ವಿಡಿಯೋ; ಯಾದಗಿರಿಯಲ್ಲಿ ಕೇಂದ್ರ ಸಚಿವರಿಗೆ ಗುಂಡಿನ ಸ್ವಾಗತ!
ಯಾದಗಿರಿ, ಆಗಸ್ಟ್ 18; ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕೇಂದ್ರ ಸಚಿವರನ್ನು ಗುಂಡು ಹಾರಿಸಿ ಸ್ವಾಗತಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಮೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ನಾಡ ಬಂದೂಕು ಹಿಡಿದು ಸಚಿವರ ಸ್ವಾಗತಕ್ಕೆ ಆಗಮಿಸಿದ್ದರು.
ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಬೀದರ್ ಸಂಸದ, ಕೇಂದ್ರ ರಸಗೊಬ್ಬರ, ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಯಾದಗಿರಿ ಜಿಲ್ಲೆಯ ಯರಗೊಳ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಕೋರಿದರು.
ಕರ್ನಾಟಕದ ನಾಲ್ವರು ಕೇಂದ್ರ ಸಚಿವರಿಂದ ಜನಾಶೀರ್ವಾದ ಯಾತ್ರೆ
ಈ ಸಂದರ್ಭದಲ್ಲಿ ನಾಡಬಂದೂಕಿನಿಂದ ಗುಂಡು ಹಾರಿಸಿ ಸಚಿವರನ್ನು ಸ್ವಾಗತಿಸಲಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂದರ್ಭದಲ್ಲಿ ಪೊಲೀಸರು ಸಹ ಸ್ಥಳದಲ್ಲಿಯೇ ಇದ್ದರು. ಬಿಜೆಪಿ ಕಾರ್ಯಕರ್ತರ ಸ್ವಾಗತ ಭರಾಟೆಯಲ್ಲಿ ಪೊಲೀಸರು ಮೌನಕ್ಕೆ ಶರಣಾಗಿದ್ದರು.
ಮೋದಿ ಗುಜರಿ ನೀತಿಗೆ ರಾಜ್ಯದ 40 ಲಕ್ಷ ವಾಹನ ಜಖಂ ಪಕ್ಕಾ!
ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಮಾಡಿದ್ದಾರೆ. ಹೊಸ ಕೇಂದ್ರ ಸಚಿವರನ್ನು ಸಂಸತ್ನಲ್ಲಿ ಪರಿಚಯಿಸಿಕೊಳ್ಳಲು ಮೋದಿ ಮುಂದಾಗಿದ್ದರು. ಆಗ ವಿಪಕ್ಷಗಳು ಅಡ್ಡಿಪಡಿಸಿದವು, ಆದ್ದರಿಂದ ಬಿಜೆಪಿ ಕೋವಿಡ್ ಕಾಲದಲ್ಲಿ 'ಜನಾಶೀರ್ವಾದ ಯಾತ್ರೆ' ನಡೆಸುತ್ತಿದೆ.
ಮೋದಿ ಸಂಪುಟದಲ್ಲಿ ಕರ್ನಾಟಕದ ಸಚಿವರು, ಖಾತೆಗಳು
ಕರ್ನಾಟಕದಿಂದ ಪ್ರಧಾನಿ ಮೋದಿ ಸಂಪುಟಕ್ಕೆ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ ಮತ್ತು ಭಗವಂತ ಖೂಬಾ ಸೇರ್ಪಡೆಗೊಂಡಿದ್ದಾರೆ. ಈ ನಾಲ್ವರು ಸಚಿವರು ಆಗಸ್ಟ್ 16ರಿಂದ 'ಜನಾಶೀರ್ವಾದ ಯಾತ್ರೆ' ನಡೆಸುತ್ತಿದ್ದಾರೆ.
ಬುಧವಾರ ರಸಗೊಬ್ಬರ, ರಾಸಾಯನಿಕ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ನೇತೃತ್ವದ ತಂಡ ರಾಯಚೂರು ಮತ್ತು ಯಾದಗಿರಿಯಲ್ಲಿ ಜನಾಶೀರ್ವಾದ ಯಾತ್ರೆ ನಡೆಸುತ್ತಿದೆ. ಇದಕ್ಕಾಗಿ ಯಾದಗಿರಿಗೆ ಸಚಿವರು ಆಗಮಿಸಿದಾಗ ನಾಡ ಬಂದೂಕಿನಿಂದ ಗುಂಡು ಹಾರಿಸಿ ಸ್ವಾಗತಿಸಲಾಗಿದೆ.
