ಅನಿವಾಸಿ ಕನ್ನಡಿಗರ ಕಣ್ಣಲ್ಲಿ ‘ಕಾವೇರಿ ಸಮಸ್ಯೆ-ಪರಿಹಾರ’
‘ದ್ವೀಪ’
ಕಾದಂಬರಿಯ
ವಿಮರ್ಶೆ
:
ಕಾವೇರಿ ಚರ್ಚೆಗೂ ಮೊದಲು, ಸಾಹಿತ್ಯ ಗೋಷ್ಠಿ ಅಂಗಳದಲ್ಲಿ ಗಣೇಶ್ ಕಡಬ ಅವರು ನಾ ಡಿಸೋಜ ಅವರ ‘ದ್ವೀಪ’ ಕಾದಂಬರಿಯ ವಿಮರ್ಶೆ ಮಾಡಿದರು.
ಈ ಕಾದಂಬರಿಯ ಪ್ರಮುಖ ಪಾತ್ರಗಳಾದ ಗಣಪಯ್ಯ, ನಾಗಿ ಮತ್ತು ಕೃಷ್ಣ ಇವರುಗಳನ್ನು ಕೇಂದ್ರೀಕರಿಸಿ, ಪಾತ್ರ ವಿವೇಚನೆ/ವಿಶ್ಲೇಷಣೆ ಮಾಡುತ್ತ, ನಾಟಕೀಯವಾಗಿ ಕಥೆಯ ಹಂದರವನ್ನು ನೀಡಿದರು.
‘ದ್ವೀಪ’ ಕಾದಂಬರಿಯಲ್ಲಿ ಮೂಡಿಬಂದ ನೈಜತೆ, ಕಥೆಯ ಬೆಳವಣಿಗೆ, ನಾ. ಡಿಸೋಜ ಅವರಿಗಿದ್ದ ಹಿಡಿತಕ್ಕೆ ಕಾರಣ, ಅವರ ಸ್ವಾನುಭವ. ಕಣ್ಣಿಗೆ ಕಾಣದ ಲೋಕವನ್ನು ಅವರು ಸೃಷ್ಟಿಸಲಿಲ್ಲ. ಶರಾವತಿ ಅಣೆಕಟ್ಟು ಕಟ್ಟುವಾಗ, ಮುಳುಗಡೆಯ ಸಂದರ್ಭದಲ್ಲಿ, ಸಾಮಾನ್ಯ ಕುಟುಂಬಗಳು ಅನುಭವಿಸಿದ ನೋವು, ಸಂಕಟ, ಸರ್ಕಾರ ನೀಡಿದ ಪರಿಹಾರ ಸೃಷ್ಟಿಸಿದ ಸಮಸ್ಯೆಗಳು, ಹೇಗೆ ಅನಕ್ಷರಸ್ಥ ಸಮಾಜವನ್ನು ಹಿಂಡಿದವು. ಇವುಗಳ ಬಲೆಯಲ್ಲಿ ಸಿಲುಕಿದ ಸಾಮಾನ್ಯವರ್ಗ ತನ್ನ ವ್ಯಕ್ತಿತ್ವವನ್ನು ಹೇಗೆ ದಿನೇದಿನೇ ಕಳೆದುಕೊಂಡು, ಕೊನೆಯಲ್ಲಿ ಬಲಿಪಶುವಾಯಿತು ಎನ್ನುವುದನ್ನು ಕಾದಂಬರಿ ಸಮರ್ಥವಾಗಿ ಚಿತ್ರಿಸುವುದಷ್ಟೇ ಅಲ್ಲದೆ, ಓದುಗರನ್ನು ವಿಚಾರಲೋಕಕ್ಕೆ ಎಳೆದೊಯ್ಯುತ್ತದೆ ಎಂದು ವಿವರಿಸಿದರು.
ಮುಳುಗಡೆಯಲ್ಲಿ ದ್ವೀಪವಾಗಿ ಪರಿವರ್ತನೆಯಾದ ನೆಲೆಯಷ್ಟೆ ಅಲ್ಲ, ವ್ಯಕ್ತಿತ್ವಗಳು ಕೂಡ ಹೇಗೆ ಪರಿತಪಿಸುತ್ತವೆ ಎಂಬುದನ್ನು ಗಣೇಶ್ ಕಡಬರವರು ಸ್ವಾರಸ್ಯಕರವಾಗಿ ಶ್ರೋತೃಗಳ ಮುಂದಿರಿಸಿದರು.
ಗಣೇಶ್ ಕಡಬ ಅವರು ನೀಡಿದ ಪಾತ್ರವಿಮರ್ಶೆಯ ಬಗ್ಗೆ ಸ್ಪಂದಿಸಿದ ಸಭಿಕರು ಚರ್ಚೆಯಲ್ಲಿ ಪಾಲ್ಗೊಂಡು, ಸಭೆಗೆ ಜೀವಂತಿಕೆಯನ್ನು ನೀಡಿದರು. ಶ್ರೋತೃಗಳ ಸಮಸ್ಯೆಗಳಿಗೆ/ಪ್ರಶ್ನೆಗಳಿಗೆ ಗಣೇಶ್ ಕಡಬ ಅವರು ಉತ್ತರಿಸಿದರು. ಸಭೆಯ ಮಧ್ಯಂತರದಲ್ಲಿ ಚಹ ಮತ್ತು ಬಿಸ್ಕತ್ತಿನ ವ್ಯವಸ್ಥೆ ಮಾಡಲಾಗಿತ್ತು (ಶ್ರೀಮತಿ ವಿಜಯ ಕಣೇಕಲ್ ಅವರ ಸೇವಾರ್ಥ.)
ಶ್ರೀವತ್ಸ ದುಗ್ಗಲಾಪುರ ಅವರು ಪ್ರಾರ್ಥಿಸಿದರು. ಉದಯಶಂಕರ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಉದಯಶಂಕರ್ ಅವರು ವಂದನಾರ್ಪಣೆ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ವಿಶ್ವನಾಥ್ ಹುಲಿಕಲ್ ವಹಿಸಿದ್ದರು.