Bullet Train Corridor: ದೇಶದ 2ನೇ ಬುಲೆಟ್ ರೈಲು ಕಾರಿಡಾರ್ ಘೋಷಣೆ: ಎಲ್ಲಿಂದ-ಎಲ್ಲಿಗೆ? ರೂಟ್, ಡಿಟೇಲ್ಸ್ ಇಲ್ಲಿದೆ
ನವದೆಹಲಿ: ದೇಶದ ಮೊದಲ ಹೈಸ್ಪೀಡ್ ಬುಲೆಟ್ ರೈಲು ಕಾರಿಡಾರ್ ಕಾರ್ಯಾಚರಣೆಗೆ ಮುಹೂರ್ತ ಹತ್ತಿರವಾಗುತ್ತಿದೆ. ಇದರ ನಡುವೆ ಭಾರತದ ಎರಡನೇ ಬುಲೆಟ್ ರೈಲು ಕಾರಿಡಾರ್ (India's 2nd Bullet Train Corridor) ಯೋಜನೆಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಶನಿವಾರ ಘೋಷಣೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿ ನೇತೃತ್ವದ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಕೇವಲ ಒಂದೇ ತಿಂಗಳಲ್ಲಿ ರಾಜ್ಯಕ್ಕೆ ಭರ್ಜರಿ ಗಿಫ್ಟ್ ಕೊಡಲು ಸರ್ಕಾರ ಸಜ್ಜಾಗಿದೆ. ಈ ಮಾರ್ಗವು ಎಲ್ಲಿಂದ ಎಲ್ಲಿಗೆ ಸಂಪರ್ಕ ಸಾಧಿಸುತ್ತದೆ? ಎಷ್ಟು ಕಿಲೋ ಮೀಟರ್ ಉದ್ದವಿದೆ? ಯಾವೆಲ್ಲ ರಾಜ್ಯಗಳನ್ನು ಸಂಪರ್ಕಿಸುತ್ತದೆ, ಮಾರ್ಗ ಸೇರಿದಂತೆ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧಿಕೃತವಾಗಿ ಘೋಷಿಸಿದ ಮಹತ್ವದ ರೈಲು ಯೋಜನೆ ಇದಾಗಿದೆ. ಪಶ್ಚಿಮ ಬಂಗಾಳಕ್ಕೆ ಬುಲೆಟ್ ರೈಲು ಸೇವೆ ಶೀಘ್ರವೇ ಸಿಗುವ ವಿಶ್ವಾಸವಿದೆ. ಎರಡನೇ ಬುಲೆಟ್ ರೈಲು ದೆಹಲಿ ಮತ್ತು ಸಿಲಿಗುರಿಯನ್ನು ಸಂಪರ್ಕಿಸುತ್ತದೆ. ಲಕ್ನೋ, ವಾರಣಾಸಿ ಮತ್ತು ಪಾಟ್ನಾ ಮೂಲಕ ಈ ರೈಲು ಸಾಗಲಿದೆ. ದೆಹಲಿಯಿಂದ ಬುಲೆಟ್ ರೈಲು ಹತ್ತಿದರೆ ಗಮ್ಯಸ್ಥಳವನ್ನು ಕೇವಲ 6 ಗಂಟೆಯಲ್ಲಿ ಕ್ರಮಿಸಬಹುದಾಗಿದೆ. ಇದರಿಂದ ದೆಹಲಿ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿ ಮೂರು ರಾಜ್ಯಗಳಿಗೆ ಬುಲೆಟ್ ರೈಲು ಸೇವೆ ಭವಿಷ್ಯದಲ್ಲಿ ಲಭ್ಯವಾಗಲಿದೆ.

