‘ಕಾವೇರಿ’ಯಲ್ಲಿ ಬೇವು-ಬೆಲ್ಲ ; ಮನರಂಜನೆಯಿಂದ ಮುದಗೊಂಡರು ಸಭಿಕರೆಲ್ಲ!
*ಶ್ರೀವತ್ಸ ಜೋಷಿ, ವೆಸ್ಟ್ಮಾಂಟ್
‘‘ಕಾವೇರಿ ತೀರದಲ್ಲಿ ಒಂದು ಕಾಡು...ಆ ಕಾಡೊಂದು ಮೃಗಗಳ ಬೀಡು....ಮೃಗರಾಜನಿಗೆ ‘ಮರಣ’ ದಿನ...ಅದು ಎಲ್ಲ ಪ್ರಾಣಿಗಳು ನಲಿವ ದಿನ.....’’ ಈ ಹಳೆಯ ಕನ್ನಡ ಚಿತ್ರಗೀತೆ ನೆನಪಿದೆಯೇ? ಇದೆ ಎನ್ನುತ್ತೀರಾ, ಆದರೆ ‘ಮೃಗರಾಜನಿಗೆ ಜನುಮದಿನ’ ಆಗಬೇಕಿತ್ತಲ್ಲವೆ ಎಂದೂ ಕೇಳುತ್ತೀರಾ.
ನಿಲ್ಲಿ, ಇದು ‘ಕಾವೇರಿ’ (ವಾಷಿಂಗ್ಟನ್ ಡಿಸಿ- ಮೇರಿಲ್ಯಾಂಡ್- ವರ್ಜಿನಿಯಾ ಕನ್ನಡ ಸಂಘ) ಯುಗಾದಿ ಆಚರಣೆಯ ಕಾರ್ಯಕ್ರಮಗಳಲ್ಲಿ (ಏಪ್ರಿಲ್ 20 ಶನಿವಾರ) ಸಣ್ಣ ಸಣ್ಣ ಮಕ್ಕಳಿಂದ ಅಭಿನಯಿಸಲ್ಪಟ್ಟ ಗೀತನಾಟಕದ ಕತೆ. ಇದರಲ್ಲಿ ‘ಚತುರ’ ಮೊಲದ ಉಪಾಯದಿಂದ, ಮೃಗಗಳನ್ನೆಲ್ಲ ಬೇಟೆಯಾಡಿ ಇಡೀ ಕಾಡನ್ನೇ ನಡುಗಿಸಿದ್ದ ಮೃಗರಾಜ ಸಿಂಹ ಬಾವಿಯಲ್ಲಿ ತನ್ನ ಪ್ರತಿಬಿಂಬವನ್ನೇ ಇನ್ನೊಂದು ಸಿಂಹವೆಂದು ತಿಳಿದು ಅದನ್ನು ಕೊಲ್ಲಲು ಬಾವಿಗೆ ಹಾರಿ ಅಸು ನೀಗುತ್ತಾನೆ. ಕ್ರೂರ ನಾಯಕನಿಂದ ಮುಕ್ತಿ ಹೊಂದಿದ್ದಕ್ಕೆ ಪ್ರಾಣಿಗಳೆಲ್ಲ ಸಂತಸದಿಂದ ನಲಿಯುತ್ತವೆ. ವಾಹ್!
‘ಕಾವೇರಿ’ಯ ಪುಟಾಣಿಗಳು ತುಂಬ ಚಂದದಿಂದ, ಲವಲವಿಕೆಯಿಂದ ‘ಕರಡೀ ಟೇಲ್ಸ್’ನಿಂದ ಆಯ್ದ ಈ ಕಥಾಭಾಗವನ್ನು ಶ್ರೀಮತಿ ಅನಿತಾ ಕುಲಕರ್ಣಿ ಅವರ ನಿರ್ದೇಶನದಲ್ಲಿ ಆಡಿ ತೋರಿಸಿದರು. ಜಿಂಕೆ, ಅಳಿಲು, ಕರಡಿ, ಆನೆ, ಘೕಂಡಾ, ಮೊಲ, ಮಂಗ- ಎಲ್ಲ ಪ್ರಾಣಿಗಳೂ ಆ ‘ಕಾಡಿ’ನಲ್ಲಿ ಎಷ್ಟು ನೈಜವಾಗಿ ಕಾಣಿಸಿಕೊಂಡವೆಂದರೆ ಹತ್ತಿಪ್ಪತ್ತು ಮಕ್ಕಳಿಗೆ ಅಭ್ಯಾಸ ಮಾಡಿಸಿ ನಾಟಕವಾಡಿಸಿದ ಅನಿತಾ ಅವರ ಸಾಹಸ, ತಾಳ್ಮೆಯನ್ನು ಮೆಚ್ಚಲೇಬೇಕು. ಮಕ್ಕಳಿಗೂ ಬಹುಶಃ ಇದು ತುಂಬ ಖುಷಿ ತಂದಿರಬೇಕು. ಅದಕ್ಕೆಂದೇ ‘ಅನಿತಾ ಆಂಟಿ’ಗೆ ಒಂದು ಹೂಗುಚ್ಛ ಸಮರ್ಪಣೆ !
