ಉದರ ನಿಮಿತ್ತಂ ಗಾಯಕ ವೇಷಂ!
ಕಿಟ್ಟಿ ಈಗ ಸಂಗೀತ ವಿದ್ವಾನ್ ಕೃಷ್ಣಮಾಚಾರ್ಯ! ಏನೋ ಮಾಡಿ ಅಮೆರಿಕಾಗೆ ನುಗ್ಗಿದ... ಅಲ್ಲಿ ಸಂಗೀತ ಕಚೇರಿ ನೀಡಿದ್ದಕ್ಕಿಂತಲೂ ಬೇರೆಯದನ್ನೇ ಜಾಸ್ತಿ ಮಾಡಿದ.. ಓದಿ, ಒಂದು ಹಾಸ್ಯ ಲೇಖನ.
- ಪಿ.ಎಸ್.ಮೈಯ, ಡೇರಿಯನ್, ಶಿಕಾಗೊ
ತಾಯ್ನಾಡ ವ್ಯಾಮೋಹವೋ ಅಥವಾ ‘ಲಕ್ಷ್ಮೀ ಭವನ’ದ ಇಡ್ಲಿ ಸಾಂಬಾರ್ ವ್ಯಾಮೋಹವೋ ಗೊತ್ತಿಲ್ಲ. ಅಂತೂ ಇಂತೂ ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿಗೆ ಹೋಗಿ ಅಟೆಂಡೆನ್ಸ್ ಹಾಕಿ ಬರದಿದ್ದರೆ ಅವನ ಮನಸ್ಸಿಗೆ ತೃಪ್ತಿ ಇಲ್ಲ.
ಈ ಸಾರಿ ಬೆಂಗಳೂರಿಗೆ ಹೋದಾಗ ಅವನಿಗೆ ತನ್ನ ಚಿಕ್ಕಂದಿನ ಚಡ್ಡಿ ಗೆಳೆಯ ಕಿಟ್ಟಿಯನ್ನು ನೋಡಲೇಬೇಕು ಅಂತ ಅನ್ನಿಸಿಬಿಟ್ಟಿತು. ಯಾಕಂದರೆ ಆ ಕಿಟ್ಟಿ ಈಗ ಸಂಗೀತ ವಿದ್ವಾನ್ ಕೃಷ್ಣಮಾಚಾರ್ಯ ಅನ್ನೋ ಹೆಸರಿನಿಂದ ಮೆರೆಯುತ್ತಿದ್ದ. ಹಿಂದಿನ ದಿನವಷ್ಟೆ ಟೀವಿಯಲ್ಲಿ ಅವನ ಸಂಗೀತದ ಪ್ರೋಗ್ರಾಂ ಬೇರೆ ಇತ್ತು! ಎಲ್ಲ ಕಡೆ ಅವನ ಸಂಗೀತ ಕಚೇರಿಗಳೇನು! ‘ಲಕ್ಷ್ಮೀ ಭವನ’ದ ದೋಸೆಯಂತೆ ಬಿಸಿಬಿಸಿ ಮಾರಾಟವಾಗುತ್ತಿರುವ ಧ್ವನಿಮುದ್ರಿಕೆಗಳೇನು! ಅಂತೂ ಈ ಕಿಟ್ಟಿಯ ಜನಪ್ರಿಯತೆ ಮೂಗಿನ ಮೇಲೆ ಬೆರಳಿಟ್ಟುಕೋಬೇಕು! ಹಾಗಿತ್ತು.
ಗುಂಡೂಗೆ ಕಿಟ್ಟಿಯ ಸಂಗೀತ ಪ್ರತಿಭೆಯ ವಿಷಯ ಚಿಕ್ಕಂದಿನಲ್ಲೇ ಗೊತ್ತಿತ್ತು. ಯಾವಾಗ ನೋಡಿದರೂ ಏನಾದರೂ ಒಂದು ಹಾಡು ಗುನುಗುನಿಸುತ್ತ ಇರುತ್ತಿದ್ದ. ಶಾಲೆಯಲ್ಲಿ ಅವನು ಹಾಡೋದನ್ನು ಕೇಳಿದವರೆಲ್ಲ ಇನ್ನೊಂದು ಹಾಡು, ಮತ್ತೊಂದು ಹಾಡು ಅಂತ ಪೀಡಿಸುತ್ತಿದ್ದರು. ಆದರೆ ಅವನು ಓದುವುದರಲ್ಲಿ ಮಾತ್ರ ಹಿಂದೆ. ಹಾಗಾಗಿ ಕಲಿಯುವುದರಲ್ಲಿ ಮುಂದಿದ್ದ ಗುಂಡೂನ ಸ್ನೇಹ ಅವನಿಗೆ ಅತ್ಯಗತ್ಯವಾಗಿತ್ತು. ಆಗಲೇ ವ್ಯವಹಾರ ಬುದ್ಧಿಯೂ ಅವನಿಗೆ ಚೆನ್ನಾಗಿತ್ತು. ಯಾರ ಸ್ನೇಹ ಯಾವಾಗ ಮಾಡಿಕೊಂಡರೆ ಒಳ್ಳೇದು ಅಂತ ಗೊತ್ತು ಮಾಡಿಕೊಂಡು ಅಂಥವರ ಸ್ನೇಹ ಮಾಡಿ, ಆಯಾ ‘ಸ್ನೇಹ’ಗಳ ಸದುಪಯೋಗವನ್ನೂ ಚೆನ್ನಾಗಿ ಪಡೆದುಕೊಳ್ಳುತ್ತಿದ್ದ!
ಒಂದು ಸಾರಿ ಹೀಗೇ ಹೋಮ್ ವರ್ಕಿಗೆ ಸಹಾಯ ಬೇಕೂಂತ ಗುಂಡೂ ಮನೆಗೆ ಬಂದಿದ್ದ. ಮನೆಯ ಪಕ್ಕದಲ್ಲೇ ಗುಂಡೂ ಅಪ್ಪನ ಹೋಟಲು ಇದ್ದಿದ್ದರಿಂದ ಅಲ್ಲಿಗೆ ಹೋದ ಮೇಲೆ ಹೇಗಿದ್ದರೂ ದೋಸೆ ನೈವೇದ್ಯ ಇದ್ದೇ ಇರುತ್ತೆ ಅಂತ ಕಿಟ್ಟಿಗೂ ಗೊತ್ತು. ಕಿಟ್ಟಿಗೆ ಮಸಾಲೆ ದೋಸೆ ಅಂದರೆ ಪಂಚಪ್ರಾಣ! ದೋಸೆ ತಿನ್ನುವಾಗ ‘ಯಾವ ವಡೆ, ಪಕೋಡ, ಬೋಂಡಾನೂ ಈ ದೋಸೆಯ ರುಚಿಗೆ ಸಮಾನವಾದ್ದಲ್ಲ ಕಣೊ’ ಅಂತ ತನ್ನ ಸಿದ್ಧಾಂತವನ್ನು ಮಂಡಿಸುತ್ತಿದ್ದ.
ವೀಸಿಯವರ ಮಸಾಲೆ ದೋಸೆಯ ಪದ್ಯವನ್ನು ಹೇಳುತ್ತಾ ತನ್ನ ಕಂಚಿನ ಕಂಠದಲ್ಲಿ ‘ಒಂದು ಸ್ಪೆಶಲ್ ಮಸಾಲೆ ದೋಸೆ ಹೊಟ್ಟೆ ಸೇರಿತೆಂದರೆ ಹೊರಗೆ ಒಳಗೆ ಮೂರು ಲೋಕ ತಾಪ ತಣಿದ ನೆಮ್ಮದಿ’ ಅಂತ ಹಾಡೇ ಬಿಡುತ್ತಿದ್ದ. ಗುಂಡೂನಲ್ಲಿ ಒಳಗೆಲ್ಲೋ ಅಡಗಿದ್ದ ರಸಿಕ ಶಿಖಾಮಣಿ ವ್ಯಕ್ತಿತ್ವ ಕಿಟ್ಟಿಯ ಸಂಗೀತ, ಸಾಹಿತ್ಯದ ಪ್ರತಿಭೆಯನ್ನು ಮೆಚ್ಚಿಗೆ, ಅಭಿಮಾನಗಳಿಂದ ನೋಡುತ್ತಿತ್ತು.
ಸರಿ ಈ ಸಾರಿಯೂ ದೋಸೆ ಸಮಾರಾಧನೆ ನಡೆಯಿತು. ಆಮೇಲೆ ‘ನಾನು ಬರ್ತೀನಿ ಕಣೋ’ ಅಂತ ಕೈ ಬಾಯಿ ಒರೆಸಿಕೋತಾ ಹೊರಟೇಬಿಡೋದೆ ಈ ಕಿಟ್ಟಿ? ಆಮೇಲೆ ಗುಂಡೂನೇ ಜ್ಞಾಪಿಸಬೇಕಾಯ್ತು. ‘ನನ್ನ ನೋಟ್ಸ್ ಬೇಡವೇನೋ?’ ಅಂತ.
‘ಅಯ್ಯೋ ಮರೆತೇ ಹೋಯ್ತು!’ ಅಂತ ಗುಂಡೂ ಕೈಯಿಂದ ನೋಟ್ಸ್ ತಗೊಂಡ ಕಿಟ್ಟಿ. ಆದರೆ ಗುಂಡೂಗೆ ಇನ್ನೂ ಏನೋ ಅನುಮಾನ. ಇವನು ಬಂದಿದ್ದು ತನ್ನ ನೋಟ್ಸಿಗಾಗಿಯಾ ಅಥವಾ ಮಸಾಲೆ ದೋಸೆಗಾಗಿಯಾ ಅನ್ನೋ ಜಿಜ್ಞಾಸೆ ಕೊನೆಗೂ ಬಗೆ ಹರಿಯಲಿಲ್ಲ!
