ಬಲ್ಗೇರಿಯಾದಲ್ಲಿ ಹರೇಕೃಷ್ಣ ಹರೇರಾಮ
ಹೀಗೆ ಒಂದು ದಿನ ಟ್ಯಾಕ್ಸಿ ಹತ್ತುತ್ತಿದಂತೆ ಡ್ರೈವರ್ "ಇಂಡಿಯಾ?" ಎಂದು ಪ್ರಶ್ನಿಸಿದ. ನಾನು "ಹೌದು" ಎಂಬಂತೆ ತಲೆ ಅಲ್ಲಾಡಿಸಿದೆ. ಮತ್ತೆ ಅದೇ ಪ್ರಶ್ನೆ "ಇಂಡಿಯಾ?". ನಾನು "ಯಸ್" ಎಂದು ಮತ್ತೆ ಗೋಣು ಕುಣಿಸಿದೆ. ಆತ ಇನ್ನು ಮನವರಿಕೆ ಆಗಿಲ್ಲ ಎಂಬಂತೆ ಪ್ರಶ್ನಾರ್ಥಕ ಮುಖ ಮಾಡಿದ್ದ. ಪರಿಸ್ಠಿತಿ ಅರಿತ ನನ್ನ ಗೆಳೆಯ ಶುಭ "ಇಂಡಿಯಾ ದಾ ದಾ " (ದಾ ಎಂದರೆ ಯೆಸ್) ಎನ್ನುತ್ತ "ಅಲ್ಲ" ಅನ್ನುವ ರೀತಿಯಲ್ಲಿ ತಲೆ ಕುಣಿಸುತ್ತಿದ್ದ. ಈಗ ಪ್ರಶ್ನಾರ್ಥಕ ಮುಖ ಮಾಡುವ ಸರದಿ ನನ್ನದಾಗಿತ್ತು. [ಇಲ್ಲಿನ ಸೋಜಿಗ ಎಂದರೆ, "ಇಲ್ಲ" ಅನ್ನುವ ರೀತಿಯಲ್ಲಿ ತಲೆಯನ್ನು ಎಡಕ್ಕೆ ಬಲಕ್ಕೆ ಅಲುಗಾಡಿಸಿದರೆ "ಹೌದು" ಅಂತ ಅರ್ಥ. "ಹೌದು" ಎಂಬಂತೆ ಗೋಣು ಕುಣಿಸಿದರೆ "ಇಲ್ಲ" ಅಂತ. ಪೂರ್ತಿ ಉಲ್ಟಾ ಪಲ್ಟಾ ಲೋಕಾರೂಢಿ!!]
ಈಗ ಟ್ಯಾಕ್ಸಿ ಡ್ರೈವರ್ ಗೆ ನಾವು ಭಾರತೀಯರು ಅನ್ನುವುದು ಪಕ್ಕಾ ಆಗಿತ್ತು. ಆತ ಮುಗುಳ್ನಕ್ಕು ಕೈ ಮುಗಿಯುತ್ತ ಹೇಳಿದ "ಹರೇ ಕೃಷ್ಣ ಹರೇ ರಾಮ". ನಾನು ಆಶ್ಚರ್ಯ ಚಕಿತನಾಗಿ ಅವನನ್ನು ನೋಡುತ್ತಿದ್ದಂತೆ, ಆ ಮಹಾಶಯ ತನ್ನ ಪೆನ್ ಡ್ರೈವ್ ತೆಗೆದು "ಹರೇ ಕೃಷ್ಣ ಹರೇ ರಾಮ ....." ಹಾಡು ಪ್ಲೇಯ್ ಮಾಡುತ್ತಿದ್ದ. ಪಕ್ಕಾ ನಮ್ಮ ಇಸ್ಕಾನ್ ದೇಗುಲದ ಧ್ವನಿ. ನಂತರ ಒಂದು ಸಿ ಡಿ. " ಗೋಕುಲನಂದ ದೇವಕಿಸುತ ........." ಕೃಷ್ಣನ ಭಕ್ತಿಗೀತೆಗಳ ಮಹಾಪೂರವೇ ಹರಿದು ಬರುತ್ತಿತ್ತು. ಬಲ್ಗೇರಿಯಾ ಸೋಫಿಯಾದ ಟ್ಯಾಕ್ಸಿ ಡ್ರೈವರ್ ಎಲ್ಲಿ? ಗೋಕುಲದ ಕೃಷ್ಣ ಎಲ್ಲಿ? ನಾನು ನನ್ನ ಗೆಳೆಯ ಇಬ್ಬರೂ ದಂಗಾಗಿದ್ದೆವು!
ನಮ್ಮ ಇಸ್ಕಾನ್, ಕೃಷ್ಣನ ಗುಣಗಾನವನ್ನು ಜಗತ್ತಿನಾದ್ಯಂತ ಮಾಡುತ್ತಿರುವುದು ಗೊತ್ತಿರುವ ವಿಷಯ. ನಾವೇ ಈಗ ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಟ್ಟು ಪಾಶ್ಚಿಮಾತ್ಯದ ಕಡೆ ವಾಲುತ್ತಿರುವಾಗ ಇಲ್ಲಿನ ಒಬ್ಬ ಟ್ಯಾಕ್ಸಿ ಚಾಲಕ ಕೃಷ್ಣನ ಭಕ್ತ. ಆತ ಇಲ್ಲೇ ಸನಿಹದಲ್ಲಿರುವ ದೇಗುಲಕ್ಕೂ ಕೂಡ ಭೇಟಿ ನೀಡುತ್ತಾನಂತೆ. ನಾವುಗಳು ಪ್ರಾಯಶಃ ಕೃಷ್ಣನ ಸ್ತುತಿಯನ್ನು ಕೇಳುವುದು ಕೃಷ್ಣಾಷ್ಟಮಿಗೆ ಮಾತ್ರವೇನೋ! ನಮ್ಮ ವೈಭವೊಪೇತ ಸಂಸ್ಕೃತಿ ನಮಗೆ ನಗಣ್ಯ ಆಗುತ್ತಿರುವುದು ಶೋಚನೀಯ. ಹಿತ್ತಲ ಗಿಡ ಮದ್ದಲ್ಲ ಅಂದರೆ ಇದೇನಾ?