ಅಶ್ವಥ್ಗೆ ಕ್ಯಾಲಿಫ್ ಕನ್ನಡಿಗರ ಗುರುದಕ್ಷಿಣೆ ಸಮರ್ಪಣೆ
21 ಫೆಬ್ರವರಿ 2007ರಲ್ಲಿ ಮೈಸೂರು ನಗರದ ಸರಸ್ವತೀಪುರದ ಅಶ್ವತ್ ಅವರ ನಿವಾಸದಲ್ಲೇ ಏರ್ಪಾಡಾಗಿದ್ದ ಸರಳ ಸೌಹಾರ್ದ ಸಮಾರಂಭ ದಲ್ಲಿ, ಹಾಜರಿದ್ದ ಆಹ್ವಾನಿತ ಗಣ್ಯರ ಸಭೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎ. ಎಸ್. ನಾಗರಾಜ್ ಅವರು ಪುಷ್ಪಗುಚ್ಛ, ಅಭಿನಂದನಾ ಫಲಕ ಮತ್ತು ಚೆಕ್ಕುಗಳನ್ನು ನೀಡಿ, ಶ್ರೀಯುತರಿಗೆ ಆಯುರಾರೋಗ್ಯ ಕೋರಿ ಶುಭ ಹಾರೈಸಿದರು.
ಅಭಿನಂದನೆಯನ್ನು ಪ್ರೀತಿಪೂರ್ವಕವಾಗಿ ಸ್ವೀಕರಿಸಿದ ಅಶ್ವಥ್ ಮಾತನಾಡುತ್ತ, ಚಲನಚಿತ್ರ ಕ್ಷೇತ್ರಕ್ಕೆ ತಾವು ಪಾದಾರ್ಪಣೆ ಮಾಡಿದಂದಿನಿಂದ ಕಂಡುಂಡ ಹಲವಾರು ಸನ್ನಿವೇಶಗಳನ್ನು ಹೃದಯಂಗಮವಾಗಿ ವಿವರಿಸಿದರು. ಆ ಕ್ಷೇತ್ರ ಮತ್ತು ತಮ್ಮಲ್ಲಿನ ಅವಿನಾಭಾವ ಸಂಬಂಧವನ್ನು ಸ್ಮರಿಸಿಕೊಂಡರು.
ಸಮಾರಂಭದಲ್ಲಿ ಹಾಜರಿದ್ದ ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಆಗಿ ನೇಮಕಗೊಂಡಿರುವ ನಾಗರಾಜ್ ಅವರು ಮಾತನಾಡಿ, ಸರ್ಕಾರದ ವತಿಯಿಂದ, ತಮ್ಮ ಇತಿಮಿತಿಯಾಳಗೆ ಮಾಡಬಹುದಾದಂಥ ಎಲ್ಲ ಪ್ರಯತ್ನಗಳನ್ನೂ ಮಾಡಿ, ಅಶ್ವಥ್ ಅವರಿಗೆ ಮುಕ್ತ ಸಹಾಯಗಳಿಗೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ, ಅಲಬಾಮಾದ ಪ್ರೊ। ವೈ ಆರ್ ಮೋಹನ್ ಅವರ ‘ನೆನಪುಗಳು' ಕನ್ನಡ ಪುಸ್ತಕ, ವಾಷಿಂಗ್ಟನ್ ಡಿ ಸಿ ಯ ‘ಕಾವೇರಿ' ಕನ್ನಡಸಂಘದ ಇತ್ತೀಚಿನ (2006ರ) ವಾರ್ಷಿಕ ಸಾಹಿತ್ಯ ಸಂಚಿಕೆ ‘ಭಾವನದಿ', ಮತ್ತಿತರ ಕನ್ನಡ ಪುಸ್ತಕಗಳನ್ನು ಅಶ್ವಥ್ ಅವರಿಗೆ ಉಡುಗೊರೆಯಾಗಿ ನಾಗಲಕ್ಷ್ಮಿ ಹರಿಹರೇಶ್ವರ ನೀಡಿದರು.
ಸಮಾರಂಭದಲ್ಲಿ ಶಿಕಾರಿಪುರ ಹರಿಹರೇಶ್ವರ, ರಂಗಕರ್ಮಿಗಳಾದ ಎಚ್.ಕೆ. ರಾಮನಾಥ್, ಯು.ಎಸ್. ರಾಮಣ್ಣ, ನಾಗರತ್ನ ಮುಂತಾದವರೂ, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಸ್. ರಾಮಪ್ರಸಾದ್ ಅವರು ಹಾಜರಿದ್ದರು.