ಗಂಗಾಲಹರಿಗೆ ವಸುಂಧರಾ ದೊರೆಸ್ವಾಮಿ ನರ್ತನ
ಕನ್ನಡದ ಪ್ರಸಿದ್ಧ ರಂಗ ಕರ್ಮಿ, ಸಾಹಿತಿ ಪ್ರೊ ಉದ್ಯಾವರ ಮಾಧವ ಆಚಾರ್ಯ ಅವರ ಕೃತಿ "ಗಂಗಾ ಲಹರಿ"ಯ ಏಕವ್ಯಕ್ತಿ ನೃತ್ಯ ಪ್ರಯೋಗ ನ್ಯೂ ಜೆರ್ಸಿಯ ಬ್ರಿಡ್ಜ್ವಾಟರ್ ದೇವಸನ್ನಿಧಿಯ ಸಭಾಂಗಣದಲ್ಲಿ ಅಗಸ್ಟ್ 24 ರಂದು ಸಂಜೆ 5 ರಿಂದ 8ರತನಕ ಜರುಗಲಿದೆ.
ಇದನ್ನು ನಡೆಸಿಕೊಡುತ್ತಿರುವವರು ಅಂತಾರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದೆ ಕರ್ನಾಟಕ ಕಲಾತಿಲಕ ಡಾ. ವಸುಂಧರಾ ದೊರೆಸ್ವಾಮಿ ಅವರು. ತಮ್ಮ ಅಮೆರಿಕಾ ಪ್ರವಾಸದ ಕೊನೆಯ ಹಂತದಲ್ಲಿ ಅವರು ಶಿಷ್ಯೆ ವಿದುಷಿ ಭ್ರಮರಿ ಶಿವಪ್ರಕಾಶ್ ಅವರ ನೃತ್ಯ ಶಾಲೆಯಲ್ಲಿ 3 ದಿನಗಳ ಕಾರ್ಯಾಗಾರ ಹಾಗೂ "ಗಂಗಾಲಹರಿ" ಎಂಬ ಏಕವ್ಯಕ್ತಿ ನೃತ್ಯ ನಾಟಕವನ್ನು ನಡೆಸಿಕೊಡಲಿದ್ದಾರೆ.
ಗಂಗಾಲಹರಿ : ಭಾರತದ ಪವಿತ್ರ ನದಿ ಗಂಗೆಯ ಜೀವನ ಪ್ರವಾಹವೇ ಈ ರೂಪಕದ ವಸ್ತು. ಗಂಗೆ ನದಿ ಮಾತ್ರವಲ್ಲ. ಹೆಣ್ತನದ ಪ್ರತೀಕ. ಪಾವಿತ್ರ್ಯದ ಸಂಕೇತ. ಜೀವನ-ಸಂಸ್ಕೃತಿ-ಆಧ್ಯಾತ್ಮದ ಸಂಗಮ. ಆದಿಕವಿ ವಾಲ್ಮೀಕಿ, ಆಚಾರ್ಯ ಶಂಕರ, ಕವಿ ಕಾಳಿದಾಸ, ಪಂಡಿತ ಜಗನ್ನಾಥ ಕವಿ ಇಂಥ ಮಹಿಮಾನ್ವಿತರ ಬಣ್ಣನೆಯೇ ಈ ರಂಗ ಕೃತಿಗೆ ಮೂಲ. ಸ್ವರ್ಗದ ಶಾಪವನ್ನು ಕಳೆಯುವುದಕ್ಕೋಸ್ಕರ ಭೂಮಿಗೆ ಅವತರಿಸಿದ ಗಂಗೆ ತನ್ನ ಜೀವನದಲ್ಲಿ ಪಡೆದ ವಿವಿಧ ಪಾತ್ರಗಳನ್ನು, ನಲಿವುಗಳನ್ನು, ಸೆಳೆತ ಬಿಗಿತಗಳನ್ನು, ಮತ್ತೆ ಇಂದ್ರ ಲೋಕಕ್ಕೆ ಮರಳಲಾಗದೆ ಮಾನವ ಸಂತತಿಯ ಪಾಪಗಳನ್ನೆಲ್ಲ ತೊಳೆಯುವುದಕ್ಕೋಸ್ಕರ ಪವಿತ್ರ ನದಿಯೆಂದು ಆರಾಧಿಸಿಕೊಳ್ಳುತ್ತಾ ಇಳೆಯಲ್ಲೇ ಉಳಿದ ಜೀವನ ಗಾಥೆ ಈ ರೂಪಕದಲ್ಲಿ ಹೃದ್ಯಮವಾಗಿ ಪ್ರದರ್ಶನಗೊಳ್ಳಲಿದೆ.
ಈ ನೃತ್ಯ ಪ್ರಸ್ತುತಿಗೆ ವಿದುಷಿ ಪಿ ರಮಾ ಅವರು ಹಿನ್ನೆಲೆ ಗಾಯನದಲ್ಲಿ, ವಿದ್ವಾನ್ ಲಕ್ಷ್ಮೀಶ ಶ್ರೀಧರ್ ಅವರು ಮೃದಂಗ ವಾದನದಲ್ಲಿ, ವಿದ್ವಾನ್ ಕೆ ಎಸ್ ಜಯರಾಮ್ ಅವರು ವೇಣುವಾದನದಲ್ಲಿ, ಸುಚಿತ್ರಾ ಲಕ್ಷ್ಮೀಶ ಅವರು ವಯೋಲಿನ್ ವಾದನದಲ್ಲಿ ಮತ್ತು ವಿದುಷಿ ಭ್ರಮರಿ ಅವರ ನಟ್ಟುವಾಂಗದಲ್ಲಿ ಸಹಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಳೆದ 3 ವರ್ಷಗಳಿಂದ ನ್ಯೂ ಜೆರ್ಸಿಯಲ್ಲಿ ನೃತ್ಯ ಶಿಕ್ಷಣ ನೀಡುತ್ತಿರುವ ವಿದುಷಿ ಭ್ರಮರಿ ಅವರ ಶಿಷ್ಯೆಯರ ಕಿರು ನೃತ್ಯ ಪ್ರದರ್ಶನವೂ ಇದೆ.
ಮಾಹಿತಿ:
ಭ್ರಮರಿ
ಶಿವಪ್ರಕಾಶ್