ಭೀಮಾ ತೀರದಲ್ಲಿ ಘರ್ಷಣೆ, ಶಶಿಧರ ಮುಂಡೇವಾಡಿಗೆ ಗುಂಡೇಟು
ವಿಜಯಪುರ, ಮಾರ್ಚ್ 10: ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಭೀಮಾ ತೀರದ ಹಂತಕ ಶಶಿಧರ ಮುಂಡೆವಾಡಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಪ್ರತಿ ದಾಳಿಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬರಡೋಲ ಗ್ರಾಮದ ಹೊರ ಭಾಗದಲ್ಲಿ ಈ ಘಟನೆ ನಡೆದಿದೆ.
ಪೇದೆ ಅರವಿಂದ ಮಾದರ ಹಾಗೂ ಪಿಎಸ್ಐ ಗೋಪಾಲ ಹಳ್ಳೂರು ಮೇಲೆ ಹಂತಕ ಪ್ರತಿ ದಾಳಿ ನಡೆಸಿದ್ದು ಇಬ್ಬರಿಗೂ ಚಾಕುವಿನಿಂದ ಇರಿದಿದ್ದಾನೆ. ಪಿಎಸ್ಐ ಎಡಗೈ ಹಾಗೂ ಪೇದೆಯ ಬಲಗೈಗೆ ಚಾಕು ಇರಿದಿದೆ.
ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಶಿವಕುಮಾರ್ ಗುಣಾರಿ ದೌಡಾಯಿಸಿದ್ದು ಪಿಎಸ್ಐ ಮತ್ತು ಪೇದೆಯವರನ್ನು ಚಡಚಣ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಹಂತಕ ಮುಂಡೆವಾಡಿಗೂ ಗಾಯಗಳಾಗಿದ್ದು ಈತನನ್ನೂ ಇಲ್ಲ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಭಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಘಟನೆ ಬೆನ್ನಿಗೆ ಇಂಡಿ ವಲಯದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ನಡೆದಿದ್ದೇನು?
ಅಕ್ರಮ ಪಿಸ್ತೂಲ್ ಸಾಗಾಟ ಶಂಕೆ ಹಿನ್ನಲೆಯಲ್ಲಿ ಆರೋಪಿ ಹಿಡಿದು ತಪಾಸಣೆ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಪಿಎಸ್ಐ ಮತ್ತು ಪೇದೆ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ಪ್ರತಿಯಾಗಿ ಚಡಚಣ ಪಿಎಸ್ಐ ಗೋಪಾಲ್ ಹಳ್ಳೂರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಆರೋಪಿ ಪರಾರಿಯಾಗಲು ಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದಿದ್ದಾರೆ.
ಶಶಿಧರ ಮುಂಡೆವಾಡಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪಡೆದಿದ್ದ ಆರೋಪಿಯಾಗಿದ್ದಾನೆ.