ನೆದರ್ ಲ್ಯಾಂಡಿನಲ್ಲಿ ಕನ್ನಡ ಡಿಂಡಿಮ
- ವಿನಯ ಜನಾರ್ದನ, ಆಮ್ ಸ್ಟರ್ ಡ್ಯಾಮ್
ಸಮುದ್ರ ಮಟ್ಟದ ಬಯಲು ನಾಡು ನೆದರ್ ಲ್ಯಾಂಡಿನ ಶ್ರೀಗಂಧ ಕನ್ನಡ ಸಂಘ ತನ್ನ ಮೂರನೇ ಕನ್ನಡ ರಾಜ್ಯೋತ್ಸವವನ್ನು ತನ್ಮಯತೆಯಿಂದ ಆಚರಿಸಿತು. ರಾಜ್ಯೋತ್ಸವದ ಜೊತೆಗೆ ದೀಪಾವಳಿ ಸಂಭ್ರಮವೂ ಮೇಳೈಸಿತ್ತು. ಈ ದೇಶದ ವಿವಿಧ ಊರುಗಳಲ್ಲಿ ನೆಲೆಸಿರುವ ಕನ್ನಡಿಗರೆಲ್ಲ ಫಿಲಿಪ್ಸನ ತವರೂರಾದ ಐಂಧೊವನ್ ನಗರದಲ್ಲಿ ಸೇರಿ ಸಂಭ್ರಮಿಸಿದರು. ನೆದರ್ಲ್ಯಾಂಡಿನಲ್ಲಿನ ಒಟ್ಟು ಕನ್ನಡ ಕುಟುಂಬಗಳ ಸಂಖ್ಯೆ ಇನ್ನೂ ಎಪ್ಪತ್ತೈದನ್ನೂ ಮುಟ್ಟಿಲ್ಲದಿದ್ದರೂ ನೆರೆದಿದ್ದವರ ಉತ್ಸಾಹಕ್ಕೇನೂ ಕೊರತೆಯಿರಲಿಲ್ಲ.
ಎಂದಿನಂತೆ ಕನ್ನಡ ತಾಯಿ ಭುವನೇಶ್ವರಿಯ ಪೂಜೆಯೊಂದಿಗೆ ನಮ್ಮ ಕಾರ್ಯಕ್ರಮ ಆರಂಭವಾಯಿತು. ಕನ್ನಡದ ದೀಪವನ್ನು ಡಿ.ಎಸ್.ಕರ್ಕಿಯವರ "ಹಚ್ಚೇವು ಕನ್ನಡದ ದೀಪ" ಸಮೂಹ ಗಾಯನದೊಂದಿಗೆ ಬೆಳಗಿಸಿದ ನಂತರ ಸಂಘದ ಕಾರ್ಯದರ್ಶಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಲೆಂಡಿನ ಮೊದಲ ಕನ್ನಡಿಗರಾದ ರಮೇಶ್ ಅವರು ನೆದರ್ಲ್ಯಾಂಡಿನಲ್ಲಿರುವ ಎರಡನೆ, ಮೂರನೆ ಪೀಳಿಗೆಯ ಕನ್ನಡಿಗರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನೆದರ್ಲ್ಯಾಂಡಿನ ಮತ್ತೊಬ್ಬ ಮೊದಲ ಕನ್ನಡಿಗರಾದ ಶ್ರೀಮತಿ ಕಾಂತಾರೆಡ್ಡಿಯವರು ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ವೈಶಿಷ್ಟ್ಯವನ್ನು ಸ್ವಾರಸ್ಯಕರ ಅಂಶಗಳನ್ನು ಬಳಸಿ ಪ್ರಸ್ತುತ ಪಡಿಸಿದರು.
ಶ್ರೀಗಂಧ ಸಂಘದ ಎರಡನೇ ಸ್ಮರಣ ಸಂಚಿಕೆ ಕನ್ನಡ ಸೌರಭವನ್ನೂ ಕೂಡ ಈ ಸಮಯದಲ್ಲಿ ಬಿಡುಗಡೆ ಗೊಳಿಸಲಾಯಿತು. ಸಂಪಾದಕ ಅರವಿಂದ ಶ್ರೀನಿವಾಸ ಅವರು ಸಂಚಿಕೆಯ ಸ್ವಾರಸ್ಯ ಮತ್ತು ಲೇಖನ ಸಂಪತ್ತುಗಳ ಬಗ್ಗೆ ಕಿರು ಪರಿಚಯವನ್ನು ನೀಡಿದರು. ನೆದರ್ಲ್ಯಾಂಡಿನ ಕನ್ನಡಿಗರು ಬರೆದ ಹಲವು ಲೇಖನಗಳ ಈ ಸಂಚಿಕೆ ಬಹಳ ಸೊಗಸಾಗಿ ಮೂಡಿಬಂದಿದೆ.
