ಅಮೆರಿಕ ನೆಲದಲ್ಲಿ ಕನ್ನಡ ಕಲಿಗಳು!
ಅಮೆರಿಕಾ
ಅಂದ್ರೆ
ಏನೇನೋ
ಪರಿಕಲ್ಪನೆ.
ಆ
ನೆಲದಲ್ಲೂ
ಕನ್ನಡದ
ಹೂವುಗಳು
ಪರಿಮಳ
ಸೂಸುತ್ತವೆ
ಎಂಬ
ಸಂಗತಿ,
ಅಮೆರಿಕಾಕ್ಕೆ
ಭೇಟಿ
ನೀಡಿದ
ಸೀತಾಲಕ್ಷ್ಮಿ
ಅವರಿಗೆ
ಮನವರಿಕೆಯಾಗಿದೆ.
ತಮ್ಮ
ಮೊಮ್ಮಕ್ಕ
‘ಕನ್ನಡ
ಕಲಿ’
ಶಾಲೆ,
ಅಲ್ಲಿನ
ವಾತಾವರಣ
ಕಂಡು
ಅವರಿಗೆ
ಒಂದು
ಕ್ಷಣ
ಅಚ್ಚರಿ!
- ಬೀ. ಕೆ. ಸೀತಾಲಕ್ಷ್ಮಿ, ಬಿಡಾರ : ಉತ್ತರ ಕ್ಯಾಲಿಫೋರ್ನಿಯ
ಸುವರ್ಣಮಹೋತ್ಸವದ ಈ ಸಂದರ್ಭದಲ್ಲಿ ಕನ್ನಡನಾಡನ್ನು ಬಿಟ್ಟು ಬಂದಿದ್ದ ನನಗೆ ಅಮೆರಿಕದಲ್ಲಿ ಕನ್ನಡಕಲಿ ಪಾಠಶಾಲೆಯನ್ನು ನೋಡಿದಾಗ ಬಹಳ ಸಂತೋಷವಾಯಿತು. ಈ ಪಾಠಶಾಲೆಗೆ ದೂರದೂರದಿಂದ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದ ತಂದೆತಾಯಿಗಳು, ಉತ್ಸಾಹದಿಂದ ಕನ್ನಡ ಕಲಿಸುತ್ತಿದ್ದ ಶಿಕ್ಷಕರು ಮತ್ತು ಶಿಕ್ಷಕಿಯರು... ಇವರನ್ನೆಲ್ಲ ನೋಡಿದಾಗ ತುಂಬ ಹೆಮ್ಮೆಯಾಯಿತು.
2006 ಆಗಸ್ಟ್ 19ರಂದು ಪ್ರಾರಂಭವಾದ ತರಗತಿಗಳು ಯಶಸ್ವಿಯಾಗಿ ನಡೆದು ಡಿಸೆಂಬರ್ 17ರಂದು ಒಂದು ಸುಂದರ ಸಮಾರಂಭದೊಂದಿಗೆ ಮುಕ್ತಾಯವಾಯಿತು. ಶನಿವಾರ ಜೈನ್ ಮಂದಿರದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆದ ಈ ಸಮಾರಂಭಕ್ಕೆ ಕನ್ನಡಕಲಿ ಮಕ್ಕಳು ನೀಡಿದ ಮನರಂಜನೆ ಕಾರ್ಯಕ್ರಮಗಳು ಮೆರಗು ನೀಡಿತ್ತು.
ಪುಟಾಣಿ ಗೌರಿ ಜಮಖಂಡಿ ಹಾಡಿದ ‘ನಮ್ಮಮ್ಮ ಶಾರದೆ’ (ಸಂಜೀವ್ ಮೂರ್ತಿ ತಬಲ ಸಹವಾದನ) ಪ್ರಾರ್ಥನೆಯಾಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಬಾಲಕ ಸುಮುಖ್ ಶೇಖರ್ ಹಾಡಿದ ‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ’ ಗೀತೆ ಈ ಕಾರ್ಯಕ್ರಮದಲ್ಲಿ ಅರ್ಥಪೂರ್ಣವೆನಿಸಿತು. ನಿಕಿತ ಹಾಡಿದ ‘ಸಂಪಿಗೆ ಮರದ’ ಹಾಡು ಮೆಚ್ಚುಗೆ ಗಳಿಸಿತು.
