‘ಕೇರಿ’ಯಲ್ಲಿ ‘ಸಂಪಿಗೆ’ ದಶಮಾನೋತ್ಸವದ ಸೊಬಗು!
ಕರ್ನಾಟಕಕ್ಕೆ ಐವತ್ತಾದರೆ, ನಮ್ಮ ‘ಕೇರಿ (Cary)’ ಯು ಕನ್ನಡ ಬಳಗ, ‘ಸಂಪಿಗೆ’ಗೆ ಹತ್ತು. ಸುವರ್ಣ ಕರ್ನಾಟಕದ ಸಂತಸಕ್ಕೆ ದನಿಗೂಡಿಸುವ ಸಂಭ್ರಮ ನಮ್ಮದು.
ನಮ್ಮ ಸಂತೋಷದಲ್ಲಿ ದೂರದಿಂದ ಬಂದು ಪಾಲ್ಗೊಂಡ ಹಲವು ಹತ್ತು ಅಮೇರಿಕನ್ನಡಿಗರಿಗೆ ನಮ್ಮ ಧನ್ಯವಾದಗಳು. ತಾಯ್ನಾಡಿನಲ್ಲಿಯೇ ಕುಳಿತು ತಮ್ಮ ಸಂದೇಶದ ಮೂಲಕ ಪ್ರೋತ್ಸಾಹಿಸಿದ ಚಿತ್ತಾಲರಿಗೆ ವಿಶೇಷ ಧನ್ಯವಾದಗಳು.
ಹೊಸವರ್ಷದ ಹೊಸ್ತಿಲಿನಲ್ಲಿ ನಮ್ಮ ಕನ್ನಡ ಸಂಘದ ದಶಮಾನೋತ್ಸವ(ಡಿ.30)ಕ್ಕೆ ದೂರದಿಂದ ಬಂದು ಭಾಗವಹಿಸಿ, ಪ್ರೋತ್ಸಾಹಿಸಿ, ಜೊತೆಗೇ ಕರ್ನಾಟಕದ ಯಕ್ಷಗಾನ ಕಲಾವಿದರ ಏಳಿಗೆಗಾಗಿ ಹಣ ಸಂಗ್ರಹಿಸುವ ಹೃದಯವಂತಿಕೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ತೋರಿಸಿದ, ವಾಸು ಐತಾಳ (ಹೂಸ್ಟನ್), ಡಾ. ರಾಜೇಂದ್ರ ಕೆದ್ಲಾಯ (ಶಿಕಾಗೊ), ಡಾ. ರಮೇಶ್ ಕೇಕುಡ (ಮ್ಯಾಡಿಸನ್), ಶಾಂತಿ ತಂತ್ರಿ (ವಾಷಿಂಗ್ಟನ್ ಡಿ ಸಿ), ಸುರೇಖ (ಅಗಸ್ಟಾ) ಮತ್ತು ಭಾರತಿ ಸುದರ್ಶನ್ (ವಿನ್ಸ್ಟನ್ ಸೇಲಂ) ಅವರುಗಳಿಗೆ ನಾವು ಚಿರಋಣಿಗಳು. ದೂರದ ಬಾಸ್ಟನ್ನಿಂದ ಬಂದು, ಒಂದು ಗಂಟೆಯಕಾಲ ನಮಗೆ ಶಾಸ್ತ್ರೀಯ ಸಂಗೀತವನ್ನುಣಬಡಿಸಿದ್ದು, 16ರ ಅಮೆರಿಕನ್ನಡಿಗ ಮಾಸ್ಟರ್ ಸುಹಾಸ್ ರಾವ್. ಇಲ್ಲಿನ ನೆಲದಲ್ಲಿ ಹುಟ್ಟಿ ಬೆಳೆದ ಒಂದು ಪ್ರತಿಭೆ, ನಮ್ಮ ನೆಲದ ಶಾಸ್ತ್ರೀಯ ಸಂಗೀತವನ್ನಾಯ್ದುಕೊಂಡು ಅದರಲ್ಲಿ ಪರಿಣತಿಯನ್ನು ತೋರುವುದು ಎಲ್ಲ ಭಾರತೀಯರೂ ಹೆಮ್ಮೆ ಪಡಬೇಕಾದ ವಿಷಯವಷ್ಟೇ ಅಲ್ಲ, ನಮ್ಮ ಸಂಸ್ಕೃತಿಯ ಉಳಿವಿನ ಬಗ್ಗೆ ಭರವಸೆಯನ್ನೂ ಹುಟ್ಟಿಸುವ ಸಂಗತಿ.
