ನೋಟ -2 : ರೆಡಿಂಗ್ನಲ್ಲಿ ಯುಗಾದಿ ಕಲರವನವ-ಯುವಕನ್ನಡಿಗರ ತೀರದ ಸಡಗರ
ಈ
ಯುವಕರು
ಹಿರಿಯರಿಗೆ
ಕೊಡುತ್ತಿದ್ದ
ಮರ್ಯಾದೆ,
ಆದರ
ಮತ್ತು
ಗೌರವಗಳು,
ಹಿರಿಯಕನ್ನಡಿಗರಿಗೆ
ಒಂದು
ಅನಿರೀಕ್ಷಿತ
ಆಹ್ಲಾದವನ್ನು
ಕೊಟ್ಟಿತು.
ಎಷ್ಟು
ಹುಡುಕಿದರೂ
ಒಂದಾದರೂ
ಸಿಡುಕು
ಮುಖವು
ಕಾಣಲೇ
ಇಲ್ಲ.
- ರಾಜಾರಾಮ್ ಕಾವಳೆ, ಬೇಸಿಂಗ್ ಸ್ಟೋಕ್, ಹ್ಯಾಂಪ್ ಶೈರ್ , ಯು.ಕೆ.
ಇತ್ತೀಚಿನ ವರ್ಷಗಳಲ್ಲಿ ಈ ನವಯುವ ಕನ್ನಡಿಗರು, ಅವರ ಕಾರ್ಯನಿಮಿತ್ತ ಹೆಚ್ಚಾಗಿ ಗಣಕತಂತ್ರ ಕೇಂದ್ರಗಳಿರುವ ಲಂಡನ್, ಬ್ರಿಸ್ಟಲ್, ಪೋರ್ಟ್ಸ್ ಮೌತ್ ಮತ್ತು ರೆಡಿಂಗ್ನಂತಹ ದೊಡ್ಡ ಊರುಗಳಲ್ಲಿ ವಾಸವಾಗಿದ್ದಾರೆ. ಹೊಸ ವರ್ಷವು ಹೊಸತನ್ನು ಹೇಗೆ ತರುವುದೋ ಹಾಗೆ, ಈ ನವಕನ್ನಡಿಗರು ಹೊಸತನ್ನು ಆಂಗ್ಲನಾಡಿಗೆ ತಂದರು.
ಮೂವತ್ತು ವರ್ಷಗಳಿಗೂ ಹಿಂದೆ ಬಂದ ಕನ್ನಡಿಗರು ದುಡಿದು, ದಣಿದು ವಿಶ್ರಾಂತ ಜೀವನವನ್ನು ಎದುರು ನೋಡುತ್ತಿರುವಾಗ, ಈ ನವಕನ್ನಡಿಗರು ಹಿರಿಯ ಕನ್ನಡಿಗರಿಗೆ ಒಂದು ಪ್ರಬಲವಾದ ಹುರುಪನ್ನು ತಂದರು. ಈ ಹುರುಪಿನ ಉದಾಹರಣೆಯು ಈ ಯುವಕರು ಆಚರಿಸಿದ ಈ ಯುಗಾದಿಯ ಹಬ್ಬದ ದಿನದಂದು ಎದ್ದು ಕಾಣುತಿತ್ತು.
ದೇವಾಲಯದ ಬಾಗಿಲಿಗೆ ತೋರಣ ಕಟ್ಟುವುದರಿಂದ ಹಿಡಿದು, ಬಂದ ಅತಿಥಿಗಳ ಊಟೋಪಚಾರಗಳನ್ನು, ಯೋಗಕ್ಷೇಮವನ್ನು ನೊಡಿಕೊಳ್ಳುವುದರಲ್ಲಿ ಮತ್ತು ಅವರ ಎಲ್ಲಾ ಕಾರ್ಯಚಟುವಟಿಕೆಗಳಲ್ಲೂ ಅವರ ಹುರುಪು ಮತ್ತು ಉತ್ಸಾಹಗಳು ಎದ್ದು ಕಾಣುತಿತ್ತು. ಎಲ್ಲೆಲ್ಲಿ ನೋಡಿದರೂ ಹಸನ್ಮುಖಗಳೇ ಕಾಣುತಿದ್ದವು. ಈ ಯುವಕರು ಹಿರಿಯರಿಗೆ ಕೊಡುತ್ತಿದ್ದ ಮರ್ಯಾದೆ, ಆದರ ಮತ್ತು ಗೌರವಗಳು, ಹಿರಿಯಕನ್ನಡಿಗರಿಗೆ ಒಂದು ಅನಿರೀಕ್ಷಿತ ಆಹ್ಲಾದವನ್ನು ಕೊಟ್ಟಿತು. ಎಷ್ಟು ಹುಡುಕಿದರೂ ಒಂದಾದರೂ ಸಿಡುಕು ಮುಖವು ಕಾಣಲೇ ಇಲ್ಲ.
ಬಂದ ಅತಿಥಿಗಳನ್ನು ನೊಂದಾಯಿಸಿ ಅವರಿಗೆ ಬೇಕಾದ ಕಾಫಿ, ಟೀ ಮತ್ತು ಮೃದು ಪಾನೀಯಗಳನ್ನು ಕೊಡಲಾಯಿತು. ರೆಡಿಂಗ್ನ ಕನ್ನಡ ಯುವಕ ಯುವತಿಯರ ತಂಡವು ಈ ಸುಖಾಗಮನ ಮತ್ತು ನೊಂದಾಣಿಕೆಗಳನ್ನು ನೋಡಿಕೊಂಡರು. ಅತಿಥಿಗಳು ಮತ್ತು ಮನರಂಜನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ದೂರ ಭಾಗಗಳಿಂದ ಬರಬೇಕಾಗಿದ್ದುದರಿಂದ ಕಾರ್ಯಕ್ರಮಗಳು ಸ್ವಲ್ಪ ತಡವಾಗಿ ಆರಂಭಗೊಂಡರೂ, ಅದು ಕೂಡಲೇ ಚೇತನಗೊಂಡಿತು.
ನಿರೂಪಣೆ ಅಂದ್ರೆ ಹಾಗಿರಬೇಕು..
ಈ ಸಮಾರಂಭದ ಎಲ್ಲಾ ಚಟುವಟಿಕೆಗಳ ಸಂಯೋಜಕರಾದ ಮೈಸೂರು ಪವನ್ರವರು ಕಾರ್ಯಕ್ರಮಗಳ ನಿರೂಪಣೆ ಆರಂಭಗೊಳಿಸಿ, ಶ್ರೀಮತಿ ಗಾಯತ್ರಿ ವಿನಯ್ರೊಂದಿಗೆ ಮುಂದುವರೆಸಿದರು. ಅವರಿಬ್ಬರ ಪರಸ್ಪರ ಹಾಸ್ಯದ ಕೀಟಲೆ ಮತ್ತು ಅಣಗಿಸುವಿಕೆಗಳು ನಲ್ಲ-ನಲ್ಲೆಯರ ವಾದವಿವಾದಗಳಾಗಿ ಕಂಡವು. ಆದರೆ ಆ ವೇದಿಕೆಯ ಭಯವನ್ನು ಹಾಸ್ಯ ಪ್ರಮೇಯಗಳಿಂದ ಹೇಗೆ ಅಡಗಿಸಬಹುದೆಂದು ಅವರಿಗೇ ಗೊತ್ತಿತ್ತು.
