ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳು...
ಉದ್ಧರಿಸುವೆವೊ ರಂಗಾ... ಸ್ಮರಣೆ ಒಂದೇ ಸಾಲದೇ, ಗಾನವೊಂದೇ ಸಾಲದೇ -ಪುರಂದರರಿಗೆ ಸಿಂಗಪುರ ಕನ್ನಡಿಗರ ನಮನ. ದಾಸರ ಆರಾಧನೆ ನಿಮ್ಮ ಮನಗಳಲ್ಲೂ ನೆರವೇರಲಿ.
- ವಾಣಿ ರಾಮದಾಸ್, ಸಿಂಗಪುರ
ದಾಸ ಸಾಹಿತ್ಯದ ಪರಂಪರೆಯಲ್ಲಿ ಪುರಂದರದಾಸರಿಗೆ ಅಗ್ರಸ್ಥಾನ. ಅವರಲ್ಲಿ ನಾವು ಕಾಣುವುದು ಭಕ್ತ, ಹಾಡುಗಾರ, ಕೀರ್ತನಕಾರ. ಪುರಂದರ ದಾಸರ ಕೀರ್ತನೆಗಳಲ್ಲಿ ಸಮಾಜ ವಿಮರ್ಶೆ, ಸಮಾಜ ಬೋಧನೆ, ನಾಮ ಸಂಕೀರ್ತನೆ, ಅಂತರಂಗ ನಿವೇದನೆ, ಆಧ್ಯಾತ್ಮಿಕ ಕಲ್ಪನೆಗಳು ಹೇರಳ. ದಾಸರ ಕೃತಿಗಳಲ್ಲಿ ಭಕ್ತನ ಸಂಪೂರ್ಣ ಸಮರ್ಪಣೆಯ ಸಾಕ್ಷಾತ್ಕಾರ ಸುಂದರ ರೂಪ ಕಂಡು ಬರುತ್ತದೆ. ಹಾಗೆಯೇ ಭಕ್ತಿ, ಶೃಂಗಾರ, ಹಾಸ್ಯ, ವಾತ್ಸಲ್ಯ, ವೈರಾಗ್ಯ, ನೀತಿಬೋಧೆ, ಜೀವನ ನಿಷ್ಠೆ ಇದೆ.
ಹೌದು, ದಾಸರೆಂದರೆ ಪುರಂದರದಾಸರಯ್ಯಾ.. ಈ ದಾಸಶ್ರೇಷ್ಠರ ಬಗ್ಗೆ ಇದೇ ಜನವರಿ 21 ಸಂಗೀತ ಪಿತಾಮಹ ಪುರಂದರದಾಸರ ಆರಾಧನೆಯ ಕಾರ್ಯಕ್ರಮ ಸಿಂಗಪುರ ಕನ್ನಡ ಸಂಘದ ವತಿಯಿಂದ ವಡಪತ್ತಿರೈ ಕಾಳಿಯಮ್ಮನ ದೇಗುಲದಲ್ಲಿ ಜರುಗಿತು.
ಲಂಬೋಧರನ ನಮನದಿಂದ ಪ್ರಾರಂಭಗೊಂಡ ಪುರಂದರ ನಮನ ಕೆರೆಯನೀರನು ಕೆರೆಗೆ ಚೆಲ್ಲಿ, ವೆಂಕಟರಮಣನೆ ಬಾರೋ, ನಾರಾಯಣ ನಿನ್ನ, ಹರಿನಾಮ ಜಿಹ್ವೆಯಾಳಿರಲು, ತಾರಕ್ಕ ಬಿಂದಿಗೆ, ಜಗದೋದ್ದಾರನ ಹೀಗೆ ದಾಸ ವಿರಚಿತ ಅನೇಕ ಕೀರ್ತನೆಗಳನ್ನು ಹಾಡಿ ಆನಂದಿಸಿದರು.
ತಂಬೂರಿ ಮೀಟಿದವ, ಭವಾಬ್ದಿ ದಾಟಿದವ.. ಮೀಟಕ್ಕೂ ಬರೋಲ್ಲ.. ದಾಟಕ್ಕೂ ಬರೋಲ್ಲ ಎನ್ನುವ ನಮ್ಮಂಥವರೂ ಕೂಡ ಅಂದು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಪುರಂದರನನ್ನು ನೆನೆಯುವ ಈ ಮಾನವ ಜನ್ಮ ದೊಡ್ಡದೋ ಹುಚ್ಚಪ್ಪಗಳಿರಾ ಎಂದು ಭಕ್ತಿ ರಸದ ಮೂಲಕ, ಸಂಗೀತ ಮಾಧ್ಯಮದ ಮೂಲಕ ಭಗವಂತನ ನೆನೆದೆವು.