ಕಾರ್ಯಕ್ರಮದಲ್ಲಿ ವೃಂದಗಾನದಲ್ಲಿ ಹಲವು ಗೀತೆಗಳನ್ನು ಹಾಡಲಾಯಿತು. ಹಲವಾರು ನಾಡಗೀತೆಗಳ ಸಮೂಹಗಾನ ಕನ್ನಡಿಗರೆಲ್ಲರ ಅಭಿಮಾನವನ್ನು ಬಡಿದೆಬ್ಬಿಸಿತು. ಡಿವಿಜಿಯವರ ಅಂತಃಪುರ ಗೀತೆಯಲ್ಲಿನ "ಸುಂದರಿ ನೀನೆ", ಕೆ.ಎಸ್.ನರಸಿಂಹಸ್ವಾಮಿಯವರ "ರಾಯರು ಬಂದರು ಮಾವನ ಮನೆಗೆ" ಗೀತೆ ವೃಂದಗಾನದಲ್ಲಿ ಶ್ರೀಮತಿ ಇಂದಿರಾ ರಮೇಶ್ ಅವರ ನೇತೃತ್ವದಲ್ಲಿ ಹಾಡಲಾಯಿತು. ದೀಪಾವಳಿಯ ಪ್ರಯುಕ್ತವಾಗಿ ಬಿ.ಎಂ.ಶ್ರೀ ಯವರ "ಕರುನಾಳು ಬಾ ಬೆಳಕೆ" ಹಾಗೂ ಕವಿ ನಿಸಾರ್ ಅಹ್ಮದ್ ಅವರ ನಿತ್ಯೋತ್ಸವ ಕೂಡ ವೃಂದಗಾನದಲ್ಲಿ ಶ್ರೀಮತಿ ಮಂಜುಳಾ ಅವಿನಾಶ ಅವರ ನೇತೃತ್ವದಲ್ಲಿ ಸೊಗಸಾಗಿ ಮೂಡಿಬಂದವು.
ಈ ಹಾಡುಗಳ ಮಧ್ಯೆ ಶೆಲ್ವನಾರಾಯಣ ಅವರ ನೇತೃತ್ವದಲ್ಲಿ "ನಾಟಕದ ಮನೆ" ಹಾಗೂ "ರಾಮ ಸೇತುವೆ" ಎಂಬ ಪ್ರಹಸನಗಳು ಮುದ ನೀಡಿದವು. ಹಳ್ಳಿಯಲ್ಲಿ ಮುಗ್ಧ ಜನರಿಂದ ನಾಟಕವನ್ನಾಡಿಸುವಾಗ ನಡೆಯುವ ಘಟನೆಗಳು ನಾಟಕದ ಮನೆಯಲ್ಲಿ ಮುಖ್ಯ ವಸ್ತುವಾಗಿದ್ದರೆ, ರಾಮ ಸೇತುವೆಯನ್ನು ರಕ್ಷಿಸಲು ಹನುಮಂತ ಹಾಗೂ ಜಾಂಬವಂತ ಚಿಂತನೆ ನಡೆಸಿರುವಾಗ ಅಲ್ಲಿಗೆ ಬಂದ ರಾಮನೊಡನೆ ನಡೆಯುವ ನಮ್ಮ ಈಗಿನ ರಾಜಕೀಯ ನಾಯಕರ ಬಗೆಗಿನ ವಿಡಂಬನಾತ್ಮಕ ಸಂಭಾಷಣೆ ರಾಮ ಸೇತುವೆ ನಾಟಕದ ಮೂಲಾಧಾರವಾಗಿದ್ದವು.
ಶ್ಯಾಮಸುಂದರ ನಾಯಕ್ ಅವರ ನೇತೃತ್ವದಲ್ಲಿ ಗೊಡ್ಡು ಸ್ವಾಮಿಗಳು ಮತ್ತು ರಾಜಕಾರಣಿಗಳ ಮತ್ತೆರಡು ಚುಟುಕು ಪ್ರಹಸನಗಳು ಕನ್ನಡಿಗರೆಲ್ಲರನ್ನೂ ನಗೆಯ ಕಡಲಿನಲ್ಲಿ ಮುಳುಗಿಸಿದವು. ಎಲ್ಲಕ್ಕೂ ಪುಟವಿಟ್ಟಂತೆ ಚಿಣ್ಣರ ವಿವಿಧ ವೇಷ ಕಾರ್ಯಕ್ರಮ ತಂದೆ ತಾಯಿಯರಿಗೆ ಪೇಚನ್ನೂ ಮಕ್ಕಳಿಗೆ ಚಪ್ಪಾಳೆಯನ್ನು ತಂದು ಕೊಟ್ಟಿತು. ಒಂದು ವರ್ಷದ ಕೃಷ್ಣನ ವೇಷಧಾರಿಯನ್ನು ಸುಮಾರು ಅದೇ ವಯಸ್ಸಿನ ಇಬ್ಬರು ಗೋಪಿಕೆಯರು ಗೋಳು ಹೊಯ್ದುಕೊಳ್ಳುತ್ತಿದ್ದರು. ಕೃಷ್ಣದೇವರಾಯನಿಂದ ಹಿಡಿದು ಸಮುದ್ರ ಕಳ್ಳನವರೆಗಿನ ವಿವಿಧ ವೇಷಗಳನ್ನು ತೊಟ್ಟು ಪುಟಾಣಿಗಳು ಮೆರೆದವು.
