ಯಾದಗಿರಿ : ಅಲೆಮಾರಿ ಜನಾಂಗದವರಿಗೆ ಸಿಕ್ಕಲಿದೆ ಸೂರು
ಯಾದಗಿರಿ, ಅಕ್ಟೋಬರ್ 26 : ಯಾದಗಿರಿ ನಗರದ ಹೊರ ವಲಯದ ಎಂ.ಹೊಸಳ್ಳಿ ಬಳಿ ವಾಸವಿರುವ ಅಲೆಮಾರಿ ಜನಾಂಗದವರಿಗೆ ಶೀಘ್ರವೇ ಮನೆಗಳು ಸಿಗಲಿವೆ. ಮುಂದಿನ ಆರು ತಿಂಗಳೊಳಗಾಗಿ 124 ಮನೆಗಳನ್ನು ನಿರ್ಮಿಸಿ ಹಸ್ತಾಂತರ ಮಾಡುವುದಾಗಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಭರವಸೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ಎಂ.ಹೊಸಳ್ಳಿ ಬಳಿಯಲ್ಲಿ ಅಲೆಮಾರಿ ಜನಾಂಗದವರು ವಾಸ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 'ಡಾ.ಬಿ.ಆರ್ ಅಂಬೇಡ್ಕರ್ ಬಸವ ವಸತಿ ಯೋಜನೆ ಸೇರಿದಂತೆ ವಿವಿಧ ಯೋಜನೆಯಡಿ ಮನೆ ನಿರ್ಮಿಸಲಾಗುವುದು. ಸುಮಾರು 3.09 ಎಕರೆಯಲ್ಲಿ 20-30 ವಿಸ್ತೀರ್ಣದ 124 ಮನೆಗಳನ್ನು ನಿರ್ಮಿಸಲಾಗುತ್ತದೆ. ಪ್ರತಿ ಮನೆಗೆ 4 ಲಕ್ಷ ರೂ. ವೆಚ್ಚವಾಗಲಿದೆ' ಎಂದರು.

ರಾಜ್ಯ ಮಟ್ಟದ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ಕೋಶದ ನೋಡಲ್ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನಿವಾಸಿಗಳ ಜೊತೆ ಮಾತುಕತೆ ನಡೆಸಿದರು. ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿ, ಮನೆಗಳ ನಿರ್ಮಾಣದ ಬಗ್ಗೆ ಚರ್ಚಿಸಿದರು.

'ಅಲೆಮಾರಿ ಸಮುದಾಯದ 95 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. 29 ಮಂದಿಗೆ ಒಂದೆರೆಡು ದಿನಗಳಲ್ಲಿ ಹಕ್ಕು ಪತ್ರ ವಿತರಿಸಲಾಗುವುದು. ಮನೆಗಳ ನಿರ್ಮಾಣದ ಸಂದರ್ಭದಲ್ಲಿ ಶೌಚಾಲಯ, ಚರಂಡಿ, ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು' ಎಂದು ಭರವಸೆ ನೀಡಿದರು.
'ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 971 ಅಲೆಮಾರಿ ಕುಟುಂಬಗಳಿವೆ. ಈ ಪೈಕಿ ಹಲವರಿಗೆ ನಿವೇಶನ ಇಲ್ಲ. ಕೆಲವರಿಗೆ ಜಾಗ ಇದೆ. ಅರ್ಹ ಫಲಾನುಭವಿಗಳ ಪಟ್ಟಿ ನೀಡಿ, ಆಯಾ ತಾಲೂಕಿನಲ್ಲಿಯೇ ಮನೆ ನಿರ್ಮಿಸಿಕೊಡಲಾಗುತ್ತದೆ' ಎಂದು ಜಿಲ್ಲಾಧಿಕಾರಿಗಳು ಹೇಳಿದರು.












Click it and Unblock the Notifications