ವಿಜಯಪುರ-ಮಂಗಳೂರು ರೈಲು ಸೇವೆ 6 ತಿಂಗಳು ವಿಸ್ತರಣೆ
ವಿಜಯಪುರ, ಫೆಬ್ರವರಿ 13 : ನಷ್ಟದ ನಡುವೆಯೂ ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲನ್ನು ಆರು ತಿಂಗಳ ಕಾಲ ವಿಸ್ತರಣೆ ಮಾಡಿದೆ. ನೈಋತ್ಯ ರೈಲ್ವೆ ಆದೇಶದ ಪ್ರಕಾರ 2020ರ ಜೂನ್ ತನಕ ಪ್ರತಿದಿನ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.
2019ರ ಡಿಸೆಂಬರ್ನಲ್ಲಿ ವಿಜಯಪುರ- ಮಂಗಳೂರು ನಡುವೆ ಎಕ್ಸ್ಪ್ರೆಸ್ ರೈಲನ್ನು ನೈಋತ್ಯ ರೈಲ್ವೆ ಆರಂಭಿಸಿತ್ತು. ನಿರೀಕ್ಷಿತ ಮಟ್ಟದಲ್ಲಿ ಈ ರೈಲು ಲಾಭವನ್ನು ಗಳಿಸುತ್ತಿಲ್ಲ. ಆದರೂ ಸಹ ತತ್ಕಾಲ್ ದರದಲ್ಲಿ ಸಂಚರಿಸುವ ರೈಲನ್ನು ವಿಸ್ತರಣೆ ಮಾಡಲಾಗಿದೆ.
ವಿಜಯಪುರದಿಂದ ಹೊರಡುವ ರೈಲು ಹುಬ್ಬಳ್ಳಿ ಮೂಲಕ ಮಂಗಳೂರಿಗೆ ಸಂಚಾರ ನಡೆಸುತ್ತದೆ. ಹುಬ್ಬಳ್ಳಿ-ಮಂಗಳೂರು ನಡುವೆ ಸಂಚಾರ ನಡೆಸಿ ಉತ್ತರ ಕರ್ನಾಟಕ ಮತ್ತು ಕರಾವಳಿಯನ್ನು ಸಂಪರ್ಕಿಸುವ ರೈಲು ಇದಾಗಿದೆ.
ವಿಜಯಪುರ-ಮಂಗಳೂರು, ಮಂಗಳೂರು-ವಿಜಯಪುರ ನಡುವಿನ ಮಾರ್ಗದಲ್ಲಿ 3.98 ಕೋಟಿ ಲಾಭಗಳಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಈಗ ರೈಲು ಸುಮಾರು 1.37 ಕೋಟಿ ಆದಾಯವನ್ನು ಗಳಿಸುತ್ತಿದೆ.

ರೈಲಿನ ವೇಳಾಪಟ್ಟಿ
ರೈಲು ನಂಬರ್ 7327 ವಿಜಯಪುರ-ಮಂಗಳೂರು ನಡುವೆ, 7328 ಮಂಗಳೂರು-ವಿಜಯಪುರ ನಡುವೆ ಸಂಚಾರ ನಡೆಸುತ್ತದೆ. ವಿಜಯಪುರದಿಂದ ಪ್ರತಿದಿನ ಸಂಜೆ 6 ಗಂಟೆಗೆ ಹೊರಡುವ ರೈಲು ಮರುದಿನ ಮಧ್ಯಾಹ್ನ 12.40ಕ್ಕೆ ಮಂಗಳೂರು ಜಂಕ್ಷನ್ ನಿಲ್ದಾಣವನ್ನು ತಲುಪುತ್ತದೆ. ಮಂಗಳೂರಿನಿಂದ ಪ್ರತಿದಿನ ಸಂಜೆ 4.30ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 11.45ಕ್ಕೆ ವಿಜಯಪುರ ತಲುಪುತ್ತದೆ. 783 ಕಿ. ಮೀ. ಈ ರೈಲು ಸಂಚರಿಸುತ್ತದೆ.

ನಿಲ್ದಾಣಗಳು
ವಿಜಯಪುರದಿಂದ ಹೊರಡುವ ರೈಲು ಹುಬ್ಬಳ್ಳಿ, ದಾವಣಗೆರೆ, ಹಾಸನ, ಸಕಲೇಶಪುರ ಸೇರಿದಂತೆ 21 ನಿಲ್ದಾಣದಲ್ಲಿ ನಿಲುಗಡೆಗೊಂಡು ಮಂಗಳೂರು ಜಂಕ್ಷನ್ ತಲುಪಲಿದೆ. ಹುಬ್ಬಳ್ಳಿ-ಮಂಗಳೂರು ನಡುವೆ ಸಂಪರ್ಕ ಕಲ್ಪಿಸಲು ಈಗ ಇರುವುದು ಇದೊಂದೇ ರೈಲು.

ನಷ್ಟದದಲ್ಲಿ ಓಡುತ್ತಿದೆ
ಜನವರಿ 10ರ ತನಕ ಲಭ್ಯವಿರುವ ವರದಿಗಳ ಪ್ರಕಾರ ವಿಜಯಪುರ-ಮಂಗಳೂರು ರೈಲು ನಷ್ಟದಲ್ಲಿ ಓಡುತ್ತಿದೆ. ಎರಡೂ ಕಡೆ ಸೇರಿ 3.89 ಕೋಟಿ ಆದಾಯ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗ 1.37 ಕೋಟಿ ರೂ. ಆದಾಯ ಮಾತ್ರ ಬರುತ್ತಿದೆ. ಕಾಯ್ದಿರಿಸಿದ ಕೋಚ್ಗಳಲ್ಲಿ ಪ್ರಯಾಣಿಕರೇ ಇರುವುದಿಲ್ಲ.

ಬೇಡಿಕೆಯಂತೆ ಆರಂಭವಾದ ರೈಲು
ಮೀಟರ್ ಗೇಜ್ ಕಾಲದಲ್ಲಿ ಹುಬ್ಬಳ್ಳಿ-ಮಂಗಳೂರು ನಡುವೆ ರೈಲು ಸಂಚಾರವಿತ್ತು. ಈ ರೈಲನ್ನು ಪುನಃ ಸ್ಥಾಪಿಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಡಿಸೆಂಬರ್ನಲ್ಲಿ ಎರಡು ತಿಂಗಳ ಪ್ರಾಯೋಗಿಕ ಸಂಚಾರವಾಗಿ ರೈಲನ್ನು ಆರಂಭಿಸಲಾಗಿತ್ತು. ಅದನ್ನು ಈಗ ಜೂನ್ ತನಕ ವಿಸ್ತರಣೆ ಮಾಡಲಾಗಿದೆ.












Click it and Unblock the Notifications