ಈ ಕಾರ್ಯಕ್ರಮವನ್ನು ನಡೆಸಿಕೊಟ್ಟ ಶ್ರೀಮತಿ ರೂಪಾ ಪೊದ್ದಾರ್ ಅವರು ಹೇಳಿದಂತೆ ಇದು ಮಕ್ಕಳೊಡನೆ ತಂದೆ ತಾಯಿಯರ ಕ್ಯಾಟ್ ವಾಕ್ ಕೂಡ ಆಗಿತ್ತು. ಕುಮಾರ ಕರಣ್ ಪುಟ್ಟದಾಗಿ ಕರ್ನಾಟಕದ ಬಗ್ಗೆ ಒಂದು ಭಾಷಣವನ್ನು ನೀಡಿದ. ಇದು ಹೊರನಾಡ ಕನ್ನಡಿಗರು ತಮ್ಮ ಮಕ್ಕಳಿಗೆ ಕರ್ನಾಟಕದ ಬಗೆಗಿನ ವಿಷಯಗಳನ್ನು ತಿಳಿಸಲು ಪಡುವ ಪರಿಶ್ರಮದ ಪ್ರತೀಕವಾಗಿತ್ತು. ವೀಣಾ ಹೆಡತಲೆಯವರ ಶಾಸ್ತ್ರೀಯ ಗಾಯನ ಹಾಗೂ ಅಜಿತ ಸ್ಕಂಧನ ನಾಡಗೀತೆ ಪ್ರೇಕ್ಷಕರ ಮನ ತಣಿಸಿದವು.
ಕೊನೆಯದಾಗಿ ಶ್ರೀಧರ ಚಕ್ರವರ್ತಿ ಅವರು ನಡೆಸಿಕೊಟ್ಟ ರಸಪ್ರಶ್ನೆ ಕಾರ್ಯಕ್ರಮವು ಕರ್ನಾಟಕದ ಬಗ್ಗೆ ವಿಷಯಗಳನ್ನು ತಿಳಿಸಿಕೊಡುವುದರ ಜೊತೆಗೆ ವಿನೋದ ಲಹರಿಯನ್ನು ಉಕ್ಕಿಸಿತು. ಪಾರ್ವತಮ್ಮ - ಲೀಲಾವತಿಯವರ ಮುಖಾಮುಖಿ, ಕರುಣಾನಿಧಿ - ವಾಟಾಳ್ ರವರ ಮುಖಾಮುಖಿ, ವಿಜಯಮಲ್ಯ ಹಾಗೂ ಶ್ರೀ ಶ್ರೀ ಶ್ರೀ ರವಿಶಂಕರ ಅವರು ಮುಖಾಮುಖಿ, ಸ್ಪರ್ಧಿಗಳ ಸಾಮಾನ್ಯಜ್ಞಾನ ಮತ್ತು ಸಮಯಪ್ರಜ್ಞೆಯನ್ನು ಒರೆಗೆ ಹಚ್ಚಿದವು. ನಾಡಗೀತೆ ಹಾಗೂ ವಂದನಾರ್ಪಣೆಯೊಂದಿಗೆ ಮುಕ್ತಾಯವಾದ ಈ ಕಾರ್ಯಕ್ರಮ ನೆದರ್ಲ್ಯಾಂಡಿನ ಕನ್ನಡಿಗರೆಲ್ಲರ ನಾಡು-ನುಡಿಯ ಒಲವನ್ನು ಹೆಚ್ಚಿಸುವುದರ ಜೊತೆಗೆ ಬಾಂಧವ್ಯವನ್ನು ಮತ್ತೆ ಬೆಸೆಯಲು, ಗಟ್ಟಿಗೊಳಿಸಲು ಸಹಕಾರಿಯಾಯಿತು.
ಕಾರ್ಯಕ್ರಮದ ಚಿತ್ರಪಟಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications