ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆ
ಹಾಸ್ಯ ಪ್ರಜ್ಞೆ ನಮ್ಮಲ್ಲಿ ಬೆಳೆಯಬೇಕಾದ ಒಂದು ವಸ್ತು. ನಾ. ಕಸ್ತೂರಿಯವರು ‘ಎಳೆಗರುಂ ಎತ್ತಾಗದೇ?’ ಎಂಬ ಸೋಮೇಶ್ವರ ಶತಕದ ಒಂದು ಸಾಲನ್ನು ‘ಎಳೆ ಕುರುಂ ಹುಣ್ಣಾಗದೇ?’ ಎಂದು ತಿರುಚಿದ್ದಾರೆ. ಅಂದರೆ ನಗೆ ವ್ಯಾಧಿ ಕೂಡ ನಾವು ಮನಸ್ಸು ಮಾಡಿದರೆ ಬೆಳೆಯುತ್ತದೆ ಎಂದಂತಾಯಿತು. ‘ಅದ್ದಂ ವಿೂದಿ ಪೆಸರಗಿಂಜಂ’ ಎಂಬ ಮಾತಿದೆ ತೆಲುಗಿನಲ್ಲಿ. ಅಂದರೆ ಕನ್ನಡಿಯ ಮೇಲೆ ಹೆಸರು ಕಾಳಿಟ್ಟರೆ ಜಾರುತ್ತದಂತೆ! ಹಾಗೆಯೇ ಹಾಸ್ಯ ಪ್ರಜ್ಞೆ ಇದ್ದರೆ ನಮ್ಮ ದ್ವೇಷಬುದ್ಧಿ ಜಾರುತ್ತದಂತೆ!
ನಿಜವಾದ ಹಾಸ್ಯಗಾರರು ಭಾಷೆಗೆ ಒಂದು ಮೆರುಗು ತರುತ್ತಾರೆ ಎಂಬುದು ಸುಳ್ಳಲ್ಲ. ‘ಗರಳ ಕೊರಳವನರಳ ಸರಳಂಗೆ ಮುನಿವಂತೆ’ ಎನ್ನುತ್ತಾನೆ ರಾಘವಾಂಕ. ಗರಳಕೊರಳವನು ಎಂದರೆ ವಿಷಕಂಠನಾದ ಈಶ್ವರ. ಅವನು ಅರಳಸರಳಂಗೆ ಎಂದರೆ ಪುಷ್ಪಬಾಣನಾದ ಮನ್ಮಥನ ಮೇಲೆ ಕೋಪಿಸಿಕೊಂಡಂತೆ ಎಂದರೆ ಅಲ್ಲಿ ಮಾತಿನ ಚಮತ್ಕಾರ ಇದೆ. ಮಕ್ಕಳ ರಂಜನೆಗೆ
She sells seashells by the sea-shore.
The shells she sells are surely sea shells
so, if she sells shells on the sea
shore I am sure she sells sea shore shells
ಎಂಬ ಶಬ್ದಾಡಂಬರ ಬಳಸುವುದುಂಟು. ನಾಲಗೆ ಸರಿಯಾಗಿ ತಿರುಗದವರು Tease my ears ಎನ್ನಲು Ease my tears ಎಂದೋ Take a shower ಎನ್ನಲು Shake a tower ಎಂದೋ It is pouring with rain ಎನ್ನಲು It is soaring with pain ಎಂದೋ ಹೇಳಿ ನಗೆ ಉಕ್ಕಿಸುತ್ತಾರೆ. ಇವುಗಳನ್ನು ‘ತಿರುನಾಲಗೆ’ ಎನ್ನಬಹುದು.
ರನ್ನಕವಿ ಅಜಿತಪುರಾಣದಲ್ಲಿ ‘ಸತ್ತ’ ಎಂದು ಹೇಳುವುದಕ್ಕೆ ‘ಕೃತಾಂತ ದಂತಾಂತರ ವಜ್ರಘಾತ ಜರ್ಝರೀಕೃತ ತನುವಾದನ್’ ಎನ್ನುತ್ತಾನೆ. ಅಂದರೆ ಯಮನ ಕೋರೆ- ದಾಡೆಗಳ ಭಾರಿಯ ಹೊಡೆತದಿಂದ ಹೋಗಲ್ಪಟ್ಟ ಪ್ರಾಣ ಉಳ್ಳವನಾದನು ಎಂದರ್ಥ. ಶಬ್ದಾಡಂಬರಕ್ಕೆ ಮನಸೋತ ಒಬ್ಬ ತೆಲುಗು ವಿದ್ಯಾರ್ಥಿ
‘ಅಂಡಾಂಡ ಪಿಂಡಾಂಡ ಬ್ರಹ್ಮಾಂಡ ಭಾಂಡಂಬು
ಧಂಡಿಗಾ ಮೆಂಡಿಗಾ ವಲಸಿ ವೇಸೆ’
ಎಂದ. ‘ದೀನಿಕಿ ಅರ್ಥಮೇಮಿರಾ?’ (ಇದಕ್ಕೆ ಅರ್ಥವೇನು?) ಎಂದು ಕೇಳಿದರೆ ‘ಇಂಕಾ ಅರ್ಥಂ ಪೆಟ್ಟಲೇದು ಸಾರ್ ಶಬ್ದಾಲು ಪೆಟ್ಟಿನಾನು ಅಂತೆ!’ ಎಂದನಂತೆ.