ಕರ್ನಾಟಕದ ಸುವರ್ಣ ಮಹೋತ್ಸವದ ಮೂಡಿನಲ್ಲಿ ಕನ್ನಡಿಗರಿದ್ದರೆ, ನಮ್ಮ ಕೇರಿ (Cary, NC, USA) ಯ ಕನ್ನಡಿಗರಿಗೆ ತಮ್ಮ ಕನ್ನಡ ಕೂಟ -‘ಸಂಪಿಗೆ’ಗೆ ಹತ್ತು ತುಂಬಿದ ಹೆಮ್ಮೆ, ಸಂಭ್ರಮ. ಸುಮಾರು 150 ಕನ್ನಡ ಸಂಸಾರಗಳಿರುವ ‘ರೀಸರ್ಚ್ ಟ್ರ್ಯಾಂಗಲ್ ಪಾರ್ಕ್’ ಎಂದೇ ಹೆಸರಾಗಿರುವ ಪ್ರದೇಶ, ಅಸಲಿನಲ್ಲಿ ‘ರ್ಯಾಲಿ’ (Raleigh), ಕೇರಿ, ಏಪೆಕ್ಸ್ ಮತ್ತು ಚಾಪೆಲ್ ಹಿಲ್ ಎಂಬ ಊರುಗಳಿಂದ ಆವೃತವಾದ, (Research Triangle Park) ತಂತ್ರಜ್ಞಾನದ ಕೇಂದ್ರವಾಗಿದೆ.
ಜಗತ್ತಿನ ಖ್ಯಾತ ಕಂಪೆನಿಗಳಾದ, IBM, CISCO, Glaxo, ಸೇರಿದಂತೆ ಹಲವಾರು ಕಂಪೆನಿಗಳಿಗೆ ಮನೆಯಾಗಿರುವ ಹೆಗ್ಗಳಿಕೆ ಈ ಪ್ರದೇಶದ್ದು. ಜಗತ್ತಿನಲ್ಲೇ ಅತಿ ಹೆಚ್ಚು ಪಿ.ಹೆಚ್.ಡಿ ಪದವೀಧರರ ಸಾಂದ್ರತೆ ಹೊಂದಿರುವ ಪ್ರದೇಶವೆಂಬ ಹೆಗ್ಗಳಿಕೆಯೂ ಇದೆಯೆನ್ನಿ. ಇರಲಿ ನಮ್ಮ ಸಣ್ಣ ಊರಿನ ಕೀರ್ತಿ ಕೊಚ್ಚಿಕೊಳ್ಳಬೇಕಲ್ಲ ಅದಕ್ಕೆ ಹೇಳಿದೆ. ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಿಂದ ಭಾರತಕ್ಕೆ ‘ಔಟ್ ಸೋರ್ಸ್ ಆಗದ’ ಕೆಲಸಗಳು ನಮ್ಮಲ್ಲಿಗೆ ಬರುವ ಸಾಧ್ಯತೆಗಳು ಹೆಚ್ಚು. ಕಾರಣ, ಉದ್ದಿಮೆಗಳಿಗೆ ಪ್ರೋತ್ಸಾಹಕರ ವಾತಾವರಣ, ಉತ್ತಮ ಹವೆ ಇತ್ಯಾದಿ, ಇತ್ಯಾದಿ.
ಯಾರ್ಯಾರು ಬಂದಿದ್ದರು ಗೊತ್ತೆ?
ಸಣ್ಣ ಊರೆಂದರೂ ನಮ್ಮಲ್ಲಿಗೆ ಬಂದ ಖ್ಯಾತನಾಮರಲ್ಲಿ, ಸಂಪಾದಕ ಶಾಮಸುಂದರ್ ಸೇರಿದಂತೆ ಹಲವರಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್, ಮುದ್ದುಕೃಷ್ಣ, ರತ್ನಮಾಲ ಪ್ರಕಾಶ, ಶಿವಮೊಗ್ಗ ಸುಬ್ಬಣ್ಣ, ಮಹಾಬಲ ಮೂರ್ತಿ ಕೊಡ್ಲೆಕೆರೆ, ಕಲಾಶ್ರೀ ಶ್ರೀಧರ್ ಮತ್ತು ಅನುರಾಧ, ಟಿ. ಎನ್. ಸೀತಾರಾಂ, ಕಪ್ಪಣ್ಣ ಎಲ್ಲರೂ ಕಾಲಕಾಲಕ್ಕೆ ಬಂದಿದ್ದಾರೆನ್ನಿ. ಇತ್ತೀಚೆಗೆ ನಮ್ಮಲ್ಲಿ ಲಕ್ಷ್ಮೀನಾರಾಯಣ ಭಟ್ಟರು ಸಾಹಿತ್ಯ ಶಿಬಿರ ನಡೆಸಿಕೊಟ್ಟರೆ, ವಿದ್ಯಾಭೂಷಣರು ತಮ್ಮ ಭಕ್ತಿಸುಧೆಯಲ್ಲಿ ನಮ್ಮೆಲ್ಲರನ್ನೂ ತೋಯ್ದು ಬಿಟ್ಟಿದ್ದರು.
