ಬೇಏರಿಯಾದಲ್ಲಿ ಜೈರಾಜ್
ಸನ್ನಿವೇಲ್ : ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಕೆ. ಜೈರಾಜ್ ಈಹೊತ್ತು ಅಮೆರಿಕದಲ್ಲಿದ್ದಾರೆ. ಅಮೆರಿಕ ಭೇಟಿಯ ಕಾಲದಲ್ಲಿ ಇಲ್ಲಿನ ಕನ್ನಡಿಗರೊಂದಿಗೆ ಕೆಲಕಾಲ ಕಲೆತು ಮಾತನಾಡುವ ಕಾರ್ಯಕ್ರಮವನ್ನು ಜೈರಾಜ್ ಹಾಕಿಕೊಂಡಿದ್ದಾರೆ. ಈ ವಿಷಯವನ್ನು ಕೆಕೆಎನ್ಸಿಯ ಅಧ್ಯಕ್ಷ ರಾಮಪ್ರಸಾದ್ ಕನ್ನಡ.ಇಂಡಿಯಾಇನ್ಫೋ.ಕಾಂಗೆ ತಿಳಿಸಿದ್ದಾರೆ.
ವಾಸ್ತವವಾಗಿ ಜೈರಾಜ್ ಅವರು ಸೆಪ್ಟೆಂಬರ್ ತಿಂಗಳಿನಲ್ಲೇ ಅಮೆರಿಕಕ್ಕೆ ಬರಬೇಕಿತ್ತು. ಆದರೆ, ಸೆಪ್ಟೆಂಬರ್ 11ರಂದು ವಿಶ್ವ ವ್ಯಾಪಾರ ಕೇಂದ್ರ ಹಾಗೂ ಪೆಂಟಗನ್ ಮೇಲೆ ನಡೆದ ವಿಧ್ವಂಸಕ ದಾಳಿಯ ಹಿನ್ನೆಲೆಯಲ್ಲಿ ಇವರ ಕಾರ್ಯಕ್ರಮ ಮುಂದೂಡಲಾಗಿತ್ತು.
ಹಿರಿಯ ಐ.ಎ.ಎಸ್. ಅಧಿಕಾರಿಯಾದ ಜೈರಾಜ್ ಅವರು, ದಕ್ಷ ಹಾಗೂ ಉತ್ತಮ ಆಡಳಿತಗಾರ ಎಂದೇ ಹೆಸರಾದವರು. ಹಾವರ್ಡ್ ಬಿಸಿನೆಸ್ ಶಾಲೆಯಲ್ಲಿ ಎಂಬಿಎ ಪದವಿ ಪಡೆದಿರುವ ಜೈರಾಜ್, ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದಾಗ, ಹಲವು ಉಪಯುಕ್ತ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಪ್ರಸ್ತುತ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಇಓ ಆಗಿರುವ ಜೈರಾಜ್, ಬೇ ಏರಿಯಾದಲ್ಲಿರುವ ಕನ್ನಡಿಗರ ಅಭಿಪ್ರಾಯಗಳನ್ನು ಸಂಗ್ರಹಿಸಲು ಉತ್ಸುಕರಾಗಿದ್ದಾರೆ. ಅಮೆರಿಕದಲ್ಲಿನ ಕಾರ್ಯಕ್ಷೇತ್ರಗಳಲ್ಲಿರುವ ಪರಿಸರ, ಮಿಂಚಿನ ಪ್ರಗತಿ, ವಾಣಿಜ್ಯ ಮೊದಲಾದ ವಿಷಯಗಳ ಬಗ್ಗೆ ಚಿಂತನ-ಮಂಥನ ನಡೆಸಲು ಉತ್ಸುಕರಾಗಿದ್ದಾರೆ.
ಎಲ್ಲಕ್ಕಿಂತ ಮಿಗಿಲಾಗಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೇಗಿರಬೇಕು? ವಿಮಾನ ನಿಲ್ದಾಣದ ಬಗ್ಗೆ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ನಿರೀಕ್ಷೆಗಳೇನು? ಎಂಬುದನ್ನು ಜೈರಾಜ್ ತಿಳಿಯಬಯಸಿದ್ದಾರೆ. ನಿಮ್ಮ ಸಲಹೆ ಸೂಚನೆಗಳಿಗೆ ಸ್ವಾಗತ.
ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅಮೆರಿಕನ್ನಡಿಗರೊಂದಿಗಿನ ಈ ಮಾತುಕತೆ ಸಹಕಾರಿಯಾದೀತು. ತಪ್ಪದೇ ಬನ್ನಿ, ಜೈರಾಜ್ರೊಂದಿಗೆ ಸೌಹಾರ್ದಯುತವಾಗಿ ಮಾತಾಡೋಣ. ಅಂದಹಾಗೆ ಈ ಸೌಹಾರ್ದ ಭೇಟಿ ಡಿಸೆಂಬರ್ 2ರ ಭಾನುವಾರ ಸಂಜೆ 5 ಗಂಟೆಯಿಂದ 7 ಗಂಟೆವರೆಗೆ ಸನ್ನಿವೇಲ್ ದೇವಾಲಯ ಸಭಾಂಗಣದಲ್ಲಿ ನಡೆಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications