ಕಾವೇರಿ ವಸಂತೋತ್ಸವ : ಹಾಸ್ಯ, ಸಂಗೀತಗಳ ಕಲರವ
ಪಿ.ಬಿ.ಶ್ರೀನಿವಾಸ್
ಹಾಡು-ಪಾಡು,
ಎರಡು
ನಗೆ
ನಾಟಕಗಳು,
ಅ.ರಾ.ಮಿತ್ರ
ಮಾತು
-ಇವೆಲ್ಲವೂ
ಇದ್ದವು
ಎಂದರೇ,
ಮನರಂಜನೆಗೆ
ಬರವೇ?
- ಅಕ್ಷರ :ಶ್ರೀವತ್ಸ ಜೋಶಿ , ವರ್ಜೀನಿಯಾ
- ಮಸೂರ :ಲಹರಿ ಹರಿದಾಸ್
ಇಲ್ಲಿನ ಶಿವವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ‘ವಸಂತೋತ್ಸವ’ದಲ್ಲಿನ ಎಲ್ಲ ಕಾರ್ಯಕ್ರಮಗಳೂ ಬಹಳ ಚೆನ್ನಾಗಿದ್ದವು. ಭಾಗವಹಿಸಿದವರಿಗೆಲ್ಲ ತುಂಬ ಖುಷಿ ಕೊಟ್ಟವು.
ಮೊದಲಿಗೆ ಎರಡು ಹಾಸ್ಯನಾಟಕಗಳು. ತ್ರಿವೇಣಿ ಕನ್ನಡ ಸಂಘದ (ಡೆಲವೇರ್, ಪೆನ್ಸಿಲ್ವೇನಿಯಾ, ನ್ಯೂಜೆರ್ಸಿ) ಸದಸ್ಯರು ಅಭಿನಯಿಸಿದ ‘‘ಲಾಕೌಟ್ ಅಲ್ಲ ನಾಕೌಟ್’’ ಪ್ರಹಸನವು ಚುರುಕಿನ ಸಂಭಾಷಣೆಯಿಂದ ಪ್ರೇಕ್ಷಕರ ಮನಗೆದ್ದಿತು. ಖ್ಯಾತ ಹಾಸ್ಯಸಾಹಿತಿ ಎಂ.ಎಸ್.ನರಸಿಂಹಮೂರ್ತಿಯವರ ರಚನೆಯಾದ ಈ ನಾಟಕವನ್ನಾಡಿದ ತ್ರಿವೇಣಿಗರು ವೃತ್ತಿಪರ ಕಲಾವಿದರನ್ನೂ ಮೀರುವಂತೆ ಡಯಲಾಗ್ ಡೆಲಿವರಿಯಲ್ಲಿ ಮಿಂಚಿದರು.
ಎರಡನೆಯ ಹಾಸ್ಯನಾಟಕ ರಿಚ್ಮಂಡ್ ಕನ್ನಡ ಸಂಘದ ಸದಸ್ಯರು ಪ್ರಸ್ತುತಪಡಿಸಿದ ‘‘ಕಂಪತಿಗಳು’’. ಪ್ರತಿಭಾನ್ವಿತ ಅಮೆರಿಕನ್ನಡಿಗ ಬರಹಗಾರರಾದ ಶ್ರೀನಾಥ್ ಭಲ್ಲೆ ವಿರಚಿತ ನಾಟಕದ ಸರಕು ಡಾಟ್ ಕಾಮ್ ಯುಗದ ದಂಪತಿಗಳ ಎಡವಟ್ಟುಗಳು ಮತ್ತು ಉಪದ್ವ್ಯಾಪಗಳು. ಪಂಚ್ ಕೊಡುವ ಕೆಲ ಡಯಲಾಗುಗಳಿಗೆ ಸಭಿಕರು ಹೊಟ್ಟೆಹುಣ್ಣಾಗುವಷ್ಟು ನಕ್ಕರು.
ನಾಟಕಗಳ ನಂತರ ಡಾ।ಪಿ.ಬಿ.ಶ್ರೀನಿವಾಸ್ ಸಂಗೀತಸಂಜೆ ಕಾರ್ಯಕ್ರಮ. ಹಳೆಯ ಚಿತ್ರಗೀತೆಗಳನ್ನು, ಭಕ್ತಿಗೀತೆಗಳನ್ನು ಪಿ.ಬಿ.ಎಸ್ ಕಂಠಸಿರಿಯಲ್ಲಿ ಕೇಳುತ್ತ, ಅವರ ಸಹೃದಯಿ ಮಾತುಕತೆಯನ್ನಾಲಿಸುತ್ತ ಹಳೆನೆನಪುಗಳ ವಿಹಾರ ಮಾಡುವ ಅವಕಾಶ. ವೇದಿಕೆಯ ಮೇಲೆಯೆ ಹಾಡೊಂದನ್ನು ರಚಿಸಿ ಹಾಡಿದ ಪಿಬಿಎಸ್ 77ರ ಹರೆಯದಲ್ಲೂ ಹುರುಪಿನ ಕಾರಂಜಿಯಂತೆಯೇ ಕಂಡರು. ಕಾವೇರಿ ಕನ್ನಡ ಸಂಘದ ಬಗ್ಗೆ ಬರೆದ ಕವನವನ್ನು ಮುದ್ರಿಸಿದ್ದ ಫಲಕವನ್ನು ಅಧ್ಯಕ್ಷರಿಗೆ ಅರ್ಪಿಸಿದರು. ಕಾವೇರಿ ವತಿಯಿಂದ ಈ ಗಾನಗಂಧರ್ವನನ್ನು ಸನ್ಮಾನಿಸಲಾಯಿತು.
ಕೊನೆಯ ಕಾರ್ಯಕ್ರಮ ಪ್ರೊ।ಅ.ರಾ.ಮಿತ್ರ ಅವರಿಂದ ಕಾಮೆಡಿಟಾಕ್ : ‘‘ವೃತ್ತಿಜೀವನದಲ್ಲಿ ಹಾಸ್ಯ’’. ಸದಭಿರುಚಿಯ ಹಾಸ್ಯವನ್ನು ವಿದ್ವತ್ಪೂರ್ಣವಾಗಿ ಹಂಚುವ ಮಿತ್ರ, ಪ್ರೇಕ್ಷಕರ ಒತ್ತಾಯದ ಮೇರೆಗೆ ‘ಅಹಲ್ಯೆಯ ಕಥೆ’ಯನ್ನೂ ರಸವತ್ತಾಗಿ ಹೇಳಿ ಮತ್ತಷ್ಟು ನಗೆಹೊನಲನ್ನು ಹರಿಸಿದರು.
ಒಟ್ಟಿನಲ್ಲಿ ವಸಂತೋತ್ಸವದ ಎಲ್ಲ ಕಾರ್ಯಕ್ರಮಗಳೂ ಒಂದಕ್ಕಿಂತ ಒಂದು ಚೆನ್ನಾಗಿದ್ದುವು, ಒಳ್ಳೆಯದೊಂದು ಉತ್ಸವವನ್ನು ಅಚ್ಚುಕಟ್ಟಾಗಿ ಜರುಗಿಸಿದ ಕಾವೇರಿ ಕಾರ್ಯಕಾರಿ ಸಮಿತಿಯವರಿಗೆ ಸಭಿಕರೆಲ್ಲರಿಂದ ಕೃತಜ್ಞತಾಪೂರ್ವಕ ಮೆಚ್ಚುಗೆಯನ್ನೂ ತಂದವು.