ಮಧ್ಯಂತರ ಚುನಾವಣೆ ಬಗ್ಗೆ ದೇವೇಗೌಡರ ಹೇಳಿಕೆಗೆ ಎಚ್ಡಿಕೆ ಪ್ರತಿಕ್ರಿಯೆ
ಯಾದಗಿರಿ, ಜೂನ್ 21: ದೇವೇಗೌಡ ಅವರು ತಮ್ಮ ಮುಖಂಡರಿಗೆ ಮಧ್ಯಂತರ ಚುನಾವಣೆಗೆ ಸಜ್ಜಾಗಿ ಎಂದಿದ್ದು, ದೋಸ್ತಿ ಪಕ್ಷಗಳ ನಡುವೆ ಭಿನ್ನಾಬಿಪ್ರಾಯ ಮೂಡಿಸಿದಂತಿದೆ.
ಮಧ್ಯಂತರ ಚುನಾವಣೆಗೆ ಕೊಟ್ಟ ಕರೆಯನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಡಿಸಿಎಂ ಪರಮೇಶ್ವರ್ ಅವರು ಇಂದು ಜೆಡಿಎಸ್ಗೆ ಟಾಂಗ್ ನೀಡಿದ್ದಾರೆ. ಆದರೆ ಈ ಭಿನ್ನಾಬಿಪ್ರಾಯವನ್ನು ಶಮನಮಾಡಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದು, 'ಮಧ್ಯಂತರ ಚುನಾವಣೆ ಸಾಧ್ಯವೇ ಇಲ್ಲ' ಎಂದು ಹೇಳಿದ್ದಾರೆ.
ಗ್ರಾಮ ವಾಸ್ತವ್ಯಕ್ಕೆಂದು ಯಾದಗಿರಿಗೆ ಬಂದಿಳಿದ ಕುಮಾರಸ್ವಾಮಿ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ ಈ ವಿಷಯ ಸ್ಪಷ್ಟಪಡಿಸಿದ್ದು, 'ಮಧ್ಯಂತರ ಚುನಾವಣೆ ನಡೆಯುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದ್ದಾರೆ.
ದೇವೇಗೌಡ ಅವರು ಪಕ್ಷಕ್ಕೆ ಸಂಬಂಧಿಸಿದ ಸಭೆಯೊಂದರಲ್ಲಿ ಮಾತನಾಡುತ್ತಾ, ಮಧ್ಯಂತರ ಚುನಾವಣೆಗೆ ತಯಾರಾಗಿ ಎಂದಿದ್ದರು, ಇದು ಮೈತ್ರಿ ಮುರಿಯುವ ಮುನ್ಸೂಚನೆಯನ್ನು ನೀಡಿತ್ತು, ಆದರೆ ನಂತರ ತಾವು ಆ ಅರ್ಥದಲ್ಲಿ ಹೇಳಿಲ್ಲವೆಂದು, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಹೇಳಿದ್ದೆಂದು ಸ್ಪಷ್ಟನೆ ನೀಡಿದ್ದರು.

'ನಾನೇ ಸಿಎಂ ಆಗಿ ಐದು ವರ್ಷ ಪೂರೈಸುತ್ತೇನೆ'
ಸರ್ಕಾರ ಐದು ವರ್ಷಗಳನ್ನು ಪೂರ್ಣಗೊಳಿಸಲಿದ್ದೇನೆ, ನಾನೇ ಮುಖ್ಯಮಂತ್ರಿಯಾಗಿ ಅವಧಿ ಪೂರ್ಣ ಮಾಡುತ್ತೇನೆ, ಸರ್ಕಾರ ಸುಭದ್ರವಾಗಿರುತ್ತದೆ, ವಿಪಕ್ಷದ ಪ್ರಯತ್ನಗಳು ವಿಫಲವಾಗಲಿವೆ ಎಂದು ಸಿಎಂ ಹೇಳಿದರು.

'ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ'
ದೇವೇಗೌಡ ಅವರು ಯಾವ ಅರ್ಥದಲ್ಲಿ ಮಧ್ಯಂತರ ಚುನಾವಣೆಗೆ ತಯಾರಾಗಿದೆ ಎಂದು ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ, ಇದು ಅವರ ವೈಯಕ್ತಿಕ ಹೇಳಿಕೆಯಾಗಿದೆ, ಇದರ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದು ಹೇಳಿದರು.

'ದೇವೇಗೌಡ ಮಾತು ಅನ್ಯತಾ ಭಾವಿಸುವುದು ಬೇಡ'
ಸ್ಥಳೀಯ ಸಂಸ್ಥೆ ಚುನಾವಣೆಗಳು ಇರುವುದರಿಂದ, ಹಾಗೂ ಕೆಲವು ನಾಯಕರ ಅಸಮಾಧಾನ ಇರುವುದರಿಂದ ದೇವೇಗೌಡ ಅವರು ಮಧ್ಯಂತರ ಚುನಾವಣೆ ಬಗ್ಗೆ ಹೇಳಿರಬಹುದು, ಅವರ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.

ಗ್ರಾಮ ವಾಸ್ತವ್ಯ ಪ್ರಾರಂಭ
ಕುಮಾರಸ್ವಾಮಿ ಅವರು ಇಂದು ಯಾದಗಿರಿ ಜಿಲ್ಲೆ, ಗುರ್ಮಿಟ್ಕಲ್ ತಾಲ್ಲೂಕಿನ ಚಂಡ್ರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ ಕಾರ್ಯಕ್ರಮ ಪ್ರಾರಂಭವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಚಂಡ್ರಂಕಿ ಗ್ರಾಮಕ್ಕೆ ಆಗಮಿಸಿದ್ದಾರೆ.












Click it and Unblock the Notifications