ಕುವೆಂಪು ಕನ್ನಡ ಸಂಘದ ಭರ್ಜರಿ ದೀಪಾವಳಿ
ಸಂಜೆ ಸಾನಾಂಟೋನಿಯೋದ "ನೈಬರ್ ಹುಡ್ ಹಾಲ್" ಸಭಾಂಗಣದಲ್ಲಿ ಕುವೆಂಪು ಕನ್ನಡ ಸಂಘದ ವತಿಯಿಂದ ದೀಪಾವಳಿ ಹಬ್ಬ "ಮಡ್ರಾಸ್ ಪಾಲೇಸ್"ನ ರುಚಿಕರವಾದ ಬಜ್ಜಿ ಬೊಂಡ ತಿನಿಸುಗಳು, ಹಾಗು ಹಬ್ಬದೂಟದ ರಸದೌತಣದಿಂದ ಪ್ರಾರಂಭವಾಯ್ತು.
ಸುಮಾರು ಎಂಟು ಗಂಟೆಗೆ ಕುವೆಂಪು ಸಂಘದ ಅಧ್ಯಕ್ಷ ಮುರಳಿ ಆದಿಕೇಶವ ಅವರಿಂದ ಸ್ವಾಗತ ಭಾಷಣ, ಸಂಘದ ಸಮಿತಿಯವರಾದ ಪನ್ನಗ ಪ್ರಸಾದ್, ಕಲ್ಪನ ರಾಜಗೋಪಲ್, ರೂಪ ಪ್ರಸಾದ್, ದಯಾನಿಧಿ ಕಡಾಂಬೆ ಹಾಗು ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನ್ಯೂಜೆರ್ಸಿಯಿಂದ ಆಗಮಿಸಿದ್ದ ಗಾಯಕಿ ವಸಂತ ಶಶಿಯವರುಗಳಿಂದ "ಹಚ್ಚೇವು ಕನ್ನಡದ ದೀಪ" ಹಾಡಿನ ಮೂಲಕ ದೀಪ ಬೆಳಗಿಸಿ ಕುವೆಂಪು ಕನ್ನಡ ಸಂಘದ ದೀಪಾವಳಿ ಸಮಾರಂಭಕ್ಕೆ ಚಾಲನೆ ನೀಡಿದರು. ಆನಂತರ "ಭಾವವಸಂತ ಭಾಗ 4" ಧ್ವನಿ ಮುದ್ರಿಕೆಯನ್ನ ಸಂಘದ ವತಿಯಿಂದ ಲೋಕಾರ್ಪಣೆ ಮಾಡಲಾಯಿತು.
ದೀಪಾವಳಿ ಹಬ್ಬದ ಮುಖ್ಯ ಆಕರ್ಷಣೀಯ ಕಾರ್ಯಕ್ರಮವಾಗಿದ್ದ ಇತ್ತೀಚೆಗಷ್ಟೆ ಬಾಲಿಸ್ಟಾರ್ 2009 ಪುರಸ್ಕೃತರಾಗಿ ಮುಂಬೈ ನಗರಿಗೆ ಹಿನ್ನೆಲೆ ಗಾಯಕಿಯಾಗಿ ಹಾರಲಿರುವ ನ್ಯೂಜೆರ್ಸಿಯ ವಸಂತಾ ಶಶಿ ಅವರು ಸುಮಾರು 2 ಗಂಟೆಗಳ ಕಾಲ ಸಭಿಕರ ಹಾಡಿನ ಕೋರಿಕೆಯ ಮೇರೆಗೆ ಹಲವಾರು ಭಾಷೆಯಲ್ಲಿ ಸತತವಾಗಿ 50ರ ಇಸಿವಿಯಿಂದ ಹಿಡಿದು ಇತ್ತೀಚಿನ ಸುಮಧುರ ಸಂಗೀತದಲೆಗಳ ಚಿತ್ರಮಂಜರಿ ಸುರಿಮಳೆಗೆರೆದು ನೆರೆದಿದ್ದ ಸಭಿಕರನ್ನೆಲ್ಲಾ ಅವರವರ ಚಿಕ್ಕಂದಿನ ನೆನಪಿನ ದಿನಗಳಿಗೆ ಕೊಂಡೊಯ್ದರು ಎನ್ನುವುದರಲ್ಲಿ ಸಂದೇಹವೇ ಇಲ್ಲಾ.
ಈ ಕಾರ್ಯಕ್ರಮದ ವೈಶಿಷ್ಟವೇನಪ್ಪಾ ಅಂದರೆ, ಅಂದಿನ ಇಡೀ ಕಾರ್ಯಕ್ರಮವನ್ನ ವೇವ್ ಜ್ ಮ್ಯೂಸಿಕ್ ಹಾಗು ಕು.ವೆಂ.ಪು. ಕನ್ನಡ ಸಂಘದ ವತಿಯಿಂದ ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಪ್ರವಾಹವಕ್ಕೆ ಸಿಲುಕಿದ ಪೀಡಿತರಿಗೆ ವಸಂತಾ ಅವರು ಅರ್ಪಿಸಿ, ಖರ್ಚು ಕಳೆದು ಬರುವ ಹಣ ಹಾಗು ಅಂದಿನ ಅವರ ಸಿ.ಡಿ.ಯಿಂದ ಬರುವ ಎಲ್ಲಾ ಹಣವನ್ನೂ ಮಂತ್ರಾಲಯದ ಪ್ರವಾಹ ಪೀಡಿತರಿಗೆ ಸಹಾಯ ಹಸ್ತವಾಗಿ ನೀಡುವುದಾಗಿ ತಿಳಿಸಿದರು.
ಮೊದಲಬಾರಿಗೆ ಕು.ವೆಂ.ಪು ಕನ್ನಡ ಸಂಘದ ಸಭಿಕರೆಲ್ಲಾ ಸೇರಿ ನಡೆಸಿದ "ನಾನ್ ಸ್ಟಾಪ್ ಕನ್ನಡ ಕೋಲಾಟ ಧಮಾಕ" ಕಾರ್ಯಕ್ರಮವಂತೂ ಪ್ರತಿಯೊಬ್ಬರನ್ನೂ ರಂಜಿಸಿ ಭರ್ಜರಿ ದೀಪಾವಳಿ ಹಬ್ಬದ ಮೆರುಗಿನ ಕಳೆ ಕಟ್ಟಿತ್ತು.