ಸಿಎಂ ಮುಂದೆಯೇ ಪಕ್ಷ ತೊರೆಯುತ್ತೇನೆ ಅಂತ ಹೇಳಿ ಬಂದ್ರು!
Recommended Video
ಬೆಳಗಾವಿ, ನವೆಂಬರ್ 15 : ಯಾದಗಿರಿ ಕ್ಷೇತ್ರದ ಶಾಸಕ ಡಾ.ಎ.ಬಿ. ಮಾಲಕ ರಡ್ಡಿ ಕಾಂಗ್ರೆಸ್ ಪಕ್ಷ ತೊರೆಯುವುದು ಖಚಿತವಾಗಿದೆ. ಶಾಸಕರ ಮನವೊಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಮಾತುಕತೆಯೂ ವಿಫಲವಾಗಿದೆ.
ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ.ಎ.ಬಿ. ಮಾಲಕ ರಡ್ಡಿ ಅವರ ಜೊತೆ ಮಾತುಕತೆ ನಡೆಸಿದರು. ಆದರೆ, 'ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ಹೋಗುವೆ' ಎಂದು ಮಾಲಕ ರಡ್ಡಿ ಸಿದ್ದರಾಮಯ್ಯ ಸಮ್ಮುಖದಲ್ಲಿಯೇ ಹೇಳಿ ಬಂದಿದ್ದಾರೆ.
ಕಾಂಗ್ರೆಸ್ ತೊರೆಯುವ ಬಗ್ಗೆ ಶಾಸಕ ಮಾಲಕರೆಡ್ಡಿ ಹೇಳಿದ್ದೇನು?
'ಶಾಸಕನಾಗಿ ಇದೇ ನನ್ನ ಕೊನೆ ಅವಧಿ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನನ್ನು ತಡೆಯುವ ಯತ್ನ ಮಾಡಬೇಡಿ' ಎಂದು ಮಾಲಕ ರಡ್ಡಿ ಸಿದ್ದರಾಮಯ್ಯ ಅವರಿಗೆ ಹೇಳಿ ಸಭೆಯಿಂದ ಹೊರ ಬಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅಂಜುಬುರುಕ, ಖರ್ಗೆ ಕಂಡರೆ ಅವರಿಗೆ ಗಡಗಡ
ಯಾದಗಿರಿ ಕ್ಷೇತ್ರದ ಶಾಸಕ ಎ.ಬಿ.ಮಾಲಕ ರಡ್ಡಿ ಮತ್ತು ಅಫಜಲಪುರ ಕ್ಷೇತ್ರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಬಿಜೆಪಿ ಅಥವ ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇಬ್ಬರು ಶಾಸಕರು ಪಕ್ಷ ತೆರೆದರೆ ಕಾಂಗ್ರೆಸ್ಗೆ ಯಾದಗಿರಿ ಜಿಲ್ಲೆಯಲ್ಲಿ ಹಿನ್ನಡೆ ಉಂಟಾಗಲಿದೆ.
'ಆಗಿರುವ ಅವಮಾನ ಸಾಕು'
'ನಿಮ್ಮ ಆಡಳಿತ ಅವಧಿಯಲ್ಲಿ ಆಗಿರುವ ಅವಮಾನ ಸಾಕು. ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ಹೋಗುವೆ' ಎಂದು ಎ.ಬಿ.ಮಾಲಕ ರಡ್ಡಿ ಅವರು ಸಿದ್ದರಾಮಯ್ಯ ಮುಂದೆಯೇ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಸಲಹೆ ಒಪ್ಪದ ಶಾಸಕರು
'ಇಷ್ಟು ವರ್ಷ ಕಾಂಗ್ರೆಸ್ ಪಕ್ಷದಲ್ಲಿದ್ದೀರಿ. ಸಚಿವರೂ ಆಗಿದ್ದೀರಿ, ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಪಕ್ಷ ಬಿಟ್ಟು ಹೋಗುವ ನಿರ್ಧಾರ ಬೇಡ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಆದರೆ, ಎ.ಬಿ.ಮಾಲಕ ರಡ್ಡಿ ಅದನ್ನು ಒಪ್ಪಿಲ್ಲ.
'5 ಬಾರಿ ಗೆದ್ದು ಶಾಸಕನಾದೆ'
'ಐದು ಬಾರಿ ಗೆದ್ದು ಶಾಸಕನಾದೆ. ನಿಮ್ಮ ಅವಧಿಯಲ್ಲಿ ಸಾಕಷ್ಟು ಅವಮಾನ ಎದುರಿಸಿದ್ದೇನೆ. ಇನ್ನಷ್ಟು ಕಾಲ ಅದನ್ನು ಸಹಿಸಿಕೊಂಡು ಹೇಗೆ ಇರಲಿ?' ಪಕ್ಷ ತೊರೆಯುವ ನಿರ್ಧಾರ ಮಾಡಿದ್ದೇನೆ. ಹಿಂದೆ ಸರಿಯುವ ಪ್ರಶ್ನೆ ಇಲ್ಲ' ಎಂದು ಮಾಲಕ ರಡ್ಡಿ ಸಿಎಂ ಮುಂದೆ ಅಸಮಾಧಾನ ಹೊರಹಾಕಿದ್ದಾರೆ.
'ರಾಜೀನಾಮೆ ನೀಡುತ್ತೇನೆ'
'ಶಾಸಕನಾಗಿ ಇದು ನನ್ನ ಕೊನೆ ಅವಧಿ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನನ್ನು ತಡೆಯುವ ಪ್ರಯತ್ನ ಮಾಡಬೇಡಿ' ಎಂದು ಮಾಲಕ ರಡ್ಡಿ ಸಿದ್ದರಾಮಯ್ಯಗೆ ಹೇಳಿದ್ದಾರೆ.
ಸಿದ್ದರಾಮಯ್ಯ ಅವರೇ ಕಾರಣ?
ಯಾದಗಿರಿ ಕ್ಷೇತ್ರದ ಶಾಸಕ ಎ.ಬಿ.ಮಾಲಕ ರಡ್ಡಿ ಮತ್ತು ಅಫಜಲಪುರ ಕ್ಷೇತ್ರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರು ಕಾಂಗ್ರೆಸ್ ತೊರೆಯಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂಬುದನ್ನು ಒಪ್ಪಬೇಕು. ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ಇಬ್ಬರೂ ಶಾಸಕರ ಹೆಸರು ಕೇಳಿಬರುತ್ತಿತ್ತು. ಆದರೆ, ಸಚಿವ ಸ್ಥಾನ ಸಿಗಲಿಲ್ಲ. ಹಿರಿಯರನ್ನು ಕಡೆಗಣಿಸಿದ ಕಾರಣಕ್ಕೆ ಅವರು ಬೇರೆ ಪಕ್ಷದತ್ತ ಹೊರಟಿದ್ದಾರೆ.
40 ಸಾವಿರ ಮತಗಳನ್ನು ಪಡೆದಿದ್ದರು
2013ರ ಚುನಾವಣೆಯಲ್ಲಿ ಯಾದಗಿರಿ ಕ್ಷೇತ್ರದಲ್ಲಿ ಎ.ಬಿ.ಮಾಲಕ ರಡ್ಡಿ ಅವರು 40,434 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.