಭೇಟಿಯಾಗೋಣ.

English summary
Columbus Kannada Rajyotsava 2010 : Columbus Kannada balaga in America celebrated Kannada Rajyotsava on November 6. A report by Ramachandra Srihari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X