ವಿಜಯೇಂದ್ರ ಮತ್ತು ಶ್ರೀದೇವಿಯವರು ಕನ್ನಡ ಚಿತ್ರಗೀತೆಗಳನ್ನು ಸುಮಧುರವಾಗಿ ಹಾಡಿದರು. ಒಂದೊಂದು ಗೀತೆಗಳನ್ನು ಆರಂಭಿಸುವುದರೋಳಗೆ ಯುವಸಭಿಕರು ಒಡನೆಯೇ ಚಿಮ್ಮಿ ನೆಗೆದು ಚಪ್ಪಾಳೆಯ ತಾಳದೊಂದಿಗೆ ತಾವೂ ಹಾಡುವುದರಲ್ಲಿ ಪಾಲ್ಗೊಳ್ಳುತ್ತಿದ್ದರು.
ಚಪ್ಪಾಳೆ ಮೇಲೆ ಚಪ್ಪಾಳೆ..
ಮೂವತ್ತು ವರ್ಷಗಳಿಗಿಂತಲೂ ಹೆಚ್ಚಾಗಿ ಈ ಆಂಗ್ಲನಾಡಿನಲ್ಲಿ ನೆಲಸಿರುವ, ಹೆಚ್ಚಾಗಿ ಕನ್ನಡ ಸಿನಿಮಾಹಾಡುಗಳನ್ನು ಕೇಳಿರದ ಹಿರಿಯಕನ್ನಡಿಗರು, ತಮ್ಮ ಕನ್ನಡ ಚಿತ್ರಗೀತೆಗಳ ಅಜ್ಞಾನವನ್ನು ತೋರ್ಪಡಿಸದೆ ಎಲ್ಲಾ ಸಭಿಕರೊಂದಿಗೆ ಚಪ್ಪಾಳೆಗಳನ್ನು ಹಾಕುತ್ತ ಗೀತೆಗಳನ್ನು ಆನಂದಿಸಿದರು. ವಿಜಯೇಂದ್ರ ಮತ್ತು ಶ್ರೀದೇವಿಯವರ ಗಾನ ಎಷ್ಟು ಮಧುರವಾಗಿತ್ತೆಂದರೆ ಯುವಕನ್ನಡಿಗರಲ್ಲದೇ ಹಲವು ಹಿರಿಯಕನ್ನಡಿಗರೂ ಕುಣಿತದಲ್ಲಿ ಮೈಮರೆದು ಭಾಗವಹಿಸಿದರು.
ಮಧ್ಯಾಹ್ನ ಸುಖಭೋಜನಕ್ಕೆ ಸುಮಾರು ಒಂದು ಗಂಟೆಯಷ್ಟು ವಿರಾಮಕೊಟ್ಟು , ಮತ್ತೆ ಮನರಂಜನೆಯ ಕಾರ್ಯಕ್ರಮಗಳು ಮುಂದುವರೆದವು. ಭೋಜನದ ಊಟವನ್ನು ಶಶಿಕಾಂತ್ ಮತ್ತು ಸಂತೋಷ್ರವರು ಈಸ್ಟ್ ಹ್ಯಾಮಿನ ‘ಚನ್ನೈ ದೋಸಾ’ ಎಂಬ ಉಪಹಾರಗೃಹದವರಿಂದ ವ್ಯವಸ್ಥೆ ಮಾಡಿದ್ದರು.
ಹೊರದೇಶಲ್ಲಿ ವಾಸಮಾಡುತ್ತಿರುವ ಕನ್ನಡಿಗರು ಮನಸ್ಸಿನಲ್ಲೇ ಮಂಡಿಗೆಯನ್ನು ಮಾಡುವುದನ್ನು ಬಿಟ್ಟು , ನಿಜವಾದ ಮಂಡಿಗೆಯನ್ನು ಉಣುವ ಅವಕಾಶವನ್ನು ಮಾನ್ಯ ನಾಗರಾಜರವರು(ಪವನ್ರವರ ತಂದೆಯವರು) ಕಲ್ಪಿಸಿಕೊಟ್ಟಿದ್ದರು. ಅವರು ಕರ್ನಾಟಕದಿಂದ ಈ ಮಂಡಿಗೆಯ ಪೆಟ್ಟಿಯನ್ನು ಟಪ್ಪಾಲಿನ ಮೂಲಕ ಕಳುಹಿಸಿದ್ದರು. ಶ್ರೀಮತಿ ರೂಪಾ ವಿರೂಪಾಕ್ಷ, ಸುಂದರ್ ಮತ್ತು ಗುರುಪ್ರಸಾದ್ ಅವರುಗಳು ಈ ಸಂದರ್ಭಕ್ಕೆ ಖಾಸಗಿಯಾಗಿ ಬೆಂಗಳೂರಿನಿಂದ ಅನೇಕ ಪದಾರ್ಥಗಳನ್ನು ತಂದಿದ್ದರು.
