'ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಅನುಮಾನ: ಸಿಎಂ ಶ್ವೇತ ಪತ್ರ ಹೊರಡಿಸುವಂತೆ ಹೆಚ್ಚಿದ ಆಗ್ರಹ'
ಹಾವೇರಿ: ಕೇರಳಂ ರಾಜ್ಯದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಲ್ಲಿನ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು ಶ್ವೇತ ಪತ್ರ ಹೊರಡಿಸಿದ್ದರು. ಇತ್ತ ಕರ್ನಾಟಕದಲ್ಲೂ ಸಿಎಂ ಡಿಕೆ ಶಿವಕುಮಾರ್ ಅವರು ಶ್ವೇತ ಪತ್ರ ಹೊರಡಿಸಿ, ರಾಜ್ಯದ ಆರ್ಥಿಕ ಸ್ಥಿತಿ ಗತಿ ಕುರಿತು ತಿಳಿಸಬೇಕೆಂಬ ಆಗ್ರಹ ಹೆಚ್ಚಾಗುತ್ತಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ದುಸ್ಥಿತಿಯಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಟ್ಟುಹೋದ ಹಣಕಾಸಿನ ಸ್ಥಿತಿ ಕುರಿತು ಸಿಎಂ ಡಿ. ಕೆ. ಶಿವಕುಮಾರ್ ಶ್ವೇತ ಪತ್ರ ಹೊರಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಶನಿವಾರ ಶಿಗ್ಗಾವಿಯಲ್ಲಿ ಆಗ್ರಹಿಸಿದ್ದಾರೆ.

23,000 ಸಾವಿರ ಕೋಟಿ ಬಿಲ್ ಬಾಕಿ!, ಭ್ರಷ್ಟಾಚಾರ ಆರೋಪ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಗುತ್ತೆಗೆದಾರರ 23 ಸಾವಿರ ಕೋಟಿ ಬಿಲ್ಲು ಬಾಕಿ ಪಾವತಿಸಲು ಶಾಸಕ, ಸಚಿವ, ಅಧಿಕಾರಿಗಳಿಂದ ಭ್ರಷ್ಟಾಚಾರದ ಕಿರುಕುಳ ಆರೋಪಗಳು ಕೇಳು ಬರುತ್ತಿದೆ. ಇದನ್ನು ಹೇಗೆ ಸರಿಪಡಿಸಲಿದ್ದಾರೆ? ಕಾನೂನು ಬಿಟ್ಟು ಕೆಲಸ ಮಾಡಬೇಡಿ ಎಂದು ಹೇಳುವ ಬದಲು, ವ್ಯವಸ್ಥೆ ಬಿಟ್ಟು ಹೋಗಬೇಡಿ ಎಂದು ಹೇಳಿದ ನೂತನ ಮುಖ್ಯಮಂತ್ರಿಗಳ ಸಿಸ್ಟಂ ಏನು? ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಡಿಕೆ ಶಿವಕುಮಾರ್ ಗೆ ಸಾಲು ಸಾಲು ಪ್ರಶ್ನೆ ಮುಂದಿಟ್ಟ ಬೊಮ್ಮಾಯಿ
ರಾಜ್ಯ ಹಣಕಾಸು ದುಸ್ಥಿತಿ ದೊಡ್ಡ ಪ್ರಮಾಣದಲ್ಲಿದೆ. ಆದರೆ, ಸುಧಾರಿಸುವ ಚಿಂತನೆ ಈವರೆಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಗಿದ್ದಂತೆ ಕಾಣುತ್ತಿಲ್ಲ. ಡಿಕೆಶಿ ಅವರಿಗೆ ವೈಟ್ ಪೇಪರ್ ಕೊಟ್ಟು ಹಿಂದಿನ ಸಿಎಂ ಸಿದ್ದರಾಮಯ್ಯ ಅವರು ಬಿಟ್ಟು ಹೋದ ಹಣಕಾಸಿನ ಸ್ಥಿತಿ ಕುರಿತು ಎಷ್ಟು ಸಾಲ, ಎಲ್ಲಲ್ಲಿ ಮಾಡಿದ್ದಾರೆ. ಎಲ್ಲಲ್ಲಿ ಉಪಯೋಗ ಆಗಿದೆ? ಬಂಡವಾಳದ ಹೂಡಿಕೆಯಲ್ಲಿ ಆಗಿದೆಯೇ? ಅಥವಾ ನಿತ್ಯ ಸಂಬಳ, ಪೆನ್ಸನ್, ಸಾಲ ಮರುಪಾವತಿಗೆ ಆಗಿದೆಯೇ? ಗ್ಯಾರೆಂಟಿಗಳಿಗೆಷ್ಟೇ ಉಪಯೋಗ ಆಗಿದೆಯಾ? ಶೇಕಡಾ 90 ಕ್ಕಿಂತ ಹೆಚ್ಚು ಕಮಿಟೆಡ್ ಎಕ್ಸ್ಪೆಂಡಿಚೇರ್ ಆಗಿದೆ. ಅದು ಒಳ್ಳೇಯದು ಆದರೆ, ಅಭಿವೃದ್ಧಿಗೆ ನಯಾ ಪೈಸೆ ಕೊಟ್ಟಿಲ್ಲ. ಆದರೆ, 4.5 ಲಕ್ಷ ಕೋಟಿ ಬಜೆಟ್ ಮಾಡಿದ್ದಾರೆ. ಅದರ ಶೇ.90 ರಷ್ಟು ಬದ್ದತಾ ವೆಚ್ಚಕ್ಕೆ ಹೋಗುತ್ತಿದೆ. ಯಾವ ಅಭಿವೃದ್ಧಿ ಕಾರ್ಯಕ್ಕೆ ಹೋಗುತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕವನ್ನು ಯಾವ ರೀತಿ ಮುನ್ನಡಿಸುತ್ತಾರೆ ಸಿಎಂ ಶಿವಕುಮಾರ ಸಾರ್ವಜನಿಕವಾಗಿ ತಿಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಅಸೆಡ್ಡೆ
ಭವಿಷ್ಯದಲ್ಲಿ ರಾಜ್ಯ ಸರಕಾರದಿಂದ ಜನಪರ ಕಾರ್ಯಕ್ರಮಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸರ್ಕಾರದ ಮಟ್ಟದಲ್ಲಿ ಅದೇ ವ್ಯವಸ್ಥೆ, ಗುದ್ದಾಟ ಇದೆ. ಪ್ರತಿ ಜಿಲ್ಲೆಯಲ್ಲಿ ಒಂದೊಂದು ಸಮಸ್ಯೆ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಸಮಸ್ಯೆ ಇದೆ. ರೈತರಿಗೆ ನೀರು ಕೊಡುವ ಜಲ ಸಂಪನ್ಮೂಲ ಖಾತೆ. ಇದನ್ನು ನಿರ್ವಹಿಸಲು ರಾಮಲಿಂಗಾರೆಡ್ಡಿ ಒಪ್ಪುತ್ತಿಲ್ಲ ಇದು ಒಳ್ಳೆಯ ಲಕ್ಷಣವಲ್ಲ. ಪ್ರಾರಂಭವೂ ಅಲ್ಲ. ಕಾಂಗ್ರೆಸ್ಸಿಗರಿಗೆ ರೈತರ ಬಗ್ಗೆ ತೊರುತ್ತಿರುವ ಆಸೆಡ್ಡೆ ಎಂದು ದೂರಿದರು.
ಮುಂಗಾರು ಹಂಗಾಮಿನಲ್ಲಿ ರೈತರ ನೆರವಿಗೆ ಬನ್ನಿ
ಮೊದಲು ಸಚಿವ ಸಂಪುಟದಲ್ಲಿ ರೈತರ ಬಿತ್ತನೆ ಬೀಜ, ಗೊಬ್ಬರ ಬಗ್ಗೆ ವ್ಯವಸ್ಥೆ ಬಗ್ಗೆ ಚರ್ಚೆಸುವ ನಿರೀಕ್ಷೆ ಹುಸಿಯಾಗಿದೆ. ಅಲ್ಲಲ್ಲಿ ಬೀಜ, ಗೊಬ್ಬರ ಕೊರತೆ ಕಾಣುತ್ತಿದೆ. ವ್ಯಾಪಾರಸ್ಥರು ಈಗಾಗಲೇ ದಾಸ್ತಾನು ಮಾಡಿಕೊಂಡು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ರೈತರ ನೆರವಿಗೆ ಬರಬೇಕು. ಸಮರ್ಪಕವಾದ ನಿರ್ವಹಣೆ ಮಾಡಬೇಕು. ಇಲ್ಲಿವರೆಗೂ ಕೃಷಿ ಖಾತೆ ಯಾರಿಗೂ ತ್ವರಿತವಾಗಿ ಕೊಟ್ಟು ನಿರ್ವಹಣೆ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಇನ್ನೂ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬದಲಾವಣೆಯಾಗಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷದ ನಾಯಕರ ಮತ್ತು ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ, ಪಕ್ಷದ ಮುಂದೆ ಚರ್ಚೆಯಾಗಲಿ, ಸೂಚನೆಯಾಗಲಿ ಯಾವುದು ಇಲ್ಲ. ಅಂತಹ ಪ್ರಸಂಗವೂ ಇಲ್ಲ ಎಂದು ಸ್ಪಷ್ಟಪಡಿಸಿದರು.













Click it and Unblock the Notifications