ಒಟ್ಟಿನಲ್ಲಿ ಹೇಳಬೇಕೆಂದರೆ, ಈ ಹತ್ತು ವರುಷಗಳುದ್ದಕ್ಕೂ, ‘ಸಂಪಿಗೆ’ ಯ ಸದಸ್ಯರುಗಳಿಗೆ, ಕರ್ನಾಟಕ ಮತ್ತು ಕನ್ನಡ ಸಂಸ್ಕೃತಿಗಳ ಸಂಪರ್ಕ ತಪ್ಪದಂತೆ ನೋಡಿಕೊಂಡ ಹೆಮ್ಮೆ ನಮ್ಮ ಕಾರ್ಯಕರ್ತರಿಗೆ ಸೇರಿದ್ದು. ಈ ಹತ್ತು ವರ್ಷಗಳ ಸಾಧನೆಗಳಿಗೆ ಶಿಖರಪ್ರಾಯವಾಗುವಂತೆ ದಶಮಾನೊತ್ಸವವನ್ನು ಆಚರಿಸಿದ ಹೆಮ್ಮೆ 2006ನೇ ವರ್ಷದಲ್ಲಿನ ರಿಶಿ ಆಚಾರ್ಯರ ನೇತೃತ್ವದ ಕಾರ್ಯಕಾರಿ ಸಮಿತಿಗೆ ಸೇರಬೇಕು. ಅದಕ್ಕೂ ಹೆಚ್ಚಾಗಿ, ನಮ್ಮ ಸಂತೋಷಕ್ಕೆ ರಂಗು ಕೊಡಲಿಕ್ಕಾಗಿ ಅಮೆರಿಕೆಯ ಹಲವು ಮೂಲೆಗಳಿಂದ ಬಂದ ಹವ್ಯಾಸಿ ಕಲಾವಿದರುಗಳಿಗೆ ಸೇರಬೇಕು.
ಜೋಕು ಜೋಕಾಲಿ
ಸಮಾರಂಭದ ಆರಂಭ, ನಮ್ಮ ಹರಟೆಕಟ್ಟೆಗೆ ಸೇರಿದ ನಾಲ್ಕಾರು ತಲೆ-ಹರಟೆಮಲ್ಲ ಹಾಗೂ ಮಲ್ಲಿಯರಿಂದ. ನಮ್ಮ ಮಧ್ಯೆ ಹರಟೆಹೊಡೆಯಲು ವಿಶೇಷವಾಗಿ ಬಂದವರು ವಿಚಿತ್ರಾನ್ನದ ಜೋಷಿಗಳು. ನಾನು ಕೊರೆಯುವುದು ಕಮ್ಮಿ ಬರೆಯುವುದು ಹೆಚ್ಚು ಎಂದ ಜೋಷಿಯವರು, ನಮ್ಮ ಸಹವಾಸ ದೋಷದಿಂದ ಅಂದು ಕೊರೆದಿದ್ದು ನಮಗೆಲ್ಲರಿಗೂ ಸಂತಸ ತಂದ ವಿಷಯವಾಗಿತ್ತು.
ಒಂದರ್ಧ ಗಂಟೆ ‘ಹಾಸ್ಯ ಹರಟೆ’ ಹೊಡೆಯಿರಿ ಎಂದ ವ್ಯವಸ್ಥಾಪಕರು ಸುಮಾರು ಆರು ಗಂಟೆಗೆ ಜನರೆಲ್ಲ ಬಂದು ಸಭೆ ತುಂಬುತ್ತಿದ್ದಂತೆ, ಕ್ಲುಪ್ತತೆಯಿಂದ ಮುಂದಿನ ಕಾರ್ಯಕ್ರಮಕ್ಕೆ ಜಾರಲು ನೋಡಿದಾಗ, ಅವರ ಉದ್ದೇಶ ತಿಳಿಯಿತು. ಸಭಿಕರೆಲ್ಲ ಬಂದು ಸೇರುವವರೆಗೂ ಹರಟೆ ಹೊಡೆಯಲೆಂಬಂತೆ ಹೇಳಿದವರ ಸ(ದುರು)ದುದ್ದೇಶ ನಮಗೆ ತಿಳಿಯುವ ಹೊತ್ತಿಗೆ ನಾವುಗಳು ಒಂದಷ್ಟು ಡುಂಡಿರಾಜರ ಹನಿ ಗವನ, ರಾಜ ರತ್ನಂ ರ ಪದಗಳು, ಹಾಗೂ ಅಲ್ಲಿ ಇಲ್ಲಿ ಕದ್ದ ಜೋಕುಗಳನ್ನು ಹಂಚಿಕೊಂಡೆವೆನ್ನಿ.












Click it and Unblock the Notifications