Bengaluru Weather: ನಗರದ 112 ವಾರ್ಡ್ಗಳಲ್ಲಿ ಮಳೆ ಸಿಂಚನ, ಮೇ 8ರವರೆಗೆ ವರುಣಬ್ಬರ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಮಳೆ ಮತ್ತೆ ಅಬ್ಬರಿಸಲು ಸಜ್ಜಾಗಿದೆ. ಇಂದು ಮಂಗಳವಾರ (ಮೇ 5) ರಂದು ಸಂಜೆ 6 ಗಂಟೆ ಹೊತ್ತಿಗೆ ಸುಮಾರು 102 ವಾರ್ಡ್ಗಳಲ್ಲಿ ಜಿಟಿ ಜಿಟಿ ಮಳೆ ಸುರಿದಿದೆ. ಇಂದಿನಿಂದ ಮೂರು ದಿನ ನಗರಾದ್ಯಂತ ಗುಡುಗು, ಮಿಂಚು, ಜೋರು ಗಾಳಿ ಸಹಿತ ವ್ಯಾಪಕ ಮಳೆ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.
ಇಂದು ಬೆಳಗ್ಗೆಯಿಂದ ಬಿಸಿಲಿನ ಅಬ್ಬರ, ಸೆಖೆ ಕಂಡು ಬಂತಾದರೂ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ಸೋಮವಾರ 12 ವಾರ್ಡ್ಗಳಲ್ಲಿ ಮಳೆ ಬಿದ್ದಿದ್ದರೆ, ಇಂದು 112 ವಾರ್ಡ್ಗಳಲ್ಲಿ ಮಳೆ ದಾಖಲಾಗಿದೆ. ಸಂಜೆಯಾಗುತ್ತಿದ್ದಂತೆ ಎಲ್ಲೆಲ್ಲೂ ತಂಪು ವಾತಾವರಣ ಕಂಡು ಬಂದಿದೆ.

ನಗರದ ಮಹಾದೇವಪುರ ವಲಯ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆ ಆಗಿದೆ. ಬೆಳ್ಳಂದೂರಿನಲ್ಲಿ ಹೆಚ್ಚು ಕಾಲ ಜಿಟಿ ಜಿಟಿ ಮಳೆ ಸುರಿದಿದೆ. ಅದೇ ರೀತಿ ಜಕ್ಕಸಂದ್ರ, ಕೋರಮಂಗಲ, ಆಗರ, ಸರ್ಜಾಪುರ ರಸ್ತೆ, ಮಡಿವಾಳ, ಡೈರಿ ವೃತ್ತ, ಜಯನಗರ, ಚಾಮರಾಜನಗರ, ಹೆಬ್ಬಾಳ, ವಿಜ್ಞಾನನಗರ, ಮಹಾಲಕ್ಷ್ಮಿಪುರ, ದೊಡ್ಡ ಬಿದರಕಲ್ಲು, ಹೆರೋಹಳ್ಳಿ, ಪುಟ್ಟೇನಹಳ್ಳಿ, ಹೆಮ್ಮಿಗೆಪುರ, ದೊಡ್ಡಾನೆಕುಂದಿ, ಬಸವನಗುಡಿ, ವಿದ್ಯಾರಣ್ಯಪುರ, ಯಲಹಂಕ, ಲಾಲ್ ಬಾಗ್ ಸೇರಿದಂತೆ ಅನೇಕ ಕಡೆಗಳಲ್ಲಿ ಹಗುರ ಮಳೆ ದಾಖಲಾಯಿತು.
ತುಂತುರು ಮಳೆ, ಸಾರ್ವಜನಿಕರಿಗೆ ಕಿರಿ ಕಿರಿ
ಹಗುರ ಮಳೆಗೆ ವಾಹನಗಳ ಸಂಚಾರ, ತಳ್ಳುಗಾಡಿ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು. ಹೆಬ್ಬಾಳ ಜಂಕ್ಷನ್, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಹೊರ ವರ್ತುಲ ರಸ್ತೆ ಸೇರಿದಂತೆ ವಿವಿಧಡೆ ಪ್ರಮುಖ ಜಂಕ್ಷನ್ಗಳಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗಿದ್ದು ಕಂಡು ಬಂತು. ಏಪ್ರಿಲ್ 29ರಂದು ಸಂಜೆ ಬಿದ್ದ ಜೋರು ಮಳೆ ನೆನೆದು ನೌಕರರು, ಬೈಕ್ ಸವಾರರು ಬೇಗ ಮನೆಕಡೆ ಧಾವಿಸಿದರು.
ಮೂರು ದಿನ ಮಳೆ ಮುನ್ಸೂಚನೆ
ಮಳೆ ಹಿನ್ನೆಲೆ ವಾತಾವರಣ ತಂಪಾಗಿದ್ದು, ಗರಿಷ್ಠ ತಾಪಮಾನ 35 ಹಾಗೂ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ. ನಗರಾದ್ಯಂತ ಮೇ 8ರವರೆಗೆ ಗುಡುಗು ಸಹಿತ ವ್ಯಾಪಕ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಇದೆ.













Click it and Unblock the Notifications