ಪ್ರಬಂಧಕಾರರು ಬಳಕೆಯ ಶಬ್ದಗಳನ್ನು ಹೊಸಶಬ್ದಗಳಿಗೆ ತಿರುಗಿಸಿಬಿಡುತ್ತಾರೆ. ಪಂಪ ಶಬ್ದ ಕೆಲವರಿಗೆ ಸೆಂಟ್ರಿಫ್ಯೂಗಲ್ ಪಂಪಾ? ಎಂದು ಕೇಳುವಂತೆ ಮಾಡಿತಂತೆ! ರಾಗಗಳ ಹೆಸರು ನಿಮಗೆ ಗೊತ್ತು. ಆದರೆ ಆ ರಾಗಗಳಿಗೆ ಅಪಚಾರವಾಗುವಂತೆ ಹಾಡುತ್ತಿದ್ದರೆ ಅದು ಕೀರವಾಣಿ, ಹಿಂಸಧ್ವನಿ, ಕರಕರ ಪ್ರಿಯ, ಎಳೆದೆಳೆದು ಆಲಾಪಿಸಿದರೆ ಕಂತುವರಾಳಿ, ಮುಖಾಮುರಿ.
ವಾತಾವರಣ ಕೆಟ್ಟಿದ್ದರೆ ಅದು ಹಾಸ್ಯಗಾರರ ಬರಹದಲ್ಲಿ ‘ನಾತಾವರಣ’ ಆಗುತ್ತದೆ. ಧನಸ್ತಾಪ, ಕೊಳೇಬರ, ಜ್ವರದೃತು, ಅಕ್ರಮಾದಿತ್ಯ, ಒಣಮಾಲಿ, ಮು‘ಖಾರ’ವಿಂದ, ಭೋರ್ಗೊರೆತ, ಕುತೂ‘ಹಲಿ’, ಕಸಾನುಭವ, ಕವಿತಿಲಕ (=ಕಾವ್ಯಕ್ಕೆ ತಿಲ=ಎಳ್ಳು ಕ=ನೀರು ಬಿಡುವವನು!) ಇವೆಲ್ಲ ಎಂ.ಎಚ್. ಕೃಷ್ಣಯ್ಯನವರು ಹೇಳುವಂತೆ ‘ಅಕ್ಷರ ಚೆಲ್ಲಾಟ’ಗಳು. ಶಾಖಾಯ ಶೀತಾಯ, ಹೆತ್ತ worryಗೆ ಹೆಗ್ಗಣ ಮುದ್ದು, ಕೊರವಣಿಗೆ, ಬಾಯಕ, ಕೂಗಿದರು ದನಿಕೇಳಲಿಲ್ಲವೆ ನರ-ಹರಿಯೆ? ಇತ್ಯಾದಿ. ವೇಣುಗೋಪಾಲ ಸೊರಬ, ನಾ. ಕಸ್ತೂರಿ ಮೊದಲಾದವರ ಅನರ್ಥಕೋಶಗಳು ಇಂಥ ಸಾವಿರಾರು ಶಬ್ದಗಳನ್ನು ಟಂಕಿಸಿವೆ.
ಭಾಷಣಕಾರರು ಪಂಜಾಬಿನ ‘ಅಕಾಲಿ’ಗಳು ಎಂದು ಹೇಳುವಾಗ ಅವರಿಗೆ ಸಮಯಪ್ರಜ್ಞೆ ಇಲ್ಲ ಎಂಬರ್ಥ ತಂದಿದ್ದಾರೆ. ‘ನೊಬೆಲ್’ ಪಾರಿತೋಷಕವನ್ನು ಭಾಷಣಕಾರರೆಲ್ಲ ಬಯಸುತ್ತಾರೆ. ಆದರೂ ಅಧ್ಯಕ್ಷರು ಬೆಲ್ ಬಾರಿಸುವುದನ್ನು ನಿಲ್ಲಿಸಿಲ್ಲ. ಕವಿತೆಯನ್ನು ‘ನೀನು ಶಬ್ದಗಳಲ್ಲಿ ಏಕೆ ಅವಿತೆ?’ ಎಂದು ವೈ.ಎನ್.ಕೆ ಕೇಳಿರುವುದು ಎಷ್ಟು ಮಾರ್ಮಿಕವಾಗಿದೆ!












Click it and Unblock the Notifications