1857 -ಭಾರತದ ಸ್ವಾತಂತ್ರ್ಯ ಸಂಗ್ರಾಮ ಎಲ್ಲರೂ ಓದಬೇಕಾದ ಪುಸ್ತಕ ಸಿಂಗಪುರದಲ್ಲಿ ಬಿಡುಗಡೆ
ಸ್ವಾತಂತ್ರ್ಯಯೋಧರ ಭಗವದ್ಗೀತೆ ಎನಿಸಿದ ಪುಸ್ತಕ ಯಾವುದು ಗೊತ್ತೆ? ಅದು; ವೀರ ಸಾವರ್ಕರ್ ಅವರ ಮರಾಠಿ ಮೂಲದ ‘‘1857 ಭಾರತದ ಸ್ವಾತಂತ್ರ್ಯ ಸಂಗ್ರಾಮ’’. ಈ ಪುಸ್ತಕದ ಕನ್ನಡ ಆವೃತ್ತಿ ಜೂನ್ 9, ಶನಿವಾರ ಸಂಜೆ ಸಿಂಗಪುರ ಹಿಂದು ಸೆಂಟರಿನ ಸಭಾಂಗಣದಲ್ಲಿ ಬಿಡುಗಡೆಯಾಯಿತು.
- ವಾಣಿ ರಾಮದಾಸ್, ಸಿಂಗಪುರ
‘‘1857 ಭಾರತದ ಸ್ವಾಂತಂತ್ರ್ಯ ಸಂಗ್ರಾಮ’’ ಪುಸ್ತಕದ ಮೂಲ ಕರ್ತೃ ಅಪ್ರತಿಮ ಬರಹಗಾರ, ಕಾದಂಬರಿಕಾರ, ನಾಟಕಕಾರ, ವಾಗ್ಮಿ ಹಾಗೂ ಉತ್ತಮ ಇತಿಹಾಸಕಾರರಾದ ವೀರಸಾವರಕರ್. ಈ ಪುಸ್ತಕದ ಕನ್ನಡ ಸಂಗ್ರಹಾನುವಾದ ಮಾಡಿರುವವರು ಕರ್ಮವೀರ ವಾರಪತ್ರಿಕೆಯ ಪ್ರಧಾನ ಸಂಪಾದಕ ಬಾಬು ಕೃಷ್ಣಮೂರ್ತಿ.
ಸಹಸ್ರಾರು ಸ್ವಾತಂತ್ರ್ಯ ಯೋಧರಿಗೆ ಹೋರಾಟದ ಕೆಚ್ಚನ್ನು ತುಂಬಿದ, ಪ್ರೇರಣೆ ನೀಡಿದ ಈ ಪುಸ್ತಕವನ್ನು ಕನ್ನಡದಲ್ಲಿ ಅನುವಾದಿಸುವಂತೆ ಬಾಬು ಅವರಿಗೆ ಆದೇಶಿಸಿ, ಆಶೀರ್ವದಿಸಿದವರು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು. ಇತ್ತೀಚೆಗೆ ಈ ಪುಸ್ತಕ ಬೆಂಗಳೂರಿನಲ್ಲಿ ಬಿಡುಗಡೆಯಾಗಿತ್ತು.
1857ರಲ್ಲಿ ನಡೆದ ಸಿಪಾಯಿದಂಗೆಯಲ್ಲದೆ, ಭಾರತದಾದ್ಯಂತ ನಡೆದ ದಂಗೆಗಳ ಘಟನಾವಳಿಗಳ ಸಂಗ್ರಹದ ಮರಾಠಿ ಮೂಲದ ಈ ಪುಸ್ತಕ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಭಾರತಿಯ ಕ್ರಾಂತಿಕಾರಿಗಳಿಗೆ ಭಗವದ್ಗೀತೆಯಾಗಿತ್ತು, ಬ್ರಿಟಿಷರಿಗೆ ಸವಾಲೊಡ್ಡಿತ್ತು. ಕಡೆಗಾದದ್ದು ಪುಸ್ತಕದ ಮುದ್ರಣಕ್ಕೆ ನಿಷೇಧಾಜ್ಞೆ. ಮೂಲ ಹಸ್ತಪ್ರತಿ ಬ್ರಿಟಿಷರಿಗೆ ಸಿಗದಂತೆ ರವಾನೆಯಾಯಿತು ಜರ್ಮನಿಗೆ.
