ಸಿದ್ದರಾಮಯ್ಯ, ಡಿಕೆಶಿ 'ರಾಜಕೀಯ ಜ್ಞಾನ'ದ ಬಗ್ಗೆ ಈಶ್ವರಪ್ಪ ವಿವರಣೆ
ಯಾದಗಿರಿ, ಜೂನ್ 4: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಜ್ಞಾನದ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಗಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾತನಾಡುತ್ತಿದ್ದ ಈಶ್ವರಪ್ಪ, "ಬಿಜೆಪಿಯಲ್ಲಿ ಸ್ವಲ್ಪ ಭಿನ್ನಮತ ಇರುವುದು ಹೌದು. ನಮ್ಮದು ಕುಟುಂಬ ಇದ್ದ ಹಾಗೆ. ಕುಟುಂಬ ಎಂದ ಮೇಲೆ, ಅಲ್ಲಲ್ಲಿ ಅಸಮಾಧಾನವಿರುವುದು ಸಹಜ. ಅದನ್ನು ನಾವೇ ಸರಿ ಪಡಿಸಿಕೊಳ್ಳುತ್ತೇವೆ. ಕಾಂಗ್ರೆಸ್ಸಿನವರು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ"ಎಂದು ಈಶ್ವರಪ್ಪ ಹೇಳಿದ್ದಾರೆ.
"ಈ ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ, ಅವರ ಪುತ್ರ ಯತೀಂದ್ರ ಸೂಪರ್ ಸಿಎಂ ಆಗಿದ್ದರು. ಅದೇ ಲೆಕ್ಕಾಚಾರದಲ್ಲಿ ರಾಜ್ಯದಲ್ಲಿ ಇಬ್ಬರು ಸಿಎಂ ಎಂದು ಹೇಳುತ್ತಿದ್ದಾರೆ. ಹಾಗಾಗಿ, ಅವರಿಗೆ ತಲೆ ಸರಿಯಿಲ್ಲ"ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

"ಇನ್ನು ಡಿ.ಕೆ.ಶಿವಕುಮಾರ್ ಅವರು ತಮ್ಮ ಪದಗ್ರಹಣಕ್ಕೆ ಸರಕಾರ ರಾಜಕೀಯ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ. ದೇಶದಲ್ಲಿ ಕೊರೊನಾ ಇರುವುದು ಒಂದು ಪಕ್ಷದ ಅಧ್ಯಕ್ಷರಾಗಿದ್ದವರಿಗೆ ಗೊತ್ತಿಲ್ಲ ಎಂದರೆ ಇದು ವಿಪರ್ಯಾಸ. ಹಾಗಾಗಿ, ಅವರಿಗೆ ಸಾಮಾನ್ಯ ಜ್ಞಾನ ಎನ್ನುವುದು ಇಲ್ಲ"ಎಂದು ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ.
"ನಮ್ಮಲ್ಲಿರುವ ಸಣ್ಣ ಗೊಂದಲವನ್ನು ಇಟ್ಟುಕೊಂಡು ಸಿದ್ದರಾಮಯ್ಯನವರು ಹಗಲು ಕನಸು ಕಾಣುತ್ತಿದ್ದಾರೆ. ಅವರು ಕನಸು ಕಾಣುವುದನ್ನು ಬಿಡಲಿ ಎನ್ನುವುದು ನನ್ನ ಸಲಹೆ. ತಾನು ಮತ್ತೆ ಸಿಎಂ ಆಗುವುದಿಲ್ಲ ಎನ್ನುವುದು ಅವರಿಗೆ ಗೊತ್ತಿದೆ" ಎಂದು ಈಶ್ವರಪ್ಪ ಹೇಳಿದ್ದಾರೆ.
"ತಾನು ಸಿಎಂ ಆಗುವುದಿಲ್ಲ, ತನ್ನ ಮಗ ಯತೀಂದ್ರ ಸಿಎಂ ಆಗುವ ಕನಸನ್ನು ಸಿದ್ದರಾಮಯ್ಯ ಕಾಣಲು ಆರಂಭಿಸಿದ್ದಾರೆ"ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.












Click it and Unblock the Notifications