ಕೋವಿಡ್ ಕಾಲದಲ್ಲಿ ಬಿಜೆಪಿಯ ಸಚಿವರು ಜನಾಶೀರ್ವಾದ ಯಾತ್ರೆ ನಡೆಸುತ್ತಿದ್ದಾರೆ. ಕೇಂದ್ರ ಸಚಿವರನ್ನು ಸ್ವಾಗತಿಸಲು ಹಲವಾರು ನಾಯಕರು, ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಹಲವು ಜನರು ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರ ಮಾಯವಾಗಿತ್ತು.
ಸಚಿವ ಭಗವಂತ ಖೂಬಾ ಬುಧವಾರ ಯಾದಗಿರಿ ಜಿಲ್ಲೆಯ ಮುದ್ನಾಳ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೆಂದ್ರದಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಿದರು, ಆಶಾ ಕಾರ್ಯಕರ್ತೆಯರ ಜೊತೆ ಮಾತನಾಡಿ, ಅವರ ಕಾರ್ಯವನ್ನು ಶ್ಲಾಘಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೋವಿಡ್ ಲಸಿಕೆ ತೆಗೆದುಕೊಳ್ಳುವ ಮಾಡಬೇಕು ಎಂದು ತಿಳಿಸಿದರು.
ಬಳಿಕ ಯರಗೊಳ ಗ್ರಾಮಕ್ಕೆ ಸಚಿವರು ಆಗಮಿಸಿದಾಗ ಪಕ್ಷದ ಹಿರಿಯ ನಾಯಕರಾದ ಬಾಬುರಾವ್ ಚಿಂಚನಸೂರ್, ಶಾಸಕರಾದ ರಾಜುಗೌಡ ಹಾಗೂ ಮುಖಂಡರು, ಕಾರ್ಯಕರ್ತರು ಆತ್ಮೀಯವಾಗಿ ಸಚಿವರನ್ನು ಸ್ವಾಗತಿಸಿದರು.
ಯಾದಗಿರಿಯಿಂದ ಕಲಬುರಗಿ ಜಿಲ್ಲೆಗೆ ತೆರಳಿದ ಸಚಿವರು ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ್ ಗ್ರಾಮದ ಕೋರಿ ಸಿದ್ಧಲಿಂಗೇಶ್ವರ ಮಹಾ ಸಂಸ್ಥಾನ ಮಠಕ್ಕೆ ಭೇಟಿ ನೀಡಿದರು, ದೇವರ ದರ್ಶನ ಪಡೆದು, ಪೂಜ್ಯರಾದ ಡಾ. ಸಿದ್ದ ತೋಟೆಂದ್ರ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು. ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ ವಿವಿಧ ಜಿಲ್ಲೆಗಳಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರಧಾನಿ ಮೋದಿ ಸೂಚನೆಯಂತೆ ಕೇಂದ್ರ ಸಚಿವರು ದೇಶಾದ್ಯಂತ ಜನಾಶೀರ್ವಾದ ಯಾತ್ರೆ ನಡೆಸುತ್ತಿದ್ದಾರೆ. ತೆರೆದ ವಾಹನದಲ್ಲಿ ಯಾತ್ರೆ ನಡೆಸುತ್ತಾ ಮಾರ್ಗದಲ್ಲಿ ಅಲ್ಲಲ್ಲಿ ಚಿಕ್ಕ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಕ್ರೀಡಾಪಟುಗಳು, ಉದ್ಯಮಿಗಳ ಜೊತೆ ಸಚಿವರು ಸಂವಾದ ನಡೆಸುತ್ತಿದ್ದಾರೆ.
Recommended Video
ಬಿಜೆಪಿ ಜನಾಶೀರ್ವಾದ ಯಾತ್ರೆಯನ್ನು ದೇಶದ 150 ಲೋಕಸಭಾ ಕ್ಷೇತ್ರಗಳಲ್ಲಿ ನಡೆಸುತ್ತಿದೆ. ಒಬ್ಬ ಸಚಿವರು ಸುಮಾರು 400 ಕಿ. ಮೀ. ಸಂಚಾರ ಮಾಡಿ ಕೇಂದ್ರ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ. 19 ರಾಜ್ಯಗಳಲ್ಲಿ ಜನಾಶೀರ್ವಾದ ಯಾತ್ರೆ ನಡೆಯುತ್ತಿದೆ.