ಈ ಆರಾಧನೆ ಕೇವಲ ಸಿಂಗಪುರದ ಕನ್ನಡಿಗರಿಗೆ ಮೀಸಲಾಗಿರದೆ ಸಂಗೀತ ರಸಿಕರಿಗೆ, ಆರಾಧಕರಿಗೆ ಮುಕ್ತ ವೇದಿಕೆಯಾಗಿತ್ತು. ಅಂದು ದಾಸರ ಕೀರ್ತನೆಗಳನ್ನು ಹಾಡು, ಕೀಬೋರ್ಡ್, ಕೊಳಲು, ವಯಲಿನ್ ಜೊತೆಗೆ ನೃತ್ಯಗೈಯುವ ಮೂಲಕ ಸಂಗೀತ ರಸಿಕರು ಕರ್ನಾಟಕ ಸಂಗೀತ ಪಿತಾಮಹನಿಗೆ ನಮನ ಸಲ್ಲಿಸಿದರು. ಸಂಗೀತ ಪ್ರೇಮಿಗಳು ಕರ್ನಾಟಕ ಸಂಗೀತ ಪಿತಾಮಹನ ಕೀರ್ತನೆಗಳನ್ನು ಹಿಂದೂಸ್ಥಾನಿ ಶೈಲಿಯಲಿ ಹಾಡಿ ಸಭಿಕರನ್ನು ರಂಜಿಸಿದರು. ಅಂದಿನ ಆ ಸಂಗೀತ ವೇದಿಕೆಯಲ್ಲಿ ಹಿರಿ-ಕಿರಿಯರು, ಸಂಗೀತ ಬಲ್ಲವರು-ಬಾರದವರು ಎಂಬ ಭೇಧ ಇಲ್ಲದೆ ಎಲ್ಲರ ಬಾಯಲ್ಲಿ ದಾಸರ ಕೃತಿಗಳು ಸರಳವಾಗಿ, ಸರಾಗವಾಗಿ ಒಕ್ಕೊರಲಿನಿಂದ ನಲಿದಾಡಿದವು.
ನೃತ್ಯಪಟು ಗಿರೀಶ್ ಫಣಿಕ್ಕರ್ ಅವರು ಆನೆಯು ಕರೆದರೆ ಆದಿ ಮೂಲ ಬಂದಂತೆ, ದಶಾವತಾರ ಹಾಗೂ ತಂಬೂರಿ ಮೀಟಿದವ ಭವಾಬ್ದಿ ದಾಟಿದವ ಎಂಬ ಎರಡೂ ಕೀರ್ತನೆಗಳಿಗೆ ಸೊಗಸಾಗಿ ನೃತ್ಯಗೈದರು. ತ್ಯಾಗರಾಜನ್ ಅವರ ಕೊಳಲು ಮತ್ತು ವಯಲಿನ್, ದೇವರಾಜನ್, ವಿಘ್ನೕಶ್ ಮತ್ತು ಅಖಿಲೇಷ್ ಅವರ ಮೃದಂಗ, ತುಳಸಿ ಅವರಿಂದ ಖಂಜಿರ ಹಾಡುವವರಿಗೆ ತಕ್ಕ ಸಾರಥ್ಯ ನೀಡಿತು.
ಸಿಂಗಪುರದಲ್ಲಿ ಕನ್ನಡಸಂಘದ ವತಿಯಿಂದ ನಿಯೋಜಿಸಲ್ಪಟ್ಟ ಪುರಂದರನಮನದ ಕಾರ್ಯಕ್ರಮದ ನೇತೃತ್ವ ವಹಿಸಿದವರು ಸಂಗೀತ ವಿದುಷಿ ಶ್ರೀಮತಿ ಭಾಗ್ಯಮೂರ್ತಿ. ಸಂಗೀತ ಮಾಧ್ಯಮದ ಬಗ್ಗೆ, ದಾಸಶ್ರೇಷ್ಠರ ಬಗ್ಗೆ ಸಭಿಕರಿಗೆ ಸಂಕ್ಷಿಪ್ತ ಮಾಹಿತಿಯನಿತ್ತವರು ಜನಾರ್ದನಭಟ್ಟರು. ಸಂಘದ ಸದಸ್ಯೆ ವಿಶಾಲಾಕ್ಷಿ ಅವರಂದ ಆಭಾರ ಮನ್ನಣೆ.
ಸ್ವರವೇ ಘಂಟಾನಾದ, ರಾಗ, ತಾಳಗಳೇ ಆರತಿ ಸಂಗೀತ ಪ್ರೇಮಿಗಳ ಗಾನವೇ ಕರ್ನಾಟಕ ಸಂಗೀತ ಪಿತಾಮಹನಿಗೆ ನಾವ್ ಸಲ್ಲಿಪ ಸೇವೆ. ಪುರಂದರರನ್ನು ಪಾಡಿ ಪೊಗಳಿದ ಅಂದಿನ ದಿನವೇ ಶುಭದಿನವೂ ಎನ್ನುತ್ತಾ, ಭಾಗ್ಯಾದ ಲಕ್ಷ್ಮಿಯನ್ನು ಬಾಯ್ತುಂಬಾ ಕರೆಯುತ್ತಾ ಜೊತೆಗೆ ಪುರಂದರ ವಿಠಲನನ್ನು ನೆನೆಯುತ್ತಾ, ಸಂಗೀತ ಪಿತಾಮಹನ ಆರಾಧನೆಯ ಸಂಗೀತ ಸುಧೆಯನ್ನು ಸವಿಯುತ್ತಾ ಸಂಗೀತ ಕೇಳಲು, ಕಲಿಯಲು, ಭಕ್ತಿ ಭಾವವನ್ನರಿಯಲು ನಿನ್ನ ನಾ ಆಶ್ರಯಿಸುವೆನೋ ಪುರಂದರವಿಠಲಾ ಎಂದು ನಮಿಸಿ ನಿರ್ಗಮಿಸಿದೆವು.












Click it and Unblock the Notifications