ಎಲ್ಲಿಂದೆಲ್ಲಿಗೋ ಬಂದುಬಿಟ್ಟೆ. ಹ್ಞಾ, ಗುಂಡೂ ಅಮೆರಿಕಾದಿಂದ ಬಂದಾಗ ಕಿಟ್ಟಿ ಒಬ್ಬ ಗಣ್ಯ ವ್ಯಕ್ತಿಯಾಗಿಬಿಟ್ಟಿದ್ದ ಅಂತ ಹೇಳುತ್ತಿದ್ದೆ ಅಲ್ಲವೆ? ನಮ್ಮ ಗುಂಡೂಗೆ ಕಿಟ್ಟಿಯನ್ನು ನೋಡಿ ಮಾತಾಡಿಸಬೇಕು ಅಂತ ಏನೋ ಹಂಬಲ ಶುರುವಾಯ್ತು. ಹಾಗೆ ನೋಡಿದರೆ ಗುಂಡೂ ಅಮೆರಿಕಾಗೆ ಹೋದ ಮೇಲೆ ಅವರಿಬ್ಬರ ಮಧ್ಯೆ ಯಾವ ಸಂಪರ್ಕವೂ ಇರಲಿಲ್ಲ. ಕಿಟ್ಟಿ ಫೋನ್ ನಂಬರ್ ಪತ್ತೆ ಹಚ್ಚಿ ಅವನ ಮನೆಗೆ ಫೋನ್ ಮಾಡಿದ. ಕಿಟ್ಟಿ ಮನೆಯಲ್ಲಿ ಇರಲಿಲ್ಲ. ಅವನ ಹೆಂಡತಿಯ ಮೂಲಕ ಕಿಟ್ಟಿ ಮನೆಯ ವಿಳಾಸ, ಅಲ್ಲಿಗೆ ಹೋಗುವ ದಾರಿ ಎಲ್ಲ ತಿಳಿದುಕೊಂಡು ಒಂದು ಶುಭ ಮುಹೂರ್ತದಲ್ಲಿ ಕಿಟ್ಟಿಯ ಮನೆಯಲ್ಲಿ ಗುಂಡೂ ಹಾಜರಾದ!
ಕಿಟ್ಟಿ ಈಗ ತುಂಬ ಬದಲಾಗಿಬಿಟ್ಟಿದ್ದ! ಮುಖದಲ್ಲಿ ಒಂದು ಚಿಗುರು ಮೀಸೆ, ಹಣೆಯಲ್ಲಿ ಕೆಂಪು ಕುಂಕುಮ, ಕೊರಳಲ್ಲಿ ಒಂದು ಚಿನ್ನದ ಸರ, ಧರಿಸಿದ ಜುಬ್ಬಾ ಎಲ್ಲವೂ ಅವನ ವಿದ್ವತ್ತನ್ನು ಸಾರಿ ಹೇಳುತ್ತಿವೆಯೋ ಎಂಬ ಹಾಗಿತ್ತು! ಹಾಗೇ ಗುಂಡೂನೂ ಬದಲಾಗಿದ್ದ. ಅಮೆರಿಕಾದ ಶ್ರೀಮಂತ ಜೀವನ ಅವನಿಗೆ ಧಾರಾಳವಾಗಿ ಬೊಜ್ಜು ಮೈ ಹಾಗೂ ದೊಡ್ಡ ಹೊಟ್ಟೆಯನ್ನು ದಯಪಾಲಿಸಿತ್ತು. ಕಿಟ್ಟಿಗೆ ಮೊದಲಿಗೆ ಗುಂಡೂನ ಗುರುತೇ ಸಿಕ್ಕಲಿಲ್ಲ. ಏನೋ ಗಲಿಬಿಲಿಗೊಂಡವರಂತೆ ಗುಂಡೂ ಮುಖ ನೋಡುತ್ತಾ ‘‘ಏನು ಬೇಕಾಗಿತ್ತು?’’ ಅಂದ.
ಗುಂಡೂ ‘ನಾನು ಕಣೋ, ಗುಂಡೂ’ ಅಂದಾಗಲೂ ತಲೆಯಲ್ಲಿ ಟ್ಯೂಬ್ ಲೈಟ್ ಹೊತ್ತಿಕೊಳ್ಳಲೇ ಇಲ್ಲ! ಕೊನೆಗೆ ಮಸಾಲೆ ದೋಸೆ ಪ್ರಸ್ತಾಪ ಎತ್ತಿದಾಗ ಪರಿಚಿತ ಭಾವ ಒಂದು ಕಣ್ಣಿನಲ್ಲಿ ಹಾಯ್ದಿತು. ಆದರೂ ಸ್ವಲ್ಪ ಬಿಗಿಯಾಗೇ ಇದ್ದ. ಹೆಚ್ಚಿಗೆ ಸದರ ತೋರಿದರೆ ಎಲ್ಲಿ ಗಂಟು ಖರ್ಚಾಗುತ್ತೋ ಅನ್ನೋ ತರ.












Click it and Unblock the Notifications