ಮಕ್ಕಳ ವಿಭಾಗದಿಂದ ಕಾರ್ಯಕ್ರಮ ವೈವಿಧ್ಯ
ಯುಗಾದಿ ಕಾರ್ಯಕ್ರಮಗಳಲ್ಲಿ ಪ್ರಾಣಿಗಳ ನಾಟಕ ಮಾತ್ರವಲ್ಲದೆ ಇನ್ನೂ ವಿವಿಧ ಐಟಂಗಳನ್ನು ಮಕ್ಕಳು ಪ್ರಸ್ತುತಪಡಿಸಿದರು. ಮಾ। ಅತೀತ್ ಹಿರೇಮಠ್ನ Significance of Yugadi ಭಾಷಣ ಚೆನ್ನಾಗಿತ್ತು. ಯುಗಾದಿಯ ಅರ್ಥ, ಆಚರಣೆ, ಧಾರ್ಮಿಕ ಹಿನ್ನೆಲೆ, ಬೇವು- ಬೆಲ್ಲದ ಪಾರಮಾರ್ಥಿಕ ಮತ್ತು ಜತೆಯಲ್ಲೇ ವೈಜ್ಞಾನಿಕ ಮಹತ್ವಗಳನ್ನು ಅಮೆರಿಕನ್ ಇಂಗ್ಲೀಷ್ನಲ್ಲೇ ಚೆನ್ನಾಗಿ ವಿವರಿಸಿದ. ಮಾರ್ಕೆಟ್ನಲ್ಲಿ ಸಿಗುವ ‘ರೆಡಿಮಿಕ್ಸ್’ಗಳಿಗಿಂತ ಸಾಂಪ್ರದಾಯಿಕವಾದ ಮನೆಯಲ್ಲಿ ಮಾಡುವ ಬೇವುಬೆಲ್ಲ, ಯುಗಾದಿಪಚ್ಚಡಿಗಳಿಗೇ ಪ್ರಾಧಾನ್ಯ ನೀಡಿ ಎಂದು ಹಿರಿಯರಿಗೆ ‘ಕಿವಿಮಾತು’ ನೀಡಿದ! ನಂತರ ಕಾರ್ಯಕ್ರಮ ಮುಂದುವರೆಯುತ್ತ ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು...ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು’ ಹಾಡಿಗೆ ಹೈಸ್ಕೂಲ್ ಮಕ್ಕಳಿಂದ ಸೊಗಸಾದ ನೃತ್ಯ. ಅಖಿಲ್ ಮತ್ತು ಬಳಗ ಪ್ರಸ್ತುತಪಡಿಸಿದ ಇನ್ನೊಂದು ಗ್ರೂಪ್ ಡ್ಯಾನ್ಸ್ ‘ರಂಗೀಲಾ ರಂಗೀಲಾ...’ ಹಾಡಿಗೆ. ಇವೆರಡೂ ಕಾರ್ಯಕ್ರಮದ ಕಳೆಯೇರಿಸಿದವು. ಅತೀತ್ ಮತ್ತು ಅನನ್ಯಾ ಹಿರೇಮಠ್ ಅಭಿನಯಿಸಿದ ‘ಹ್ಯಾಮ್ಲೆಟ್’ ಆಂಗ್ಲ ನಾಟಕದ ಒಂದು ದೃಶ್ಯ ಈ ಇಬ್ಬರೂ ಕಿಶೋರರು ತುಂಬ ಪ್ರತಿಭಾವಂತರು ಎಂಬುದನ್ನು ಸಾಬೀತು ಮಾಡುವಂತಿತ್ತು.