ಮಕ್ಕಳಿಗೆ ಕನ್ನಡದ ತರಕಾರಿಗಳನ್ನು ಪರಿಚಯಮಾಡಿಸುವ ಉದ್ದೇಶವಿದ್ದ ‘ತರಕಾರಿ ಹಾಡಿನ ನೃತ್ಯ’ ಸವಿತ ಅವರ ನಿರ್ದೇಶನದಲ್ಲಿ ಚೆನ್ನಾಗಿ ಮೂಡಿಬಂತು. ಎಲ್ಲರನ್ನು ಮೆಚ್ಚಿಸುವುದಕ್ಕೆ ಆಗುವುದಿಲ್ಲ ಎಂಬ ನೀತಿಯನ್ನು ಹೇಳುವ ನಾಟಕ ‘ತಂದೆ, ಮಗ, ಕತ್ತೆ’. ಪಂಚತಂತ್ರದ ಕಥೆಯನ್ನು ಅಳವಡಿಸಿಕೊಂಡು, ಈ ನಾಟಕ ನಿರ್ದೇಶಿಸಿದವರು ಅಪರ್ಣ ಶಂಕರ್.
ಈ ಪುಟ್ಟ ನಾಟಕ ಮಕ್ಕಳ ಮುಗ್ಧ ಅಭಿನಯದಿಂದ ರಂಜಿಸಿತು. ಇದಾದ ನಂತರ ಕವಿ ಹೆಚ್. ಎಸ್. ವೆಂಕಟೇಶಮೂರ್ತಿ ರಚಿಸಿದ ‘ಹಕ್ಕಿಗೆಲ್ಲ ಮಾತು ಬಂತು ಈಗೀಗ’ ಹಾಡಿಗೆ ಮಕ್ಕಳು ಮಾಡಿದ ಸಮೂಹ ನೃತ್ಯ, ಸುಮಧುರವಾದ ರಾಗ ಇಂಪಾದ ಧ್ವನಿಯಿಂದ ಪ್ರೇಕ್ಷಕರನ್ನೆಲ್ಲ ಮೈಮರೆಯುವಂತೆ ಮಾಡಿತು. ಮಕ್ಕಳಿಗೆ ನೃತ್ಯ ಹೇಳಿಕೊಟ್ಟು ನಿರೂಪಿಸಿದ ಬಾಲಕಿ ನೇಹಾ ವೆಂಕಟೇಶ್.
ಕವಿ ಲಕ್ಷ್ಮೀನಾರಾಯಣ ಭಟ್ಟರು ರಚಿಸಿರುವ ‘ಬಹಳ ಒಳ್ಳೆಯವ್ರು ನಮ್ ಮಿಸ್ಸು’ ಕರ್ಣಾಟಕದಲ್ಲಿ ಮನೆ ಮಾತಾಗಿರುವ ಮಕ್ಕಳ ಗೀತೆ. ಅದನ್ನು ಪುಟಾಣಿ ಮಕ್ಕಳಿಗೆ ಹೇಳಿಕೊಟ್ಟು ಪ್ರದರ್ಶಿಸಿದವರು ಜ್ಯೋತಿ ಮತ್ತು ರಶ್ಮಿ. ಸುಧಾ ಜೀರಗೆ ಸಂಯೋಜಿಸಿದ ‘ಬೆಟ್ಟ ಮತ್ತು ಅಳಿಲು’, ಅಪರ್ಣ ಶಂಕರ್ ಮತ್ತು ಸವಿತ ಚಂದ್ರಶೇಖರ್ ಅವರ ನಿರ್ವಹಣೆಯಿಂದ ಮೂಡಿ ಬಂದ ‘ಬಣ್ಣದ ಒಗಟು’, ರಶ್ಮಿ ರಾಜನ್ ಮತ್ತು ಜ್ಯೋತಿ ಶೇಖರ್ ಅವರ ದಿಗ್ದರ್ಶನದಲ್ಲಿ ಹೊಮ್ಮಿದ ‘ಆಚೆ ಮನೆ ಸುಬ್ಬಮ್ಮ’ - ಈ ಎಲ್ಲ ಕಾರ್ಯಕ್ರಮಗಳೂ ಮಕ್ಕಳಿಗೆ ಕನ್ನಡದ ಬಗ್ಗೆ ಉತ್ಸಾಹ ಮೂಡಿಸುವುದರ ಜೊತೆಗೆ ಅವರನ್ನು, ಅವರ ತಂದೆ ತಾಯಿಯರನ್ನು ಮತ್ತು ಪ್ರೇಕ್ಷಕರನ್ನು ನಲಿದಾಡುವಂತೆ ಮಾಡಿತು. ಪೂಜಾ ಗುಬ್ಬಿ ಮಾಡಿದ ಏಕಪಾತ್ರಾಭಿನಯ ಕನ್ನಡ ಭಾಷೆಯ ಸೊಗಡು, ಸ್ಪಷ್ಟತೆ ಮತ್ತು ಹಾಸ್ಯದಿಂದ ಕೂಡಿತ್ತು.
ವಿದ್ಯಾರ್ಥಿಗಳ ಮಾತಾಪಿತೃಗಳ ಪರವಾಗಿ ಕಿರಣ್ ಸೂರ್ಯನಾರಯಣ್ ಅವರು ಕನ್ನಡ ಕಲಿ ಕಾರ್ಯಕ್ರಮದ ತಮ್ಮ ಅನುಭವವನ್ನು ಹಂಚಿಕೊಂಡರು. ಕೊನೆಯಲ್ಲಿ ಮೂಡಿಬಂದ ಬೊಂಬೆಯಾಟ ಮನರಂಜನೆಯನ್ನು ನೀಡುವುದರ ಜೊತೆಗೆ ಕರ್ನಾಟಕದ ಒಂದು ಪ್ರಸಿದ್ಧ ಕಲೆಯನ್ನೂ ಮಕ್ಕಳಿಗೆ ಪರಿಚಯಿಸಿತು. ಇದರಲ್ಲಿ ಬಣ್ಣ ಬಣ್ಣದ ಪಾತ್ರಗಳು ಹಾಗು ನೀತಿಬೋಧಕ ಕಥೆ ಎರಡನ್ನು ಬಹಳ ಕಲಾತ್ಮಕವಾಗಿ ಹೊಂದಿಸಿ ಮಕ್ಕಳನ್ನು ರಂಜಿಸಿದವರು ಶ್ರೀವತ್ಸ ಮತ್ತು ಪೂರ್ಣಿಮ.
ಈ ಕಾರ್ಯಕ್ರಮದ ಗಮನಾರ್ಹವಾದ ಅಂಶವೇನೆಂದರೆ ಮಕ್ಕಳು ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಉಚ್ಚರಿಸುವುದನ್ನು ಕಲಿಯುತ್ತಿದ್ದಾರೆ. ಅಲ್ಲದೆ ನಮ್ಮ ಸಂಸ್ಕೃತಿಯ ಬಗ್ಗೆ ಕನ್ನಡಕಲಿ ಶಿಕ್ಷಕ ವೃಂದದವರು ಮಕ್ಕಳಿಗೆ ಅರಿವು ಮೂಡಿಸುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಈ ಕನ್ನಡ ಕಲಿ ಪಾಠಶಾಲೆಯು ಎಷ್ಟು ಜನಪ್ರಿಯವಾಗಿದೆ ಎಂದರೆ ಮುಂದೆ ಜನವರಿಯಲ್ಲಿ ಆರಂಭವಾಗಲಿರುವ ತರಗತಿಗಳಿಗೆ ಅದೇ ದಿನವೇ ನೋಂದಾವಣೆ ಭರದಿಂದ ನಡೆಯುತ್ತಿತ್ತು.
ಪ್ರಾಂಶುಪಾಲರಾದ ಶ್ರೀಮತಿ ಸಂಧ್ಯ ರವೀಂದ್ರನಾಥ್ ಅವರು ಶಿಕ್ಷಕವೃಂದವನ್ನು ಅಭಿನಂದಿಸಿದರು. ಮಕ್ಕಳು ಹಣತೆ ಇದ್ದಂತೆ ಹಾಗು ಶಿಕ್ಷಣ ನೀಡುವವರು ಆ ಹಣತೆಯನ್ನು ಬೆಳಗುವ ಬೆಳಕಿನಂತೆ ಎಂಬ ಸಂದೇಶದ ಸೂಚ್ಯವಾಗಿ ಅವರಿಗೆ ದೀಪಗಳನ್ನು ನೀಡುವುದರ ಮೂಲಕ ಅಭಿನಂದಿಸಿದರು.
ಶಿಕ್ಷಕ ವೃಂದ : ಸಂಧ್ಯಾ ರವಿಂದ್ರನಾಥ್, ಪೂರ್ಣಿಮ, ಸವಿತ, ಅಪರ್ಣ, ಮೋನಿಕ, ರಶ್ಮಿ, ಶ್ರೀವತ್ಸ, ಸುಧಾ, ಜ್ಯೋತಿ.