ಯುವ ಕನ್ನಡಿಗರ ಕಾರ್ಯಕ್ಕೆ ಶ್ಲಾಘನೆ
ನಂತರ ವೇದಿಕೆ ಮೇಲೆ ಕಾರ್ಯಕ್ರಮಗಳು ಆರಂಭವಾದವು. ಪವನ್ರವರು ಸಭೆಗೆ ಆಗಮಿಸಿದ ಕನ್ನಡಬಳಗ ಯುಕೆಯ ಅಧ್ಯಕ್ಷೆ ಶ್ರೀಮತಿ ವಿಜಯ ಕೊಟ್ಟೂರು ಅವರನ್ನು, ಒಂದೆರಡು ಮಾತಾಡಬೇಕೆಂದು ಕೇಳಿಕೊಂಡರು.
ಮಾಹಿತಿ ತಂತ್ರಜ್ಞಾನದ ಈಗಿನ ಕಾಲದಲ್ಲಿ, ಕನ್ನಡಿಗರಿಗೆ ಈ ದೇಶಕ್ಕೆ ಹೆಚ್ಚಿನ ಸಂಖೆಯಲ್ಲಿ ಬರಲು ಎಂದೂ ಇಲ್ಲದ ಒಂದು ಅವಕಾಶ ಒದಗಿದೆ. ತಾವು ಈ ದೇಶಕ್ಕೆ ಮೂವತ್ತು ವರ್ಷಗಳ ಹಿಂದೆ ಬಂದ ಸಮಯದಲ್ಲಿ ಎಲ್ಲೋ ಒಬ್ಬರೋ ಇಬ್ಬರು ಕನ್ನಡಿಗರು ಅಲ್ಲಲ್ಲಿ ಕಾಣಿಸುತ್ತಿದ್ದರು. ಕನ್ನಡಿಗರಲ್ಲಿ ಹೆಚ್ಚಾಗಿ ವೈದ್ಯರುಗಳೂ ಮತ್ತು ಇಂಜನೀಯರುಗಳೂ ಇದ್ದುದರಿಂದ ಅವರುಗಳು ತಮ್ಮ ಕಾರ್ಯಗಳು ಕೊಂಡೊಯ್ದೆಡೆಗೆ ಈ ದೇಶದ ಮೂಲೆ ಮೂಲೆಗಳಿಗೆ ಹೋಗಬೇಕಾಗಿದ್ದಿತು. ಬಹಳ ವರ್ಷಗಳನಂತರ 1982ರಲ್ಲಿ ಕನ್ನಡಬಳಗ ಯುಕೆ ಎಂಬ ಸಂಸ್ಥೆಯನ್ನು ಆರಂಭಿಸಲಾಯಿತು ಎಂದು ವಿಜಯ ಕೊಟ್ಟೂರು ಹೇಳಿದರು.
ನವಕನ್ನಡಿಗರು ಸಂಘಟಿತರಾಗಿ ಹಿರಿಯ ಕನ್ನಡಿಗರ ಕನ್ನಡಬಳಗ ಯುಕೆಯ ಸಮಾರಂಭಗಳಲ್ಲೂ ಭಾಗವಹಿಸಬೇಕೆಂದು ಅವರು ಸಲಹೆಮಾಡಿದರು.