ಇಲ್ಲೊಬ್ಬ ಉದಯೋನ್ಮುಖ ಎ.ಆರ್.ರೆಹಮಾನ್
ಅವನ ಹೆಸರು ಪ್ರಶಾಂತ್. ವಯಸ್ಸು ಹೆಚ್ಚೆಂದರೆ ಮೂರು ವರ್ಷ ಇದ್ದಿರಬಹುದು. ಸ್ಟೇಜಿನ ಮೇಲೆ, ಅಮ್ಮನ ಮಡಿಲಲ್ಲಿ ಕುಳಿತು, ಮುಂದೆ ಸ್ಟೂಲ್ ಮೇಲಿಟ್ಟ, ಅವನ ಗಾತ್ರಕ್ಕಿಂತ ಎರಡು ಪಟ್ಟು ದೊಡ್ಡ ಕೀಬೋರ್ಡ್ನಲ್ಲಿ ‘ವಂದೇ ಮಾತರಂ...’ ನುಡಿಸಿದಾಗ ಶ್ರೋತೃಗಳಲ್ಲಿ ವಿದ್ಯುತ್ ಸಂಚಾರ! ಆ ಟ್ಯೂನನ್ನು ಈ ಪುಟ್ಟ ಕಂದನೇ ನುಡಿಸಿದ್ದೇ ಅಥವಾ ಅದು ‘ಪ್ರೀ-ರೆಕಾರ್ಡೆಡ್’ ಇರಬಹುದೇ ಎಂದು ನನಗಂತೂ ಅನುಮಾನ ಬಂದದ್ದು ನಿಜ! ಅಷ್ಟು ಸುಂದರವಾಗಿ ಕೀಬೋರ್ಡ್ ನುಡಿಸಿದ ಮಾ। ಪ್ರಶಾಂತ್ನ ಪ್ರತಿಭೆಯನ್ನು ಮೆಚ್ಚಲೇಬೇಕು. ಹೂವೊಂದು...ಬಳಿಬಂದು..ತಾಕಿತು ಎನ್ನೆದೆಯ... ಮೊದಲಾದ ಒಂದೆರಡು ಕನ್ನಡ ಚಿತ್ರಗೀತೆಗಳ ಟ್ಯೂನ್ ಕೂಡ ನುಡಿಸಿ ಪ್ರೇಕ್ಷಕರಿಂದ ಇನ್ನಷ್ಟು ಚಪ್ಪಾಳೆ ಗಿಟ್ಟಿಸಿದ.
ಮಹಿಳೆಯರಿಂದ ಸಮೂಹ ನೃತ್ಯ
ದೀಪ್ತಿ ನಿರ್ದೇಶನದಲ್ಲಿ ‘ಬತ್ತ ಬತ್ತ...’ ಜನಪದ ಗೀತೆಗೆ ಸೊಗಸಾದ ನೃತ್ಯ ನಿರೂಪಿಸಿದ ‘ಕಾವೇರಿ’ ಲಲನೆಯರು ಮಲೆನಾಡಿನ ಗದ್ದೆಗಳಲ್ಲಿ ಕೃಷಿನಿರತ ಹೆಣ್ಮಕ್ಕಳ ದೃಶ್ಯವನ್ನು ಅಮೆರಿಕ ರಾಜಧಾನಿಯಲ್ಲಿ ವೇದಿಕೆಯ ಮೇಲೆ ಕರೆತಂದರೆಂದರೆ ಅದು ಉತ್ಪ್ರೇಕ್ಷೆಯಲ್ಲ ! ಅದರಂತೆಯೇ ಮನಸೆಳೆದ ಇನ್ನೊಂದು ಪ್ರದರ್ಶನ ಎಂದರೆ ಚೇತನಾ ತ್ಯಾಗರಾಜ್ ಪ್ರಸ್ತುತ ಪಡಿಸಿದ ‘ಪೂರ್ವ ಪಶ್ಚಿಮ ಸಂಗಮ’ (East meets West) ಎಂಬ ನೃತ್ಯ. ಎರಡಕ್ಕೂ ಪೂರ್ಣ ಅಂಕಗಳು.
ಕಾರ್ಯಕ್ರಮ ಮುಂದುವರೆಯುತ್ತ ‘ಕಾವೇರಿ’ ಅಧ್ಯಕ್ಷ ರವಿ ಡಂಕಣಿಕೋಟೆಯವರು ಒಂದೆರಡು ಮಾತುಗಳನ್ನಾಡಿದರು. ಹರೀಶ್ ಹಿರೇಮಠ್ ಒಗಟು-ರಸಪ್ರಶ್ನೆಗಳ ಪಾರ್ಯಕ್ರಮ ನಡೆಸಿಕೊಟ್ಟರು. ಒಗಟಿಗೆ ಉತ್ತರ ಗೊತ್ತಿದ್ದವರು ಸ್ಟೇಜಿನ ಮೇಲೆ ಬಂದು ಉತ್ತರ ಹೇಳಬೇಕು. ಹೀಗೆ ಐದು ಜನ ಸ್ಟೇಜಿನ ಮೇಲೆ ಜಮಾಯಿಸಿದ ಮೇಲೆ ಅವರನ್ನೇ ಒಂದು ಟೀಮ್ ಮಾಡಿ ಇನ್ನೂ ಕೆಲ ಒಗಟುಗಳನ್ನು ಕೇಳಿ ಗೆದ್ದವರಿಗೆ ಕನ್ನಡ ಪುಸ್ತಕಗಳ ಬಹುಮಾನ ನೀಡಿದರು. ನಟರಾಜ್ ಅವರು ತಮ್ಮ ಇತ್ತೀಚಿನ ಕವನ ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications