ಯಾದಗಿರಿಯ ವರಹಟ್ಟಿ ಗ್ರಾಮದಲ್ಲಿ: ಸಿಡಿಲು ಬಡಿದು ವ್ಯಕ್ತಿ ಸಾವು
ಯಾದಗಿರಿ, ಮೇ19: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಯಾದಗಿರಿ ನಗರದಾದ್ಯಂತ ಸಂಜೆ ಹೊತ್ತಿಗೆ ಸಿಡಿಲು ಸಹಿತ ಮಳೆ ಸುರಿಯಲಾರಂಭಿಸಿದೆ. ಕಳೆದ ಆರು ದಿನಗಳಿಂದ ಯಾದಗಿರಿ ಜಿಲ್ಲೆಯ ಸಿಡಿಲು ಸಹಿತ ಮಳೆಯಾಗುತ್ತಿದೆ. ಸಿಡಿಲು ಬಡಿದು ವ್ಯಕ್ತಿ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವರಹಟ್ಟಿ ಗ್ರಾಮದಲ್ಲಿ ಭೀಮಪ್ಪ ಕೊಳ್ಳಿ ( 65) ಮೃತ ದುರ್ದೈವಿ. ಕುಟುಂಬಕ್ಕೆ ಆಧಾರಸ್ಥಂಬವಾಗಿದ್ದ ಭೀಮಪ್ಪ ಗ್ರಾಮದ ಪಕ್ಕದಲ್ಲಿರುವ ತೋಟದ ಮನೆಯಲ್ಲಿ ವಾಸವಾಗಿದ್ದರು. ಗಾಳಿ ಮಳೆಗೆ ಕರೆಂಟ್ ಸಪ್ಲೈ ತೆಗೆಯಲಾಗಿತ್ತು. ಆದ್ದರಿಂದ ಭೀಮಪ್ಪ ಶೆಖೆ ತಡೆಯಲಾಗಿದೇ ಮನೆಯ ಹೊರಗಡೆ ಗಾಳಿ ಬೇಕು ಎಂದು ಮರದ ಬಳಿ ಮಲಗಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮನೆಗೆ ಆಧಾರವಾಗಿದ್ದ ಇವರನ್ನು ಕಳೆದುಕೊಂಡು ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಘಟನೆ ಕುರಿತು ಹುಣಸಗಿ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ಪರಿಹಾರಕ್ಕಾಗಿ ಕುಟುಂಬಸ್ಥರ ಆಗ್ರಹ: ಕುಟುಂಬಕ್ಕೆ ಆಧಾರಸ್ಥಂಬವಾಗಿದ್ದ ಭೀಮಪ್ಪ ಅವರನ್ನು ಕಳೆದುಕೊಂಡು ಜೀವನ ಹೇಗೆ ನಡೆಸೋದು ಕಷ್ಟವಾಗಿದೆ. ಸರ್ಕಾರದಿಂದ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ರಾಜುಗೌಡ ಪರಿಹಾರ ಕೊಡಲು ಸೂಚಿಸಿದ್ದಾರೆ.

ಹೊಸಕೆರೆ ತಾಂಡಾದಲ್ಲಿ ಸಿಡಿಲು ಬಡಿದು ಬಾಲಕ: ಕಳೆದ ಆರು ದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ಶಹಪುರ ತಾಲ್ಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೆರೆ ತಾಂಡಾದಲ್ಲಿ ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟು, 7 ಜನ ಗಾಯಗೊಂಡಿದ್ದಾರೆ. ಮುದ್ನಾಳ ದೊಡ್ಡಾತಾಂಡವ ಪವನ್ ವಾಲು ರಾಠೋಡ 15 ಮೃತಪಟ್ಟ ಬಾಲಕ ಮನೆ ಹತ್ತಿರ ಸಿಡಿದು ಬಡಿದು ಸ್ಥಳದಲ್ಲೇ ಮೃತಪಟ್ಟ ಹಿನ್ನೆಲೆ ಮತ್ತೆ ಈ ದುರಂತ ಸಂಭವಿಸಿದೆ.

ಸಿಡಿಲಿಗೆ ಎತ್ತು ಬಲಿ: ಕಳೆದ ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿತಕ್ಕೆ ಇಲ್ಲಿಗೆ ಸಮೀಪದ ಹೊನೆಗೇರಾ ಗ್ರಾಮದ ದಂಡಪ್ಪ ಹನುಮಂತ ಅವರ ಎತ್ತು ಮೃತಪಟ್ಟಿತ್ತು. ಬೆಳಗ್ಗೆ ಬಿಸಿಲಿನ ತಾಪ ಹೆಚ್ಚಿನ ಪ್ರಮಾಣದಲ್ಲಿತ್ತು. ಮಧ್ಯಾಹ್ನ ಮೋಡ ಆವರಿಸಿಕೊಂಡು ಜೋರು ಮಳೆ ಸುರಿಯಿತು. ತಗ್ಗು ರಸ್ತೆ, ಚರಂಡಿಗಳಲ್ಲಿ ನೀರು ಹರಿದಾಡಿತು.












Click it and Unblock the Notifications