ಇದೇ ಸಮಯದಲ್ಲಿ ಮರಾಠಿ ಮೂಲದ ಈ ಪುಸ್ತಕ ಇಂಗ್ಲಿಷಿಗೆ ಅನುವಾದಗೊಂಡಿತು. ಈ ಪುಸ್ತಕ ಮುದ್ರಿತಗೊಂಡದ್ದು ಹಾಲೆಂಡಿನಲ್ಲಿ, ಬಿಡುಗಡೆಯಾದದ್ದು ಫ್ರಾನ್ಸಿನಲ್ಲಿ, ಕಳ್ಳತನದಿಂದ ಭಾರತಕ್ಕೆ ಬಂದು ಸೇರಿತು. ಅಂದಿನ ಕಾಲಕ್ಕೆ ಇದರ ಬೆಲೆ ರೂ. ಮುನ್ನೂರು. ಅಂದು ನಮ್ಮ ದೇಶದಲ್ಲಿ ಈ ಪುಸ್ತಕಕ್ಕೆ ನಿಷೇಧಾಜ್ಞೆ ಜಾರಿಯಿತ್ತು . ಆದರೆ ಈ ಕೃತಿ ಹೊರದೇಶಗಳಲ್ಲಿ ಆರು ಆವೃತ್ತಿಗಳನ್ನು ಕಂಡಿತು.
1947ರ ನಂತರ ಭಾರತೀಯ ಭಾಷೆಗಳಲ್ಲಿ ಅನುವಾದಗೊಂಡ ಈ ಪುಸ್ತಕವನ್ನು ಕನ್ನಡದಲ್ಲಿ ಅನುವಾದ ಮಾಡಲು ದಿಟ್ಟ ಹೆಜ್ಜೆ ಇಟ್ಟವರು ಬಾಬು. ಅರಳುಮಲ್ಲಿಗೆ ಪಾರ್ಥಸಾರಥಿಯವರ ನೇತೃತ್ವದಲ್ಲಿ, ಸಿಂಗಪುರದ ಹಿರಿಯ ಉದ್ಯಮಿ ಪ್ರಭಾಕರ್ ಅವರು ‘‘1857-ಭಾರತದ ಸ್ವಾತಂತ್ರ್ಯ ಸಂಗ್ರಾಮ’’ ಪುಸ್ತಕವನ್ನು ಬಿಡುಗಡೆ ಮಾಡಿದರು.
ಅರಳುಮಲ್ಲಿಗೆ ಪಾರ್ಥಸಾರಥಿಯವರು ‘‘ಹರಿದಾಸರು ಕಂಡ ಭಾಗವತ’’ ಹಾಗೂ ಶ್ರೀ ಗುರು ರಾಘವೇಂದ್ರ ಮಹಿಮೆಯ ಬಗ್ಗೆ ಉಪನ್ಯಾಸ ನೀಡಲು ಸಿಂಗಪುರ ಕನ್ನಡಿಗರಾದ ರವಿ-ಪರಿಮಳ ದಂಪತಿಗಳು ಆಹ್ವಾನದ ಮೇರೆಗೆ ಇಲ್ಲಿಗೆ ಆಗಮಿಸಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ನಿರೂಪಣೆ ಪರಿಮಳ ಅವರಿಂದ. ಮೂಲ ಲೇಖಕರ, ಅನುವಾದಕರ ಕಿರು ಪರಿಚಯ ವಾಣಿ ನೀಡಿದರು. ‘‘ಇತಿಹಾಸ ನನ್ನ ಒಲವು ಹಾಗೂ ಬರವಣಿಗೆ ನನ್ನ ಉದ್ಯಮ’’ ಎನ್ನುತ್ತಾ ಪುಸ್ತಕದ ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ರಾಮದಾಸ್ ಮಾತನಾಡಿದರು.
ಈ ಸಂದರ್ಭದಲ್ಲಿ ಸಿಂಗಪುರ ಕನ್ನಡ ಸಂಘದ ಖಜಾಂಜಿ ಶಿವಾನಂದ್ ಮತ್ತು ಸಂಘದ ಸದಸ್ಯರಾದ ಜನಾರ್ಧನ ಭಟ್ ಮತ್ತು ಭಾಗ್ಯಮೂರ್ತಿ ದಂಪತಿಗಳು ಪಾರ್ಥಸಾರಥಿಯವರನ್ನು ಆತ್ಮೀಯವಾಗಿ ಗೌರವಿಸಿದರು.
ಕೃತಿಗಳಿಗೆ ಇಲ್ಲಿ ವಿಚಾರಿಸಿ :
1857-ಭಾರತದ ಸ್ವಾತಂತ್ರ್ಯ ಸಂಗ್ರಾಮ
ಸಂಗ್ರಹಾನುವಾದ : ಬಾಬು ಕೃಷ್ಣಮೂರ್ತಿ
ಪ್ರಕಾಶಕರು : ಶ್ರೀ ಸಮುದ್ಯತಾ ಸಾಹಿತ್ಯ
‘‘ಅನುಗ್ರಹ’’ 20/21 8ನೇ ಮುಖ್ಯರಸ್ತೆ,
18ನೇ ಅಡ್ಡ ರಸ್ತೆ, ಬಿ.ಟಿ.ಎಂ ಲೇ ಔಟ್,
ಬೆಂಗಳೂರು-560076,
ದೂರವಾಣಿ:-080-41202998












Click it and Unblock the Notifications