ಯಾದಗಿರಿ : 25 ಲಕ್ಷದಲ್ಲಿ ನಿರ್ಮಿಸಿದ ಗುರುಭವನ ಪಾಳು ಬಿದ್ದಿದೆ
ಯಾದಗಿರಿ, ಅಕ್ಟೋಬರ್ 29 : ಅವು ದಶಕಗಳ ಹಿಂದಿನ ಯೋಜನೆಯಾದ ಗುರುಭವನ ಕಟ್ಟಡಗಳು. ಕಾಮಗಾರಿ ಪೂರ್ಣಗೊಂಡರು ಗ್ರಾಮೀಣ ಶಿಕ್ಷಕರ ಅನುಕೂಲಕ್ಕೆ ಬಳಕೆಯಾಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುರುಭವನದ ಕಟ್ಟಡಗಳು ಪಾಳು ಬಿದ್ದಿವೆ.
ಒಡೆದಿರುವ ಕಿಟಕಿ ಗಾಜುಗಳು, ಪಾಳು ಬಿದ್ದಿರುವ ಕೊಠಡಿಗಳು, ಕುಡುಕರ ಮತ್ತು ಜೂಜುಕೋರರ ಆಸ್ಥಾನಗಳಾದ ಶಿಕ್ಷಕರ ವಸತಿ ಗೃಹಗಳು. ಈ ಚಿತ್ರಣ ಕಂಡಿದ್ದು ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ತಡಿಬಿಡಿ ಗ್ರಾಮದಲ್ಲಿ. ತಡಿಬಿಡಿಯ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಶಿಕ್ಷಕರ ಅನುಕೂಲಕ್ಕಾಗಿ ಗುರುಭವನ ನಿರ್ಮಿಸಲಾಗಿದೆ.

ಆದರೆ, ಇಲ್ಲಿಯವರೆಗೂ ಅದರ ಬಳಕೆ ಆಗುತ್ತಿಲ್ಲ. ಶಿಕ್ಷಕರ ವಾಸಕ್ಕೆ ಅನುಕೂಲವಾಗಬೇಕಿದ್ದ ಗುರುಭವನ ಪಾಳು ಬಿದ್ದು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಗುರುಭವನದ ಕಿಟಕಿ, ಬಾಗಿಲುಗಳು ಸಂಪೂರ್ಣವಾಗಿ ಹಾಳಾಗಿವೆ. ಕಿಟಕಿ ಗಾಜು, ಬಾಗಿಲು ಕಿತ್ತು ಹೋಗಿವೆ. ಕಟ್ಟಡದ ಸುತ್ತ ಜಾಲಿ ಗಿಡಗಳು ಬೆಳೆದಿದ್ದು ಭೂತ ಬಂಗಲೆಯಾಗಿದೆ.
2 ಅಂತಸ್ತಿನ ಕಟ್ಟಡದ ಗುರುಭವನದಲ್ಲಿ ಎಂಟು ಶಿಕ್ಷಕರು ಉಳಿದುಕೊಳ್ಳಲು ಅನುಕೂಲವಿದೆ. ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಕಲಬುರಗಿಯ ನಿರ್ಮಿತಿ ಕೇಂದ್ರದಿಂದ ಕಾಮಗಾರಿ ಮಾಡಲಾಗಿದೆ. ಗುರುಭವನದ ಕಾಮಗಾರಿ ಪೂರ್ಣಗೊಂಡ ಬಳಿಕ ಯಾದಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಒಪ್ಪಿಸಿದ್ದಾರೆ.

ಆದರೆ, ಗುರುಭವನದ ಕ್ರಿಯಾ ಯೋಜನೆಯಲ್ಲಿ ಕುಡಿಯುವ ನೀರು, ವಿದ್ಯುತ್, ಸಂಪರ್ಕದ ವ್ಯವಸ್ಥೆಯನ್ನ ಕೈ ಬಿಡಲಾಗಿತ್ತು. ಕುಡಿಯುವ ನೀರು, ವಿದ್ಯುತ್ ಪೂರೈಸುವಂತೆ ಶಹಾಪೂರ ಬಿಇಒ ಕಚೇರಿಯಿಂದ ಜಿಲ್ಲಾ ಪಂಚಾಯತಿಗೆ ಪತ್ರ ಬರೆದರೂ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಶಿಕ್ಷಕರ ಬಳಕೆಗೆ ಭವನ ಲಭ್ಯವಾಗಿಲ್ಲ.

ಯಾದಗಿರಿ ಜಿಲ್ಲೆಯ ತಡಿಬಿಡಿ, ಹುಣಸಗಿ, ಕೆಂಭಾವಿ ಸೇರಿದಂತೆ 8 ಕಡೆ ಗುರುಭವನ ನಿರ್ಮಿಸಲಾಗಿದೆ. ಕೆಲವೆಡೆ ಅಪೂರ್ಣ ಕಾಮಾಗಾರಿಯಾಗಿದ್ದರೆ ಇನ್ನು ಕೆಲವೆಡೆ ಕಾಮಗಾರಿ ಪೂರ್ಣಗೊಂಡರೂ ಶಿಕ್ಷಕರಿಗೆ ಭವನ ಬಳಕೆಗೆ ಲಭ್ಯವಾಗಿಲ್ಲ.












Click it and Unblock the Notifications