ಪಶ್ಚಿಮ ಬಂಗಾಳಕ್ಕೆ ಭರ್ಜರಿ ಅನುದಾನ ಹಂಚಿಕೆ
ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಬಜೆಟ್ ಅನುದಾನವನ್ನು ಗಮನಾರ್ಹವಾಗಿ ಏರಿಕೆ ಮಾಡಲಾಗಿದೆ. ಪ್ರಸ್ತುತ ಮೋದಿ ಸರ್ಕಾರವು 14,205 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿದೆ. ಈ ಹಿಂದೆ ಯುಪಿಎ ಸರ್ಕಾರ 4,000 ಕೋಟಿ ರೂಪಾಯಿ ನೀಡಿತ್ತು. ಹಿಂದಿನ ರಾಜ್ಯ ಸರ್ಕಾರ ಅಭಿವೃದ್ಧಿ ಯೋಜನೆಗೆ ಅನುಮತಿ ನೀಡಿರಲಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆರೋಪಿಸಿದರು. ಜನಪರ ಕಾಳಜಿ ಮೇರೆಗೆ ಯೋಜನೆ ಜಾರಿಗೆ ಮುಂದಾದಾಗ ಕೆಲವು ಯೋಜನೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು ಎಂದು ಅವರು 'ದಿದಿ' ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಮೆಟ್ರೋ ಮತ್ತು ಫ್ರೈಟ್ ಕಾರಿಡಾರ್ ಕುರಿತು...
ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾ ಮೆಟ್ರೋ ಯೋಜನೆಯ ಕಾಮಗಾರಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಈಗಾಗಲೇ 45 ಕಿಲೋ ಮೀಟರ್ ಮೆಟ್ರೋ ಮಾರ್ಗವು ಇಲ್ಲಿ ಪೂರ್ಣಗೊಂಡಿದೆ. ಹಿಂದಿನ 42 ವರ್ಷಗಳಲ್ಲಿ ಕೇವಲ 28 ಕಿ.ಮೀ. ಆಗಿತ್ತು. ಮುಂದಿನ ಐದೇ ವರ್ಷದಲ್ಲಿ ರಾಜ್ಯದಲ್ಲಿ 60 ಹೊಸ ಮೆಟ್ರೋ ಬೋಗಿಗಳು ಬರಲಿದ್ದು, ಶೀಘ್ರವೇ ಜಾಲವನ್ನು ಮತ್ತಷ್ಟು ವಿಸ್ತರಣೆ ಮಾಡಲಾಗುವುದು. ಈ ಮೂಲಕ ಕೊಲ್ಕತ್ತ ನಗರದ ದೈನಂದಿನ ಸಾರಿಗೆ ಸೇವೆ ಸುಧಾರಣೆ ಆಗಲಿದ್ದು, ಇಲ್ಲಿನ ಜನರಿಗೆ ಜನಸ್ನೇಹಿ ಸಾರಿಗೆ ಲಭ್ಯವಾಗಲಿದೆ ಎಂದು ಹೇಳಿದರು.
ಡಂಕುನಿ ಮತ್ತು ಸೂರತ್ ನಡುವೆ ಈಸ್ಟ್-ವೆಸ್ಟ್ ಫ್ರೈಟ್ ಕಾರಿಡಾರ್ ಸಂಪರ್ಕ ಸಾಧಿಸಲಿದೆ. ಇದೊಂದು ಮಹತ್ವದ ರೈಲ್ವೆ ಯೋಜನೆ ಆಗಿದ್ದು, ಈಗಾಗಲೇ ರೈಲ್ವೆ ಇಲಾಖೆಯು ಸ್ಥಳೀಯ ಶಾಸಕರಿಂದ ಎಲ್ಲವಿಧದ ಸಲಹೆ, ಸಹಕಾರ ಪಡೆದಿದೆ. ಶಾಸಕರ ಕ್ಷೇತ್ರಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಸಂಬಂಧ ಕೆಲಸಗಳ ಬಗ್ಗೆ ಕುರಿತು ತಿಳಿಸುವಂತೆ ನಿರ್ದೇಶಿಸಲಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ ಸುಧಾರಿಸುವುದು, ನಮ್ಮ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು. ಈ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹಲವು ಯೋಜನೆಗಳು ಘೋಷಣೆ ಆಗಲಿದ್ದು, ಮುಂದಿನ ಐದು ವರ್ಷಗಳಲ್ಲಿ ಕೊಲ್ಕತ್ತ ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ ಸಾರಿಗೆ ಕ್ರಾಂತಿ ಆಗಬಹುದು ಎನ್ನಲಾಗುತ್ತಿದೆ.













Click it and Unblock the Notifications