‘ಶಿವಶಿವನೆಂದರೆ ಭಯವಿಲ್ಲ’ ಅನ್ನೋದು ತಮಾಷೆಯಲ್ಲ!
ಕಾಲೇಜು ಮೆಟ್ಟಿಲೇರಿ ಎ,ಬಿ,ಸಿ,ಡಿ ಯನ್ನು ಗಟ್ಟಿಯಾಗಿ ಹೇಳುವಂತಾದಾಗ, ಕೆಲವೊಮ್ಮೆ ಈದೇವರ ಮೇಲೆ ಪ್ರಶ್ನೆಗಳ ಅಲೆಯೆದ್ದದ್ದೂ ಇದೆ. ಅಲ್ಲದೇ ಮೂರ್ತಿರಾಯರಂತವರ ಒಂದೆರೆಡು ಪುಸ್ತಕಗಳ ಕೆಲವು ಪುಟಗಳನ್ನು ಮಗುಚಿಹಾಕಿದ ಮೇಲೆ ಏನೇನೋ ಪ್ರಶ್ನೆಗಳು... ಇದೆಲ್ಲ ಎಲ್ಲಿಯವರೆಗೆ ಅಂದ್ರೆ; ಶಿವಲೀಲೆ ಅರ್ಥವಾಗುವ ವರೆಗೆ!
- ಸುಪ್ರೀತಾ ಎಸ್ ರಾವ್, ಫೀನಿಕ್ಸ್
‘ನಿನ್ನ ನಾಮ ಒಂದೇ ಸಾಲದೇ’....
ಈಶ್ವರನಿದ್ದಾನೆ ಬಿಡು ಯಾಕೆಯೋಚಿಸ್ತೀಯ? ಆ ಈಶ್ವರನೆಂದೂ ನಮ್ಮ ಕೈಬಿಡೋಲ್ಲ. ಆತ ಮನಸ್ಸುಮಾಡದಿರುವಾಗ ನಾವಿಲ್ಲಿ ಎಷ್ಟು ಗುದ್ದಾಡಿದ್ರು ಅಷ್ಟೇ!!! ಹೀಗೆಸುಮ್ನೆ ಕೂತುಯೋಚಿಸಿ ಆರೋಗ್ಯ ಕೆಡಿಸಿಕೊಳ್ಳೋ ಬದಲು ನಮ್ಮ ಕೈಲಾದದ್ದು ನಾವು ಮಾಡೋಣ ಮತ್ತೆಲ್ಲ ಆ ಈಶ್ವರನ ಇಚ್ಚೆ!!!
ನನ್ನ ತಂದೆಯ ಬಾಯಿಂದ ಯಾವಾಗಲೂ ಕೇಳುತ್ತಾ ಬಂದ ಮಾತುಗಳಿವು. ಮಲೆನಾಡಿನ ಅಡಿಕೆ ಬೆಲೆಕಾಣದ ದಿನಗಳವು. ಇದ್ದ ಚೂರು-ಪಾರು ಗದ್ದೆಯ ಫಸಲನ್ನೇ ನಂಬಿ ಸಾಗುತ್ತಿದ್ದ ದಿನಗಳಲ್ಲಿ ನಾಲ್ಕು ಮಕ್ಕಳ ವಿದ್ಯಾಭ್ಯಾಸ ಬೇರೆ! ಶಾಲೆಯ ಫೀಸಿಗೆ ಕೊನೆಯದಿನ ಹತ್ತಿರವಾಗುತ್ತಿರುವುದನ್ನು ಅಮ್ಮ ನೆನಪಿಸಿದಾಗಲೂ ಅಪ್ಪನ ಬಾಯಿಂದ ಬರುತ್ತಿದ್ದುದು ‘ಇನ್ನೂ ಎರಡು ದಿನವಿದೆಯಲ್ಲ ಎಲ್ಲಿಂದಲಾದರೂ ಈಶ್ವರ ಕೊಡ್ತಾನೆ ಬಿಡು’. ಮಾತಿನಂತೆಯೇ ಕೊನೆಯ ದಿನ ಏಳು ರುಪಾಯಿ ಫೀಸನ್ನು ನೀಡುತ್ತಿದ್ದುದಷ್ಟೇ ಸಾಕಾಗಿತ್ತು, ಬಾಲ್ಯದ ಆ ನನ್ನ ಮುಗ್ಧಮನಸ್ಸಿಗೆ ಈಶ್ವರನನ್ನು ನಂಬಲು!
ಮಲೆನಾಡ ದಟ್ಟ ಕಾಡಿನ ಮಧ್ಯದಲ್ಲಿದ್ದದ್ದು ನಾಲ್ಕೇ ಮನೆಯಾದರೂ ಚಿಂತೆಗೇನು ಕೊರತೆಯಿರಲಿಲ್ಲ. ಇವತ್ತು ಹೆಬ್ಬಾರರ ಮನೆಗೆ ನಾಗರಹಾವು ಬಂದು ಮನೆಯವರನೆಲ್ಲ ಹೊರಗೆ ಹಾಕಿದ್ದರೆ, ನಿನ್ನೆ ಕಾಳಿಂಗ ಸರ್ಪ ಸೀನನಿಗೆ ದಾರಿಬದಿಯಲ್ಲೇ ಕಂಡಿರುತ್ತಿತ್ತು. ಇನ್ನು ಪುಟ್ಟಮ್ಮನ ಮನೆಯ ಹಸುಕರುವನ್ನು ಹುಲಿತಿಂದಿರುತ್ತಿತ್ತು! ಈ ಸುದ್ದಿಯನ್ನೆಲ್ಲ ಕೇಳಿರುತ್ತಿದ್ದ ನನ್ನಮ್ಮನಿಗೆ, ಪೇಟೆಗೆ ಹೋದ ಅಪ್ಪ ಬರುವುದೈದು ನಿಮಿಷ ತಡವಾದರೂ ಚಿಂತೆಯಾಗುತ್ತಿತ್ತು.ಆದರೆ ಮನೆಗೆ ಬಂದ ಅಪ್ಪನ ಬಾಯಿಂದ ಬರುತ್ತಿದ್ದುದು ಅದೇ ಮಾತು, ‘ಹೆದರಿಕೆ ಯಾಕೆ ನಮ್ಮ ಪಾಲಿಗೆ ಈಶ್ವರನಿದ್ದಾನೆ’. ಹೌದು, ಆ ಧ್ವನಿಯಲ್ಲಿ ಅದೆಷ್ಟು ವಿಶ್ವಾಸ, ನಂಬಿಕೆ, ಅಮ್ಮನ ಕೈಹಿಡಿದು ಹೆಜ್ಜೆಹಾಕುತ್ತಿರುವ ಕಂದನೊಳಗೆ ಹುದುಗಿರುವ ಆತ್ಮವಿಶ್ವಾಸದಂತೆ!!
ಪ್ರಕೃತಿ-ಪುರುಷನ ತತ್ವಕ್ಕೆ ಕಾರಣನಾದ ಶಿವನೆಂದರೆ ನನಗೆ ವಿಶೇಷ ಪ್ರೀತಿ. ನಾನು ತಿಳಿದಂತೆ, ಶಿವನಷ್ಟು ಸುಲಭವಾಗಿ ಒಲಿವ ದೇವ ಮತ್ತೊಬ್ಬನಿಲ್ಲ. ಲಯಕರ್ತನಾದ ಶಿವ ಭಕ್ತರುಗಳಿಗೆ ಬೇಡಿದ ವರವ ಕೊಡುವ ಕಲ್ಪವೃಕ್ಷ! ರಾವಣಾಸುರನಿಗೆ ತನ್ನ ಆತ್ಮಲಿಂಗವನ್ನೇ ದಯಪಾಲಿಸಿದ ಕರುಣಾಮಯಿ. ಗಂಗೆಗೆ ಮುಡಿಯಲ್ಲಿ ಜಾಗಕೊಟ್ಟು, ಪಾರ್ವತಿಗೆ ಅರ್ಧಶರೀರವನ್ನೇ ಕೊಟ್ಟು ಅರ್ಧನಾರೀಶ್ವರನಾದ ಶಿವ, ಐಕ್ಯತೆಯ ಸಂಕೇತ.
ಭಸ್ಮಾಂಬರಧಾರಿ, ಚರ್ಮಾಂಬರಧಾರಿ, ಸ್ಮಶಾನವಾಸಿ, ಕೊರಳಲ್ಲೋ ರುದ್ರಾಕ್ಷಿ,ರುಂಡಮಾಲೆ, ಸಾಲದಕ್ಕೆ ನಾಗರಬೇರೆ. ರೌದ್ರತೆಯನ್ನು ನಾಟ್ಯದಲ್ಲಿ ಪ್ರದರ್ಶಿಸುವ ಶಿವ ತನ್ನ ಮೂರನೇ ಕಣ್ಣನ್ನು ಬಿಟ್ಟನೆಂದರೆ ಜಗತ್ತೇ ಸರ್ವನಾಶ ಅಬ್ಬಬ್ಬ!!! ಇಂತಹ ವಿಚಿತ್ರರೂಪ ಹೊಂದಿದ್ದರೂ ನಮ್ಮ ಕಾವ್ಯ ಪ್ರಪಂಚಕ್ಕೆ ಈತನೇ ಮೂಲ. ‘ಶಿವನಿಲ್ಲದೆ ಸೌಂದರ್ಯವೇ?...... ಶಿವ ಕಾವ್ಯದ ಕಣ್ಣೋ’!!
ನನಗಿನ್ನೂ ನೆನಪಿದೆ. ತಿಂಗಳಿಗೊಮ್ಮೆ ನಮ್ಮಲ್ಲಿ ತಪ್ಪದೇ ಮಾಡುವ ಸತ್ಯನಾರಾಯಣ ವ್ರತಕ್ಕೆ ಒಮೊಮ್ಮೆ ಭಟ್ಟರಿಗೆ ದಕ್ಷಿಣೆ ನೀಡಲೂ ಹಣವಿರುತ್ತಿರಲಿಲ್ಲ. ಹಾಗೆಂದು ಭಟ್ಟರನ್ನು ಬರಿಗೈಯಲ್ಲಿ ಕಳಿಸಿದ್ದೂ ಇಲ್ಲ! ಚಮತ್ಕಾರವೋ ಎಂಬಂತೆ, ಅಂತಾದಿನಗಳಲ್ಲಿ ಮುಂಜಾನೆಯೇ ಯಾರಾದರೂ ಔಷಧಿಗೆಂದು ಬಂದವರು ಇದುವರೆಗೆ ಪುಕ್ಕಟೇ ಕೊಂಡುಹೋಗುತ್ತಿದ್ದವರು ಸಹ, ಆ ದಿನ ಚೇಂಜನ್ನು ಇನ್ನೊಮ್ಮೆ ತೊಗೊಳ್ತೇನೆ ಬಿಡಿ ಎಂದು ಹೇಳಿದ ಪ್ರಸಂಗಗಳೆಷ್ಟೋ!












Click it and Unblock the Notifications